(www.vknews.com) : ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿರುವ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಮಾಮ್ ಮತ್ತು ಮುಅದ್ಸಿನ್ ಗಳ ಸಂಕಷ್ಟವನ್ನು ಮನಗಂಡು ರಾಜ್ಯ ಸರಕಾರ 2020 ಮೇ ತಿಂಗಳ ಗೌರವ ಧನ (4 ಕೋಟಿ 35 ಲಕ್ಷದ 27 ಸಾವಿರ ರೂ.) ತಿಂಗಳು ಪೂರ್ತಿಯಾಗುವ ಮುನ್ನವೇ ಬಿಡುಗಡೆಗೊಳಿಸಿದೆ.
ರಾಜ್ಯದ ವಕ್ಫ್ ಬೋರ್ಡ್ ನಲ್ಲಿ ನೋಂದಣಿಯಾದ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಮಾಮ್ ಮತ್ತು ಮುಅದ್ಸಿನ್ ಗಳಿಗೆ ಪ್ರತೀ ತಿಂಗಳು ಗೌರವ ಧನ ನೀಡುವ ಯೋಜನೆ ಇದಾಗಿದ್ದು ಇಮಾಮರಿಗೆ 4 ಸಾವಿರ ರೂ. ಮತ್ತು ಮುಅದ್ಸಿನ್ ರಿಗೆ 3 ಸಾವಿರ ರೂ. ನೀಡಲಾಗುತ್ತಿದೆ.
ರಾಜ್ಯ ಸರಕಾರ ಪ್ರತ್ಯೇಕವಾಗಿ ನೀಡುವ 50 ಕೋಟಿ ರೂ. ನಿಂದ ಇಮಾಮ್ ಮತ್ತು ಮುಅದ್ಸಿನ್ ಗಳ ಗೌರವ ಧನ ವಿತರಿಸಲಾಗುತ್ತಿದೆ. 2019 ಜೂನ್ ತಿಂಗಳ ವರದಿ ಪ್ರಕಾರ ರಾಜ್ಯದ ವಕ್ಫ್ ಮಂಡಳಿಯಲ್ಲಿ ನೊಂದಾಯಿಸಲ್ಪಟ್ಟ 7,012 ಇಮಾಮ್ ಮತ್ತು 6,794 ಮುಅದ್ಸಿನ್ ಇದರ ಫಲಾನುಭವಿಗಳಾಗಿದ್ದಾರೆ. ದ.ಕ ಜಿಲ್ಲೆಯ 574 ಇಮಾಮ್ ಮತ್ತು 511 ಮುಅದ್ಸಿನ್ ರವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ದ.ಕ ಜಿಲ್ಲೆಯಲ್ಲಿರುವ ಮಸೀದಿಗಳ ಸಂಖ್ಯೆಗೂ ಫಲಾನುಭವಿಗಳ ಸಂಖ್ಯೆಗೆ ಹೋಲಿಸಿದರೆ ಮಾಸಿಕ ಗೌರವ ಧನ ಪಡೆಯುವ ಇಮಾಮ್ , ಮುಅದ್ಸಿನ್ ರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಆಗಬೇಕಿದೆ.
ವಿಪರ್ಯಾಸವೆಂದರೆ ಕೆಲವು ಮಸೀದಿ ಆಡಳಿತ ಕಮಿಟಿ ಉಸ್ತಾದರಿಗೆ ಈ ಅನುದಾನ ಪಡೆಯಲು ದೃಢೀಕರಣ ಪತ್ರ ನೀಡದೇ ಸತಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ದೃಢೀಕರಣ ಪತ್ರ ನೀಡಿದರೆ ಮಸೀದಿಗೆ ಸಮಸ್ಯೆ ಇದೆ ಎಂಬ ಕ್ಷುಲಕ್ಕ ಕಾರಣ ನೀಡಿ ಫಲಾನುಭವಿಗಳನ್ನು ಈ ಯೋಜನೆಯಿಂದ ವಿಮುಖರಾಗುವಂತೆ ಮಾಡುತ್ತಿದೆ.
(ವಕ್ಫ್ ನಲ್ಲಿ ನೋಂದಣಿಯಾಗಿರುವ ಮಸೀದಿಗಳು ತಮ್ಮ ವರಮಾನದಲ್ಲಿ ಖರ್ಚು ವೆಚ್ಚ ಭರಿಸಿ ಉಳಿದುದರಲ್ಲಿ 7% ದೇಣಿಗೆಯನ್ನು ವಕ್ಫ್ ಮಂಡಳಿಗೆ ನೀಡಬೇಕೆನ್ನುವುದು ನಿಯಮ. ಆದರೆ ನಮ್ಮಲ್ಲಿ ಹೆಚ್ಚಿನ ಮಸೀದಿಗಳು ಉಳಿತಾಯವನ್ನೇ ಹೊಂದಿರುವುದಿಲ್ಲ. ವಾರ್ಷಿಕ ಮಹಾಸಭೆಯಲ್ಲಿ ಉಳಿತಾಯ ಇಲ್ಲದೇ ಖೋತಾ ಲೆಕ್ಕಪತ್ರವನ್ನೇ ಮಂಡಿಸುತ್ತದೆ).
ರಾಜ್ಯ ಸರ್ಕಾರ ನೀಡುವ ಗೌರವ ಧನ ಅದು ಇಮಾಮ್ ಮತ್ತು ಮುಅದ್ಸಿನ್ ರಿಗೆ ಅರ್ಹವಾಗಿಯೇ ಸಲ್ಲಬೇಕಾದ ಹಕ್ಕು. ಕೋರೋಣ ಕಾರಣದಿಂದ ಸಂಕಷ್ಟದಲ್ಲಿರುವ ಉಸ್ತಾದರಿಗೆ ಇದು ಆಸರೆಯಾಗಬಹುದು. ಅದನ್ನು ತಡೆ ಹಿಡಿದು ಅವರ ಶಾಪಕ್ಕೆ ಗುರಿಯಾಗುವ ಬದಲು ಮಸೀದಿ ಆಡಳಿತ ಕಮಿಟಿ ಸರಕಾರದಿಂದ ದೊರಕುವ ಈ ಯೋಜನೆಯ ಹಣವನ್ನು ಸಮರ್ಪಕ ರೀತಿಯಲ್ಲಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಮಾಮ್ ಮತ್ತು ಮುಅದ್ಸಿನ್ ರಿಗೆ ದೊರಕುವಂತೆ ಮುತುವರ್ಜಿ ವಹಿಸಬೇಕಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಪ್ರತಿಯೊಂದು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ತಮ್ಮ ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್ ರ ಅರ್ಜಿಯೊಂದಿಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯ ದ್ವಿಪ್ರತಿ ಹಾಗೂ ಅವರು ಅಲ್ಲಿ ಸೇವೆ ಸಲ್ಲಿಸುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಅದರೊಂದಿಗೆ ಅವರ ಪರಿಷ್ಕ್ರತ ಬ್ಯಾಂಕ್ ವ್ಯವಹಾರ ಪ್ರತಿಯನ್ನು ಆಯಾ ಜಿಲ್ಲೆಗಳ ವಕ್ಫ್ ಕಚೇರಿಗೆ ಸಲ್ಲಿಸಬಹುದಾಗಿದೆ. (ಮದರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಅಲ್ಲಿಂ(ಶಿಕ್ಷಕ)ರಿಗೂ ಈ ಗೌರವ ಧನ ನೀಡಬೇಕು ಎಂದು ಬೇಡಿಕೆ ಇದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.ಈ ಬಗ್ಗೆ ಮಸೀದಿ ಆಡಳಿತ ಮಂಡಳಿಗಳು ಜನಪ್ರತಿನಿಧಿ, ವಕ್ಫ್ ಬೋರ್ಡ್ ಅಧಿಕಾರಿಗಳ ಮುಖಾಂತರ ರಾಜ್ಯ ಸರಕಾರಕ್ಕೆ ಒತ್ತಡ ಹೇರಬೇಕಾಗಿದೆ).
✒️ ಅನ್ವೀಝ್ ಕೆ.ಸಿ.ರೋಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.