ಮಂಗಳೂರು (www.vknews.com) : ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೊದಲು ರಾಜಕೀಯ ಕ್ಷೇತ್ರವನ್ನು ಶುದ್ಧಗೊಳಿಸಬೇಕಾದ ಅನಿವಾರ್ಯತೆಯಿದ್ದು ಸಮಾಜದ ಕಟ್ಟಕಡೆಯಲ್ಲಿರುವ ಜನರ ಬಳಿಗೂ ರಾಜಕಾರಣಿಗಳು ತೆರಳಿ ಸರಕಾರಗಳ ಸವಲತ್ತುಗಳ ಮಾಹಿತಿ ನೀಡಿ ಅವರಿಗೆ ಸಾಮಾಜಿಕ ನ್ಯಾಯ ನೀಡಲು ಪಣ ತೊಟ್ಟರೆ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದ್ದಾರೆ.
ಭಾರತದಲ್ಲಿ ಹಿಂದೂ-ಮುಸ್ಲಿಂ ಎಂದು ಕ್ಷುಲ್ಲಕ ಕಾರಣಗಳಿಗಾಗಿ ಪರಸ್ಪರ ಕಚ್ಚಾಟ ನಡೆಸಲಾಗುತ್ತಿದೆ. ಧರ್ಮ,ಜಾತಿ,ಗಡಿ ಆಧಾರದಲ್ಲಿ ಜನರನ್ನು ವಿಂಗಡಿಸುವ ಸಂವಿಧಾನ ವಿರೋಧಿ ನೀಚ ಕಾರ್ಯ ರಾಜಕಾರಣಿಗಳಿಂದಲೇ ನಡೆಯುತ್ತಿದೆ. ಇದನ್ನು ಜಾಗತಿಕ ರಾಷ್ಟ್ರಗಳು ವೀಕ್ಷಿಸುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ನಮ್ಮೊಳಗೆ ನಾವೇ ಸರಿಯಿಲ್ಲದೆ ಇತರರ ಬಗ್ಗೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವುದು ಹಾಸ್ಯಾಸ್ಪದವಾಗಿದೆ. ನಮ್ಮ ಕಚ್ಚಾಟದ ಲಾಭ ಪಡೆಯಲು ಕೆಲವು ರಾಷ್ಟ್ರಗಳು ಹವಣಿಸುತ್ತಿರಬಹುದು.
ಕೇಂದ್ರ ಸರಕಾರ ವಿದೇಶಗಳಿಗೆ ಬೀಫ್ ರಫ್ತು ಮಾಡಿ ಕೋಟ್ಯಾಂತರ ಹಣ ಜೇಬಿಗಿಳಿಸಿ, ಬಡ ನಾಗರಿಕರು ಜೀವನೋಪಾಯಕ್ಕಾಗಿ ಜಾನುವಾರು ಸಾಗಾಟ ಮಾಡುವಾಗ ಗೋಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರಕಾರದ ಅಂಗ ಸಂಘಟನೆಯ ಸಮಾಜದ್ರೋಹಿ ಮನೋಭಾವದ ಸದಸ್ಯರ ಮೂಲಕ ಕೊಲೆಗೈಯ್ಯಲಾಗುತ್ತಿದೆ ಮತ್ತು ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದೆ.
ಜನರನ್ನು ವಿಭಜನೆ ಮಾಡಿ ಬಂಡವಾಳಶಾಹಿ ರಾಜಕೀಯ ಮಾಡುವ ಮೂಲಕ ಸ್ವಾರ್ಥ ಹಿತಾಸಕ್ತಿಗಾಗಿ ಮಾತ್ರ ಎಲ್ಲಾ ಪಕ್ಷಗಳು ಹೋರಾಡುತ್ತಿದೆ. ಜನರ ಬದುಕು ಎಷ್ಟೇ ಜರ್ಝರಿತಗೊಂಡಿದ್ದರೂ ನಾಗರಿಕರ ರಕ್ಷಣೆಗೆ ಇವರ್ಯಾರೂ ಧಾವಿಸುತ್ತಿಲ್ಲ.
ಪಕ್ಷಗಳು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಜನರು ಅಂಥಾ ಪಕ್ಷಗಳನ್ನೇ ಆಯ್ಕೆ ಮಾಡುತ್ತಿರುವುದರಿಂದ ಕಳೆದ ಅರುವತ್ತು ವರ್ಷಗಳ ಇತಿಹಾಸದಲ್ಲಿ ಭಾರತ ಹಿಂದೆಂದೂ ಕಂಡಿರದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಜನಜೀವನ ಅಸ್ತವ್ಯಸ್ತ ಗೊಂಡಿದೆ. ಕೊರೋನ ಮಹಾಮಾರಿ ಮಧ್ಯೆ ಸರಕಾರದ ಅಪ್ರಬುದ್ಧ ತೀರ್ಮಾನ ಗಳಿಂದಾಗಿ ದೇಶದ ಎಲ್ಲಾ ಕ್ಷೇತ್ರಗಳು ಅಧಃಪತನದತ್ತ ಮುಖ ಮಾಡಿವೆ. ಸಂವಿಧಾನದ ನಾಲ್ಕನೇ ಅಂಗವೆಂಬಂತೆ ಬಿಂಬಿಸಲಾಗುತ್ತಿರುವ ಮಾಧ್ಯಮ ಗಳು ಇಂದು ಕೋಮುಪ್ರಚೋದಕ ವರದಿಗಳನ್ನು ಮಾಡುವ ಮೂಲಕ ಕೋಮುವಾದದ ವಕ್ತಾರ ರಂತೆ ಕಾರ್ಯನಿರ್ವಹಿಸುತ್ತಿವೆ. ಟಿವಿ ಚರ್ಚೆಗಳಲ್ಲಿ ಕೋಮುವಾದಿ ಮನಸ್ಥಿತಿಯಿರುವವರನ್ನೇ ಹೆಚ್ಚಾಗಿ ಕೂರಿಸಿ ಭಾರತದ ನಿಷ್ಠಾವಂತ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಅವಮಾನ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.
ಮಾಧ್ಯಮ ಎನ್ನುವುದು ಯಾವತ್ತೂ ಒಂದು ವ್ಯಾಪಾರ ವಾಗಬರದು. ಸತ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ವಸ್ತುನಿಷ್ಠ ಸುದ್ದಿ ನಿರೂಪಣೆ ಮೂಲಕ ಮಾಧ್ಯಮಗಳು ಎಲ್ಲಾ ವರ್ಗದ ಜನರ ನಡುವೆ ಸಂಪರ್ಕ ಸೇತುವಾಗಿ ಮಾತ್ರ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಜನತೆ ಯಾವುದೇ ಕಾರಣಕ್ಕೂ ತಮ್ಮ ಸಂವಿಧಾನದತ್ತ ಹಕ್ಕಾದ ಮತದಾನದ ವೇಳೆ ಮತವನ್ನು ಮಾರದೆ ದೇಶದ ಹಿತಕ್ಕಾಗಿ ತಮ್ಮ ಮತ ನೀಡಬೇಕು. ಭಾರತದ ಗತ ವೈಭವ ಮರಳಿ ಪಡೆಯಬೇಕಾದರೆ ಭಾರತೀಯ ಸಮುದಾಯ ಧರ್ಮ,ಪಕ್ಷ, ಸಂಘಟನೆ, ಗಡಿ ಎಂಬ ತಾರತಮ್ಯ ಮಾಡದೇ ಒಂದೇ ತಂದೆ-ತಾಯಿಯರ ಮಕ್ಕಳಂತೆ ಪರಸ್ಪರ ಪ್ರೀತಿ ವಿಶ್ವಾಸ ಗಳೊಂದಿಗೆ ಸಹಬಾಳ್ವೆ ನಡೆಸಬೇಗಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.