(www.vknews.com) : ಎರಡೂ ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಯಚೂರಿನ ಸೂಫಿ ಮೂಲದ ದಾದಾಪೀರ್ ಮಂಜರ್ಲಾ ಅವರಿಗೆ ಹಣಕಾಸಿನ ನೆರವಿನ ಅಗತ್ಯವಿದೆ.
ನಾನೊಮ್ಮೆ ಜನಪದ ಕವಿಗಳ ಬಗ್ಗೆ ಕ್ಷೇತ್ರಕಾರ್ಯ ಮಾಡುತ್ತಾ, ಸುರಪುರ ಭಾಗದ ಹಳ್ಳಿಗಳಲ್ಲಿ ಸುತ್ತುವಾಗ, ಕೆಲವರ ಮೊಬೈಲಲ್ಲಿ ಜನಪದ ಗೀತೆಯೊಂದು ಕೇಳಿ ಬಂತು. ಹಾಡಿದವರು ಯಾರು ಎಂದು ವಿಚಾರಿಸಲಾಗಿ ಅದು ರಾಯಚೂರಿನ ಕವಿ ದಾದಾಪೀರ್ ಮಂಜರ್ಲಾ ಎಂದು ತಿಳಿಯಿತು. ಆ ನಂತರ ಸುರಪುರದ ಮೊಬೈಲ್ ಸೆಂಟರ್ ಒಂದರಲ್ಲಿ ದಾದಾಪೀರ್ ಅವರ ಹಾಡುಗಳನ್ನು ಮೊಬೈಲಿನಲ್ಲಿ ಹಾಕಿಸಿಕೊಂಡು ಕೇಳಿದೆ. ಜನಪದ ಲಯದಲ್ಲಿ ಆಧುನಿಕ ಬದುಕಿನ ಸಾಮರಸ್ಯದ ತತ್ವಗಳನ್ನು ಸರಳವಾಗಿ ಹೇಳುವ ಈ ಜನಪ್ರಿಯ ಹಾಡಿಕೆ ಆಳದಲ್ಲಿ ಜನತೆಯ ಸೌಹಾರ್ಧವನ್ನು ಬೆಸೆಯುವ ಆಶಯ ಹೊಂದಿತ್ತು.
ನಂತರ ದಾದಾಪೀರ್ ಅವರನ್ನು ಸಂಪರ್ಕಿಸಿ ಅವರ ಸಂದರ್ಶನ ಮಾಡಲೆಂದು ನಾನು ಮತ್ತು ಗೆಳೆಯ ಗೋಪಾಲಕೃಷ್ಣ ರಾಯಚೂರಿನ ಅವರ ಮನೆಗೆ ಹೋದೆವು. ನಮ್ಮ ಪಯಣ ತಡವಾದ ಕಾರಣ ರಾತ್ರಿ ಹತ್ತಕ್ಕೆ ಅವರ ಮನೆ ತಲುಪಿದೆವು. ಅಷ್ಟೊತ್ತು ಕಾದು ಕೂತಿದ್ದ ಮಂಜರ್ಲಾ ಅವರು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯ ಮಾಡಿ, ತಡರಾತ್ರಿ ಹನ್ನೆರಡರ ತನಕ ಅನುಭವಗಳನ್ನು ಹಂಚಿಕೊಂಡರು. ಅಷ್ಟೂ ಮಾತುಕತೆಯನ್ನು ಚೂರು ಬೇಸರಿಸದೆ ಅಷ್ಟೇ ಪ್ರೀತಿಯಿಂದ ಅವರ ಮಡದಿ ಕೇಳುತ್ತಾ ಕೂತಿದ್ದರು.
ರಾಯಚೂರು ಜಿಲ್ಲೆ, ತಾಲೂಕಿನ ಮಂಜರ್ಲಾದಲ್ಲಿ ಖಾದರವಲಿ ಎಂಬ ತತ್ವಪದಕಾರರಿದ್ದರು. 1932ರಲ್ಲಿ ಜನಿಸಿದ ಖಾದರವಲಿಯವರು ಹತ್ತನೆ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿ ಪೂರ್ಣಗೊಳಿಸಿ, ಪುಣೆಯ ಬಾಲಗಂಗಾಧರ ತಿಲಕ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿದ್ದರು. ಮೊಹಮ್ಮದೀಯ ಕುಟುಂಬದಲ್ಲಿ ಜನಿಸಿದ್ದ ಖಾದರವಲಿ ಶಿವನ ಆರಾಧಕರಾಗಿದ್ದರು. ಸಿದ್ಧರಾಮ ಸ್ವಾಮಿ ಎನ್ನುವ ಗುರುವಿಗೆ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದರು. ಆಧ್ಯಾತ್ಮಿಕ ಚಿಂತಕರಾಗಿದ್ದ ಖಾದರವಲಿ ಅವರು ಕನ್ನಡ, ಉರ್ದು ಹಾಗೂ ತೆಲಗು ಭಾಷೆಗಳಲ್ಲಿ ಸುಮಾರು 1,500 ಕ್ಕೂ ಹೆಚ್ಚು ತತ್ವ ಪದಗಳನ್ನು ರಚಿಸಿದ್ದರು. ಎಲ್ಲಾ ಜಾತಿ ಧರ್ಮದವರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು.
ಅವರ ಮರಣಾನಂತರ ನೆನಪಿಗಾಗಿ ಆಧ್ಯಾತ್ಮಿಕ ಚಿಂತಕ ಖಾದರವಲಿ ಟ್ರಸ್ಟ್ ರಚಿಸಿಕೊಂಡು, ಖಾದರವಲಿಯವರ ಪೀಠ ಮಂಜರ್ಲಾದಲ್ಲಿ ಪ್ರತಿ ವರ್ಷ `ಖಾದರ ವಲಿ ಪ್ರಭುಗಳ ಆರಾಧನೆ’(ಉರುಸ್)ಮಾಡುತ್ತಾರೆ. ಉರುಸ್ಗಳಲ್ಲಿ ಗಂಧದ ಮೆರವಣಿಗೆ ಸಾಮಾನ್ಯ, ಆದರೆ ಖಾದರವಲಿಯವರ ಉರುಸ್ನಲ್ಲಿ `ಮಹಾಮಂಗಳಾರತಿ’ ಸೇವೆ ನಡೆಯುತ್ತದೆ. ಇದೊಂದು ಸೌಹಾರ್ದದ ಸಂಕೇತವಾಗಿದೆ. ಖಾದರವಲಿ ಭಕ್ತರು ವ್ಯಾಪಕವಾಗಿ ಸೇರುತ್ತಾರೆ. ರಾತ್ರೀಪೂರಾ ಸಂಗೀತ ಹಾಡಿಕೆ ಇರುತ್ತದೆ. ದೂರ ದೂರದಿಂದ ಹಾಡಿಕೆಯವರು ಬಂದಿರುತ್ತಾರೆ. ಈ ಖಾದರವಲಿ ಅವರ ಮಗನೇ ದಾದಾಪೀರ್ ಮಂಜರ್ಲಾ.
ದಾದಾಪೀರ್ ಅವರಿಗೆ ತನ್ನ ತಂದೆ ಖಾದರವಲಿಯ ಪ್ರಭಾವ ದಟ್ಟವಾಗಿತ್ತು. ಬಾಲ್ಯದಲ್ಲಿಯೇ ಸೂಫಿ, ತತ್ವಪದ, ಜನಪದ ಹಾಡಿಕೆಯಲ್ಲಿ ಪಳಗಿದರು. ಎಸ್ಸೆಸ್ಸೆಲ್ಸಿ ನಂತರ ಹೈದರಾಬಾದ್ನ ವಿಜಯಶಾಂತಿ ಸಿನಿಮಾ ಸಂಸ್ಥೆಯಿಂದ ಹಾಡುಗಾರಿಕೆಯಲ್ಲಿ ಡಿಪ್ಲೋಮ ಪಡೆದರು. ನಂತರ ದಾದಾಪೀರ್ ಅವರು ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದ ಕೋಲ್ಕತ್ತಾದ ಉಸ್ತಾದ್ ರಶೀದ್ ಖಾನ್ರಲ್ಲಿ ಶಿಷ್ಯತ್ವ ಪಡೆದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. 1993ರಲ್ಲಿ ತೆರೆ ಕಂಡ ‘ಭಗವದ್ಗೀತೆ’ ಸಿನಿಮಾದಲ್ಲಿ ಅದ್ವಿತೀಯ ಹಾಡುಗಾರ ಡಾ.ಎಂ.ಬಾಲಮುರಳಿಕೃಷ್ಣ ಅವರ ಜತೆಗೆ ಹಿನ್ನೆಲೆ ಗಾಯಕರಾಗಿ ಹಾಡಿದ ಅನುಭವ ಪಡೆದರು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಜತೆಗೆ ಹಾಡಿದ ಕನ್ನಡ ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಒಳಗೊಂಡಂತೆ, ಈತನಕ ನೂರ ಐವತ್ತಕ್ಕಿಂತ ಹೆಚ್ಚಿನ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ಬೆಂಗಳೂರಿನ ‘ಲಹರಿ’, ‘ಅಶ್ವಿನಿ’, ‘ಮನೋರಂಜನ’, ‘ಆನಂದ’ ಆಡಿಯೊ ಸಂಸ್ಥೆಗಳಲ್ಲದೇ ಮಹಾರಾಷ್ಟ್ರದ ಸಾಂಗ್ಲಿಯ ‘ಜಯಸಿಂಧು’ ಮತ್ತು ಆಂಧ್ರದ ‘ಕರ್ನಾಲ್’ ಆಡಿಯೊ ಸಂಸ್ಥೆಗಳು ಮಂಜರ್ಲಾ ಅವರ ಹಾಡಿಕೆಯನ್ನು ಧ್ವನಿಮುದ್ರಿಸಿ ಪ್ರಚಾರಗೊಳಿಸಿವೆ.
ಮಂಜರ್ಲಾ ಅವರು ತೆಲುಗಿನಿಂದ ಮೈಥಿಲಿ ವೆಂಕಟೇಶ್ವರ ರಾವ್ ಅವರ `ಸಂಪೂರ್ಣ ಶಿವ ಪುರಾಣ’ವನ್ನು ಕನ್ನಡಕ್ಕೆ ತಂದಿದ್ದಾರೆ. ಹೀಗೆ ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.
ದಾದಾಪೀರ್ ಅವರು ತಂದೆಯಂತೆ ಬಹುಭಾಷಾ ಪಂಡಿತರು. ಗ್ರಾಮೀಣ ಭಾಗದಲ್ಲಿ ನೆಲೆಗೊಂಡ ಸೌಹಾರ್ಧತೆಯನ್ನು ತಮ್ಮ ಹಾಡಿಕೆಯಲ್ಲಿ ಬೆಸೆದುಕೊಂಡಿದ್ದಾರೆ. ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನದೇ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ನಾನಾ ಕಡೆ ತಮ್ಮ ಪ್ರತಿಭೆಯಿಂದ ಜನಪ್ರಿಯವಾಗಿದ್ದಾರೆ. ಕನ್ನಡ, ತೆಲುಗು, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ನುರಿತ ಅವರು, ದಾಸರು, ಶರಣರು ಮತ್ತು ಸಂತರ ಕೀರ್ತನೆ, ವಚನ, ತತ್ವಪದ, ಜನಪದ ಗೀತೆಗಳನ್ನು ಹಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಕಾಶವಾಣಿ, ದೂರದರ್ಶನ ಮತ್ತು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ. ಬೆಂಗಳೂರು, ಮಂತ್ರಾಲಯ, ತಿರುಪತಿ, ಚೆನ್ನೈನ ಹೆಸರಾಂತ ಸಂಸ್ಥೆಗಳು ಇವರ ಹಾಡಿಕೆಗೆ ವೇದಿಕೆ ಕಲ್ಪಿಸಿವೆ.
2014ರಲ್ಲಿ ದಾದಾಪೀರ್ ಮಂಜರ್ಲಾ ಅವರನ್ನು ಗುರುತಿಸಿ ಕರ್ನಾಟಕ ಸರಕಾರ `ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿತ್ತು. ಆ ಸಂದರ್ಭದಲ್ಲಿ ದಾದಾಪೀರ್ ಅವರು `ಬಹಳ ಖುಷಿ ಆಗೈತ್ರಿ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಗುರುತಿಸಿದ ಸರಕಾರ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದವರ ಬಗ್ಗೆ ಧನ್ಯತಾ ಭಾವ ನೆಲೆಸಿದೆ. ಇದಕ್ಕಿಂತ ಹೆಚ್ಚಿಗೆ ಹೇಳಲು ಇನ್ನೇನೂ ಹೊಳೆಯುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಇದಲ್ಲದೆ ಹಲವಾರು ಸಂಸ್ಥೆಗಳು ಮಂಜರ್ಲಾ ಅವರಿಗೆ ಪ್ರಶಸ್ತಿ, ಸನ್ಮಾನ, ಅಭಿನಂದನೆಗಳನ್ನು ಅರ್ಪಿಸಿವೆ.
ಹೀಗಿರುವ ದಾದಾಪೀರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅನಾರೋಗ್ಯದ ಚಿಕಿತ್ಸೆಗಾಗಿ ನೆರವು ಕೋರಿ ಜನರನ್ನು ಮನವಿ ಮಾಡಿದ ವೀಡೀಯೋ ಗಮನಸೆಳೆಯಿತು. ಆಸ್ಪತ್ರೆಯ ಬೆಡ್ ಮೇಲೆಯೆ ಕೂತು ಅವರು `ಕಲಾ ಬಂಧುಗಳಲ್ಲಿ ಸವಿನಯ ಪ್ರಾರ್ಥನೆ, ನಾನು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತೇನೆ, ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದೇನೆ. ಚಿಕಿತ್ಸೆಗಾಗಿ ಸಹಾಯ ಮಾಡಲು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ’ ಎಂದು ಮನವಿ ಮಾಡಿದ್ದರು. ನಾನು ಕೂಡಲೆ ಫೋನ್ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಆ ನಂತರ ಅವರ ಶಿಷ್ಯ ರವಿ ದಾದಸ್ರನ್ನು ಸಂಪರ್ಕಿಸಿದಾಗ `ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದಾರೆ. ಎರಡೂ ಕಿಡ್ನಿಗಳು ವಿಫಲವಾಗಿದ್ದು, ಅವರ ಮಡದಿ ಒಂದು ಕಿಡ್ನಿ ಕೊಡುವುದಾಗಿ ಒಪ್ಪಿದ್ದಾರೆ, ಶಸ್ತ್ರಚಿಕಿತ್ಸೆ ಆಗಬೇಕು, ಈ ತನಕ ಎಂಬತ್ತು ಸಾವಿರದಷ್ಟು ಖರ್ಚಾಗಿದೆ. ಅವರಿಗೆ ನೆರವಿನ ಅಗತ್ಯವಿದೆ’ ಎಂದರು.
ನಾನು ಕಳೆದ ವರ್ಷ ಸಂದರ್ಶನ ಮಾಡಿದಾಗ ಅಳುಕಿನಿಂದಲೇ `ಹಾಡಿಕೆಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ದನಿ ತಗ್ಗಿಸಿ ಮಾತನಾಡಿದ್ದರು. ಅವರ ಮಾತಿನಲ್ಲಿ ದಣಿವು, ಮುಂದೇನು ಎಂಬ ಆತಂಕ ಮನೆಮಾಡಿದಂತಿತ್ತು. ಬಹುಶಃ ಚಿಕಿತ್ಸೆಗೆ ಬೇಕಾಗುವ ಖರ್ಚುವೆಚ್ಚ ಭರಿಸಲು ಮಂಜರ್ಲಾ ಅವರಿಗೆ ನಿಜಕ್ಕೂ ಕಷ್ಟವಾಗಿದೆ ಅನ್ನಿಸಿತು. ಕಾರಣ ಏಳನೆ ತರಗತಿ ಮತ್ತು ಪಿಯು ಓದುವ ಇಬ್ಬರು ಗಂಡು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಸೌಹಾರ್ದಕ್ಕಾಗಿ ದುಡಿದ, ಸಮಾಜದ ಆರೋಗ್ಯಕ್ಕಾಗಿ ಶ್ರಮಿಸಿದ ದಾದಾಪೀರ್ ಮಂಜರ್ಲಾ ಅವರಿಗೆ ನಾವು ನೆರವಾಗಬೇಕಿದೆ. ನಿಮ್ಮ ಸಹಾಯಕ್ಕಾಗಿ ಅವರು ವಿನಂತಿಸಿಕೊಂಡಿದ್ದಾರೆ. ಆದಷ್ಟು ಸಹಾಯ ದೊರಕಲಿ, ದಾದಾಪೀರ್ ಮಂಜರ್ಲಾ ಅವರು ಬೇಗ ಗುಣಮುಖವಾಗಲಿ ಎಂದು ನಾವು ಆಶಿಸುತ್ತೇವೆ.
ಸಂಪರ್ಕಕ್ಕೆ ದಾದಾಪೀರ್ ಮಂಜರ್ಲಾ ಅವರ ಮನೆಯವರ ಸಂಖ್ಯೆ: 9035130455
ಮತ್ತು ಮಾಹಿತಿಗಾಗಿ ರವಿ ದಾದಸ್, ರಾಂಪುರ, ರಾಯಚೂರು ಅವರ 9901883488 ಸಂಖ್ಯೆಗೆ ಸಂಪರ್ಕಿಸಿ.
ಅಗತ್ಯ ನೆರವು ನೀಡಲು ದಾದಾಪೀರ್ ಮಂಜರ್ಲಾ ಅವರ ಅಕೌಂಟ್ ಮಾಹಿತಿ ಹೀಗಿದೆ:
Dadapeer Manjarla A/c: 62386435099 IFSC.code:SBIN002094 MICR :584004003 State Bank of India Jawaharnagar Branch Raichur.
– ಅರುಣ್ ಜೋಳದ ಕೂಡ್ಲಿಗಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.