(www.vknews.com) : ಈದುಲ್ ಪಿತ್ರ್ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ಕೊರೊನಾ ವಿರುದ್ದದ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಖ್ಯಾತ ವಾಗ್ಮಿ ಅಬುಬಕ್ಕರ್ ಸಿದ್ದೀಕ್ ಜಲಾಲಿ ಸಮುದಾಯಕ್ಕೆ ಕರೆ ನೀಡಿದರು. ಎರಡು ತಿಂಗಳ ಲಾಕ್ ಡೌನ್ ನಿಂದಾಗಿ ದೇಶ ಮತ್ತು ವಿದೇಶದಲ್ಲಿ ದುಡಿಯುವವರಿಗೆ ಸಂಕಷ್ಟ ಉಂಟಾಗಿದ್ದು ಈ ಕಾರಣದಿಂದ ಹಣವನ್ನು ವಸ್ತ್ರ ಖರೀದಿಸುವುದಕ್ಕಿಂತ, ನೆರೆಕರೆಯ ಎಲ್ಲಾ ಧರ್ಮೀಯರ ಕಷ್ಟಕ್ಕೆ ನೆರವಾಗಲು ಮತ್ತು ಮಕ್ಕಳ ವಿಧ್ಯಾಬ್ಯಾಸ ಪೀಝ್ ಬರಿಸಲು ಉಪಯೋಗಿಸುವ ಮೂಲಕ ನೆರವಾಗಿ ಎಂದು ಅವರು ಸಲಹೆ ನೀಡಿದರು.
ಹಲವಾರು ಶುಕ್ರವಾರಗಳ ಜುಮ್ಮಾ ಇಲ್ಲದೆ, ತಿಂಗಳು ಕಾಲ ಮಸೀದಿ ತೆರೆಯದೆ, ರಂಝಾನ್ ಉಪವಾಸದ ಸಾಮೂಹಿಕ ಪ್ರಾರ್ಥನೆ ಇಲ್ಲದೇ ದುಃಖದಲ್ಲಿರುವ ನಾವು ವಸ್ತ್ರ ಖರೀದಿಸಿ ಸಂಭ್ರಮಿಸುವುದು ಸಹೃದಯವಲ್ಲ. ಹೀಗಾಗಿ ಅಲ್ಲಾಹನು ನೀಡಿದುದದಲ್ಲಿ ತೃಪ್ತಿ ಪಡುವ ಎಂದ ಅಬುಬಕ್ಕರ್ ಸಿದ್ದೀಕ್ ಜಲಾಲಿ, ಈ ಪರೀಕ್ಷೆಯಲ್ಲಿ ನಾವು ಗೆಲ್ಲಬೇಕು. ಕೊರೊನಾದ ಆತಂಕವನ್ನು ನಿವಾರಿಸಬೇಕು. ಹಾಗಾಗಿ, ಪಟ್ಟಣ, ಮಳಿಗೆಗಳ ಬೇಟಿಯನ್ನು ನಿರ್ಬಂಧಿಸಿ ಮನೆಯಲ್ಲೇ ಸುರಕ್ಷಿತರಾಗಿ ಇರುವ ಎಂದವರು ಹೇಳಿದರು.
ಮುಸ್ಲಿಂ ಸಮುದಾಯದ ಮಹಿಳೆಯರು ತ್ಯಾಗ – ಪರಿಶ್ರಮ ಮತ್ತು ಹೃದಯವಂತಿಕೆ ಇರುವವರು. ಅನುಸರಣೆ ಮತ್ತು ಒಪ್ಪಿಕೊಳ್ಳುವ ಗುಣ ಅವರಲ್ಲಿ ಹೆಚ್ಚಿದೆ. ಅವರ ಕುರಿತು ಕೆಟ್ಟದಾಗಿ ಕೆಲವರು ಬರೆಯುತ್ತಿದ್ದಾರೆ, ಅದನ್ನು ಪಾರ್ವರ್ಡ್ ಮಾಡುವವರಿಗೂ ಸಹೋದರಿ, ತಾಯಿ ಇದ್ದು, ಪ್ರತೀಯೊಬ್ಬರೂ ಆಲೋಚಿಸಬೇಕು ಎಂದು ಹೇಳಿದ ಖತೀಬರು, ಪ್ರತೀ ಮನೆಯ ಯಜಮಾನನ ಉಪದೇಶ ಮತ್ತು ಆಜ್ಞೆ ಅನುಸರಿಸದ ಯಾವುದೇ ಮಹಿಳೆಯರು ನಮ್ಮ ಊರಿನಲ್ಲಿ ಇಲ್ಲ. ಹಾಗಾಗಿ, ಶೈತಾನನು ಕೆರಳಿಸುವುದನ್ನು ಇಷ್ಟಪಡುತ್ತಾನೆ, ಅವಮಾನಿಸುವ ಆಲೋಚನೆ ಬಿತ್ತುತ್ತಾನೆ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನನ್ನ ತಾಯಿಯಂದಿರು, ಸಹೋದರಿಯರು ಯಾವುದೇ ಖರೀದಿಯನ್ನು ಮಾಡಲಾರರು ಎಂದು ಅಭಿಮಾನ ಪಡುವ ವಿಚಾರ ಹರಡಿ ಎಂದು ಖತೀಬರು ಹೇಳಿದರು.
ಈಗಾಗಲೇ ಕೊರೊನಾ ವೈರಸ್ ಹರಡುವ ಘಟನೆಯಲ್ಲಿ ಮುಸ್ಲಿಮರನ್ನು ಅಪರಾಧಿ ಮಾಡಿದ ಘಟನೆಗಳು ನಮ್ಮ ಕಣ್ಣ ಮುಂದೆ ಇರುವಂತೆಯೇ, ಪುನಹ ನಾವು ನಗರದಲ್ಲಿ ಸುತ್ತಾಡಿ ಇದು ಹೆಚ್ಚಾದರೆ ಒಟ್ಟು ಸಮುದಾಯವನ್ನೇ ನಾವು ಬಲಿಕೊಟ್ಟಂತಾಗುತ್ತದೆ, ಕೊರೊನಾವು ಮೊದಲಿಗಿಂತ ವೇಗವಾಗಿ ಹರಡುತ್ತಿದ್ದು, ರಾಜ್ಯ ಸರಕಾರವು ರಂಝಾನ್ ಮುಗಿಯುವವರೆಗೆ ಯಾವುದೇ ಮಳಿಗೆಗಳು ತೆರೆಯದಂತೆ ಲಾಕ್ ಡೌನ್ ನಿಯಮವನ್ನು ಮುಂದುವರಿಸುವುದು ಉತ್ತಮ ಎಂದ ಜಲಾಲಿ, ಸಾಮಾಜಿಕ ಅಂತರ ಕಾಪಾಡಿ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕೊಡದೇ ಇರುವಾಗ ಮಾರುಕಟ್ಟೆ ತೆರೆಯುವುದದಲ್ಲಿ ಅರ್ಥವಿಲ್ಲ. ನಾಳೆ ಏನಾದರೂ ಆಪತ್ತಾದರೆ ಸರಕಾರವೇ ಇದಕ್ಕೆ ಹೊಣೆಯಾಗಬೇಕು ಎಂದವರು ಹೇಳಿದರು.
ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ , ಪೊಲೀಸ್ ಸಿಬ್ಬಂದಿಗಳು, ವೈಧ್ಯರು, ವೈಧ್ಯಕೀಯ ಕಾರ್ಯಕರ್ತರು, ಆಶಾಕಾರ್ಯಕರ್ತರು ಈ ಸಂದಿಗ್ಧ ಸಮಯದಲ್ಲಿ ನಿರ್ವಹಿಸಿದ ತ್ಯಾಗ ಮತ್ತು ಸೇವೆಗೆ ಅಭಿನಂದಿಸಿದ ಅವರು, ಇವರಿಗಾಗಿ ಪ್ರತೀಯೊಬ್ಬರು ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿ ಪ್ರಾರ್ಥಿಸಬೇಕು, ಹಲವು ಸಂಘ ಸಂಸ್ಥೆಗಳು ಜನರ ಕಷ್ಟಕ್ಕೆ ನೆರವಾಗಿದ್ದು ನೋಡಿದ್ದೇನೆ. ಇಂತಹ ಮಾನವೀಯ ಸೇವೆಗೆ ದೇವನ ವಿಶೇಷ ಕರುಣೆಯಿದೆ. ಈಗಾಗಲೇ ಕೊರೊನ ಸೋಂಕು ಪೀಡಿತರಾಗಿ ಇರುವವರು ಆದಷ್ಟು ಶೀಘ್ರ ಗುಣಮುಖರಾಗಿ ಬರಲಿ. ಮೃತರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಅವರು ಪ್ರಾರ್ಥಿಸಿದರು.
– ಹನೀಫ್ ಪುತ್ತೂರು, ಸುನ್ನಿಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.