(www.vknews.com) : ಜಿನ್, ಗುಮ್ಮಾ , ಭೂತ, ಪಿಚಾಚಿ, ದೆವ್ವ ಮುಂತಾದವುಗಳ ಬಗ್ಗೆ ಬಾಲ್ಯಾವಸ್ಥೆಯಿಂದಲೇ ಕೇಳಿಕೊಂಡು ಬೆಳೆದಿದ್ದೇವೆ. ಕೆಲವರು ನಂಬುತ್ತಾರೆ, ಕೆಲವರು ಅದೆಲ್ಲ ನಿಮ್ಮ ಮನಸ್ಸಿನ ಕಲ್ಪನೆಗಳು ಮಾತ್ರ ಅಷ್ಟೇ ಎನ್ನುತ್ತಾರೆ. ನಂಬುವುದು ಬಿಡುವುದು ಅವರವರ ತರ್ಕಕ್ಕೆ ಬಿಟ್ಟಿದ್ದು.
ಮನಃಶಾಸ್ತ್ರಕ್ಕೆ ಸಂಬಂಧಿತ ಎಷ್ಟೋ ರೋಗಗಳು ಅದರ ಬಗ್ಗೆ ಸರಿಯಾದ ಮಾಹಿತಿ ಮತ್ತು ಪರಿಜ್ಞಾನವಿಲ್ಲದೆ ಜನರು ಭೂತ ಪ್ರೇತಗಳ ಕಾಟವೆಂದು ತಿಳಿದು ಮಂತ್ರವಾದಿಗಳಿಗೆ ಮೊರೆ ಹೋಗಿ ಪ್ರಾಣಗಳನ್ನು ಕಳೆದುಕೊಂಡಿರುವುದುಂಟು. ಮನಃಶಾಸ್ತ್ರ ಎಷ್ಟೇ ಮುಂದುವರೆದರೂ ಜನರ ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ಕೆಲವೊಮ್ಮೆ ಹಿಂದೇಟು ಹಾಕಿರುವುದುಂಟು. ಪ್ರಪಂಚದಲ್ಲಿ ಎಷ್ಟೋ ಪ್ರಶ್ನೆಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ. ಮನಃಶಾಸ್ತ್ರ ಅದನ್ನು ಭೇದಿಸಲು ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಲೇ ಇದೆ. ಹಲವಾರು ಸಿನಿಮಾಗಳು ಮನಃಶಾಸ್ತ್ರದ ಬಗ್ಗೆ ಭೂತ ಪಿಚಾಚಿಗಳ ಬಗ್ಗೆ ಬರುತ್ತಲೇ ಇವೆ. ನಾವು ನೋಡುತ್ತಲೇ ಇದ್ದೇವೆ. ತರ್ಕಕ್ಕೆ ನಿಲುಕದಂತಹ ವಿಷಯಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ಯಕ್ಷ ಪ್ರಶ್ನೆಯಾಗಿಯೇ ಜನಸಾಮಾನ್ಯರ ಮುಂದಿದೆ.
ಸುಪ್ತ ಮನಸ್ಸಿನ ಭಾವನೆಗಳು ನಿಮ್ಮ ಕನಸಿನಲ್ಲಿ ಬರುವುದುಂಟು. ಪ್ರತಿಯೊಬ್ಬರ ಕನಸು ಮತ್ತು ವರ್ತನೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ನೀವು ಮಲಗಿದ್ದಾಗ ಯಾರೋ ಮೇಲೆ ಬಂದು ಬಿದ್ದ ಹಾಗೆ, ಶರೀರ ಭಾರವಾದ ಹಾಗೆ, ಯಾರೋ ಕಿರುಕುಳ ಕೊಟ್ಟಹಾಗೆ, ಅದರಿಂದ ನೀವು ಪಾರಾಗಲು ಪ್ರಯತ್ನಿಸಿದ ಹಾಗೆ ನಿಮ್ಮಲ್ಲಿ ಕೆಲವರಿಗೆ ಭಾಸವಾಗಿರಬಹುದು. ಹಾಗಾದರೆ ಅದು ಕೇವಲ ನಿಮ್ಮ ಕಲ್ಪನೆಯೇ ಅಥವಾ ಯಾವುದಾದರು ಶಕ್ತಿ ನಿಮಗೆ ನಿಜವಾಗಲೂ ತೊಂದರೆ ಕೊಡುತ್ತಿದೆಯೇ ? ಇದು ಕೆಲವರಿಗೆ ಗಂಭೀರವಾದ ಪ್ರಶ್ನೆ , ಮತ್ತೆ ಕೆಲವರಿಗೆ ಇದು ಕೇವಲ ಮಾನಸಿಕ ಕನವರಿಕೆ ಅಥವಾ ಮಾನಸಿಕ ರೋಗ ಮಾತ್ರ. ಹಾಗಾದರೆ ಸತ್ಯ ಏನು?
ನಾನು ಗುರುಹಿರಿಯರಿಂದ ತಿಳಿದುಕೊಂಡಿರುವ ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ದೇವರು ಮಾನವಕುಲವನ್ನು ಹೇಗೆ ಸೃಷ್ಟಿ ಮಾಡಿದ್ದಾನೋ, ಹಾಗೆಯೆ ಬೇರೆ ಬೇರೆ ಪ್ರಭೇದಗಳ ಸಾವಿರಾರು ಕುಲಗಳನ್ನು ಸೃಷ್ಟಿ ಮಾಡಿದ್ದಾನೆ. ನಮ್ಮ ಕಣ್ಣಿಗೆ ಸಾಮಾನ್ಯವಾಗಿ ತಕ್ಷಣಕ್ಕೆ ಗೋಚರವಾಗುವುದು ಪ್ರಾಣಿಕುಲ, ಪಕ್ಷಿಕುಲ, ಮಾನವಕುಲ ಇತ್ಯಾದಿ. ಬ್ರಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಮನುಷ್ಯರು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ.
ಮಾನವಕುಲದಂತೆ ಜಿನ್ನುಗಳ ಕುಲವೂ ಉಂಟು. ಮಾನವ ಮತ್ತು ಜಿನ್ನುಗಳನ್ನು ಕೇವಲ ನನ್ನ ಪ್ರಾರ್ಥನೆ ಮಾಡಲು ಸೃಷ್ಟಿಸಿದ್ದೇನೆ ಎಂದು ದೇವರು ಹೇಳಿದ್ದಾನೆ. ಮಾನವಕುಲದ ತಂದೆ ಆದಮರನ್ನು ಹುಟ್ಟಿಸುವ ೨ ಸಾವಿರ ವರ್ಷಗಳ ಹಿಂದೆಯೇ ಜಿನ್ನುಗಳ ಕುಲವನ್ನು ದೇವರು ಸೃಷ್ಟಿಸಿದ್ದ. ಮಾನವಕುಲ ಮಣ್ಣಿನಿಂದ, ಜಿನ್ನುಗಳ ಕುಲ ಬೆಂಕಿಯಿಂದ, ದೇವದೂತರ ಕುಲವನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ. ಬುಧವಾರ ದೇವದೂತರನ್ನು, ಗುರುವಾರ ಜಿನ್ನುಗಳನ್ನು ಮತ್ತು ಶುಕ್ರವಾರ ಮನುಷ್ಯಜಾತಿಯನ್ನು ಹುಟ್ಟಿಸಿದ. ಜಿನ್ನುಗಳಲ್ಲಿ ಮೂರು ವಿಧ. ಗಾಳಿರೂಪ, ಪ್ರಾಣಿರೂಪ ಮತ್ತು ಮನುಷ್ಯರೂಪ. ಮನುಷ್ಯರ ಸಾಮಾನ್ಯ ಕಣ್ಣುಗಳಿಗೆ ಜಿನ್ನುಗಳು ಅಗೋಚರ. ವಿಶೇಷ ಶಕ್ತಿಯುಳ್ಳವರು ಮಾತ್ರ ನೋಡಬಹುದು, ಮಾತನಾಡಬಹುದು. ಆದರೆ ಜಿನ್ನುಗಳು ಮನುಷ್ಯರನ್ನು ನೋಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಜಿನ್ನುಗಳಿಗೂ ಮನುಷ್ಯರ ಹಾಗೆ ಕುಟುಂಬ, ಬಂಧು ಬಳಗ ಎಲ್ಲಾ ಇದೆ. ಮಾನವರ ತಂದೆ ಆಡಮ್ ಆದರೆ ಜಿನ್ನುಗಳ ತಂದೆ ಇಬ್ಲೀಸ್. ಆದಮರನ್ನು ಸೃಷ್ಟಿ ಮಾಡಿ, ನನ್ನ ಖಲೀಫಾ ಆದಮನನ್ನು ಸಜ್ದಾ (ತಲೆ ಬಾಗು) ಮಾಡು ಎಂದು ದೇವರು ಇಬ್ಲೀಸ್ ಗೆ ಹೇಳಿದಾಗ, ಆತನ ಅಹಂ ಒಪ್ಪಲಿಲ್ಲ. ಅಂದಿನಿಂದ ಭೂಮಿಗೆ ನೂಕಲ್ಪಟ್ಟ. ದೇವರು ಆದಮರ ಪಕ್ಕೆಲುಬಿನಿಂದ ಹೆಣ್ಣನ್ನು ಸೃಷ್ಟಿಸಿದ. ಅವರನ್ನು ಹವ್ವಾ(ಈವ್) ಎಂದು ಕರೆಯುತ್ತೇವೆ. ಪ್ರಪಂಚದಲ್ಲಿರುವವರೆಲ್ಲ ಆಡಮ್ ಮತ್ತು ಈವ್ ರವರ ಸಂತಾನವೇ ಆಗಿದೆ.
ಮನುಷ್ಯರ ಹಾಗೆಯೇ ಜಿನ್ನುಗಳ ಜೀವನವೂ ಇದೆ. ಜಿನ್ನುಗಳು ಏಳನೇ ಆಕಾಶದವರೆಗೂ ಹೋಗಿ ಬರುವ ಸಾಮರ್ಥ್ಯ ಹೊಂದಿದ್ದರು. ಪೈಗಂಬರ್ ನೋಹಾ ಕಾಲದಲ್ಲಿ ನಾಲ್ಕನೇಯ ಆಕಾಶದವರೆಗೆ ಮಾತ್ರ ಹೋಗುವ ಅನುಮತಿ ಹೊಂದಿದ್ದರು. ಕೊನೆಯ ಪ್ರವಾದಿ ಮುಹಮ್ಮದ್ (ಸ) ರವರ ಕಾಲದಲ್ಲಿ ದೇವದೂತರು(ಏಂಜಲ್) ಆಕಾಶದಲ್ಲಿ ನಡೆಸುತ್ತಿರುವ ಚರ್ಚೆಗಳನ್ನು ವದಂತಿಯಂತೆ ಭೂಮಿಯ ಜನರಲ್ಲಿ ಹರಡಲಾರಂಭಿಸಿದರು. ಆಗ ಜಿನ್ನುಗಳು ನಾಲ್ಕನೇಯ ಆಕಾಶಕ್ಕೂ ಹೋಗುವ ಅನುಮತಿಯನ್ನು ಕಳೆದುಕೊಂಡರು. ಭೂಮಿಯ ಮೇಲೆ ಎಷ್ಟೋ ಜಿನ್ನುಗಳು ಪ್ರವಾದಿವರ್ಯರ ಕುರಾನ್ ಪಠಣವನ್ನು ಕೇಳಿಸಿಕೊಂಡು, ಪ್ರವಾದಿವರ್ಯರಿಂದ ದೀಕ್ಷೆ ಪಡೆದು ಸತ್ಯವಿಶ್ವಾಸಿಗಳಾದರು.
ಎಲ್ಲಾ ಕಡೆ ಜಿನ್ನುಗಳಿದ್ದಾರೆ. ಹೇಗೆ ಮನುಷ್ಯರು ಜಿನ್ನುಗಳಿಗೆ ಹೆದರುತ್ತಾರೋ ಅವರು ಸಹ ಮನುಷ್ಯರಿಗೆ ಹೆದರುವುದುಂಟು. ಜಿನ್ನುಗಳಿಗೆ ಸಾವಿರಾರು ವರ್ಷ ಆಯಸ್ಸು. ಅವರು ಬೇರೆ ರೂಪದಲ್ಲಿ ಸತ್ತರೆ ಮಾತ್ರ ಅವರಿಗೆ ಸಾವು. ಅಂದರೆ ಪ್ರಾಣಿ ರೂಪ ಅಥವಾ ಮನುಷ್ಯ ರೂಪದಲ್ಲಿ ಸತ್ತರೆ ಸತ್ತಂತೆ. ಮನುಷ್ಯರ ಭುದ್ದಿ ಶಕ್ತಿಯ ಮೇಲೆ, ಶರೀರದ ಮೇಲೆ ತಮ್ಮ ಹತೋಟಿಯನ್ನು ಸಾಧಿಸುವ ಶಕ್ತಿಯನ್ನು ಜಿನ್ನುಗಳು ಹೊಂದಿರುತ್ತಾರೆ. ಸಕಲ ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಮನುಷ್ನನ ಶರೀರದಲ್ಲಿ ಸೇರಿಕೊಂಡರೆ ನಾಲಿಗೆ ಮಾತ್ರ ಮನುಷ್ಯನದ್ದು ಆದರೆ ಮಾತುಗಳು ಜಿನ್ನಿನದಾಗಿರುತ್ತವೆ.
ಸುಂದರಿಯರ ಮೇಲೆ ಬಹಳ ಬೇಗ ಅವರ ಕಣ್ಣು ಬೀಳುತ್ತದೆ. ಹೆಣ್ಣಿನೊಂದಿಗೆ ಆಕರ್ಷಣೆಗೊಂಡು ಸಂಬಂಧ ಬೆಳೆಸುತ್ತಾರೆ. ಆಗ ತಿಳಿಯದೆಯೇ ಮನುಷ್ಯಜಾತಿ ಗಂಡಹೆಂಡತಿ ಯರಲ್ಲಿ ಬಿರುಕುಗಳು ಪ್ರಾರಂಭವಾಗುವುದುಂಟು. ಮನೆಗಳಲ್ಲಿ ಮನಸ್ಸುಗಳಲ್ಲಿ ಶಾಂತಿ ಮಾಯವಾಗುವುದುಂಟು. ಜಿನ್ನುಗಳ ಹೆಣ್ಣು ಮಕ್ಕಳು ಮನುಷ್ಯರ ಜೊತೆ ಮದುವೆಯಾಗಬಹುದು. ಮನುಷ್ಯರ ಹೆಣ್ಣು ಮಕ್ಕಳು ಜಿನ್ನುಗಳಿಗೆ ಮದುವೆಯಾಗುವ ಹಾಗಿಲ್ಲ. ಮದುವೆ ಅಗದೆಯೇ ಸಂಬಂಧ ಮುಂದುವರೆಸುತ್ತಾರೆ. ಇದು ಅವರ ಕಾನೂನು. ಉದಾಹರೆಣೆಗೆ ಪೈಗಂಬರ್ ಸೊಲೊಮನ್ ರವರ ಹೆಂಡತಿಯಾದ ಬಲ್ಖೀಸ್ ರವರ ತಾಯಿ ಜಿನ್ನುಗಳ ಕುಲಕ್ಕೆ ಸೇರಿದವರಾಗಿದ್ದರು. ಅವರ ಅರಮನೆ ಯೆಮನ್ ನಲ್ಲಿತ್ತು. ಸುಲೇಮಾನ್ ಪೈಗಂಬರ್ ಇದ್ದಿದ್ದು ಜೆರುಸಲಮ್ ನಲ್ಲಿ. ಸುಮಾರು ೨ ಸಾವಿರ ಮೈಲಿಗಳ ದೂರ. ಸುಲೇಮಾನ್ ಪೈಗಂಬರ್ ಬಲ್ಖೀಸ್ ರಾಣಿಯನ್ನು ತನ್ನ ಆಸ್ಥಾನಕ್ಕೆ ಬರ ಹೇಳಿದರು. ರಾಣಿಯನ್ನು ಆಶ್ಚರ್ಯಚಕಿತಳನ್ನಾಗಿ ಮಾಡಲು, ಆಕೆ ತನ್ನ ಆಸ್ಥಾನಕ್ಕೆ ಬರುವ ಮುನ್ನವೇ ಆಕೆಯ ಸಿಂಹಾಸನ ಯೆಮನ್ ನಿಂದ ತರಬೇಕಲ್ಲ, ಯಾರು ತರುವಿರಿ ಎಂದು ಸಭೆಯಲ್ಲಿ ಕೇಳಿದರು. ಓರ್ವ ಜಿನ್ ಎದ್ದು, ನಿಮ್ಮ ಸಭೆ ಮುಗಿಯುವಷ್ಟರಲ್ಲಿ ನಾನು ತರಬಲ್ಲೆ ಎಂದಾಗ, ಇನ್ನೂ ಬೇಗನೆ ಯಾರು ತರಬಲ್ಲಿರಿ ಎಂದು ಸುಲೇಮಾನ್ ಪೈಗಂಬರ್ ಕೇಳಿದರು. ಅವರ ಸಭೆಯಲ್ಲಿ ಓರ್ವ ಮನುಷ್ಯ ಆಸಿಫ್ ಎಂಬಾತ ಹೇಳಿದರು – ನೀವು ಕಣ್ಣು ಮಿಟುಕಿಸಿ ತೆಗೆಯುವಷ್ಟರಲ್ಲಿ ನಾನು ತರುವೆ. ಹಾಗೆ ಮಾಡಿದರು. ಇಲ್ಲಿ ಜಿನ್ನುಗಳ ಮತ್ತು ಸತ್ಯ ವಿಶ್ವಾಸಿ ಮನುಷ್ಯರ ಶಕ್ತಿ ಪ್ರದರ್ಶನವಾದಂತಾಯಿತು.
ಜಿನ್ನುಗಳು ಸತ್ತ ಮೇಲೆ ಮಣ್ಣಾಗಿ ಹೋಗುತ್ತಾರೆ ಅವರಿಗೆ ಸ್ವರ್ಗವಿಲ್ಲ ಎಂದು ಇಮಾಮ್ ಅಜಮ್ ಹೇಳಿದ್ದಾರೆ. ಇನ್ನು ಕೆಲ ವಿದ್ವಾಂಸರು ಅವರು ಸ್ವರ್ಗ ಮತ್ತು ನರಕದ ಮಧ್ಯೆ ಇರುತ್ತಾರೆ ಎನ್ನುತ್ತಾರೆ. ಜಿನ್ನುಗಳು ಮನುಷ್ಯರ ಮೈಮೇಲೆ ಬರಬಲ್ಲರು ಎಂದು ಇಮಾಮ್ ಅಹ್ಮದ್ ಬಿನ್ ಹಂಬಲ್ ಹೇಳಿದ್ದಾರೆ. ಬಿಳಿ ಉಂಜ, ನಿಂಬೆಹಣ್ಣು ಮನೆಯಲ್ಲಿದ್ದರೆ ದುರ್ಮಾರ್ಗಿ ಜಿನ್ನುಗಳು ಮನೆಯಲ್ಲಿ ಸೇರಿ ಕೊಳ್ಳುವುದಿಲ್ಲ. ಆಯಾತಲ್ ಕುರ್ಸಿ ಪಠಣ ಮಾಡಿದರೂ ಸಹ ಜಿನ್ನುಗಳು ಓಡಿ ಹೋಗುತ್ತಾರೆ. ಜಾನುವಾರುಗಳ ಮೂಳೆಗಳು, ಕಲ್ಲಿದ್ದಲು, ಅನ್ನ ಮತ್ತು ಲದ್ದಿ ಎಂದರೆ ಜಿನ್ನುಗಳಿಗೆ ಬಹಳ ಇಷ್ಟ. ಅದೇ ಅವರ ಆಹಾರ. ಬೆಟ್ಟಗುಡ್ಡ, ಕಾಡುಮೇಡು, ಹಸಿರು ಹುಲ್ಲು, ಬಿಲ, ಮನೆಗಳ ಮೇಲ್ಚಾವಣಿ ಮತ್ತು ಶುದ್ಧ ಜಾಗ ಸನ್ಮಾರ್ಗಿ ಜಿನ್ನುಗಳ ವಾಸಸ್ಥಳಗಳಾಗಿರುತ್ತವೆ. ದುರ್ಮಾರ್ಗಿ ಜಿನ್ನುಗಳು ಬಾತ್ರೂಮ್, ಕೊಳಚೆ ಪ್ರದೇಶ ಮತ್ತು ಇನ್ನಿತರೆ ಅಶುದ್ಧ ಜಾಗಗಳಲ್ಲಿ ವಾಸಿಸಲು ಇಷ್ಟ ಪಡುತ್ತವೆ. ಹಸಿರುಹಾಸಿನ ಮೇಲೆ ಮತ್ತು ಬಿಲಗಳಲ್ಲಿ ಹುಚ್ಚೆ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ.
ಮನೆಗೆ ಹಾವು ಬಂದು ಬಿಟ್ಟರೆ ತಕ್ಷಣವೇ ಹೊಡೆಯಬಾರದು. ಅದು ಜಿನ್ ಸಹ ಆಗಿರಬಹುದು. ಮೂರು ಸಲ ಅದನ್ನು ಹೊರಟು ಹೋಗಲು ಹೇಳಬೇಕು. ಜಿನ್ ಆಗಿದ್ದರೆ ಹೊರಟು ಹೋಗುತ್ತದೆ.
ಷಾ ವಲಿವುಲ್ಲಾಹ್ ದೆಹಲ್ವಿ ಕುರಾನ್ ಓದುತ್ತ ಕುಳಿತಿದ್ದರು. ಹಾವು ಬಂತು. ಹೊಡೆದು ಹಾಕಿದರು. ಅದು ಹಾವಲ್ಲ, ಜಿನ್ ಆಗಿತ್ತು. ಅದರ ಬಳಗದವರು ಕೋಪಗೊಂಡು ದೆಹಲ್ವಿ ರವರಿಗೆ ಜಿನ್ನುಗಳ ದರ್ಬಾರಿಗೆ ನ್ಯಾಯ ಇತ್ಯರ್ಥಕ್ಕಾಗಿ ಕರೆದುಕೊಂಡು ಹೋದರು. ಸಭೆ ಸೇರಿತು. ಅನ್ಯಾಯವಾಗಿ ಇವರು ನಮ್ಮವನನ್ನ ಸಾಯಿಸಿದ್ದಾರೆ. ಸಾವಿಗೆ ಸಾವೇ ಶಿಕ್ಷೆ ಎಂದರು. ಅವರಲ್ಲಿ ಓರ್ವ ಸತ್ಯ ವಿಶ್ವಾಸಿ ಜಿನ್ ಎದ್ದು, ಹಾಗೆ ಮಾಡುವುದು ನ್ಯಾಯವಲ್ಲ. ಮನುಷ್ಯನ ರೂಪದಲ್ಲಿ ಹೋಗಿದ್ದಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ವಿಷ ಜಂತುವಿನಿಂದ ತೊಂದರೆ ಆಗಬಹುದು ಎಂದು ತಿಳಿದು ಅವರು ಈ ಕೃತ್ಯೆ ಮಾಡಿದ್ದಾರೆ. ಅವರಿಗೆ ಶಿಕ್ಷೆ ಕೊಡಬೇಡಿ, ಬಿಡುಗಡೆ ಮಾಡಿ ಎಂದರು. ಆಗ ಎಲ್ಲರು ಒಪ್ಪಿದರು.
ಕೆಲ ಸತ್ಯವಿಶ್ವಾಸಿ ಗುರುಗಳ ಹತ್ತಿರ ವಿದ್ಯೆ ಪಡೆಯಲು ಜಿನ್ನುಗಳು ಬರುವುದುಂಟು. ಒಮ್ಮೆ ಹಜ್ರತ್ ಮುಹಮ್ಮದ್ ಸಿದ್ದೀಕ್ ಮೆಹಬೂಬಲ್ಲಾಹ್ ರವರ ಅನುಯಾಯಿ ಬೇಗ್ ರವರು ಕಾಡಿನ ಕಡೆಗೆ ಹೊರಟರು. ಅಲ್ಲಿ ಓರ್ವ ಜಿನ್ ಮಗಳು ಬೇಗರಿಗೆ ಆಕರ್ಷಿತಳಾಗಿ ಮದುವೆಯಾಗಲು ತೀರ್ಮಾನಿಸಿ ಅವಳ ತಂದೆಯ ಬಳಿ ಕರೆದುಕೊಂಡು ಹೋದಳು. ತಂದೆ ಒಪ್ಪಿದರು. ಆದರೆ ಬೇಗ್ ಸಾಹೇಬರು ನನ್ನ ಗುರುಗಳು ಒಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇನೆ ಎಂದರು. ಯಾರು ನಿನ್ನ ಗುರುಗಳು ಎಂದು ಕೇಳಿದಾಗ, ಸಿದ್ದಿಕ್ ಮಹಬೂಬಲ್ಲಾಹ್ ಎಂದಾಗ, ಜಿನ್ ತಂದೆ ಚಕಿತಗೊಂಡು ನಾನು ಸಹ ಅವರಿಂದ ದೀಕ್ಷೆ ಪಡೆದಿದ್ದೇನೆ, ನಡೆಯಿರಿ ಹೋಗಣ ಎಂದರು. ಗುರುಗಳ ಬಳಿ ಬಂದು, ನಾನು ಸಹ ನಿಮ್ಮ ಶಿಷ್ಯ, ಬೇಗ್ ಸಹ ನಿಮ್ಮ ಶಿಷ್ಯ, ಮದುವೆಗೆ ಅಪ್ಪಣೆ ಕೊಡಬೇಕು ಎಂದಾಗ, ಗುರುಗಳು ಒಪ್ಪಿಕೊಂಡರು. ಮದುವೆಯಾಯಿತು.
ಹಜ್ರತ್ ಮುರ್ತುಜ ಖಾದ್ರಿ ಅಧೋನಿ ರವರ ಬಳಿ ಒಬ್ಬ ಆಗಿನ ಜಿಲ್ಲಾಧಿಕಾರಿ ದೀಕ್ಷೆ ಪಡೆದ. ಗುರುಗಳಿಗೆ ಪ್ರೀತಿಯಿಂದ ಅಪಾರ ಸಂಪತ್ತು ನೀಡಿದ. ಗುರುಗಳು ಇದೆಲ್ಲ ನನಗೆ ಬೇಡ, ನಾನು ಸತ್ತ ಮೇಲೆ, ನನ್ನ ಸಮಾದಿಯ ಬಳಿ ಹೂತು ಹಾಕು, ಯಾರ ಅದೃಷ್ಟದಲ್ಲಿದೆಯೋ ಅವರಿಗೆ ಕೊಡೋಣ ಎಂದರು. ಗುರುಗಳು ತನ್ನ ಬಳಿ ಇದ್ದ ಜಿನ್ನಿಗೆ ಹೇಳಿದರು, ಇನ್ನು ಮೇಲೆ ಇದರ ರಕ್ಷಣೆ ನಿನ್ನ ಹೊಣೆ. ಅಂದಿನಿಂದ ಇಂದಿನವರೆಗೂ ಹಾವಿನ ರೂಪದಲ್ಲಿರುವ ಜಿನ್ ಅದರ ರಕ್ಷಣೆ ಮಾಡುತ್ತಾ ಇದೆ.
ಖಜಾನೆ ಹುಡುಕಲು ಹೋಗಬಾರದು. ಜಿನ್ನುಗಳ ಜೊತೆ ಜಗಳವಾಡಿ ತೊಂದರೆಗಳಿಗೆ ಸಿಲುಕಿಕೊಂಡರೆ ಏಳು ಪೀಳಿಗೆಗಳು ಸಹ ಕಷ್ಟ ಅನುಭವಿಸಬೇಕಾಗುತ್ತದೆ. ಅದೃಷ್ಟದಲ್ಲಿದ್ದರೆ ಖಜಾನೆ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಬೇರೆ ಜಿನ್ನುಗಳಿಗೆ ಹೊಡೆದು ತೊಂದರೆಗೆ ಈಡಾಗಬಾರದು.
ಮಠಗಳಲ್ಲಿಯೂ ಸಹ ಖಜಾನೆಗೆ ಪಹರೆ ಕೊಡಲು ಜಿನ್ನುಗಳಿರುತ್ತಾರೆ. ಕೆಲ ಮಂದಿರಗಳಲ್ಲಿ ನೀವು ಹಾವುಗಳನ್ನು ನೋಡಿರಬಹುದು. ಅವು ಹಾವಿನ ರೂಪದಲ್ಲಿರುವ ಜಿನ್ನುಗಳಾಗಿರುತ್ತವೆ.
೧೯೭೮ರಲ್ಲಿ ನನ್ನ ಮದುವೆಯಾಯಿತು. ಸಿರಗುಪ್ಪಾದಲ್ಲಿ ಖಾದ್ರಿ ಹೆಲ್ತ್ ಸೆಂಟರ್ ಎಂದು ನಾಟಿ ಔಷಧಿಗಳ ಅಂಗಡಿ ತೆರೆದೆ. ಓರ್ವ ಹೆಣ್ಣು ಮಗಳು ಬಂದಳು. ಅವಳಿಗೆ ಔಷಧಿಗಳ ಜೊತೆ ತಾಯತ ಕೊಟ್ಟೆ. ಅವಳು ತಾಯತ ಹಾಕಿದಾಕ್ಷಣ ಮೈಮೇಲೆ ಜಿನ್ ಬಂದು ಬಿಟ್ಟಿತು. ಬಹಳ ವರ್ಷಗಳಿಂದ ಅವಳ ಜೊತೆ ಇದ್ದೇನೆ. ಏಕೆ ತೊಂದರೆ ಕೊಡುತ್ತಿರುವೆ. ನಿನ್ನನು ಈಗಲೇ ಸಾಯಿಸಿ ಬಿಡುತ್ತಿದ್ದೆ ಆದರೆ ನಿನ್ನ ಹಿಂದೆ ಇರುವ ಖಾದರ್ಲಿಂಗ ಹಸ್ತ ನನ್ನನ್ನು ತಡೆಯುತ್ತಿದೆ ಎಂದು ಹೇಳಿ ಹೊರಟು ಹೋಯಿತು. ನಾನು ಯೋಚಿಸಿದೆ. ಅವರ ಹಸ್ತವೇ ಏಕೆ? ನಾನು ಬಹಳ ಗುರುಗಳ ಸೇವೆಸಲ್ಲಿಸಿದ್ದೇನೆ ಎಂಬ ಪ್ರಶ್ನೆ ಕಾಡತೊಡಗಿತು. ವಿಷಯ ಅರಿವಿಗೆ ಬಂತು. ನಾನು ಹುಟ್ಟುವ ಮುನ್ನ ಖಾದರ್ ಲಿಂಗ ಗುರುಗಳು ನನ್ನ ತಂದೆಯ ಕನಸಲ್ಲಿ ಬಂದು, ನಿನಗೆ ಗಂಡು ಮಗು ಹುಟ್ಟಲಿದೆ, ಅವನಿಗೆ ಖಾದರ್ ಭಾಷಾ ಎಂದು ಹೆಸರಿಡು ಎಂದಿದ್ದರಂತೆ. ನಮ್ಮ ಮನೆಯಲ್ಲಿ ಎಲ್ಲರು ಆ ವಿಷಯದ ಬಗ್ಗೆ ಮಾತನಾಡಿಕೊಳ್ಳುತ್ತಾರೆ.
ಕೆಲ ಮಂತ್ರವಾದಿಗಳು ಜಿನ್ನುಗಳಿಗೆ ಬಹಳ ಕೆಲಸ ಕೊಡುತ್ತಾರೆ. ಅವರಿಗೆ ತೊಂದರೆ ಕೊಡಬಾರದು. ದೇವರು ಅವರಿಗೆ ಸೃಷ್ಟಿಸಿರುವುದು ಸೃಷ್ಟಿಕರ್ತನ ಪ್ರಾರ್ಥನೆ ಸಲ್ಲಿಸಲು ಅಲ್ಲವೇ ? ಅವರಿಗೂ ಜೀವನ ಇದೆ. ಸಂಸಾರ ಇದೆ. ೪೦ ಆಯತ್ ಗಳು ಜಿನ್ನುಗಳ ಬಗ್ಗೆ ಕುರಾನ್ ನಲ್ಲಿದೆ.
ಕೆಲವು ಜಿನ್ನುಗಳು ಸುಳ್ಳು ಹೇಳುತ್ತಾರೆ, ಮೋಸ ಮಾಡುತ್ತಾರೆ. ಗುಜರಾತಿನ ಕಚ್ ನಲ್ಲಿ ಒಬ್ಬ ಮೌಲಾನಾ ಇದ್ದರು. ಅವರ ಸ್ನೇಹಿತರ ಮಗಳಿಗೆ ಜಿನ್ ಕಾಟ. ಮೌಲಾನಾ ಜಿನ್ ಬಿಡಿಸಲು ಮುಂದಾದರು. ಆದರೆ ಅದು ಕಿಲಾಡಿ ಜಿನ್. ಅವರ ರೂಪವೇ ಪಡೆದು ಆ ಹೆಣ್ಣುಮಗಳ ಮನೆಗೆ ಹೋಗಿ ಅವಳೊಂದಿಗೆ ದುರ್ವರ್ತನೆ ಮಾಡತೊಡಗಿತು. ಮನೆಯವರು ಜಿನ್ನನ್ನು ಮೌಲಾನಾ ವೆಂದು ಭಾವಿಸಿ, ಜಗಳವಾಡಿ ಓಡಿಸಿದರು. ಕೆಲ ದಿನಗಳ ನಂತರ ವಿಷಯ ಹೇಗೋ ತಿಳಿಯಿತು. ಅವರು ಕ್ಷಮೆ ಯಾಚಿಸಿ ಪುನಃ ಆ ಕಿಲಾಡಿ ಜಿನ್ನನ್ನು ಸೆರೆ ಹಿಡಿಯಲು ಮೌಲಾನಾರವರಿಗೆ ಬೇಡಿದರು. ಆಕೆಯ ಗಂಡ ನನ್ನ ಜೊತೆಯಲ್ಲಿದ್ದರೆ ಮಾತ್ರ ನಾನು ಆ ಕೆಲಸಕ್ಕೆ ಕೈ ಹಾಕುವೆ ಎಂದು ಒಪ್ಪಿಗೆ ಮಾಡಿಕೊಂಡು, ಜಿನ್ ಸಂಕಷ್ಟದಿಂದ ಆ ಹೆಣ್ಣು ಮಗಳನ್ನು ಪಾರು ಮಾಡಿದರು.
ನಾನು ಹಜ್ರತ್ ಸೂಫಿ ಅಬ್ದುಲ್ ಖಾದರ್ ಭಾಷಾ ಗುರುಗಳಿಂದ ಕೇಳಿಸಿಕೊಂಡ ಕೆಲ ಮಾತುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಅವರ ಸಮಾಧಿ ಅಧೋನಿಯಲ್ಲಿದೆ. ದೇವರು ಅವರನ್ನು, ನನ್ನನು ಮತ್ತು ಅವರ ಪ್ರೀತಿ ಪಾತ್ರರನ್ನು ಕರುಣಿಸಲಿ. ದುರ್ಮಾರ್ಗಿ ಜಿನ್ನುಗಳಿಂದ ನಮಗೆಲ್ಲರಿಗೂ ರಕ್ಷಿಸಲಿ. ಆಮೀನ್.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.