(www.vknews.com) : ಮಂಗಳೂರಿನಲ್ಲಿ ಸಿವಿಲ್ ಡಿಫೆನ್ಸ್ ಅಥವಾ ಪೌರರಕ್ಷಣಾ ಪಡೆ ಸದ್ಯದಲ್ಲಿಯೇ ಕಾರ್ಯ ನಿರ್ವಹಿಸಲಿದೆ. ಗೃಹರಕ್ಷಕ, ಪೌರರಕ್ಷಣಾ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಡಿಯಲ್ಲಿ ಬರುವ ಈ ಪಡೆ ದಕಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ರಚನೆಯಾಗಿರಲಿಲ್ಲ. ಇದೀಗ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹರಕ್ಷಕದಳ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ, ಕರ್ನಾಟಕ ರಾಜ್ಯ, ಬೆಂಗಳೂರು ಇವರು ದಿನಾಂಕ:16-05-2020 ರಂದು ಆದೇಶ ಹೊರಡಿಸಿ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಇವರನ್ನು ಮೂರು ವರ್ಷಗಳ ಅವಧಿಗೆ ಪೌರರಕ್ಷಣಾ ವಿಭಾಗದ ಚೀಫ್ವಾರ್ಡನ್ ಆಗಿ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಪೌರರಕ್ಷಣಾ ಪಡೆಯನ್ನು ರಚಿಸಿ ರಚನಾತ್ಮಕವಾಗಿ ಕೆಲಸ ಮಾಡುವ ತಂಡವನ್ನು ರಚಿಸುವ ಹೊಣೆಗಾರಿಕೆಯನ್ನು ಡಾ|| ಮುರಲೀ ಅವರಿಗೆ ಹೆಚ್ಚುವರಿಯಾಗಿ ಅಧಿಕಾರ ನೀಡಲಾಗಿದೆ.
ಏನಿದು ಪೌರರಕ್ಷಣಾ ಪಡೆ: ಪೌರರಕ್ಷಣಾ ಪಡೆ 1968ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಮೊದಲು ಸೇನೆಯೊಂದಿಗೆ ಕಾರ್ಯನಿರ್ವಹಿಸಿತ್ತು. ಪಡೆಯು 1971ರಲ್ಲಿ ನಡೆದ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಸೈನಿಕರೊಂದಿಗೆ ಕಾರ್ಯನಿರ್ವಹಿಸಿತ್ತು. 2010ರಲ್ಲಿ ಅದನ್ನು ವಿಪತ್ತು ನಿರ್ವಹಣಾ ಘಟಕದ ಜೊತೆ ಸೇರಿಸಿ ಹೊಸ ಕಾನೂನನ್ನು ಜಾರಿಗೊಳಿಸಿತ್ತು. ಒಟ್ಟು ಜನಸಂಖ್ಯೆಯ ಶೇಕಡಾ 1 ರಷ್ಟು ಪೌರರಕ್ಷಣಾ ಕಾರ್ಯಕರ್ತರು ಇರಬೇಕು. ಆದರೆ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಬೆಂಗಳೂರು, ರಾಯಚೂರಿನ ಶಕ್ತಿನಗರ ಮತ್ತು ಕಾರವಾರದ ಕೈಗಾದಲ್ಲಿ ಮಾತ್ರ ಪೌರರಕ್ಷಣಾ ಪಡೆ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಬಳ್ಳಾರಿ, ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪೌರರಕ್ಷಣಾ ಪಡೆಯನ್ನು ರಚಿಸಿ ಕಾರ್ಯ ನಿರ್ವಹಿಸಲು ಆದೇಶ ನೀಡಲಾಗಿದೆ.
ಗೃಹರಕ್ಷಕರಿಗೆ ನೀಡುವಂತೆ ಪ್ರಥಮ ಚಿಕಿತ್ಸೆ, ಬೆಂಕಿ ಅವಘಡ ತರಬೇತಿ ನೆರೆ ಸಂತ್ರಸ್ತರ ರಕ್ಷಣೆ ಮತ್ತು ಇತರ ತರಬೇತಿಗಳನ್ನು ಪೌರರಕ್ಷಣಾ ತಂಡಕ್ಕೆ ನೀಡಲಾಗುವುದು. ಇದೊಂದು ಜನರಿಗೆ ಸಮಾಜ ಸೇವೆ ಮಾಡುವ ಅವಕಾಶವಾಗಿದ್ದು, ಆಯ್ಕೆಯಾದ ಆಸಕ್ತ ಪೌರರಕ್ಷಕರಿಗೆ ಉಚಿತವಾಗಿ ಯೆಲ್ಲೋ ಜಾಕೆಟ್ ನೀಡಿ ಗುರುತು ಪತ್ರ ನೀಡಲಾಗುವುದು. ಯಾವುದೇ ವೇತನ ಗೌರವಧನ ಇರುವುದಿಲ್ಲ. ತುರ್ತು ಸಂದರ್ಭಗಳಾದ ಬೆಂಕಿ ಅವಘಡ, ಅಪಘಾತ, ಸಾಂಕ್ರಾಮಿಕ ರೋಗ ನಿರ್ವಹಣೆ, ನೆರೆಹಾವಳಿ ಸಮಯದಲ್ಲಿ ಅವರ ಸೇವೆ ಪಡೆಯಲಾಗುವುದು. 18 ವಯಸ್ಸು ದಾಟಿದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. 50 ವರ್ಷ ದಾಟಿದವರನ್ನು ಪರಿಗಣಿಸಲಾಗುವುದಿಲ್ಲ. ಕನಿಷ್ಟ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಆಸಕ್ತರು ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ಮೇರಿಹಿಲ್, ಮಂಗಳೂರು ಇಲ್ಲಿ ಅರ್ಜಿ ನಮೂನೆ ಪಡೆದುಕೊಳ್ಳಬಹುದಾಗಿದೆ. ಫೋನ್ ನಂ. 0824-2220562. ಹೆಚ್ಚಿನ ವಿವರಗಳಿಗೆ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.