(www.vknews.com) : ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಹುಬ್ಬಳ್ಳಿ ಮಹಾನಗರದ ವಾಸವಿ ಅಪಾರ್ಟಮೆಂಟ್ ನಿವಾಸಿ ಶಂಕರ ದೊಡ್ಡಮನಿ ಅವರು ಜನಸಾಮಾನ್ಯರು ಆಸ್ಪತ್ರೆಗೆ ತೆರಳಲು ಉಚಿತ ಸೇವೆ ಒದಗಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೋರಾನಾ ಹಾವಳಿ ಶುರುವಾದಾಗಿನಿಂದ ಈ ತನಕ ತಮ್ಮ ಸ್ವಂತದ ವಾಹನವನ್ನು ಬಳಸಿ, ಹುಬ್ಬಳ್ಳಿಯ ಯಾವುದೇ ರೋಗಗ್ರಸ್ಥರನ್ನು, ಗರ್ಭಿಣಿ, ಬಾಣಂತಿಯರನ್ನು, ಡಯಾಲಿಸಿಸ್ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವವರನ್ನು ಮನೆಯಿಂದ ಆಸ್ಪತ್ರೆಗೆ ಹಾಗೂ ಮರಳಿ ಆಸ್ಪತ್ರೆಯಿಂದ ಮನೆಗೆ ತಲುಪಿಸಲು ಸಂಪೂರ್ಣ ಉಚಿತ ಸೇವೆ ಸಲ್ಲಿಸಿದ್ದು, ಇದು ಎಲ್ಲಿಯೂ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಅವರು ಈ ಕುರಿತು ಪ್ರಚಾರವನ್ನೂ ಬಯಸದೇ ಎಲೆಯ ಮರೆಯ ಕಾಯಿಯಂತೆ ಜನಕಲ್ಯಾಣ ಸೇವೆಗೆ ತೆರೆದುಕೊಂಡಿದ್ದಾರೆ.
ಹುಬ್ಬಳ್ಳಿ ನಗರದ ಯಾವುದೇ ಭಾಗದಿಂದ ಸಂಚರಿಸಲು ಶುಲ್ಕ, ಭಾಡಿಗೆ, ಪೆಟ್ರೋಲ್ ಹಣ ಬಯಸದೇ ಶ್ರಮಿಸುತ್ತಿರುವ ಶಂಕರ ದೊಡ್ಡಮನಿ ಅವರ ಸೇವಾ ಮನೋಭಾವ ಮೆಚ್ಚುವಂಥದ್ದು. ಒತ್ತಾಯಪೂರ್ವಕ ಏನಾದರೂ ಹಣಕೊಡಲು ಬಂದವರಿಂದಲೂ ನಯವಾಗಿ ನಿರಾಕರಿಸಿ ‘ಇದು ನನ್ನ ಅಳಿಲು ಸೇವೆ ದಯವಿಟ್ಟು ಬೇಡ’ ಎಂದು ಹೇಳುವ ವಿನೀತ ಭಾವ ಇವರಲ್ಲಿದೆ.
ಮುಂಜಾನೆ 7ಗಂಟೆಯಿಂದ ರಾತ್ರಿ 8ರವರೆಗೆ ತಮ್ಮ ಈ ನಿಸ್ವಾರ್ಥ ಸೇವೆಗೆ ಸದಾ ಅವರ ವಾಹನ ಸಿದ್ಧವಿರುತ್ತದೆ. ಈ ತನಕ ಅವರು ಸುಮಾರು 100ಕ್ಕೂ ಅಧಿಕ ಜನರಿಗೆ ಈ ಉಚಿತ ವಾಹನ ಸೇವೆ ಒದಗಿಸಿ ಜನಮಾನಸದಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಕೊರೋನಾ ಲಾಕ್ಡೌನ್ ತೆರವುಗೊಳ್ಳುವವರೆಗೆ ಯಾರಿಗಾದರೂ ಉಚಿತ ವಾಹನ ಸೇವೆಯ ಅಗತ್ಯತೆ ಇದ್ದಲ್ಲಿ ಶಂಕರ ದೊಡ್ಡಮನಿ ಅವರ ಮೊಬೈಲ್ ಸಂಖ್ಯೆ 9880360060 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಧಾರವಾಡದ ಹಿರಿಯ ವರ್ತಕ ಬಸವರಾಜ ರಾಚಯ್ಯಸ್ವಾಮಿ ವಸ್ತ್ರದ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.