(www.vknews.com) : ಮಸೀದಿಗೆ ಪ್ರವೇಶಿಸುವಾಗ ಪಾಲಿಸಬೇಕಾದ ಜಾಗೃತೆ, ಶಿಸ್ತು ಮತ್ತು ಭಕ್ತಿಯ ಕುರಿತು ನಾವು ಈ ಮೊದಲೂ ಉಪದೇಶ ನೀಡಿದ್ದೆವು. ಕ್ಲಪ್ತ ಸಮಯಕ್ಕೆ ಬರಬೇಕು, ನಮಾಝ್ ಮುಗಿದು ತಕ್ಷಣ ಓಡಿ ಹೋಗಬಾರದು ಎಂದು ಎಚ್ಚರಿಕೆಯನ್ನೂ ಕೊಟ್ಟೆವು. ಆದರೆ ಆಗ ಇದನ್ನು ಕಿವಿಕೆ ಹಾಕಿಕೊಳ್ಳದ ನಾವು ಅತ್ಯಂತ ಬ್ಯುಝಿಯಲ್ಲಿದ್ದೆವು. ಕಾಲ ಹೇಗೆ ಬದಲಾಯಿತು ನೋಡಿ, ಈಗ ಮಸೀದಿಗೆ ಹೋಗುತ್ತೇವೆ ಎಂದರೂ ಕೆಲವೆಡೆ ಸಾಧ್ಯವಿಲ್ಲ. ಕೆಲೆವೆಡೆ ಅಲ್ಲಿನ ನೀತಿ ನಿಯಮದ ಕಾರಣಕ್ಕೆ ಮಸೀದಿಗೆ ಅರ್ಧ ಘಂಟೆ ಮುಂಚಿತವಾಗಿಯೇ ಬರುತ್ತಿದ್ದೇವೆ, ಜಾಗೃತೆ ಮತ್ತು ಶಿಸ್ತು ಪಾಲಿಸುತ್ತಿದ್ದೇವೆ.
ಇದು ಪ್ರಕೃತಿಯು ನಮ್ಮನ್ನು ಬದಾಲಾಯಿಸಿದ್ದಾಗಿದೆ. ನಾವು ಬದಲಾಗುವುದಿಲ್ಲಾ ಎಂದರೂ ಪ್ರಕೃತಿ ನಮ್ಮನ್ನು ಬದಲಾಯಿಸಲು ಶಕ್ತವಾಗಿದೆ ಎಂದು ಅಲ್ಲಾಹನು ವೈರಸ್ಸ್ ಭಯದ ಮೂಲಕ ನಮಗೆ ಎಚ್ಚರಿಕೆ ಕೊಟ್ಟನು ಎಂದು ಖ್ಯಾತ ವಾಗ್ಮಿ, ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು. ಅವರಿಂದು ಜುಮ್ಮಾ ಭಾಷಣ ನಂತರ ಮಾತನಾಡುತ್ತಾ, ಈಗ ನಮಗೆ ಅರ್ಜೆಂಟ್ ಇಲ್ಲ. ಬಿಡುವು ಬೇಕಾದಷ್ಟು ಇದೆ. ಸಲಾಂ ಮಾಡಿ ಹೊರ ಓಡಿ ಹೋಗಲೂ ಮನಸ್ಸು ಬರುತ್ತಿಲ್ಲ. ಮಸೀದಿ ಬೇಕು, ಅದರೊಳಗೆ ಕುಳಿತು ಭಕ್ತಿಯಿಂದ ಸ್ವಲ್ಪ ಸಮಯ ಕುಳಿತುಕೊಳ್ಳಬೇಕು ಅನಿಸುತ್ತಿದೆ. ಆದರೆ, ಅವಕಾಶವಿಲ್ಲ. ಅವಕಾಶ ಇರುವಾಗ ಇದೇ ಮಸೀದಿಯಲ್ಲಿ ನಾವು ಕುಳಿತು ಕೊಳ್ಳಲು ಪುರ್ಸೊತ್ತು ಮಾಡಿಲ್ಲ. ಈಗ ಪ್ರಕೃತಿಗೆ ನಾವು ಹೊಂದಿಕೊಂಡಿದ್ದೇವೆ. ನಾವು ಬದಲಾಗುತ್ತಿದ್ದೇವೆ ಎಂದು ಖತೀಬರು ಹೇಳಿದರು.
ಮಸೀದಿಗೆ ಬರುವಾಗ ನಾವು ಬದುಕುವುದಕ್ಕಾಗಿ ಮುಂಜಾಗರೂಕತೆ ಮಾಡುತ್ತಿದ್ದೇವೆ. ಮಸೀದಿಯ ಪ್ರತೀ ಕ್ಷಣ – ಪ್ರಾರ್ಥನೆ ಮತ್ತು ಸತ್ಕರ್ಮ ಪರಲೋಕದ ಮುಂಜಾಗರೂಕತೆಗೆ ಇರುವಂತದ್ದು, ಅಲ್ಲೂ ನಮಗೆ ಬದುಕಲಿಕ್ಕೆ ಇದೆ. ಭೂಮಿಯ ಬದುಕಿಗಾಗಿ ನಾವು ಮಾಡುವ ಮುಂಜಾಗರೂಕತೆ ಪರಲೋಕಕ್ಕೂ ಮಾಡಬೇಕು. ನಾವು ಬಹಳ ತುರ್ತಿನಲ್ಲಿ ಇದ್ದೆವು. ಸಮಯ ಇರಲಿಲ್ಲ. ಆಗ ಅಲ್ಲಾಹನು ಭಯವನ್ನು ಹಾಕಿದನು. ಪವಿತ್ರ ಕುರಾನಿನಲ್ಲಿ ಅಲ್ಲಾಹನು ಹೇಳುತ್ತಾನೆ “ಭಯ” ಉಂಟು ಮಾಡುವ ಮೂಲಕ ನಿಮ್ಮನ್ನು ನಾನು ಪರೀಕ್ಷಿಸುವೆನು ಎಂದು. ಭಯ ಎನ್ನುವಾಗ ಕೆಲವು ಮುಸ್ಲಿಮರು ಸೌದಿಯಂತ ಇಸ್ಲಾಮಿಕ್ ರಾಷ್ಟ್ರದಲ್ಲಿ ಯಾವ ಭಯ ಎಂದು ಕೇಳಿದ್ದರು. ಈಗ ಇಸ್ಲಾಮಿಕ್ ರಾಷ್ಟ್ರಗಳು, ಕ್ರೈಸ್ತ ರಾಷ್ಟ್ರಗಳು, ಜಾತಿ -ಧರ್ಮ – ವರ್ಗ – ನೋಡದೆ ಎಲ್ಲರೂ ಭಯಪಟ್ಟಿದ್ದಾರೆ. “ಭಯ” ಮನುಷ್ಯರಿಗೆ ನೀಡಿರುವುದಾಗಿದೆ. ಅಲ್ಲಿ ಧರ್ಮ ಮತ್ತು ಜಾತಿಯಿಲ್ಲ. ಈಗ ನಾವು ಚಿಂತಿಸಬೇಕು, ಭೂಮಿ ಆಕಾಶದ ನಡುವೆ ಬದುಕುತ್ತಿರುವ ನಮ್ಮ ಕುರಿತು. ನಾವು ಪ್ರಕೃತಿಯೊಂದಿಗೆ ಬದುಕಬೇಕು, ಅಲ್ಲಾಹನನ್ನು ಪ್ರೀತಿ ಮತ್ತು ಭಯದಿಂದ ಅನುಸರಿಸಬೇಕು ಎಂದ ಖತೀಬರು, ಈಗಲೂ ಕೆಲವರು ಪಿತ್ನಗಳನ್ನು ಹರಡುತ್ತಿದ್ದಾರೆ, ಯಾವುದೇ ಕೆಲಸ ಇಲ್ಲದಾಗ ಪಿತ್ನ – ಮಾನಹಾನಿ – ಸ್ಪರ್ಧೆ- ಪೈಪೋಟಿ ಮತ್ತು ಮತ್ಸರಗಳು ಹೆಚ್ಚುವುದು ಅತ್ಯಂತ ನಿಕೃಷ್ಠ ಮತ್ತು ಹೃದಯ ಸತ್ತ ಜನರ ವರ್ತನೆಯಾಗಿದೆ. ಈ ಸಮಯದಲ್ಲೂ ನಾವು ಬದಲಾಗದಿದ್ದರೆ, ನಮ್ಮ ಪರಲೋಕದ ಎಲ್ಲಾ ಭರವಸೆ ಬಿಟ್ಟು ಬಿಡಿ. ಅದು ನಾಶವಲ್ಲದೇ ಇನ್ನೇನು ಅಲ್ಲ ಎಂದು ಖತೀಬರು ಹೇಳಿದರು.
ನಮ್ಮ ಮೇಲೆ ಈಗ ಬಾಧ್ಯತೆಗಳಿವೆ, ಯುವ ತಲೆಮಾರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಾಗಿದೆ. ವಿಧ್ಯಾರ್ಥಿಗಳನ್ನು ಕೆಟ್ಟ ಚಟ ಮತ್ತು ದುಷ್ಟತನದಿಂದ ಸಂರಕ್ಷಿಸಬೇಕಾಗಿದೆ. ಪುಟ್ಟ ಮಕ್ಕಳಿಗೆ ಸುಂದರ ಸಮಾಜ ಕಟ್ಟಿ ಕೊಡಬೇಕಾಗಿದೆ. ನಾವು ತರ್ಕ ಮತ್ತು ಚರ್ಚೆಯನ್ನು ನಿಲ್ಲಿಸಿ ಪ್ರಾಯೋಗಿಕ ಕ್ರಮಗಳನ್ನು ಮಾಡಬೇಕಾಗಿದೆ. ಸಲಹೆಗಳು ಸಾಕಾರಗೊಳ್ಳದಿದ್ದರೆ, ಪ್ರಾಯೋಗಿಕ ಆಗದೆ ಇದ್ದರೆ ಅತ್ಯುತ್ತಮ ಸಲಹೆ ಕೂಡ ವ್ಯರ್ಥ. ಪ್ರತೀ ಮಸೀದಿಯನ್ನು ಒಂದು ಜಮಾಅತ್ ಅಭಿವೃದ್ದಿ ಕೇಂದ್ರಗಳು ಬೇಕು ಹಾಗೇ ಕೌಂನ್ಸಿಲಿಂಗ್ ಸೆಂಟರ್ ಗಳು ಬೇಕು. ಈ ನಿಟ್ಟಿನಲ್ಲಿ ಕಾರ್ಯಾಚರಿಸುವ ಸಮರ್ಥ ತಂಡವೂ ಬೇಕು. ಅವರಿಗೆ ಬೇಕಾದ ಸೌಲಭ್ಯ ಮತ್ತು ಪದ್ದತಿಗಳು ಹಾಗೇ ಸಂಪನ್ಮೂಲಗಳು ಸಮುದಾಯ ರೂಪಿಸಿ ಕೊಡಬೇಕು. ನಾವು ಬದಲಾಗಬೇಕು. ಭವಿಷ್ಯದ ತಲೆಮಾರಿನ ಮೇಲೆ ಬಲು ದೊಡ್ಡ ಜವಾಬ್ದಾರಿ ನಮಗಿದೆ. ಅದನ್ನು ಪೂರೈಸಲು ಅಲ್ಲಾಹನು ಅನುಗ್ರಹಿಸಲಿ ಎಂದು ಖತೀಬರು ಪ್ರಾರ್ಥಿಸಿದರು.
– ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.