ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಜಾಗತಿಕ ಮಟ್ಟದಲ್ಲಿ ಕೋರೋನಾ ವೈರಸ್ ವ್ಯಾಪಕವಾಗಿ ಹರಡಿದ ಸಂಧರ್ಭದಲ್ಲಿ ಭಾರತ ಅಷ್ಟೊಂದು ಅಪಾಯಕ್ಕೆ ಒಳಗಾಗಿರಲಿಲ್ಲ. ಆ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ತೀರಾ ನಿರ್ಲಕ್ಷ್ಯ ವಹಿಸಿದ್ದರ ಫಲವಾಗಿ ಇಂದು 5 ಲಕ್ಷಕ್ಕೂ ಮಿಕ್ಕಿ ಕೋರೋನಾ ಸೋಂಕಿತರು ದೇಶದಲ್ಲಿರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. 2020ರ ಜನವರಿ 30 ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಎಚ್ಚರಿಕೆಯನ್ನು ನೀಡಿತ್ತು ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೇರಿದಂತೆ ದೇಶದ ಹಲವಾರು ವೈಜ್ಞಾನಿಕ ಸಂಸ್ಥೆಗಳು ವಿವಿಧ ಶಿಫಾರಸ್ಸುಗಳನ್ನೊಳಗೊಂಡ ಎರಡು ವರದಿಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದವು. ಅತ್ಯಂತ ತುರ್ತು ಆದ್ಯತೆಯ ಮೇಲೆ ಗಮನ ಹರಿಸಿ ಜನರ ಜೀವ ರಕ್ಷಿಸಬೇಕಾದ ಕೇಂದ್ರ ಸರಕಾರ ಈ ಸಂಧರ್ಭದಲ್ಲೂ ಕಾಪೆರ್Çರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ದೇಶದ್ರೋಹಿಯಾಗಿ ವರ್ತಿಸಿದೆ. ಈ ಮೂಲಕ ಕೋರೋನಾ ವೈರಸ್ ಹತ್ತಿಕ್ಕುವ ಬದಲು, ನರೇಂದ್ರ ಮೋದಿ ಸರಕಾರ ಜನರ ಬದುಕನ್ನೇ ನಾಶಗೊಳಿಸಲು ಹೊರಟಿದೆ ಎಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಂತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ಡೌನ್ ಸಂಧರ್ಭದಲ್ಲಿ ಕೇಂದ್ರ ಸರಕಾರದ ವೈಫಲ್ಯ ಖಂಡಿಸಿ ಸಿಪಿಐ(ಎಂ) ನೇತ್ರತ್ವದಲ್ಲಿ ದ.ಕ. ಜಿಲ್ಲೆಯಾದ್ಯಂತ ನಡೆಯುವ ವಾರಾಚರಣೆಯ ಭಾಗವಾಗಿ ಜಪ್ಪಿನಮೊಗರಿನಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಬಾಗವಹಿಸಿ ಮಾತನಾಡಿದ ಅವರು ಮಾತನಾಡಿದರು. ಇದೇ ವೇಳೆ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ಮುಖಂಡ ದಿನೇಶ್ ಶೆಟ್ಟಿ ಅವರು, ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸುತ್ತಾ, ಕೋರೋನಾ ಸಂಕಷ್ಟದ ಕಾಲದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿಟ್ಟು ಕೀಳು ಮಟ್ಟದ ರಾಜಕೀಯ ನಡೆಸಿರುವುದು ಮಾತ್ರವಲ್ಲದೆ ಕೋರೋನಾವನ್ನು ಮುಂದಿಟ್ಟು ಬಡಪಾಯಿ ಜನರ ಬದುಕನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಮಾತನಾಡಿ, ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಹಾಗೂ ಬೀಡಿ, ಹೋಟೆಲ್, ಬೀದಿಬದಿ, ಹಮಾಲಿ, ಟೈಲರ್, ಬಸ್ ನೌಕರರು, ಖಾಸಗಿ ಶಾಲಾ ಶಿಕ್ಷಕರು, ಕಲಾವಿದರು, ಬಿಸಿಯೂಟ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.
ಸಿಪಿಐ(ಎಂ) ಪ್ರಮುಖರಾದ ಮನೋಜ್ ಶೆಟ್ಟಿ, ಉದಯಚಂದ್ರ ರೈ, ಚಂದ್ರಹಾಸ ಜೆ, ಜಯಲಕ್ಷ್ಮಿ, ಡಿವೈಎಫ್ಐ ಘಟಕಾಧ್ಯಕ್ಷ ಅಭಿಷೇಕ್ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.