(www.vknews.com) : ಈ ವರ್ಷ ಈದುಲ್ ಫಿತರ್ ಹಬ್ಬ ನಮ್ಮ ಜೀವಮಾನದಲ್ಲಿ ನಾವು ಅನುಭವಿಸಿದ ಹೊಸ ಅನುಭವ. ಲಾಕ್ ಡೌನ್ ಕಾರಣದಿಂದಾಗಿ ಈದ್ ಹಬ್ಬಕ್ಕೆ ಮಸೀದಿಗಳಲ್ಲಿ ನಮಾಝ್ ಇಲ್ಲ, ಹೊಸ ಬಟ್ಟೆ ಬರೆಗಳಿಲ್ಲ, ದೂರದಲ್ಲಿರುವ ಕುಟುಂಬಸ್ಥರ ಸಂದರ್ಶನವಿಲ್ಲ, ಸಾಮಾಜಿಕ ಅಂತರ ಪಾಲಿಸುವ ಸಲುವಾಗಿ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳುವಂತೆಯೂ ಇಲ್ಲ. ಇದು ನಮ್ಮ ಜೀವನದಲ್ಲಿ ನಮಗೆ ಬಹಳ ದುಃಖದಾಯಕ ಕ್ಷಣ ಎನ್ನಬಹುದು. ಆದರೆ ಅಲ್ಲಾಹನ ಭಾಗದಿಂದ ಬರುವ ಪ್ರತಿಯೊಂದು ಕೂಡ ಮನುಷ್ಯನ ಒಳಿತಿಗಾಗಿಯೇ ಬರುತ್ತದೆ. ಈ ಸನ್ನಿವೇಷವು ನಮಗೆ ಅಲ್ಪ ಮಟ್ಟಿಗೆ ಉಸಿರುಗಟ್ಟುವ ವಾತಾವರಣವನ್ನು ಉಂಟುಮಾಡಿದೆಯಾದರೂ ಇದರ ಹಿಂದೆ ನಮಗೆ ವರಮಾನವಾಗುವಂತಹ ಹಲವು ವಿಚಾರಗಳು ಅಡಗಿವೆ.
ನಮ್ಮ ಜೀವನ ಶೈಲಿ ಎಷ್ಟು ಕೆಟ್ಟು ಹೋಗಿತ್ತೆಂದರೆ ‘ಹಸಿವು’ ಅನ್ನುವ ಪದದ ಅರ್ಥವೇ ನಮಗೆ ತಿಳಿದಿರಲಿಲ್ಲ. ಒಂದೊತ್ತಿನ ಊಟಕ್ಕೆ ಮೂರು ಬಗೆಯ ಪದಾರ್ಥ ಪ್ರೈ ಗಳಿಲ್ಲದೆ ನಮಗೆ ಸೇರುತ್ತಿರಲಿಲ್ಲ. ಒಪ್ಪತ್ತಿನ ಊಟಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವಷ್ಟು ಮಟ್ಟಕ್ಕೆ ನಾವು ಬೆಳೆದು ಬಿಟ್ಟಿದ್ದೆವು. ಇಸ್ಲಾಮಿನ ಸುಂದರ ಸರಳವಾದ ‘ವಿವಾಹ’ ಸಂಪ್ರದಾಯವನ್ನು ನಾವು ಇತರರು ‘ಛೀ’ ಎನ್ನುವಷ್ಟರ ಮಟ್ಟಿಗೆ ಬೆಳೆಸಿ ಬಿಟ್ಟಿದ್ದೆವು. ಪ್ರವಾದಿ ಚರ್ಯೆಯನ್ನು ಹಳದಿ, ತಾಳ, ಡ್ರೆಸ್ ಕೋಡ್, ಸಿನಿಮಾ ಹಾಡುಗಳ ಹೆಸರಿನಲ್ಲಿ ‘ಹರಾಂ’ಗಳಿಂದ ತುಂಬಿಸಿಟ್ಟಿದ್ದೆವು. ಇಸ್ಲಾಮಿನ ಅತಿಥಿ ಸತ್ಕಾರ ಸಂಪ್ರದಾಯವನ್ನು ಮುರಿದು ಪಾಶ್ಚಾತ್ಯ ‘ಬಫೆ’ ಸಿಸ್ಟಮ್ ಗೆ ಮಾರು ಹೋಗಿದ್ದೆವು. ಒಂದು ಮದುವೆಗೆ ಹತ್ತು ಮದುವೆಗೆ ಬೇಕಾಗುವ ಹಣ ಆಹಾರವನ್ನು ಪೋಲು ಮಾಡುತ್ತಿದ್ದೆವು. ನೆರೆಮನೆಯಲ್ಲಿ ಪ್ರಾಯ ತುಂಬಿದ ಹೆಣ್ಣುಮಕ್ಕಳಿದ್ದರೂ ನಾಲ್ಕು ಉಮ್ರಾ ಹಜ್ ಗಳನ್ನು ನೆರವೇರಿಸುತ್ತಿದ್ದೆವು. ಕಾರಣ ನಮ್ಮನ್ನು ಪ್ರಶ್ನಿಸಲು ಎಲ್ಲರೂ ಹೆದರುತ್ತಿದ್ದರು. ನಮಗೆ ನಾವೇ ಉಸ್ತಾದರು, ನಮಗೆ ನಾವೇ ಖಾಝಿಗಳಾಗುವ ಮಟ್ಟಕ್ಕೆ ನಾವು ಬೆಳೆದಿದ್ದೆವು. ಹರಾಮಿಯತ್ತನ್ನು ಪ್ರಶ್ನಿಸಿದರೆ ಧಾರ್ಮಿಕ ಗುರುಗಳಿಗೆ ಮಸೀದಿಯಿಂದಲೇ ಗೇಟ್ ಪಾಸ್ ಕೊಡುತ್ತಿದ್ದೆವು. ಅಷ್ಟೂ ತಾಕತ್ತು ನಮ್ಮಲ್ಲಿತ್ತು. ಆದರೆ ನಮ್ಮನ್ನು ಆಡಲು ಬಿಟ್ಟಿದ್ದ ಸೂತ್ರದಾರ ಒಮ್ಮೆಲೆ ದಾರವನ್ನು ಎಳೆದೇ ಬಿಟ್ಚ. ಅಲ್ಲಿಗೆ ನಿಂತಿತು ನಮ್ಮ ಆಟ. ಮುಂದೆ ಎಲ್ಲವೂ ಶೂನ್ಯ. ಪ್ರಥಮ ಬಾರಿಗೆ ಹಣವಂತನು ಹಣವಿಲ್ಲದವನೂ ಒಂದೇ ಕ್ಯಾಟಗರಿಗೆ ಸೇರಿದರು. ಹಣ, ವಿಧ್ಯೆ, ಬುದ್ಧಿ ಯಾವುದೂ ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಯಿತು. ಎಷ್ಟು ಧಾರ್ಮಿಕ ಪ್ರಭಾಷಣ ಹಾಗೂ ಮತ ಪ್ರವಚನ ಕೇಳಿಯೂ ನಮ್ಮ ಜೀವನ ಶೈಲಿ ಬದಲಾಯಿಸಲು ಸಾಧ್ಯವಾಗಿಲ್ಲ. ಯಾವ ಖತೀಬರು ಖಾಝಿಗಳು ಬುದ್ಧಿವಾದ ಹೇಳಿಯೂ ನಾವು ನಮ್ಮ ಶೈಲಿಯನ್ನು ಬದಲಾಯಿಸಲಿಲ್ಲ. ಯಾರಿದಂಲೂ ತಿದ್ದಲಾಗದ ಒಂದು ಸಮುದಾಯವನ್ನು ಅಲ್ಲಾಹನು ಕೊವಿಡ್ ಎಂಬ ಕಣ್ಣಿಗೆ ಕಾಣದ ವೈರಸ್ ನ ಮೂಲಕ ತಿದ್ದಿದನು. ಯಾರ ಹಿತವಚನ ಹಾಗೂ ಮಾರ್ಗದರ್ಶನವಿಲ್ಲದೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದೆವು. ಜಂಕ್ ಫುಡ್ ಇಲ್ಲದೇ ಬದುಕಲಾರದ ಸ್ಥಿತಿಯಲ್ಲಿದ್ದ ನಾವು ಉಪ್ಪು ಸೇರಿಸಿದ ಗಂಜಿ ಊಟ ಮಾಡಲು ಕಲಿತೆವು. ಕನಿಷ್ಠ ಎರಡು ಜೋಡಿ ಹೊಸ ಡ್ರೆಸ್ ಇಲ್ಲದೆ ಈದ್ ಆಚರಿಸಲು ಅಸಾಧ್ಯ ಎಂದಿದ್ದ ನಮ್ಮ ಮನಸ್ಥಿತಿ ಹೊಸ ಬಟ್ಟೆ ಧರಿಸದೆ ಈದ್ ಆಚರಿಸಬಹುದು ಎಂಬಲ್ಲಿಗೆ ಮಾರ್ಪಾಡಾಯಿತು. ಅನಾವಶ್ಯಕ ಖರ್ಚು ಮಾಡುತ್ತಿದ್ದ ಸಮುದಾಯವು ಅವಶ್ಯಕತೆಗೂ ಕೂಡ ಖರ್ಚು ಮಾಡಲು ಹಿಂದೆಮುಂದೆ ನೋಡುವಂತಾಯಿತು. ದಿನಾಲೂ ಮೀನು ಕೋಳಿ ಮಾಂಸದೂಟ ತಿಂದು ನಾಲಗೆಯ ರುಚಿ ಕಳೆದುಕೊಂಡಿದ್ದ ನಾವು ಒಮ್ಮೆ ಇವುಗಳನ್ನು ತಿನ್ನಲು ಚಡಪಡಿಸುವಂತಾಯಿತು. ಇಪ್ಪತ್ತು ವರ್ಷಗಳಲ್ಲಿ ಯಾರಿಂದಲೂ ಬದಲಿಸಲಾಗದ ಸಮುದಾಯದ ಜೀವನಶೈಲಿಯನ್ನು ಒಂದು ವೈರಸ್ ಕೇವಲ ಎರಡು ತಿಂಗಳಲ್ಲಿ ಬದಲಾಯಿಸಿತು ಎಂದರೆ ತಪ್ಪಲ್ಲ.
ಕೊವಿಡ್ ನೊಂದಿಗೆ ನಮ್ಮ ಇಂದಿನ ಜೀವನ ಶೈಲಿಯು ಕೊವಿಡ್ ನಂತರವೂ ಮುಂದುವರಿಯಲಿ. ಮನುಷ್ಯ ಸ್ವತಃ ಬದಲಾಗದಿದ್ದರೆ ಅಲ್ಲಾಹನು ವಿಪತ್ತುಗಳ ಮೂಲಕ ಸಮೂಹವನ್ನು ಬದಲಾಯಿಸಿದ ಮತ್ತು ನಾಶ ಪಡಿಸಿದ ಅದೆಷ್ಟೋ. ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದ್ದರಿಂದ ಇದು ನಮ್ಮ ಬದಲಾವಣೆಗೆ ಸಕಾಲ. ಇದರಿಂದ ಪಾಠ ಕಲಿತು ಅಲ್ಲಾಹನ ಮಾರ್ಗದಲ್ಲಿ ಪ್ರವಾದಿಯವರ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ನೈಜ ಸತ್ಯವಿಶ್ವಾಸಿಗಳಾಗಿ ಜೀವಿಸೋಣ.
✍️ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.