ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಾಜ್ನಲ್ಲಿ ಲಾಕ್ಡೌನ್ನಿಂದ ಸಿಕ್ಕಾಕೊಂಡಿರುವ ಕರ್ನಾಟಕ ದಕ್ಷಿಣ ಕನ್ನಡ ಮೂಲದ (ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ) ಸುಮಾರು 19 ಯುವ ಉದ್ಯೋಗಿಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ಕೋರಿಕೆಯಂತೆ ಪುನರ್ವಸತಿ ಕಲ್ಪಿಸಲಾಗಿದೆ.
ಮೀರಜ್ನಲ್ಲಿ ಸಿಲುಕಿಕೊಂಡ ಯುವಕರು ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಸಂಪರ್ಕಿಸಿ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದರು. ಈ ಸಂದರ್ಭ ತಕ್ಷಣ ಅಲರ್ಟ್ ಆದ ರೈ ಅವರು ಮುಂಬೈ ಕನ್ನಡಿಗ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ರೋನ್ಸ್ ಬಂಟ್ವಾಳ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ರೈ ಕೋರಿಕೆಯಂತೆ ರೋನ್ಸ್ ಬಂಟ್ವಾಳ್ ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕರನ್ನು ಸಂಪರ್ಕಿಸಿ ಅವರ ಪೂರ್ಣ ಮಾಹಿತಿ ಪಡೆದುಕೊಂಡು ಸಾಂಗ್ಲಿಯ ಕೈಗಾರಿಕೋದ್ಯಮಿ, ಸಾಂಗ್ಲಿಯ ಬಿಲ್ಲವ ಸಂಘದ ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಅವರಿಗೆ ಮಾಹಿತಿ ನೀಡಿದ್ದಾರೆ. ರಘುರಾಮ ಪೂಜಾರಿ ಬಾಳೆಹೊನ್ನೂರು ಅವರ ಜೊತೆ ಸೇರಿಕೊಂಡ ಸುಧಾಕರ ಪೂಜಾರಿ ಅವರು ಯುವಕರನ್ನು ಖುದ್ದಾಗಿ ಭೇಟಿ ಮಾಡಿ ಯುವಕರ ವಾಸ್ತವ್ಯ, ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು ಸಾಂಗ್ಲಿ ಜಿಲ್ಲಾಧಿಕಾರಿ, ಪೆÇೀಲಿಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಸಮಾಜ ಸೇವಕ ಕನ್ನಡಿಗ ಪ್ರವೀಣ್ ಶೆಟ್ಟಿ ಕೊಡಗು ಅವರ ನೆರವಿನೊಂದಿಗೆ ಪೆÇೀಲಿಸ್ ಮುಖ್ಯಸ್ಥರು ಆಗಮಿಸಿ ಎಲ್ಲಾ ಯುವಕರ ಮಾಹಿತಿ ಕಲೆಹಾಕಿದ್ದಾರೆ.
ಯುವಕರ ಆರೋಗ್ಯ ತಪಾಸಣೆ ನಡೆಸಿ ಶಾಸಕರು, ಜಿಲ್ಲಾಧಿಕಾರಿ ಸಹಕಾರ ಪಡೆದು ಬಸ್ ಮೂಲಕ ಸಾಂಗ್ಲಿಗೆ ರವಾನಿಸಿ ಅಲ್ಲಿನ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಯಿತು. ಕನ್ನಡಿಗ ಮುಖ್ಯ ಶಿಕ್ಷಕ ವಿಠಲ್ ಕೋಲಿ ಅವರು ಯುವಕರನ್ನು ಬರಮಾಡಿಕೊಂಡರು.
ಇಲ್ಲಿ ನೆಲೆಯಾಗಿರುವ ಸಂಕಷ್ಟದಲ್ಲಿನ ಕರುನಾಡ ಜನತೆಯ ಆರೈಕೆ ಮಾಡುವುದು ನಮ್ಮ ಜವಾಬ್ದಾರಿ. ಅಂತಯೇ ಇವರೆಲ್ಲರ ಇಡೀ ಆರೋಗ್ಯವನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡಿ ಕೊಡಲಾಗುವುದು. ಈ ಬಗ್ಗೆ ಯುವಕರ ಪೋಷಕರು ಯಾವುದೇ ವ್ಯಥೆ ಪಡುವ ಅಗತ್ಯವಿಲ್ಲ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡಿಗ ಯುವಕರು ಲಾಕ್ಡೌನ್ ಅವಧಿ ಮುಗಿಯುವವರೆಗೂ ಇಲ್ಲಿ ಸುರಕ್ಷಿತವಾಗಿರಬಹುದು. ಸದ್ಯ ವಾಸ್ತವ್ಯ ಹೊಂದಿರುವ ನಿವಾಸದ ಬಾಡಿಗೆ, ಇಲ್ಲಿನ ಅವಶ್ಯಕ ಹಣಕಾಸು ಬಗ್ಗೆ ಕೂಡಾ ವ್ಯವಸ್ಥೆ ಮಾಡಲಾಗುವುದು ಎಂದು ಸುಧಾಕರ ಪೂಜಾರಿ ತಿಳಿಸಿದ್ದಾರೆ.
ಮುಂಬೈಯಲ್ಲಿ ಬಾಕಿಯಾಗಿರುವ ಕನ್ನಡಿಗ ಯುವಕರ ರಕ್ಷಣೆಗೆ ಮುಂಬೈಯಲ್ಲಿ ಸಹಕರಿಸಿದ ಸರ್ವರಿಗೂ ಮಾಜಿ ಸಚಿವ ಬಿ ರಮಾನಾಥ ರೈ ಅಭಿನಂದನೆ ಸಲ್ಲಿಸಿದ್ದಾರೆ.