ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ಪ್ರತಿಯೊಬ್ಬ ಪ್ರಜೆಯೂ ತಿಳಿದುಕೊಳ್ಳಬೇಕು. ನೀವು ಪೌರರಕ್ಷಣಾ ಕಾರ್ಯಕರ್ತರಾಗಿದ್ದಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಅಗತ್ಯ ಮಾಹಿತಿ ಮತ್ತು ತರಬೇತಿ ಪಡೆದಿರಬೇಕು ಯಾಕೆಂದರೆ ನೀವು ಇನ್ನೊಬ್ಬರಿಗೆ ಸಹಾಯ ಮಾಡುವಾಗ ನೀವು ತೊಂದರೆಗೆ ಸಿಲುಕಿಕೊಳ್ಳಬಾರದು. ನಿಮ್ಮನ್ನು ನೀವು ರಕ್ಷಿಸಿಕೊಂಡು ಇತರರಿಗೆ ಸಹಾಯ ಮಾಡಬೇಕು ಎಂದು ಡಾ: ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು.
ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೇರಿಹಿಲ್ ಇಲ್ಲಿ ಹೊಸದಾಗಿ ಆಯ್ಕೆಯಾದ 30 ಮಂದಿ ಪೌರರಕ್ಷಣಾ ಕಾರ್ಯಕರ್ತರಿಗೆ ‘ಪ್ರಥಮ ಚಿಕಿತ್ಸೆ ಮಾಹಿತಿ ಮತ್ತು ತರಬೇತಿ ಶಿಬಿರ’ ದಿನಾಂಕ 23-05-2020 ನೇ ಶನಿವಾರದಂದು ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವೈದ್ಯರು ಮತ್ತು ಪ್ರಥಮ ಚಿಕಿತ್ಸೆ ತಜ್ಞ ಡಾ: ರಾಮಚಂದ್ರ ಭಟ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ವಹಿಸಿದ್ದರು.
ಡಾ: ಚೂಂತಾರು ಮಾತನಾಡಿ ಸಮಾಜ ಸೇವೆ ಮಾಡುವ ಸದುದ್ದೇಶದಿಂದ ಪೌರರಕ್ಷಣಾ ತಂಡಕ್ಕೆ ಆಯ್ಕೆಯಾದ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಮತ್ತು ನಾವು ಸಮಾಜದಿಂದ ಏನು ಪಡೆದಿದ್ದೇವೆ ಎನ್ನುವುದಕ್ಕಿಂತ ನೀವು ಸಮಾಜಕ್ಕೆ ಏನು ನೀಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಪೌರರಕ್ಷಣಾ ತಂಡದ ಸಂತೋಷ್ ಪೀಟರ್ ಡಿಸೋಜ, ನಿತಿನ್ ಸುವರ್ಣ, ಡಾ: ನಿತಿನ್ ಆಚಾರ್ಯ, ಶಿವರಾಜ್ ಮತ್ತು ಗೃಹರಕ್ಷಕರಾದ ಮಹೇಶ್, ದಿವಾಕರ್ ಮತ್ತು ಲಿಂಗಪ್ಪ ಉಪಸ್ಥಿತರಿದ್ದರು. ಸುಮಾರು 30 ಮಂದಿ ಪೌರರಕ್ಷಣಾ ತಂಡದ ಸದಸ್ಯರು ಈ ತರಬೇತಿ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ನಿತಿನ್ ಸುವರ್ಣ ವಂದನಾರ್ಪಣೆ ಮಾಡಿದರು. ಸಂತೋಷ್ ಪೀಟರ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು 3 ಗಂಟೆಗಳ ಕಾಲ ಈ ತರಬೇತಿ ಶಿಬಿರ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.