(www.vknews.com) : ಮಹಾಮಾರಿ ಕೋರೋನ ಜಗತ್ತಿನಾದ್ಯಂತ ಭೀಕರ ವಾಗಿ ಹರಡುತ್ತಿದ್ದು ಹತೋಟಿಗೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಮುಖಾಂತರ ಕೋರೋನ(ಕೋವಿಡ್-19) ವನ್ನು ತಡೆಗಟ್ಟಬಹುದಾಗಿದ್ದು, ಈ ಸಂಬಂಧ ಜನ ಸಾಮಾನ್ಯರಿಗೆ ಉಚಿತವಾಗಿ ಹಂಚುವ ಸಲುವಾಗಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಆಯುಷ್ ಇಲಾಖೆ ವತಿಯಿಂದ ಆಯುಷ್ ರೋಗ ನಿರೋಧಕ ಔಷಧಿಯನ್ನು ಆಯಾ ಜಿಲ್ಲೆಯ ಆರೋಗ್ಯ ಇಲಾಖೆಗಳಿಗೆ ನೀಡಿದೆ , ಆದರೆ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳು ಇನ್ನೂ ಕೂಡ ಇಲಾಖೆಗೆ ತಲುಪದೇ ಇರುವುದು ವಿಷಾದನೀಯ. ಬೇರೆ ಆಯುಷ್ ವೈದ್ಯ ಪದ್ಧತಿಗೆ ಹೋಲಿಕೆಯಲ್ಲಿ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳ ಉತ್ಪಾದನೆಗೆ ತಗಲುವ ವೆಚ್ಚ ಅತ್ಯಂತ ಕಡಿಮೆ ಇದ್ದು ,ಸರಕಾರದ ಬೊಕ್ಕಸಕ್ಕೆ ಹೊರೆ ಆಗುವುದಿಲ್ಲ, ಅದ್ದರಿಂದ ಸಮಾಜದ ಕಟ್ಟಕಡೆಯ ಜನರಿಗೂ ಈ ಸೌಲಭ್ಯ ದೊರೆಯುವ ದಿಶೆಯಲ್ಲಿ ಸರಕಾರ ಮತ್ತು ಆರೋಗ್ಯ ಇಲಾಖೆ ಕಾರ್ಯ ಪ್ರವೃತ್ತ ವಾಗಬೇಕು.
ಈ ಹಿಂದೆ ಕೂಡ ಸಾಂಕ್ರಾಮಿಕ ರೋಗಗಳ ಉಲ್ಬಣಗೊಂಡ ಸಂದರ್ಭದಲ್ಲಿ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳು ಉತ್ತಮ ರೀತಿಯಲ್ಲಿ ಆಯಾ ರೋಗಗಳನ್ನು ಹತೋಟಿಗೆ ತಂದಿತ್ತು.
ಕೋವಿಡ್-19 ಕೂಡ ಒಂದು ಸಾಂಕ್ರಾಮಿಕ ರೋಗ ವಾಗಿದ್ದು, ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಪೂರ್ಣ ಲಕ್ಷಣ ಗಳನ್ನು ತೋರಿಸುತ್ತಿದೆ. ಈಗಾಗಲೇ ಆಯುಷ್ ಮಂತ್ರಾಲಯದ ಸೂಚನೆಯಂತೆ ಗುಜರಾತ್, ಮಧ್ಯಪ್ರದೇಶ, ಕೇರಳ, ತೆಲಂಗಾಣ ಮುಂತಾದ ರಾಜ್ಯದಲ್ಲಿ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳನ್ನು ಕೋವಿಡ್ ವೀರರಿಗೆ, ನೀಡಿದ್ದು ಉತ್ತಮ ಫಲಿತಾಂಶ ವನ್ನು ನೀಡಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದ ಕಳವಳಕಾರಿ ಸಂದರ್ಭದಲ್ಲಿ, ಸರಕಾರದ ವತಿಯಿಂದ ಔಷಧಿ ವಿತರಣೆಗೆ ಕಾಯದೇ ಭಾರತೀಯ ಹೋಮಿಯೋಪತಿ ವೈದ್ಯರ ಸಂಘ ಮಂಗಳೂರು ಶಾಖೆ ವತಿಯಿಂದ ಈಗಾಗಲೇ ಕೋವಿಡ್ ವೀರರುಗಳಾದ ಪೊಲೀಸರಿಗೆ, ಪತ್ರಕರ್ತರಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಪೌರ ರಕ್ಷಕ ದಳದವರಿಗೆ, ರಿಕ್ಷಾ ಚಾಲಕರಿಗೆ,ಸ್ವಯಂ ಸೇವಕರು, ಕ್ಕ್ವಾರನ್ಟೀನ ನಲ್ಲಿರುವ ಶಂಕಿತ ರೋಗಿಗಳಿಗೆ, ಶಿಕ್ಷಕ ವೃಂದಕ್ಕೆ ಮುಂತಾಗಿ ಸುಮಾರು 8000 ಕ್ಕೂ ಅಧಿಕ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳನ್ನು ಸಂಘದ ವತಿಯಿಂದ ಉಚಿತವಾಗಿ ವಿತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಕ್ಕ್ವಾರನ್ಟೀನ ನಲ್ಲಿರುವ ಇನ್ನಷ್ಟು ಶಂಕಿತ ರೋಗಿಗಳಿಗೆ ಹಾಗೂ ಸಾಮಾನ್ಯ ಜನತೆಗೆ ಕೂಡ ವಿತರಿಸುವ ಸಲುವಾಗಿ ಸರಕಾರ ಹಾಗೂ ಆರೋಗ್ಯ ಇಲಾಖೆ ಆದಷ್ಟು ಬೇಗ ತ್ವರಿತ ಗತಿಯಲ್ಲಿ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳನ್ನು ದ.ಕ ಜಿಲ್ಲಾ ಆಯುಷ್ ಇಲಾಖೆಗೆ ನೀಡಿ ಇನ್ನಷ್ಟು ಜನರನ್ನು ತಲುಪಲು ಸಹಕರಿಸಬೇಕು ಎಂದು ಸಂಘದ ಪರವಾಗಿ ಭಾರತೀಯ ಹೋಮಿಯೋಪತಿ ವೈದ್ಯರ ಸಂಘ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಪ್ರವೀಣ್ ಕುಮಾರ್ ರೈ ಸರಕಾರ ಹಾಗೂ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.