ತುಮಕೂರು (www.vknews.com) : ಗ್ರಾಮಾಂತರ ಪ್ರದೇಶದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಮೊದಲು ಆಯಾ ಶಾಲಾ ಹಂತದಲ್ಲೇ ಪುನರ್ ಮನನ ತರಗತಿಗಳನ್ನು ನಡೆಸಬೇಕೆಂದು ತುಮಕೂರು ತಾಲ್ಲೂಕು ಪಂಚಾಯಿತಿ ಸದಸ್ಯೆ ಆರ್.ಕವಿತಾ ರಮೇಶ್ (ಕೋರಾ ಕ್ಷೇತ್ರ) ಅವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು, “ಪರೀಕ್ಷೆಯು ಪ್ರಾರಂಭವಾಗುವ ಮುನ್ನ ಸುಮಾರು ಹತ್ತು ದಿನಗಳ ಕಾಲ ಆಯಾ ಶಾಲಾ ಹಂತದಲ್ಲಿ ಪುನರ್ ಮನನ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವುದಾಗಿ” ಭರವಸೆ ನೀಡಿದೆ.
ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಅವರು ಕವಿತಾ ರಮೇಶ್ ಅವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಇದಲ್ಲದೆ “ದೂರದರ್ಶನದಲ್ಲಿ ಪುನರ್ ಮನನ ತರಗತಿಗಳು ಬರುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡದಂತೆ ಬೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ” ಎಂದೂ ಅವರು ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಈ ತಿಂಗಳ ಆರಂಭದಲ್ಲೇ ಕವಿತಾ ರಮೇಶ್ ಅವರು ಡಿಡಿಪಿಐ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. “ಕೊರೊನಾ ಕಾರಣದಿಂದ
ಪರೀಕ್ಷೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ರಜೆಯ ಆನಂದದಲ್ಲಿದ್ದು, ಓದಿನಿಂದ ದೂರವಾಗಿದ್ದಾರೆ. ಅನೇಕ ಮಕ್ಕಳು ತೋಟದ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಶಿಕ್ಷಣ ಇಲಾಖೆಯು ಚಂದನ ವಾಹಿನಿ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪುನರ್ ಮನನ ಕಾರ್ಯಕ್ರಮ ನಡೆಸುತ್ತಿದೆಯಾದರೂ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯ ಕಾರಣದಿಂದ ಅದನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಮೂಲಕ ವೀಕ್ಷಿಸಲು ನೆಟ್ ವರ್ಕ್ ಸಮಸ್ಯೆ ತಲೆದೋರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಚಂದನ ವಾಹಿನಿಯಲ್ಲಿ ಬರುವ ಪುನರ್ ಮನನ ತರಗತಿಯ ಬೋಧನೆಗೂ, ತಮ್ಮ ಶಾಲೆಗಳಲ್ಲಿ ಕಲಿಸಿದ ರೀತಿಗೂ ವ್ಯತ್ಯಾಸವಾಗುತ್ತಿದ್ದು, ಚಂದನ ವಾಹಿನಿಯ ಕಾರ್ಯಕ್ರಮ ತಮಗೆ ಅರ್ಥವಾಗುತ್ತಿಲ್ಲವೆಂದೂ ಅನೇಕ ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಾಮಾಂತರದಲ್ಲಿ ಆಯಾ ಶಾಲಾ ಹಂತದಲ್ಲೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ಏರ್ಪಡಿಸಬೇಕು” ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದರು. ಇವರ ಮನವಿಗೆ ಇಲಾಖೆಯು ಸ್ಪಂದಿಸಿ, ಮೇಲ್ಕಂಡ ಭರವಸೆ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.