ವಿಶ್ವಕನ್ನಡಿಗ ನ್ಯೂಸ್:ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಮತ್ತು ಸರಕಾರದ ಮೇಲೆ ಒತ್ತಡ ಹೇರಿ ರಾಜ್ಯಾದ್ಯಂತ ಬಟ್ಟೆ ಮಳಿಗೆಗಳನ್ನು ಹಾಗೂ ಶಾಪಿಂಗ್ ಮಾಲ್ ಗಳನ್ನು ತೆರೆಯುವ ಪ್ರಯತ್ನ ನಡೆಯಿತು ಹಾಗೂ ಇದರಲ್ಲಿ ಕಾಣದ ಕೈಗಳು ಯಶಸ್ವಿಯಾದವು. ರಾಜ್ಯದ ಜನತೆಯ ಜೀವದ ಮೇಲೆ ಸವಾರಿ ಮಾಡಿಯಾದರೂ ಇವರಿಗೆ ವ್ಯಾಪಾರ ನಡೆಸಿ ಬರುವ ಲಾಭವನ್ನು ತಮ್ಮ ಜೇಬಿಗೆ ಇಳಿಸಬೇಕಾಗಿತ್ತು ಆದರೆ ಜನ ಜಾಗೃತಿಯಿಂದಾಗಿ ಮಾಫಿಯಾಗಳ ಈ ಉಪಾಯ ಮಣ್ಣು ಮುಕ್ಕಿತು. ಇನ್ನು ಮುಂದೆ ನಡೆಯುವುದು ‘ಶಾಲಾ ಪುನರಾರಂಭಿಸುವಂತೆ’ ಒತ್ತಡ ಹಾಕುವ ಖಾಸಗಿ ಶಾಲಾ ಮಾಫಿಯ. ಹೌದು ಕೆಲವು ನಿಬಂಧನೆಗಳೊಂದಿಗೆ ಶಾಲೆಗಳನ್ನು ಪ್ರಾರಂಭಿಸುವ ಪ್ರಯತ್ನಗಳು ಬಹಳ ಭರದಿಂದ ಸಾಗುತ್ತಿದೆ. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು, ಸ್ಯಾನಿಟೈಸರ್ ಉಪಯೋಗಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು ಎಂಬ ನಿಬಂಧನೆಯೊಂದಿಗೆ ಮಕ್ಕಳ ಹಾಗೂ ಶಿಕ್ಷಕರ ಜೀವದ ಮೇಲೆ ಚೆಲ್ಲಾಟದ ಪ್ರಯತ್ನ ನಡೆಸಲಾಗುತ್ತದೆ. ಈ ಆತುರದ ನಿರ್ಧಾರಕ್ಕೆ ಶಿಕ್ಷಕರು ಹಾಗೂ ಪುಟ್ಟ ಮಕ್ಕಳು ಬಲಿಪಶುಗಳಾಗುವ ಸಾಧ್ಯತೆಯಿದೆ. ಎಲ್’ಕೆಜಿ, ಯುಕೆಜಿ ಸೇರಿದಂತೆ ಐದನೆಯ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಅದೇನು ನಿಬಂಧನೆ ಹಾಕ್ತಿರೋ?. ತಮ್ಮ ಸುತ್ತಮುತ್ತಲು ಇರುವವರನ್ನೆಲ್ಲಾ ಮೈಮುಟ್ಟಿ ಮಾತನಾಡುವ ಈ ಮುದ್ದು ಮಕ್ಕಳನ್ನು ಸಾಮಾಜಿಕ ಅಂತರ ಪಾಲಿಸುವಂತೆ ನೋಡಿಕೊಳ್ಳುವುದು ಸಾಧ್ಯವೋ?. ಬಿಳಿಯಾಗಿ ಕಂಡದ್ದೆಲ್ಲವನ್ನೂ ಹಾಲು ಎಂದು ಭಾವಿಸುವ ಯಾವುದಾದರೊಂದು ಮುಗ್ಧ ಮಗುವಿನ ಅರಿಯದ ಸ್ಪರ್ಷವೊಂದೇ ಸಾಕು ಬಹು ದೊಡ್ಡ ಅನಾಹುತವೊಂದಕ್ಕೆ ನಾಂದಿ ಹಾಡಲು. ಹೀಗೆ ಒಂದು ಮಗುವಿಗೆ ಕೊವಿಡ್ ಸೋಂಕು ತಗುಲಿತೆಂದರೆ ಮತ್ತೆ ಬೇರೇನೂ ಬೇಕಾಗಿಲ್ಲ. ಆ ಮಗುವಿನಿಂದಾಗಿ ಇಡೀ ಶಾಲೆಯಲ್ಲಿರುವ ಮಕ್ಕಳು, ಶಿಕ್ಷಕರು ಹಾಗೂ ಮಗುವಿನ ಕುಟುಂಬಸ್ಥರು ಸಾಮುದಾಯಿಕ ಪ್ರಸರಣಕ್ಕೆ ಗುರಿಯಾಗಬೇಕಾಗುತ್ತದೆ. ಇದು ಮುಂದೆ ಬಹುದೊಡ್ಡ ಅನಾಹುತವೊಂದಕ್ಕೆ ದಾರಿಯಾಗುತ್ತದೆ. ಅದಲ್ಲದೇ ಈ ವೈರಸ್ ಹರಡುವ ಮತ್ತೊಂದು ಸ್ಥಳ ಶೌಚಲಯವಾಗಿದೆ. ಶಾಲೆಯಲ್ಲಿ ನೂರಾರು ಮಕ್ಕಳು ಒಂದೇ ಶೌಚಾಲಯ ಉಪಯೋಗಿಸುವುದರಿಂದ ಇಲ್ಲಿ ಕೊವಿಡ್ ಹರಡುವ ಸಾಧ್ಯತೆ ಬಹಳ ಜಾಸ್ತಿಯಾಗಿರುತ್ತದೆ. ಆದುದರಿಂದ ದಯವಿಟ್ಟು ಬಡ ಶಿಕ್ಷಕರ ಹಾಗೂ ಪುಟಾಣಿ ಮಕ್ಕಳ ಜೀವದ ಮೇಲೆ ಆಟವಾಡಿ ಹೊಟ್ಟೆ ತುಂಬಿಸಿಕೊಳ್ಳಬೇಡಿ. ಸರಕಾರ ಈ ವಿಷಯದಲ್ಲಿ ತುರ್ತು ತೀರ್ಮಾನ ಕೈಗೊಳ್ಳುವ ಅವಶ್ಯಕತೆಯಿಲ್ಲ. ಈ ಪುಟ್ಟ ಮಕ್ಕಳು ಸದ್ಯಕ್ಕೆ ಮನೆಯಲ್ಲಿಯೇ ಕುಳಿತು ಪೋಷಕರೊಂದಿಗೆ ಶಿಕ್ಷಣ ಕಲಿಯಲಿ. ಬದುಕಿ ಉಳಿದರೆ ಮುಂದೆ ಡೊನೇಷನ್, ಟ್ಯೂಶನ್ ಪೀಸ್, ಶಾಲಾ ವಾಹನದ ಶುಲ್ಕ, ಪುಸ್ತಕಗಳ ಶುಲ್ಕ ಮಾಸ್ಕ್ ಫೀಸ್, ಸ್ಯಾನಿಟೈಸರ್ ಫೀಸುಗಳನ್ನು ಪೋಷಕರಿಂದ ವಸೂಲಿ ಮಾಡೋಣ.
ಬರಹ:ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.