ಕೋವಿಡ್ 19 ನಂತರದ ಜನಜೀವನ, ಆರ್ಥಿಕ ಬಿಕ್ಕಟ್ಟು ಮತ್ತು ಸುಧಾರಣೆಗಳು
(www.vknews.com) : ಜಾಗತಿಕ ಪೈಪೋಟಿ, 3ನೆ ಮಹಾಯುದ್ಧ, ಅಣ್ವಸ್ತ್ರ ಪರೀಕ್ಷೆ, ಜಾಗತಿಕ ನಾಯಕರ ಶಕ್ತಿ ಪ್ರದರ್ಶನಗಳು… ಹೀಗೆ 21ನೆ ಶತಮಾನದಲ್ಲಿ ಜಗತ್ತಲ್ಲಿ ಮೇಳೈಸುತ್ತಿದ್ದ, ಪ್ರಮುಖ ವಿಷಯವಾಗಿ ಚರ್ಚೆಯಲ್ಲಿದ್ದ ಎಲ್ಲಾ ಸುದ್ದಿಗಳನ್ನು ಸದ್ದಿಲ್ಲದೆ ಹಾಗೆ ಮರೆ ಮಾಡಿ, ಸೃಷ್ಟಿಯ ಅದ್ಭುತಗಳ ನಡುವೆ ಮಾನವ ನಿರ್ಮಿತ ಮತ್ತು ಮನುಷ್ಯ ತನ್ನ ಬಗ್ಗೆ ತಾನೇ ಬಡಾಯಿ ಕೊಚ್ಚಿಕೊಳ್ಳುವ ಎಲ್ಲವೂ ನಗಣ್ಯ ಎಂದು ತೋರಿಸಿದ್ದು ಕಣ್ಣಿಗೆ ಕಾಣದ ಅತಿಸೂಕ್ಷ್ಮ ಸಣ್ಣ ವೈರಸ್ ಕೋವಿಡ್ 19.
ಬಹುಷ ಇತಿಹಾಸದ ಪುಟಗಳಲ್ಲಿ ಕಾಲಕಾಲಕ್ಕೂ ಉಳಿಯಲಿರುವ ಬಹುಮುಖ್ಯ ಕಾಲಘಟ್ಟವೊಂದನ್ನು ನಾವು ಹಾದು ಹೋಗುತ್ತಿದ್ದೇವೆ. 2019ರ ಡಿಸೆಂಬರ್ ಅಂತ್ಯದಲ್ಲಿ ಚೀನಾದ ವುಹಾನ್ ಪಟ್ಟಣವೊಂದರಲ್ಲಿ ಒಂದೇ ಬಗೆಯ ರೋಗಲಕ್ಷಣಗಳನ್ನು ಹೊಂದಿರುವ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಮತ್ತು ಇದಕ್ಕೆ ಒಂದು ವೈರಸ್ ಕಾರಣ ಎನ್ನುವುದು ಮೊದಲ ಬಾರಿಗೆ ವರದಿಯಾಗಿತ್ತು. ಕೇವಲ ಚೀನಾ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಇಡೀ ಜಗತ್ತು ಮೂರ್ಖ ಮೌನದೊಂದಿಗೆ ಮತ್ತದೇ ಹುಂಬತನದೊಂದಿಗೆ ಮುಂದೆ ಸಾಗಿತು. ಇದೇ ಸಂದರ್ಭದಲ್ಲಿ ಎಲ್ಲಾ ಜಾಗತಿಕ ನಾಯಕರು ತಮ್ಮ ಶಕ್ತಿ ಪ್ರದರ್ಶನಗಳನ್ನು ಮಾಡುತ್ತಲೇ ಇದ್ದರು. ಜನವರಿ ತಿಂಗಳಾಗುವ ವುಹಾನ್ ನಗರದ ಖಾಲಿ ಪಟ್ಟಣಗಳ ಚಿತ್ರಗಳು ಕೊರೋನದ ತೀವ್ರತೆಯ ಬಗ್ಗೆ ಜಗತ್ತನ್ನೊಮ್ಮೆ ಎಚ್ಚರಿಸಿತು. ನಾವು ‘ಛೆ.. ಹೀಗಾಗಬಾರದಿತ್ತು’ ಎಂದೊಮ್ಮೆ ಮರುಕಪಟ್ಟು ‘ನಾವಂತೂ ಸೇಫ್’ ಎನ್ನುವ ಮನೋಭಾವದೊಂದಿಗೆ ಮುಂದುವರಿದೆವು. ಅದಾಗಿ ಒಂದೆರಡು ತಿಂಗಳುಗಳಲ್ಲಿ ವುಹಾನ್ ಪಟ್ಟಣದ ಹಾಗೆ ನಮ್ಮ ಊರಿನ ಪಟ್ಟಣಗಳೂ ಅಕ್ಷರಶಃ ಸ್ಮಶಾನಗಳಂತಾದವು. ದೂರದ ವುಹಾನ್ ನಿಂದ ನಮ್ಮ ಮನೆಯ ಹೊರಗಿನ ಬೀದಿಯವರೆಗೆ ಸಣ್ಣ ಕೊರೋನ ಸುಲಭವಾಗಿ ಸಾಗುತ್ತಾ ಬಂದಿತ್ತು ಮತ್ತು ನಾವು ಹಿಂದೆಂದೂ ಕಂಡಿರದ ಬೃಹತ್ ಬಿಕ್ಕಟ್ಟೊಂದಕ್ಕೆ ಮಾನವಸಮೂಹವನ್ನು ದೂಡಿತ್ತು.
ಕೊರೋನ ನಮಗೆ ಕಲಿಸಿದ್ದೇನು?
ಈ ಪ್ರಶ್ನೆಗಿರುವ ಮೊದಲ ಉತ್ತರವೇ ಕೊರೋನ ನಮಗೆ ಕಲಿಸಿದ್ದು ಮಾನವನ ಸಾಮರ್ಥ್ಯದ ಮಿತಿಯನ್ನು. ಎಲ್ಲವನ್ನೂ ತಿಳಿದವನು ಮತ್ತು ಏನನ್ನೂ ಮಾಡಬಲ್ಲವನು ಎಂಬ ಮನುಷ್ಯನ ಅತೀವ ಆತ್ಮವಿಶ್ವಾಸ ಮತ್ತು ಅಹಂಕಾರವನ್ನು ಪುಟ್ಟ ಕೊರೋನ ಒಂದೇ ಏಟಿಗೆ ಹೊಸಕಿಹಾಕಿದೆ. ಭಾರತದಲ್ಲಿ ಕೊರೋನ ಪ್ರವೇಶವಾದಾಗ ನಾವಿನ್ನೂ ಗಂಭೀರವಾಗಿ ಈ ಬಿಕ್ಕಟ್ಟನ್ನು ಪರಿಗಣಿಸಿರಲಿಲ್ಲ. ‘ಅದೆಲ್ಲೋ ದೂರದಲ್ಲಿ’ ಎನ್ನುತ್ತಾ ನಮಗೆ ನಾವೇ ಸಮಾಧಾನ ಮಾಡುತ್ತಿದ್ದವರು ಈಗ ನಮ್ಮ ಬೀದಿಗೆ ಇಳಿಯಲು ಹೆದರುತ್ತಿದ್ದೇವೆ.
ಭಾರತದಲ್ಲಂತೂ ಕೊರೋನ ಬಿಕ್ಕಟ್ಟು ದೇಶದ ಜನರಿಗೆ ‘ಮತ್ತೊಂದು ಭಾರತ’ವನ್ನು ಪರಿಚಯಿಸಿತು. ಕೊರೋನ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ನಿಯಂತ್ರಿಸಲೇಬೇಕಾದ ಅಗತ್ಯ ಸರಕಾರದ ಮುಂದಿತ್ತು. ಹೀಗಾಗಿ ಏಕಾಏಕಿ ಘೋಷಣೆಯಾದ ಲಾಕ್ ಡೌನ್ ಭಾರತದ ಕೊರೋನ ಬಿಕ್ಕಟ್ಟಿನ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿಯಾಯಿತು. 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಅಡಗಿ ಕೂತಿದ್ದ ಅಥವಾ ಸರಕಾರ ಗೋಡೆಗಳನ್ನು ಕಟ್ಟಿಸಿ ಅಡಗಿಸಿಟ್ಟಿದ್ದ ಮಾನವೀಯ, ಸಾಮಾಜಿಕ ಗಂಭೀರ ದುರಂತಗಳು ಒಂದೊಂದಾಗಿ ಸ್ಫೋಟಗೊಳ್ಳಲು ಆರಂಭಿಸಿದವು. ವಿದೇಶಿ ಪ್ರಧಾನಿಗಳೋ, ಅಧ್ಯಕ್ಷರೋ, ರಾಯಭಾರಿಗಳೋ ಬಂದಾಗ ಕೆಂಪು ಚಾದರ ಹಾಸಿ ಸ್ವಾಗತಿಸಿ ಯಾವ ‘ನೈಜ ಭಾರತ’ವನ್ನು ನಮ್ಮ ರಾಜಕಾರಣಿಗಳು ಅಡಗಿಸಿಟ್ಟಿದ್ದರೋ ಅವೆಲ್ಲವೂ ಜಗತ್ತಿನ ಮುಂದೆ ಅನಾವರಣಗೊಳ್ಳಲು ಆರಂಭಿಸಿದವು. ಏಕಾಏಕಿ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡರು, ಇದ್ದ ಹಣವೂ ಖಾಲಿಯಾದಾಗ , ಒಂದು ಹೊತ್ತಿನ ಊಟವನ್ನು ನೀಡಲು ಯಾರೂ ಮುಂದೆ ಬರದೇ ಇದ್ದಾಗ ಅವರಿಗೆ ಕಂಡ ದಾರಿ ಊರು ಸೇರುವುದು.
ಆಗಿನ್ನೂ ಸರಕಾರ ಕಾರ್ಮಿಕರಿಗಾಗಿ ಯಾವುದೇ ಸಾರಿಗೆ, ರೈಲುಗಳ ವ್ಯವಸ್ಥೆ ಮಾಡಿರಲಿಲ್ಲ. ಸರಕಾರದ ಆದೇಶ ಹೊರಡುವವರೆಗೆ ಕಾರ್ಮಿಕರ ಹಸಿವು ಕಾಯಬೇಕಲ್ಲ. ತಾವು ಇರುವಲ್ಲಿಂದ ಸಾವಿರಾರು ಕಿ.ಮೀ. ದೂರದ ಮನೆ ಸೇರಲು ಕಾಲ್ನಡಿಗೆಯಲ್ಲೇ ಹೊರಟರು. ಇಡೀ ಜಗತ್ತು ವೈರಸ್ ಗೆ ಹೆದರಿ ಕಂಗಾಲಾಗಿದ್ದರೆ , ಈ ಕಾರ್ಮಿಕರ ಹಸಿವು ಯಾವುದೇ ಆತಂಕ, ಹೆದರಿಕೆಗಳಿಗೆ ಜಾಗವೇ ನೀಡಲಿಲ್ಲ. ಹೀಗೆ ರಸ್ತೆಗಳಲ್ಲಿ ಪಾದ ಊರಿ ಹೊರಟ ನಮ್ಮ ದೇಶದ ಬೆನ್ನೆಲುಬಾದ ಕಾರ್ಮಿಕರು ಕಿಲೋಮೀಟರ್ ಗಟ್ಟಲೆ ನಡೆದರು, ಬಳಲಿ ಬೆಂಡಾದರು. ಆದರೆ ನಮ್ಮ ಸರಕಾರಗಳು ಅವರನ್ನು ವೈರಸ್ ವಾಹಕರಂತೆ ನೋಡಿ, ಅವರನ್ನು ತಡೆಯಿತೇ ವಿನಃ ಅವರ ಕಣ್ಣುಗಳಲ್ಲಿದ್ದ ಹಸಿವಿನ ತೀವ್ರತೆ ಸರಕಾರಗಳ ಕಣ್ಣಿಗೆ ಗೋಚರಿಸಲಿಲ್ಲ. ಈಗ ಸರಕಾರ ಕಾರ್ಮಿಕರಿಗಾಗಿ ರೈಲುಗಳ ವ್ಯವಸ್ಥೆ ಏನೋ ಮಾಡಿದೆ. ಆದರೆ ಸಮಸ್ಯೆಗಳಿನ್ನೂ ನಿಂತಿಲ್ಲ. ಈ ನಡುವೆ ಎಷ್ಟೋ ಕಾರ್ಮಿಕರು ಅಪಘಾತ, ಹಸಿವು, ನೀರಡಿಕೆಯಿಂದ ಕೊನೆಯುಸಿರೆಳೆದರು. ಇವರೆಲ್ಲರಿಗೂ ಕಣ್ಣೀರು ಹರಿಸದೆಯೇ ನಾವು ವೈರಸ್ ಬಾರದಿರಲಿ ಎಂದು ಮಾಸ್ಕ್ ಹಾಕಿಕೊಂಡು ತಿರುಗುತ್ತಿದ್ದೇವೆ ಅಷ್ಟೇ.
ಇನ್ನು ಕೊರೋನ ನಮ್ಮ ಬದುಕಲ್ಲೂ ಬೀರಿದ ಪರಿಣಾಮಗಳು ಹಲವು. ವೇಗದ ಜೊತೆಗೆ ಜಿದ್ದಾಜಿದ್ದಿಗೆ ಇಳಿದಂತೆ ಓಡುತ್ತಿದ್ದ ಜಗತ್ತು, ಜಗತ್ತಿನ ವೇಗದೊಂದಿಗೆ ಎದ್ದೋ, ಬಿದ್ದೋ, ಎಡವಿಯೋ ಸಾಗುತ್ತಿದ್ದ ಮನುಷ್ಯ ಈಗ ಸ್ತಬ್ಧನಾಗಿದ್ದಾನೆ. ಎಲ್ಲಿ ಹೋಗಿಯೂ ಬದುಕಬಲ್ಲೆ ಎನ್ನುವ ಅಹಂ ಈಗ ಕೊನೆಯಾಗಿದ್ದು, ಮನೆಯ ಹೊರಗಡೆ ಕಾಲಿಡಲೂ ನೂರಾರು ಬಾರಿ ಯೋಚಿಸುವಂತಾಗಿದೆ. ದುಡಿಮೆ, ತಿರುಗಾಟ, ದುಂದುವೆಚ್ಚ, ವ್ಯವಹಾರ.. ಹೀಗೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದೆ. ಕೋವಿಡ್ 19ಗೂ ಮುನ್ನ ಇದ್ದ ಜಗತ್ತನ್ನು, ಪರಿಸ್ಥಿತಿಯನ್ನೊಮ್ಮೆ ಆಲೋಚಿಸಿ ನೋಡಿ. ಜಾಗತಿಕ ಮಟ್ಟದಲ್ಲಾದರೆ ನೂರಾರು ಅನ್ವೇಷಣೆಗಳು, ಯುದ್ಧಗಳ ಮಾತುಗಳು, ಮಾನವೀಯತೆಯ ಮೇಲಿನ ದೌರ್ಜನ್ಯಗಳ ಘಟನೆಗಳು, ತೋಳ್ಬಲ ಪ್ರದರ್ಶಿಸುತ್ತಿದ್ದ ನಾಯಕರು, ದೇಶಗಳ ನಡುವಿನ ಶಸ್ತ್ರಾಸ್ತ ಖರೀದಿ …. ದೇಶವನ್ನು ಗಮನಿಸುವುದಾದರೆ ಹೆಚ್ಚುತ್ತಿದ್ದ ದ್ವೇಷ, ಗಲಭೆಗಳು, ಇದು 10 ವರ್ಷಗಳ ಹಿಂದೆ ನಾನು ಕಂಡ ಭಾರತವೇ ಎಂದು ಆಘಾತಕ್ಕೊಳಗಾಗುವಂತೆ ಮಾಡುತ್ತಿದ್ದ ಪರಿಸ್ಥಿತಿ ಹೀಗೆ ಎಲ್ಲವೂ ಸರಾಗವಾಗಿ ಸಾಗುತ್ತಿತ್ತು. ಆದರೆ ಕೋವಿಡ್ 19 ಆಗಮನದ ನಂತರ ಎಲ್ಲವೂ ಬದಲಾಗಿದೆ. ಜಗತ್ತಿಗೆ ಯಾವ ತುರ್ತೂ ಇಲ್ಲ, ಶಕ್ತಿ ಪ್ರದರ್ಶನದ ಸಾಮರ್ಥ್ಯವೂ ಇಲ್ಲ. ಎಲ್ಲವೂ ನಿಸ್ತೇಜಗೊಂಡ ಹಾಗೆ ಜಗತ್ತು ಕಾಣಿಸುತ್ತಿದೆ. ಅನ್ವೇಷಣೆಗಳ ಜಗತ್ತಾಗಿದ್ದ ಭೂಮಿ ಕೊರೋನಗೆ ಲಸಿಕೆ ಕಂಡುಹಿಡಿಯಲು ಪರದಾಡುತ್ತಿದೆ.
ಇನ್ನು ಭಾರತದ ವಿಚಾರದಲ್ಲಿ ಹೇಳುವುದಾದರೆ ಕೊರೋನ ನಮ್ಮ ದೇಶದಲ್ಲಿ ಒಳ್ಳೆಯ ಮತ್ತು ಅತಿಕೆಟ್ಟ ಘಟನೆಗಳಿಗೆ ಸಾಕ್ಷಿಯಾಯಿತು. ಕೊರೋನ ವಿಚಾರವನ್ನು ಬಳಸಿಕೊಂಡ ಸಮಾಜದ್ರೋಹಿಗಳು, ಅದರ ಹೆಸರಲ್ಲೇ ದ್ವೇಷ ಹರಡಲು ಶುರು ಮಾಡಿದರು, ಬೆಂಕಿ ಹಚ್ಚಿದರು, ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಯಥೇಚ್ಛವಾಗಿ ಬಳಸಿಕೊಂಡರು. ಒಂದು ಸಮುದಾಯವನ್ನು ದೋಷಿಯಾಗಿ ಕಾಣಲು ದೇಶದ ಮಾಧ್ಯಮಗಳು ಸಹಕರಿಸಿದವು. ಮನುಷ್ಯರು ಒಂದಾಗಬೇಕಿದ್ದ ಮಹತ್ವದ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ ಮಾತ್ರ ಪರಸ್ಪರ ದೂರಾದರು. ಈ ನಡುವೆ ಮಾನವೀಯತೆಯ, ದೇಶದ ಸೌಹಾರ್ದದ ಇತಿಹಾಸವನ್ನು ನೆನಪಿಸುವ ಹಲವು ಘಟನೆಗಳು ನಡೆದವು. ಧರ್ಮ, ವರ್ಗ, ಜಾತಿಗಳನ್ನು ನೋಡದೆ ವಲಸೆ ಕಾರ್ಮಿಕರಿಗೆ ನೆರವಾದರು. ಮನೆಯವರೇ ತ್ಯಜಿಸಿದ್ದ ಮೃತ ವ್ಯಕ್ತಿಗಳ ಮೃತದೇಹಗಳ ಅಂತ್ಯಸಂಸ್ಕಾರವನ್ನು ಧರ್ಮಗಳನ್ನು ನೋಡದ ಯುವಕರು ನೆರವೇರಿಸಿದರು. ಹಲವು ಬಡವರಿಗೆ ಊಟ ಹಾಕಿದರು. ರೋಗಿಗಳಿಗೆ ನೆರವಾದರು. ಹೀಗೆ ತದ್ವಿರುದ್ಧ ಘಟನೆಗಳಿಗೆ ದೇಶ ಸಾಕ್ಷಿಯಾಯಿತು
ಸಾಮಾಜಿಕ ಪರಿಣಾಮಗಳು
ಕೋವಿಡ್ 19 ಬಿಕ್ಕಟ್ಟಿನ ಆರಂಭದ ನಂತರ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಪ್ರತಿಷ್ಠೆಯ ವೇದಿಕೆಯೆಂದೇ ಪರಿಗಣಿಸಲ್ಪಟ್ಟಿದ್ದ ದುಂದುವೆಚ್ಚದ ಮದುವೆಗಳು ಸದ್ದಿಲ್ಲದೆ ಮಾಯವಾದವು. ಮನುಷ್ಯನ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳಾದವು. ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು, ಸಾಮೂಹಿಕ ಸಭೆಗಳನ್ನು ನಿಲ್ಲಿಸಲಾಯಿತು. ಮಸೀದಿ, ಮಂದಿರ, ಚರ್ಚ್ ಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾಯಿತು. ಕ್ವಾರಂಟೈನ್, ಸೀಲ್ ಡೌನ್, ಲಾಕ್ ಡೌನ್, ಸ್ಯಾನಿಟೈಸರ್, ಮಾಸ್ಕ್ ಹೀಗೆ ಯಾವತ್ತೂ ಕೇಳಿರದ, ತಿಳಿದೇ ಇರದ ಜೀವನಶೈಲಿಗೆ ಮನುಷ್ಯ ಒಳಪಡಬೇಕಾಯಿತು. ಎಲ್ಲಾ ಧರ್ಮಗಳ ಪ್ರಮುಖ, ಪವಿತ್ರ ಸ್ಥಳಗಳಿಗೂ ಬೀಗ ಜಡಿಯಲಾಯಿತು. ಇದೇ ಸಂದರ್ಭ ದುರದೃಷ್ಟವಶಾತ್ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸಂಶಯಿಸಬೇಕಾದ, ಹೆದರಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು. ಜಗತ್ತು ಈ ಹಿಂದೆಂದೂ ಎದುರಿಸದ ವಿಚಿತ್ರ ಸನ್ನಿವೇಶವನ್ನು ಕೊರೋನ ವೈರಸ್ ಸೃಷ್ಟಿಸಿತು.
ಇದೇ ಸಂದರ್ಭ ದೇಶದ, ಜನರ ಆರ್ಥಿಕ ಸಾಮರ್ಥ್ಯದ ಮೇಲೂ ಕೋವಿಡ್ 19 ಗಂಭೀರ ಪರಿಣಾಮವನ್ನು ಬೀರಿತು. ನಿರುದ್ಯೋಗ, ಬೇಡಿಕೆ ಕುಸಿತ, ನೋಟ್ ಬ್ಯಾನ್ , ಜಿಎಸ್ ಟಿಯಿಂದ ಮೊದಲೇ ಕಂಗೆಟ್ಟಿದ್ದ ದೇಶದ ಆರ್ಥಿಕತೆ ಕೊರೋನದಿಂದ ಭಾರೀ ಹಿನ್ನಡೆ ಅನುಭವಿಸಿತು. ದುಡಿಮೆ ಇಲ್ಲದೆ, ವ್ಯವಹಾರಗಳಿಲ್ಲದೆ ಜನರಲ್ಲಿ ಹಣ ಇಲ್ಲದಾಯಿತು, ಹಣ ಇಲ್ಲದ ಪರಿಣಾಮ ಖರೀದಿಸುವ ಸಾಮರ್ಥ್ಯವೂ ಕಡಿಮೆಯಾಯಿತು. ಇನ್ನು ಒಂದು ದಿನದ ದುಡಿಮೆ ಅದೇ ದಿನದಲ್ಲಿ ಹಣ ಸಂಪೂರ್ಣ ಮುಗಿಯುವ, ಯಾವುದೇ ಉಳಿತಾಯವಿಲ್ಲದ ಬಡವರ ಪರಸ್ಥಿತಿ ಹೇಳತೀರದು.. ಲಾಕ್ ಡೌನ್ ಪರಿಣಾಮ ಹಲವು ಕಂಪೆನಿಗಳ ಉತ್ಪಾದನೆ ನಿಂತು ಸಾವಿರಾರು ಕಾರ್ಮಿಕರ, ಉದ್ಯೋಗಿಗಳ ದುಡಿಮೆಗೆ ಪೆಟ್ಟು ಬಿತ್ತು. ಇದರ ನೇರ ಪರಿಣಾಮ ಅವರ ಒಂದು ಹೊತ್ತಿನ ಊಟದ ಮೇಲಾಯಿತು. ಈಗ ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದು ಎಲ್ಲವೂ ಮೊದಲಿನಂತಾಗಲಿದೆಯೇ ಅಥವಾ ಬೇರೆಯದೇ ಆದ ಜಗತ್ತು ನಮ್ಮ ಮುಂದಿರಲಿದೆಯೇ ಎನ್ನುವ ಅನಿಶ್ಚಿತತೆ ಕಾಡುತ್ತಿದೆ.
ಸುಧಾರಣೆಗಳು
ಕೊರೋನ ವೈರಸ್ ಜಗತ್ತಿನಲ್ಲಿ ಎಬ್ಬಿಸಿದ ಹಾವಳಿ ಯಾರೂ ಊಹಿಸಲು ಸಾಧ್ಯವಿಲ್ಲದ್ದು, ಹಾಗಾಗಿ ಸುಧಾರಣೆಗಳಿಗಿಂತ ಸಾಧ್ಯತೆಗಳ ಬಗ್ಗೆ ನಾವು ಆಲೋಚಿಸಬೇಕಿದೆ. ಯಾಕೆಂದರೆ ಒಂದು ಲಸಿಕೆಯನ್ನು ಕಂಡುಹಿಡಿಯಲು ಸಾಧ್ಯವಾಗದ ಈ ಆಧುನಿಕ ಜಗತ್ತು ಕೊರೋನ ಭವಿಷ್ಯದಲ್ಲಿ ನಮ್ಮ ಮೇಲೆ ಯಾವ ಪರಿಣಾಮಗಳನ್ನು ಬೀರಲಿದೆ ಮತ್ತು ಅದರ ವರ್ತನೆ ಹೇಗಿರಲಿದೆ ಎನ್ನುವುದುನ್ನು ಊಹಿಸಲೂ ಅಸಾಧ್ಯ. ಸದ್ಯ ವಿಜ್ಞಾನಿಗಳು ಹೇಳುವ ಪ್ರಕಾರ ಕೊರೋನ ಲಸಿಕೆಯನ್ನು ಅಭಿವೃದ್ಧಿಪಡಿಸಲು 2021ರವರೆಗೆ ಕಾಯಬೇಕು. ಅದು ಕೂಡ ಸಾಧ್ಯತೆಯಷ್ಟೇ, ಯಾವುದೇ ಸ್ಪಷ್ಟ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ. ಎರಡನೆಯದಾಗಿ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಕೊರೋನ ವೈರಸ್ ಸಾಮುದಾಯಿಕವಾಗಿ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ, ಇದನ್ನು ತಡೆಯಲು ಯಾವ ಲಾಕ್ ಡೌನ್ ಗೂ, ಯಾವ ಸೀಲ್ ಡೌನ್ ಗೂ ಸಾಧ್ಯವಾಗದು. ಹಾಗಾಗಿ ನಮ್ಮ ಊಹೆಗಳಿಗೆ ಸೀಮಿತವಾಗದೆ ವಿಜ್ಞಾನಿಗಳು , ತಜ್ಞರು ಕೋವಿಡ್ 19 ಭವಿಷ್ಯದ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ಗಮನಿಸಬೇಕಾಗಿದೆ.
ವಿಜ್ಞಾನಿಗಳು ಹೇಳುವಂತೆ ಕೊರೋನ ವೈರಸ್ ಈ ಜಗತ್ತಿನಿಂದ ಸಂಪೂರ್ಣವಾಗಿ ನಿರ್ನಾಮವಾಗುವುದಿಲ್ಲ. ಅದು ಮನುಷ್ಯರೊಂದಿಗೆ ಇರಲಿದೆ. ಭವಿಷ್ಯದಲ್ಲಿ ಮನುಷ್ಯನ ಜೀವನದ ಜೊತೆಗೆ ಕೊರೋನ ವೈರಸ್ ಕೂಡ ಸಾಗಿ ಬರಲಿದೆ. ಹಾಗಾದರೆ ಇದು ಅಪಾಯವಲ್ಲವೇ? ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಇಂತಹ ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಎದುರಿಸುತ್ತಿರುವುದು ನಮಗೇನೋ ಹೊಸತಾಗಿರಬಹುದು, ಆದರೆ ಈ ಜಗತ್ತಿಗಲ್ಲ. ಜಾಗತಿಕ ಇತಿಹಾಸದಲ್ಲಿ ಇಂತಹ ಹಲವು ರೋಗ-ರುಜಿನಗಳು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿವೆ. ಇದಕ್ಕಿರುವ ಉತ್ತಮ ಉದಾಹರಣೆ ಪ್ಲೇಗ್ ರೋಗ. ಈ ಸಾಂಕ್ರಾಮಿಕವು ಬಲಿಪಡೆದದ್ದು ಲಕ್ಷಾಂತರ ಜನರನ್ನು. ಆದರೆ ವೈರಸ್ ನೊಂದಿಗೆ ಬದುಕುವ ವಿಜ್ಞಾನಿಗಳ ಹೇಳಿಕೆ ನಮಗೆ ವಿಚಿತ್ರವೆನಿಸಿದರೂ ಅದಕ್ಕಾಗಿ ಅವರು ‘ಹರ್ಡ್ ಇಮ್ಯುನಿಟಿ’ ಎನ್ನುವ ವಾದವೊಂದನ್ನು ಮುಂದಿಡುತ್ತಾರೆ.
ಸಾಮುದಾಯಿಕವಾಗಿ ವೈರಸ್ ಹರಡಿ ಯುವ ಜನತೆಯಲ್ಲಿ ಆ ವೈರಸನ್ನು ಸೋಲಿಸುವ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಒಬ್ಬ ಮನುಷ್ಯನ ದೇಹಕ್ಕೆ ವೈರಸ್ ಪ್ರವೇಶಿಸಿದರೆ ಆತ ಆರೋಗ್ಯವಂತನಾಗಿದ್ದರೆ , ಆತನ ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ ಪ್ರತಿಕಾಯಗಳು ದೇಹದಲ್ಲಿ ಸೃಷ್ಟಿಯಾಗಿ ಅದು ವೈರಸನ್ನು ಕೊಲ್ಲುತ್ತದೆ. ಹೀಗೆ ಒಮ್ಮೆ ವೈರಸ್ ಸತ್ತ ನಂತರ ಮತ್ತೆ ಅದೇ ವ್ಯಕ್ತಿಯನ್ನು ಅದು ಭಾದಿಸುವುದಿಲ್ಲ. ಹೀಗೆ ಸಾವಿರಾರು ಸಂಖ್ಯೆಯ ಆರೋಗ್ಯವಂತ ಜನರಲ್ಲಿ ಈ ‘ಹರ್ಡ್ ಇಮ್ಯುನಿಟಿ’ ಕೆಲಸ ಮಾಡಿದಾಗ ವೈರಸ್ ನಿರ್ಮೂಲನೆಯಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ. ಇನ್ನು ಸಾಂಕ್ರಾಮಿಕಗಳೊಂದಿಗೆ ಬದುಕುವುದು ನಮಗೇನೂ ಹೊಸತಲ್ಲ. ಈಗಲೂ ನಾವು ಡೆಂಗ್, ಮಲೇರಿಯಾ, ಎಚ್1 ಎನ್ 1ನಂತಹ ಸಾಂಕ್ರಾಮಿಕಗಳ ಜೊತೆಗೆ ಬದುಕುತ್ತಿದ್ದೇವೆ. ಆದರೆ ಹರ್ಡ್ ಇಮ್ಯುನಿಟಿ ಕೆಲಸ ಮಾಡಬೇಕಾದರೆ ಮಕ್ಕಳು ಮತ್ತು ಹಿರಿಯರು ಹೆಚ್ಚಿನ ಅಪಾಯವನ್ನು ಎದುರಿಸುವುದಂತೂ ಸುಳ್ಳಲ್ಲ.
ಸದ್ಯಕ್ಕೆ ಜಗತ್ತು ಕೊರೋನದಿಂದಾಗಿ ಸಾಕಷ್ಟು ಪಾಠಗಳನ್ನು ಕಲಿತಿದೆ. ಸಾಮಾಜಿಕ, ಆರ್ಥಿಕ ಅಸಮಾನತೆಗಳು ಬಡವರನ್ನು ಹೇಗೆ ಕೊಲ್ಲುತ್ತದೆ ಎನ್ನುವುದಕ್ಕೂ ಸಾಕ್ಷಿಯಾಗಿದೆ. ದೇಶದ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ, ನಾವು ವಲಸೆ ಕಾರ್ಮಿಕರ, ಬಡವರ ಬಗ್ಗೆ ವಹಿಸಿರುವ ನಿರ್ಲಕ್ಷ್ಯದ ಬಗ್ಗೆಯೂ ಕೊರೋನ ಬೆಳಕು ಚೆಲ್ಲಿದೆ. ಯಾವುದೇ ಪರಿಹಾರಗಳಿಲ್ಲದೆ ಜಗತ್ತು ಕೈಚೆಲ್ಲಿ ಕೂತಿರುವಾಗ, ನಮ್ಮ ಮುಂದಿರುವುದು ‘ಅನಿಶ್ಚಿತತೆ’ ಹೊರತುಪಡಿಸಿ ಬೇರೇನೂ ಅಲ್ಲ ಎನ್ನುವುದು ಖಚಿತಗೊಂಡಾಗ ಸುಧಾರಣೆಯ ಮಾತೆಲ್ಲಿ?.
ಆದರೆ, ತೋಚಿದಷ್ಟರ ಮಟ್ಟಿಗೆ ಹೇಳುವುದಾದರೆ, ಸಾಮಾಜಿಕ ಸಮಾನತೆಯ ಹೊರತುಪಡಿಸಿ ಮುಂದೆ ನಮಗೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಇಲ್ಲದಿದ್ದರೆ ಒಂದು ವರ್ಗ ಹಸಿವು, ನೀರಡಿಕೆ, ರೋಗಗಳಿಂದ ನರಳಿ ಸಾಯುವುದನ್ನು ಈ ಜಗತ್ತು ಕಾಣಲಿದೆ. ರಾಜಕೀಯ ಮೇಲಾಟಗಳಿಗೆ ಮೀಸಲಾಗಿದ್ದ ಅಧಿಕಾರವನ್ನು ಜನರ ಪ್ರಾಥಮಿಕ ಅಗತ್ಯಗಳಿಗೆ ಬಳಸುವ, ಜನರಿಗೆ ಸೂರು ಕಲ್ಪಿಸುವ, ಒಂದು ಹೊತ್ತಿನ ಊಟವನ್ನಾದರೂ ಒದಗಿಸುವ ಕೆಲಸವನ್ನು ನೀಡುವ, ಅರ್ಧಂಬರ್ಧಕ್ಕೆ ನಿಂತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ, ಶಕ್ತಿ ಪ್ರದರ್ಶನಕ್ಕೆ ಮೀಸಲಾಗಿದ್ದ ಜಾಗತಿಕ ಅಧಿಕಾರವನ್ನು ಪ್ರಕೃತಿಯನ್ನು ಉಳಿಸುವ, ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ, ನಿಸರ್ಗಕ್ಕೆ ಕೊಡಲಿಯೇಟು ನೀಡುವುದನ್ನು ತಡೆಯುವ, ಸಹಭಾಗಿತ್ವದಲ್ಲಿ ಜಗತ್ತನ್ನು, ಜೀವನವನ್ನು ಮುನ್ನಡೆಸುವ ಜವಾಬ್ದಾರಿ ಸಂಬಂಧಪಟ್ಟವರ ಮೇಲಿದೆ.
ಇಲ್ಲದಿದ್ದರೆ , ಪ್ರಕೃತಿ ನಾಶಪಡಿಸುವ ಮನುಷ್ಯನ ಮೇಲೆ ಸುನಾಮಿ, ಭೂಕಂಪದ ಹಾಗೆ ಎರಗುವ ಪ್ರಕೃತಿಗೆ ಮತ್ತೊಂದು ವೈರಸ್ ರೂಪದಲ್ಲಿ ಜಗತ್ತನ್ನೇ ಸ್ತಬ್ಧವಾಗಿಸಿ, ಅಣುವೂ ಉಳಿಯದಂತೆ ನಾಶಪಡಿಸುವ ಕೆಲಸವೇನೂ ಕಷ್ಟವಲ್ಲ.
– ಇಬ್ರಾಹೀಂ ಬಾತೀಶ್ ಎರ್ಮೆ ಮಜಲು ಮನೆ, ವೀರಕಂಬ ಪೋಸ್ಟ್, ಬಂಟ್ವಾಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.