(www.vknews.com) : ಪವಿತ್ರ ಮಾಸ ರಂಜಾನ್ ನಲ್ಲಿ ಮುಸ್ಲಿಮರು ಪಾಲಿಸಿಕೊಂಡು ಬಂದ ಆತ್ಮಸಂಯಮ, ಸರಳ ಜೀವನ, ಪರೋಪಕಾರ ಪ್ರವೃತ್ತಿ ಹಾಗೂ ಆಧ್ಯಾತ್ಮಿಕತೆಯನ್ನು ರಂಜಾನಿನ ನಂತರವೂ ಉಳಿಸಿಕೊಳ್ಳುವ ಮೂಲಕ ಬದುಕಿನುದ್ದಕ್ಕೂ ಸಜ್ಜನಿಕೆಯನ್ನು ಮೆರೆಯಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಕರೆ ನೀಡಿದ್ದಾರೆ.
ಒಂದು ತಿಂಗಳ ವೃತಾಚರಣೆಗೆ ಸಮಾರೋಪ ಹಾಡುವ ಈದುಲ್ ಫಿತ್ರ್ ಹಬ್ಬವನ್ನು ಪ್ರತಿಕೂಲ ಸನ್ನಿವೇಶದಿಂದಾಗಿ ಸರಕಾರದ ಸಂಪೂರ್ಣ ಲಾಕ್ಡೌನ್ ಆದೇಶಕ್ಕೆ ತಲೆಬಾಗಿ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿಯೇ ಅತ್ಯಂತ ಸರಳವಾಗಿ ಆಚರಿಸಲಾಗಿದೆ. ಈ ಮೂಲಕ ಸಮಾಜದ ಅಗತ್ಯಕ್ಕಾಗಿ ಧಾರ್ಮಿಕ ಸಂಭ್ರಮವನ್ನು ಕೂಡ ಕೈ ಬಿಟ್ಟು ಸರಳತೆಯನ್ನು ಮೈಗೂಡಿಸಿಕೊಳ್ಳಲು ಸಮುದಾಯ ಸಿದ್ಧವಿದೆ ಎನ್ನುವ ಸಂದೇಶವನ್ನು ಮುಸ್ಲಿಮರು ನೀಡಿದ್ದಾರೆ. ಈ ಸರಳತೆಯನ್ನು ಮುಂದೆಯೂ ಬದುಕಿನ ಭಾಗವಾಗಿ ಸ್ವೀಕರಿಸಬೇಕು. ನಮ್ಮಲ್ಲಿ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ನಮ್ಮಲ್ಲಿ ಇರುವುದನ್ನು ಇಲ್ಲದವರ ಬವಣೆ ನೀಗಿಸಲು ಬಳಸಿಕೊಳ್ಳಬೇಕಾದುದು ಧರ್ಮ. ಬಹುಪಟ್ಟು ಪುಣ್ಯವಿರುವ ಮದೀನಾದ ಮಸೀದಿಯಲ್ಲಿ ಜಾಗರಣೆ ಕೂರುವುದಕ್ಕಿಂತ ಕಷ್ಟಕ್ಕೀಡಾದ ಸಹೋದರನ ನೆರವಿಗೆ ನಿಲ್ಲುವುದು ದೇವರಿಗೆ ಅತ್ಯಂತ ಪ್ರಿಯ ಎಂಬ ಪ್ರವಾದಿ ವಚನವನ್ನು ನಾವು ಮರೆಯಬಾರದು ಎಂದು ಅವರು ತಿಳಿಸಿದರು. ನೇತ್ರಾವತಿ ನದಿಗೆ ಹಾರಿದ ಹಿಂದೂ ಸಹೋದರನ ಪ್ರಾಣ ಉಳಿಸಲು, ಹಬ್ಬವನ್ನು ಬಿಟ್ಟು ನೀರಿಗೆ ಧುಮುಕಿ ಆತನಿಗೆ ತಮ್ಮ ಬಾಯಿಯಿಂದಲೇ ಉಸಿರಾಟ ನೀಡಿ ಜೀವದ ಹಂಗು ತೊರೆದು ಜೀವವುಳಿಸುವ ಪ್ರಯತ್ನಕ್ಕಿಳಿದ ಮುಸ್ಲಿಂ ಯುವಕರ ಕಾರ್ಯವೈಖರಿ ಶ್ಲಾಘನೀಯ. ಒಬ್ಬ ಮನುಷ್ಯನ ಜೀವ ಉಳಿಸುವುದು ಸಕಲ ಮನುಷ್ಯರಿಗೆ ಜೀವ ಕೊಡುವುದಕ್ಕೆ ಸಮ ಎಂಬ ಖುರ್ಆನ್ ವಚನ ಇಲ್ಲಿ ಉಲ್ಲೇಖಾರ್ಹ.
ಮನುಕುಲಕ್ಕೆ ಮಹಾ ಮಾರಿಯಾಗಿ ಅಪ್ಪಳಿಸಿದ ಕೊರೋನಾ ಸೋಂಕು ಅತಿ ಶೀಘ್ರ ಅಂತ್ಯಕಂಡು ಸಮಾಜ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಲಿ. ಅಗೋಚರ ಅತಿಸೂಕ್ಷ್ಮ ವೈರಸ್ ನ ಮುಂದೆ ಸೋಲೊಪ್ಪಿಕೊಂಡ ಮನುಷ್ಯ ತನ್ನ ಪರಿಮಿತಿಯನ್ನು ಅರ್ಥಮಾಡಿಕೊಂಡು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕುವುದನ್ನು ಕಲಿಯಿಯಲಿ ಎಂದು ಅವರು ಹಾರೈಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.