ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಬೋಳಿಯಾರು ಗ್ರಾಮದ ಕಂಚಿಲ ಎಂಬಲ್ಲಿ ಗುರುವಾರ ಅಪರಾಹ್ನ ಬೈಕ್ ಹಾಗೂ ಆಮ್ನಿ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೆಲ್ಕಾರ್ ನಿವಾಸಿಗಳಿಗೆ ಸೇರಿದ ಆಮ್ನಿ ಕಾರು ಕೊಣಾಜೆ ಕಡೆಯಿಂದ ಬೇಕರಿ ಸಾಮಾಗ್ರಿ ಹಾಗೂ ಸಾಫ್ಟ್ ಡ್ರಿಂಕ್ಸ್ ಹೇರಿಕೊಂಡು ಲೈನ್ಸೇಲ್ ಮುಗಿಸಿ ಬರುತ್ತಿದ್ದ ವೇಳೆ ಕಂಚಿಲ ಎಂಬಲ್ಲಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲಾರಿಯೊಂದನ್ನು ಓವರ್ಟೇಕ್ ಮಾಡುವ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೈಕ್ ಸವಾರರನ್ನು ರಕ್ಷಿಸಲು ಪ್ರಯತ್ನಿಸಿದ ಆಮ್ನಿ ಚಾಲಕ ರಸ್ತೆ ಬದಿಯ ಕೆಸರಿಗೆ ವಾಹನವನ್ನು ಇಳಿಸಿದ ಪರಿಣಾಮ ನಿಯಂತ್ರಣ ಮೀರಿ ರಸ್ತೆ ಬದಿಯಲ್ಲೇ ಆಮ್ನಿ ಕಾರು ಉರುಳಿ ಬಿದ್ದಿದೆ. ಬೈಕ್ ಕೂಡಾ ರಸ್ತೆ ಬದಿಯ ಕೆಸರಿನಲ್ಲಿ ಉರುಳಿ ಬಿದ್ದಿದೆ. ಘಟನೆಯಿಂದ ಬೈಕ್ ಸವಾರ ಗಾಯಗೊಂಡಿದ್ದು, ತಕ್ಷಣ ಜಮಾಯಿಸಿದ ಸ್ಥಳೀಯರು ಹಾಗೂ ಆಮ್ನಿಯಲ್ಲಿದ್ದವರು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಮ್ನಿಯಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆಮ್ನಿ ಪ್ರಯಾಣಿಕರು ಹಾಗೂ ಬೈಕ್ ಸವಾರ ಕೂಡಾ ಮೆಲ್ಕಾರ್ ಮೂಲದವರು ಎಂದು ತಿಳಿದು ಬಂದಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅದೇ ದಾರಿಯಾಗಿ ಬರುತ್ತಿದ್ದ ಶಾಸಕ ಯು ಟಿ ಖಾದರ್ ಕಾರಿನಿಂದ ಇಳಿದು ಪರಿಶೀಲನೆ ನಡೆಸಿದರು. ಬಳಿಕ ಉರುಳಿ ಬಿದ್ದಿದ್ದ ವಾಹನಗಳನ್ನು ಮೇಲೆತ್ತುವಂತೆ ಸಲಹೆ ನೀಡಿದ್ದು, ಸ್ಥಳೀಯರು ವಾಹನಗಳನ್ನು ಮೇಲಕ್ಕೆತ್ತಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.