(www.vknews.com) : ಎಸ್.ಡಿ.ಪಿ.ಐ ಸಂಸ್ಥಾಪನಾ ದಿನದ ಅಂಗವಾಗಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಎಸ್.ಡಿ.ಪಿ.ಐ 5 ನೇ ವಾರ್ಡ್ ಸಮಿತಿ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಜೂನ್ 21 ರಂದು ಚೊಕ್ಕಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಸ್.ಡಿ.ಪಿ.ಐ 5 ನೇ ವಾರ್ಡ್ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸಾರ್ವಜನಿಕರು ಉತ್ಸಾಹದಿಂದ ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.125 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಝೀಝ್ ದಾರಿಮಿ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯರಾದ ಡಾ.ಅನುಷ್ಕಾ ಮತ್ತು ಸಹಾಯಕ ಸಿಬ್ಬಂದಿಗಳು ಹಾಗೂ ನ್ಯಾಷನಲ್ ವುಮೆನ್ಸ್ ಫ್ರಂಟ್ ಇದರ ಸದಸ್ಯ ‘ಅಮ್ರೀನ್’ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಚೊಕ್ಕಬೆಟ್ಟು ಎಸ್.ಡಿ.ಪಿ.ಐ ಕಛೇರಿ ಮುಂಬಾಗದಲ್ಲಿ ಪಕ್ಷದ ಗಣ್ಯರ,ಹಿತೈಷಿಗಳ ಹಾಗೂ ಹಲವಾರು ಕಾರ್ಯಕರ್ತರ ಸಮ್ಮುಖದಲ್ಲಿ 5 ನೇ ವಾರ್ಡಿನ ಕಾರ್ಪೊರೇಟರ್ ಸಂಶಾದ್ ಅಬೂಬಕ್ಕರ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ ‘ಎಸ್ಡಿ.ಪಿ.ಐ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಹೋರಾಟ ರಾಜಕೀಯವನ್ನು ನಾವು ಆಯ್ಕೆಮಾಡಿಕೊಂಡಿದ್ದು ಎಲ್ಲಾ ಸಮುದಾಯದ ನಿರಾಶ್ರಿತರ ಧಮನಿತರ ಹಕ್ಕುಗಳನ್ನು ತೆಗೆಸಿಕೊಡುವಲ್ಲಿ ಸತತ ಪ್ರಯತ್ನ ಪಟ್ಟಿದೆ, ಪಕ್ಷದ ಸಿದ್ದಾಂತದಂತೆ ಇನ್ನು ಮುಂದಕ್ಕೂ ಯಾವುದೇ ರಾಜಿ ಇಲ್ಲದೇ ಪರ್ಯಾಯ ರಾಜಕೀಯದ ಅಗತ್ಯತೆ, ಸಮಾನ ನ್ಯಾಯ ಮತ್ತು ಅವಕಾಶಗಳನ್ನು ಕಲ್ಪಿಸಲು ಎಸ್.ಡಿ.ಪಿ.ಐ ಕಟಿಬದ್ದವಾಗಿದೆ. 5 ನೇ ವಾರ್ಡ್ ನಲ್ಲಿ ಪ್ರತಿನಿತ್ಯ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು ಜನತೆಯಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ನುಡಿದರು. ಕೋವಿಡ್-19 ನಿಂದ ಸಂತ್ರಸ್ಥರಾದವರಿಗಾಗಿ ಹಲವಾರು ರೀತಿಯ ನೆರವನ್ನು ನೀಡಿದ್ದು, ಈ ರೋಗದಿಂದ ಬಳಲುತ್ತಿರುವವರೆಲ್ಲರೂ ಶೀಘ್ರವೇ ಗುಣಮುಖರಾಗುವಂತೆ ಪ್ರಾರ್ಥಿಸಲು ಈ ಸಂದರ್ಭ ಕೇಳಿಕೊಂಡರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೊಕ್ಕಬೆಟ್ಟು ವಲಯಾಧ್ಯಕ್ಷ ನವಾಜ್ ಕೃಷ್ಣಾಪುರ, ಮುಖ್ಯ ಅತಿಥಿಯಾಗಿ ಮುಹಿಯದ್ದೀನ್ ಜುಮ್ಮಾ ಮಸೀದಿ ಚೊಕ್ಕಬೆಟ್ಟು ಇದರ ಅಧ್ಯಕ್ಷರಾದ ಅಮೀರ್ ಹುಸೈನ್ ಉಪಸ್ಥಿತರಿದ್ದರು. ಚೀನಾ ಗಡಿಯಲ್ಲಿ ಮೃತರಾದ ಸೈನಿಕರಿಗಾಗಿ ಎಲ್ಲರೂ ಕೆಲ ಕ್ಷಣ ಮೌನರಾಗಿ ಈ ಸಂದರ್ಭ ಸಂತಾಪ ಸೂಚಿಸಿದರು. ಕಾರ್ಯಕ್ರಮವನ್ನು ನಝೀಮ್ ಸಾಕಿಬ್ ನಿರೂಪಿಸಿ ಧನ್ಯವಾದ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.