ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಹುಮ್ಯಾನಿಟಿ ಫಾರಂ ಜುಬೈಲ್ ಮತ್ತು ಇಂಡಿಯನ್ ಸೋಶಿಯಲ್ ಫಾರಮ್, ಸೌದಿ ಅರೇಬಿಯಾದ ಕ್ಷಿಪ್ರ ಕಾರ್ಯಾಚರಣೆಯೊಂದಿಗೆ ತೀವ್ರ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದ ದಕ್ಷಿಣ ಕನ್ನಡ ಮೂಲದ ಅನಿವಾಸಿಯೊಬ್ಬರನ್ನು ತವರಿಗೆ ತಲುಪಿಸಲಾಗಿದೆ.
ಕಡಬ ಮೂಲದ ಝಕರಿಯ್ಯಾ ಎಂಬವರು ಕಳೆದ ಹಲವು ದಿನಗಳಿಂದ ತೀವ್ರ ಹೃದ್ರೋಗ ಚಿಕಿತ್ಸೆಗಾಗಿ ಮದೀನಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಿರಲಿಲ್ಲ ಮತ್ತು ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನು ತವರಿಗೆ ಕೊಂಡೊಯ್ಯುವುದಕ್ಕಾಗಿ ಬಂಧುಮಿತ್ರರು ಎಲ್ಲಾ ಪ್ರಯತ್ನ ಮಾಡಿ ಸೋತಿದ್ದರು. ಈ ಕುರಿತು ಹಲವು ಸಂಘಸಂಸ್ಥೆಗಳನ್ನು ಕೋರಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಿರುವಾಗ ಅವರ ಸಂಬಂಧಿ ಡಿ.ಕೆ.ಎಸ್.ಸಿ ಕಾರ್ಯಕರ್ತ ಸುರತ್ಕಲ್ ಅನ್ಸಾರಿ ಈ ಕುರಿತು ಇಂಡಿಯನ್ ಸೋಶಿಯಲ್ ಫ಼ಾರಮ್ ದಮ್ಮಾಮ್ , ಕರ್ನಾಟಕ ಘಟಕದ ನಾಯಕರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತವಾದ ಇಂಡಿಯನ್ ಸೋಶಿಯಲ್ ಫ಼ಾರಮ್, ಈ ಕುರಿತು ಹುಮ್ಯಾನಿಟಿ ಫ಼ಾರಮನ್ನು ಸಂಪರ್ಕಿಸಿತು. ಮಾನವೀಯತೆಯನ್ನು ಮೆರೆದ ಹುಮ್ಯಾನಿಟಿ ಫ಼ಾರಮ್ ನ ಅಧ್ಯಕ್ಷ ಝಕರಿಯಾ ಮುಝೈನ್ ಮತ್ತು ಆಸಿಫ಼್ ಅಮ್ಯಾಕೊ ಸಂಸದ ಸದಾನಂದ ಗೌಡ ಅವರೊಂದಿಗೆ ನಡೆಸಿದ ವೀಡಿಯೊ ಕಾನ್ಫ಼ರೆನ್ಸ್ ಸಭೆಯಲ್ಲಿ ರೋಗಿಯನ್ನು ಪ್ರದರ್ಶಿಸಿ ವಾಪಸಾತಿಗೆ ಒತ್ತಡ ಹಾಕಿದರು.ಹುಮ್ಯಾನಿಟಿ ಫ಼ಾರಮ್ ನ ಇತರ ಪದಾಧಿಕಾರಿಗಳೂ ಈ ಸಭೆಯಲ್ಲಿ ಭಾಗವಹಿಸಿದ್ದು ಬೆಂಬಲವನ್ನು ಸೂಚಿಸಿದ್ದರು.
ಝಕರಿಯಾ ಮುಝೈನ್ ಮತ್ತು ಆಸಿಫ಼್ ಅಮ್ಯಾಕೊ ಅವರ ತೀವ್ರ ಪ್ರಯತ್ನದ ಭಾಗವಾಗಿ ಭಾರತೀಯ ರಾಯಭಾರಿ ಕಚೇರಿಯು ಮೇ.20, 2020ರಂದು 12 ಗಂಟೆಗೆ ನಿಗದಿಯಾಗಿದ್ದ ದಮ್ಮಾಮ್-ಬೆಂಗಳೂರು ವಿಮಾನದ ಮೂಲಕ ರೋಗಿಯನ್ನು ತವರಿಗೆ ಕಳುಹಿಸಿಕೊಡಲು ಅವಕಾಶವನ್ನು ಮಾಡಿಕೊಡಲು ಒಪ್ಪಿಕೊಂಡಿತು.
ಕೊನೆಯ ಕ್ಷಣದಲ್ಲಾದ ಬೆಳವಣಿಗೆಯಿಂದ ತೀವ್ರ ನಿಗಾ ಘಟಕದಲ್ಲಿದ್ದ ಝಕರಿಯಾ ಕಡಬ ಅವರನ್ನು ಮದೀನಾದಿಂದ ದಮ್ಮಾಮ್ ಗೆ ತಲುಪಿಸುವುದು ಕಷ್ಟದ ಕೆಲಸವಾಗಿತ್ತು. ಮದೀನಾದಲ್ಲಿ ಕೋವಿಡ್-19 ಸಮಸ್ಯೆ ಹೆಚ್ಚಿರುವುದರಿಂದ ಯಾವುದೇ ಆಸ್ಪತ್ರೆಗಳು ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಲು ನಿರಾಕರಿಸಿದವು. ಸಂಜೆಯ 5 ಗಂಟೆಯ ಬಳಿಕ ಸೌದಿ ಅರೇಬಿಯಾದಾದ್ಯಂತ ಕರ್ಫ಼್ಯೂ ಹೇರಲಾಗುತ್ತದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಖಾಸಗಿ ವಾಹನದ ಮೂಲಕ 1200 ಕಿ.ಮೀ ದೂರದ ದಮ್ಮಾಮ್ ವಿಮಾನ ನಿಲ್ದಾಣಕ್ಕೆ ತಲುಪಿಸಲು ಸೌದಿ ಅರೇಬಿಯಾದ ಸಂಚಾರಿ ಪೊಲೀಸ್ (ಮುರೂರ್) ನ ಅನುಮೋದನಾ ಪತ್ರದ ಅಗತ್ಯವಿತ್ತು. ಆದರೆ ಸಂಚಾರಿ ಪೊಲೀಸ್ ಮೇ 19ರಂದು ಸಂಜೆಯವರೆಗೂ ಕಾಯುವಂತೆ ಮಾಡಿ ಕೊನೆಗೆ ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್ ಫ಼ಾರಮ್ ರಿಯಾದ್ ಮತ್ತು ಜಿದ್ದಾ ಘಟಕಗಳು ವೇಗವಾಗಿ ಕಾರ್ಯಾಚರಿಸಿ ಆಯಾ ನಗರಗಳಲ್ಲಿರುವ ರಾಯಭಾರಿ ಕಚೇರಿಯ ಅನುಮೋದನಾ ಪತ್ರವನ್ನು ಪಡೆದವು. ರಾತ್ರಿ 8 ಗಂಟೆಯ ಸುಮಾರಿಗೆ ಅನುಮೋದನಾ ಪತ್ರ ದೊರೆತಿತ್ತು.
ಐಎಸ್ಎಫ಼್ ನ ಮದೀನಾ ಘಟಕವು ತನ್ನ ಸದಸ್ಯರ ಖಾಸಗಿ ವಾಹನದ ಮೂಲಕ ಹೃದ್ರೋಗಿ ಝಕರಿಯ್ಯಾರನ್ನು ಮದೀನಾದಿಂದ ದಮ್ಮಾಮ್ ಗೆ ತಲುಪಿಸುವ ಏರ್ಪಾಡು ಮಾಡಿತು. ರಾತ್ರಿ 8 ಗಂಟೆಗೆ ಹೊರಟ ವಾಹನವು 1200 ಕಿ.ಮೀ ದೂರ ಕ್ರಮಿಸಿ ಬೆಳಗ್ಗೆ 9.30ಕ್ಕೆ ವಿಮಾನ ನಿಲ್ದಾಣ ತಲುಪಬೇಕಿದ್ದು, ಸಮಯಕ್ಕೆ ಸರಿಯಾಗಿ ತನ್ನ ಗುರಿಯನ್ನು ತಲುಪಿತು. ಸಂಘಟನೆಯ ದಮ್ಮಾಮ್ ಘಟಕವು ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವೀಕರಿಸಿ ಪ್ರಯಾಣಕ್ಕೆ ಬೇಕಾದ ಏರ್ಪಾಡು ಮಾಡಿತು.
ರೋಗಿಗೆ ಟಿಕೆಟ್ ಮತ್ತು ಇತರ ವೆಚ್ಚಕ್ಕಾಗಿ ಬೇಕಾದ ಹಣವನ್ನು ಬಿಸಿಸಿಐ ಅಧ್ಯಕ್ಷ ಝಕರಿಯಾ ಮುಝೈನ್ ಒದಗಿಸಿದ್ದರು. ರಿಯಾದ್ ಮತ್ತು ಜಿದ್ದಾಗಳ ಭಾರತೀಯ ರಾಯಭಾರಿ ಕಚೇರಿಯು ಪ್ರಕರಣದ ಕುರಿತು ಅತಿಯಾಗಿ ಕಾಳಜಿ ವಹಿಸಿ ವಾಪಸಾತಿಗೆ ಬೇಕಾದ ಎಲ್ಲಾ ಸರಕಾರಿ ಏರ್ಪಾಡುಗಳನ್ನು ಪೂರೈಸಿತ್ತು. ಅಲ್ಲದೆ ರಾಯಭಾರಿ ಕಚೇರಿ ತುರ್ತಾಗಿ ಅನುಮೋದನಾ ಪತ್ರವನ್ನು ಬಿಡುಗಡೆಗೊಳಿಸದೆ ಇದ್ದರೆ ರೋಗಿಯನ್ನು ವಿಮಾನ ನಿಲ್ದಾಣಕ್ಕೆ ತಲುಪಿಸುವುದು ಅಸಾಧ್ಯದ ಮಾತಾಗಿತ್ತು. ಅನಿವಾಸಿ ಕನ್ನಡಿಗರೊಬ್ಬರನ್ನು ತವರಿಗೆ ತಲುಪಿಸುವುದಕ್ಕಾಗಿ ರಾಯಭಾರಿ ಕಚೇರಿ ವಹಿಸಿದ ಕಾಳಜಿ ಮತ್ತು ಮುತುವರ್ಜಿ ಶ್ಲಾಘನೀಯ ಎಂದು ಇಂಡಿಯನ್ ಸೋಶಿಯಲ್ ಫ಼ಾರಮ್ ಹೇಳಿದೆ. ಈ ಕಾರ್ಯಾಚರಣೆಗೆ ನೆರವಾದ ಕೇಂದ್ರ ಸಚಿವ ಸದಾನಂದ ಗೌಡ, ಶಾಸಕ ಯು.ಟಿ.ಖಾದರ್, ಹುಮ್ಯಾನಿಟಿ ಫಾರಂ ಜುಬೈಲ್ ಮತ್ತು ಕೆ.ಎನ್.ಆರ್.ಐನ ಎಲ್ಲಾ ಪದಾಧಿಕಾರಿಗಳಿಗೆ ಇಂಡಿಯನ್ ಸೋಶಿಯಲ್ ಫಾರಂ ಧನ್ಯವಾದ ತಿಳಿಸಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.