(www.vknews.com) : ನಿನ್ನೆ ಪಾಣೆಮಂಗಳೂರಿನ ಗೂಡಿನಬಳಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿಶಾಂತ್ ಎಂಬವನನ್ನು ಜೀವದ ಹಂಗು ತೊರೆದು ನೀರಿಗೆ ಧುಮುಕಿ ರಕ್ಷಿಸಲು ಮುಂದಾದ ಘಟನೆ ಬಹಳ ಸುದ್ದಿಯಾಗಿದೆ. ಕೊರೋನಾ ಎಂಬ ಮಹಾಮಾರಿಯಿಂದ ಜಗತ್ತು ತತ್ತರಿಸಿ ಹೋಗಿರುವ ಪ್ರಸ್ತುತ ಸಂದಿಗ್ಧ ಪರಿಸ್ಥಿಯಲ್ಲಿ ಸರಳ ಈದ್ ನ ಆಚರಣೆಯಲ್ಲಿ ಮಗ್ನರಾಗಿದ್ದ ಯುವಕರು ಹತಾಶೆಯ ಜೀವನ ಕೊನೆಯಾಗಿಸಲು ನೀರಿಗೆ ಹಾರಿದ ಯುವಕನಿಗೆ ಜೀವ ಕೊಡಲು ಯಾವುದೇ ಮುಜುಗರವಿಲ್ಲದೇ ಕೃತಕ ಉಸಿರಾಟದ ಕಾರ್ಯ ಮಾಡುವಾಗ ಈಗಾಗಲೇ ಕೋಮುಸೂಕ್ಷ್ಮ ಪ್ರದೇಶ ಅಂತ ಗುರುತಿಸಿಕೊಂಡಿರುವ ಮಂಗಳೂರು ಎಷ್ಟೊಂದು ಕಾಳಜಿಯುಕ್ತವಾಗಿದೆ ಅನ್ನಿಸಿದೆ. ಆದರೂ ಈ ಯುವಕರ ತಂಡ ನಿಶಾಂತ್ ನನ್ನು ರಕ್ಷಿಸುವಲ್ಲಿ ವಿಫಲವಾದರು. ಆದರೆ, ಅವನೊಬ್ಬ ಬಾಯಿಗೆ ಬಾಯಿಟ್ಟು ನೀಡಿದ ಶ್ವಾಸ ಇಂದು ಮಂಗಳೂರಿನ ಜನತೆ ಉಸಿರಾಡುತ್ತಿದ್ದಾರೆ.
ಹಲವು ಮಗ್ಗುಲಲ್ಲಿ ನಿರ್ದಿಷ್ಟ ಸಮುದಾಯವನ್ನು ಆರೋಪಿ ಸ್ಥಾನದಲ್ಲಿರಿಸಿ ಬೆರಳು ತೋರಿಸುತ್ತಾ, ಧರ್ಮ-ಧರ್ಮಗಳ ನಡುವಿನ ಸಾಮರಸ್ಯವನ್ನು ಕೆಡವಲು ಸಂಘಪರಿವಾರ ಮತ್ತು ಅದರ ಹಿನ್ನೆಲೆಯಲ್ಲಿರುವ ಮಾಧ್ಯಮಗಳು ಪ್ರಯತ್ನಿಸುತ್ತಲೇ ಬಂದಿದೆ. ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿಚರವಾಗಿ, ಆನಂತರ ಕೋವಿಡ್-೧೯ ವಿಷಯದಲ್ಲೂ ಧರ್ಮದ ಬಣ್ಣ ಬಳಿದು ಜನರ ಮನಸ್ಸಿಗೆ ವಿಷ ತುಂಬಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಕೂಡ. ಇಂತಹ ಪರಿಸ್ಥಿತಿಯಲ್ಲೂ ಒಬ್ಬ ಯುವಕನ ಪ್ರಾಣ ಕಾಪಾಡಲು ಹರಸಾಹಸಪಟ್ಟ ಆ ತಂಡಕ್ಕೆ ನಾವು ಕೃತಜ್ಞರಾಗಬೇಕು.
ಸಾವಿನಲ್ಲೂ ರಾಜಕೀಯ ಮೆರೆಯುತ್ತದೆ. ರಾಜಕಾರಣಕ್ಕೆ ಓಟುಗಳಂತೆಯೇ ಹೆಣ ಕೂಡ ಮುಖ್ಯ ಬಂಡವಾಳವಾಗಿದೆ. ಕೋಮುವಾದ ಹಂಚಿಕೊಂಡು ಜನರೊಳಗೆ ಪ್ರಕ್ಷುಬ್ಧತೆ ಮೂಡಿಸಲು ಪ್ರಯತ್ನಗಳು ನಡೆಯುತ್ತಲೇ ಇದೆ. ಇದರ ನಡುವೆಯೂ ಇಂತಹ ಅನೇಕ ಘಟನೆಗಳು ಸಾಮರಸ್ಯ ಇನ್ನೂ ಜೀವಂತವಾಗಿದೆ ಎಂದು ಮತ್ತೆಮತ್ತೆ ತೋರಿಸಿಕೊಡುತ್ತದೆ.
ಕೊರೋನಾ ವಿಚಾರವಾಗಿ ಬಂದಾಗ, ಮಾಧ್ಯಮಗಳು ಮತ್ತು ಸಂಘಪರಿವಾರ ಒಂದು ಸಮುದಾಯವನ್ನು ನಿಖರತೆಯಿಲ್ಲದ ಸುದ್ದಿಗಳ ಮೂಲಕ, ರೋಗದಲ್ಲೂ ಧರ್ಮ ನೋಡುವ ಅನಿಷ್ಟ ರಾಜಕೀಯದಿಂದ ವಿಷಬೀಜ ಬಿತ್ತುತ್ತಿದೆ. ತಬ್ಲಿಗ್ ವೈರಸ್, ಅಜ್ಮೀರ್ ಕಂಟಕ, ಗರ್ಭಿನಿ ವೈರಸ್, ಕೊರೊನಾ ಜಿಹಾದ್.. ಎಂಬಿತ್ಯಾದಿ ಟ್ಯಾಗ್ ಲೈನ್ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕಾರ್ಯ ನಾಜೂಕಾಗಿ ಮಾಡಿ ಬರುತ್ತಿದೆ. ವಿಶ್ವವೇ ಈ ಒಂದು ವೈರಸ್ ವಿರುದ್ಧ ಆರೋಗ್ಯಕರ ಹೋರಾಟ ಮಾಡುತ್ತಿರುವಾಗ ನಮ್ಮಲ್ಲಿ ಇನ್ನೂ ನಾವು ಧರ್ಮಗಳನ್ನು ಹುಡುಕುತ್ತಾ ಮುಂದುವರಿದಿದ್ದೇವೆ.
ಕಳೆದ ಎರಡು ತಿಂಗಳುಗಳಿಂದ ಈ ಕೊರೋನಾದಿಂದಾಗಿ ಭಾರತವೂ ಬಹಳ ಸಂಕಷ್ಟದಿಂದ ಸಾಗುತ್ತಿದ್ದು ಸುಮಾರು 1 ಲಕ್ಷದ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ನಿಟ್ಟಿನಲ್ಲಿ ನಿರ್ದಿಷ್ಟವಾದ ಆರೋಗ್ಯ ಕಾರ್ಯಾಚರಣೆ ಮಾಡುವುದರ ಬದಲು ಒಂದು ಸಮುದಾಯವನ್ನು, ಒಂದು ಪಂಗಡವನ್ನು ಬೊಟ್ಟು ಮಾಡಿ ಅನಗತ್ಯ ಚರ್ಚೆಗಳಿಗೆ ಎಡೆಮಾಡಿಕೊಡುವುದರೊಂದಿಗೆ ಸರಕಾರ ಮತ್ತು ಮಾಧ್ಯಮಗಳು ಆಸಕ್ತಿ ವಹಿಸಿಕೊಂಡಿದೆ. ಅದರಿಂದಲೇ ದಿನಂಪ್ರತಿ ಭಾರತದಲ್ಲಿ ವೈರಸ್ ಬಾಧೆ ಹೆಚ್ಚುತ್ತಲೇ ಇದೆ.
ಕರ್ನಾಟಕದಲ್ಲಿ ಮದ್ಯ, ಬಟ್ಟೆಯಂಗಡಿ ತೆರೆಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟ ಸರಕಾರಕ್ಕೆ ಈದ್ ದಿನ ಮಾತ್ರ ಸಂಪೂರ್ಣ ಲಾಕ್ ಡೌನ್ ನಡೆಸುವ ಕಾಳಜಿಯು ಪ್ರಶ್ನಾತೀತ. ಆದರೂಕೂಡ ಇದನ್ನೂ ಮುಸಲ್ಮಾನರು ಗಂಭೀರವಾಗಿ ಪರಿಗಣಿಸದೆ, ಕೊರೋನಾ ವಿರುದ್ಧ ಹೋರಾಟಕ್ಕಾಗಿ ಸ್ವಯಂ ಸಜ್ಜಾಗಿ ಸರಳವಾಗಿ ಮನೆಯಲ್ಲಿಯೇ ಈದ್ ಆಚರಿಸುವ ಮೂಲಕ ಸರಕಾರಕ್ಕೆ ಸೆಡ್ಡು ಹೊಡೆದಿದೆ. ಈದ್ ವೈರಸ್ ಎಂಬ ಹೆಸರಿನಲ್ಲಿ ಹೊಸ ವೈರಲ್ ಸೃಷ್ಟಿಯಾಗುವುದು ನಮ್ಮವರ ಕಾಳಜಿಯಿಂದ ತಪ್ಪಿದೆ. ಹಬ್ಬಕ್ಕಿಂತಲೂ ಸೋಂಕು ನಿಯಂತ್ರಿಸುವುದೇ ಮುಖ್ಯವಾಗಿರುವುದರಿಂದ ಸಗಡರವಿಲ್ಲದೆ ಈದ್ ದಿನ ಕಳೆದುಹೋಗಿದೆ.
ತಜ್ಞರ ಹೇಳಿಕೆಯ ಪ್ರಕಾರ ಭಾರತ ಇದೇ ರೀತಿ ಮುಂದುವರಿದಲ್ಲಿ ಒಂದು ಕೋಟಿಗೂ ಅಧಿಕ ಮಂದಿಗೆ ಸೋಂಕು ತಗಲುವ ಸೂಚನೆಯೂ ಇದೆ. ಆದರೆ ಇನ್ನೂ ಇದನ್ನು ನಿಯಂತ್ರಿಸುವಲ್ಲಿ ಪೂರ್ಣವಾಗಿ ಸರಕಾರ ಪ್ರಯತ್ನಿಸುತ್ತಿಲ್ಲ. ಪ್ರತಿಯೊಂದು ವಿಷಯದಲ್ಲೂ ಧರ್ಮ, ಜಾತಿ, ಪಂಗಡ, ಪಕ್ಷ ಎಂಬ ಭೇದವಿಟ್ಟು ಆರೋಪಿ ಸ್ಥಾನ ಹೊರಿಸಿ ಪರಸ್ಪರ ಕಚ್ಚಾಡುವಂತೆ ಮಾಡುತ್ತಿದೆ. ಗಣ್ಯರೊಂದಿಗೆ ಕೊರೋನಾ ಜಾಗೃತಿಯ ಬಗ್ಗೆ ಚರ್ಚಿಸಿ, ಜನರ ಆತಂಕಕ್ಕೆ ಆಶ್ವಾಸ ನೀಡಬೇಕಾದ ಮಾಧ್ಯಮಗಳು ಧರ್ಮಗಳ ನಡುವಿನ ವಿವಾದಗಳಿಗೆ ವೇದಿಕೆಯನ್ನು ಬಳಸುತ್ತಿದೆ ಮಾತ್ರವಲ್ಲ ಸಾಮರಸ್ಯದ ಸಂದೇಶ ಸಾರುವ ಯಾವುದೇ ಘಟನೆಗಳು ಮಾಧ್ಯಮಗಳಿಗೆ ಸುದ್ದಿಯಾಗಿಸಲಾಗುವುದಿಲ್ಲ. ಜನಪರವಾಗಿರಬೇಕಾದ ಈ ಮಾಧ್ಯಮಗಳು ರಾಜಕಾರಣಿಗಳ ಮೋಹಕ್ಕೆ ಮರುಳಾಗಿ ಸಮಾಜದ ಅಶಾಂತಿಗೆ ಕಾರಣವಾಗುತ್ತಿದೆ.
ಇದೆಲ್ಲವನ್ನೂ ನೋಡುವಾಗ, ಕೇರಳ ಬಹಳ ಭಿನ್ನವಾಗಿ ಕಾಣುತ್ತದೆ. ಕೊರೋನಾ ನಿಯಂತ್ರಿಸುವಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸಿರುವುದರ ಜೊತೆಗೆ ಕೇರಳಿಗರೆಲ್ಲರನ್ನೂ, ಕೇರಳದಲ್ಲಿ ನೆಲೆಸಿದವರ ಇತರ ರಾಜ್ಯ ಮತ್ತು ದೇಶದ ಜನತೆಯನ್ನೂ ಎಲ್ಲರೂ ನಮ್ಮವರೇ ಎಂಬ ಭಾವನೆಯೊಂದಿಗೆ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದೆ. ನಮ್ಮಲ್ಲೆಲ್ಲಾ ಧರ್ಮ ಜಾತಿ ಹುಡುಕುವಾಗ ಕೇರಳ ಹಸಿದವರನ್ನು, ಸಂಕಷ್ಟದಲ್ಲಿರುವವರನ್ನು ಹುಡುಕುತ್ತಿದೆ. ಕೆಲವೊಮ್ಮೆ ಕೋಮುಗಲಭೆಗಳು ಇಲ್ಲೂ ನಡೆಯುತ್ತಿದ್ದರೂ ಕೂಡ ಅದರಾಚೆಗೆ ಶಾಂತಿಯ, ಸೌಹಾರ್ದತೆಯ ಬದುಕನ್ನು ಬೆಳಗುವ ಬೃಹತ್ ಮನಸ್ಸು ಇಲ್ಲಿದೆ. ಅದರಿಂದಲೇ ಆಗಿದೆ ಇವತ್ತು ಕೊರೋನಾ ವಿಷಯದಲ್ಲೂ ತುಂಬಾ ಕಾಳಜಿವಹಿಸುತ್ತಿರುವುದು. ಸರಕಾರ ಮತ್ತು ಆರೋಗ್ಯ ಇಲಾಖೆ ಕೂಡ ಅದಕ್ಕೆ ಪರ್ಯಾಯವಾಗಿಯೇ ನಡೆಯುತ್ತಿದೆ. ಹಾಗಾಗಿ ತಕ್ಕಮಟ್ಟಿಗೆ ಯಶಸ್ಸನ್ನೂ ಸಾಧಿಸಿದೆ. ಸಾಮರಸ್ಯ ಬದುಕಿಗೆ ಉತ್ತಮ ಉದಾಹರಣೆಯಾಗಿ ನಮಗೆ ಕೇರಳವನ್ನು ತೋರಿಸಬಹುದು.
ಮಂಗಳೂರಿನ ನಿನ್ನೆಯ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿದೆ. ಹಿಂದಿನಿಂದಲೂ ಕೋಮುವಾದ ಪ್ರದೇಶ ಅಂತ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಸಾಮರಸ್ಯದ ಬದುಕನ್ನು, ಸ್ವಸ್ಥ ಸಮಾಜವನ್ನು ಬಯಸುವ ಬಹಳಷ್ಟು ಮಂದಿ ಇದ್ದಾರೆ ಎನ್ನುವುದು ಅರ್ಥಮಾಡಿಕೊಳ್ಳಬೇಕು. ಧರ್ಮ-ಧರ್ಮಗಳ ನಡುವಿನ ಯುದ್ಧಗಳಿಗೆ ಕರೆಯಿಡುವ ದೊಡ್ಡಸ್ತಿಕೆಯವರು ಸಾಮಾನ್ಯರ ಹೆಣ ನೋಡಿ ನಗುತ್ತಿದ್ದಾರೆ ಎಂಬುದು ಮನದಟ್ಟುಮಾಡಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಯಾವುದೇ ಪಂಗಡಗಳ ವಿರುದ್ಧ ಹೋರಾಟ ನಡೆಯಬೇಕು. ಆಗ ಮಾತ್ರ ಹೆಚ್ಚಿನವರು ಬಯಸುವ ನಿರ್ಮಲ ವಾತಾವರಣ ಸೃಷ್ಟಿಯಾಗಬಲ್ಲದು.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.