(www.vknews.com) : ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗನನ್ನು ಪೋಲೀಸರು ಅಮಾನುಷವಾಗಿ ಹಲ್ಲೆಗೈದು ಕೊಂದಿರುವ ವಿಚಾರ ಇವತ್ತು ಬಹಳಷ್ಟು ಚರ್ಚೆಯಾಗುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘನೆಯ ವಿಷಯವಾಗಿ ಜಯರಾಜ್ ಎಂಬ ವರ್ತಕನನ್ನು ಪೋಲೀಸರು ಬಂಧಿಸಿ, ಹೀನಾಯವಾಗಿ ಹಿಂಸಿಸುತ್ತಾರೆ. ಅದನ್ನು ಪ್ರಶ್ನಿಸಲು ಬಂದ ಮಗ ಬೆನಿಕ್ಸ್ ನನ್ನೂ ಕೂಡ ಪೋಲೀಸರು ಕ್ರೂರವಾಗಿ ದೌರ್ಜನ್ಯವೆಸಗಿ ಸಾವಿನ ಕಡೆಗೆ ತಳ್ಳುತ್ತಾರೆ. ಹಲ್ಲೆಯ ಕ್ರೂರತೆ ಹೇಗಿತ್ತೆಂದರೆ, ಗುದದ್ವಾರದೊಳಗೂ ಲಾಠಿಯನ್ನು ತುರುಕಿಸಿ ಬಹಳ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಮೊಣಕಾಲಿನ ಚಿಪ್ಪು ಒಡೆದು ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೂ ಎಳ್ಳಷ್ಟೂ ಕರುಣೆ ತೋರದ ಪೋಲೀಸರು ಕೊನೆಗೆ ಇಬ್ಬರ ಸಾವಿನಲ್ಲಿ ಮುಗಿಸುತ್ತಾರೆ.
ತೂತುಕುಡಿ ಎಂದಾಕ್ಷಣ ನಮಗೆ ಬೇಗನೇ ನೆನಪಿಗೆ ಬರುವ ಘಟನೆಯೆಂದರೆ, 2018 ರ ಮೇ ತಿಂಗಳ ಆ ದುರಂತ. 1998 ರಲ್ಲಿ ನಿರ್ಮಾಣವಾದ ಕಾಪರ್ ಸ್ಮೆಲ್ಟರ್ ಪ್ಲಾಂಟ್ ನ್ನು ವಿರೋಧಿಸಿ ಅಲ್ಲಿನ ಜನ ಬೀದಿಗಿಳಿದಿದ್ದರು. ಆರಂಭದಲ್ಲೇ ಹೋರಾಟಗಳು ನಡೆದಿದ್ದರೂ ಕೂಡ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮುಂದಕ್ಕೆ 2018 ರಲ್ಲಿ ಒಂದು ಕ್ರಾಂತಿ ಹುಟ್ಟಿಕೊಂಡಿತ್ತು. ಆ ಪ್ಲಾಂಟ್ ನ ವಿರುದ್ಧದ ಶಬ್ಧದ ತೀವ್ರತೆ ಕಾರ್ಪೊರೇಟ್ ಕಂಪೆನಿಗೆ ಬಹುದೊಡ್ಡ ಸವಾಲಾಗಿತ್ತು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬಂದಾಗ ಪೋಲೀಸರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಗುಂಡಿನ ಚಕಮಕಿ ನಡೆಸಬೇಕಾಯಿತು. ಅದರಿಂದಾಗಿ 13 ಮಂದಿ ಸಾವನ್ನಪ್ಪಿದರು ಮಾತ್ರವಲ್ಲ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೂ ಹೋರಾಟದ ಫಲವಾಗಿ 2018ರ ಮೇ 28 ರಂದು ಆ ಪ್ಲಾಂಟ್ ನ್ನು ತಮಿಳುನಾಡು ಸರಕಾರ ಮುಚ್ಚಿಸಿತ್ತು.
ಈ ಘಟನೆಗೂ ತಂದೆ ಮಗನ ಸಾವಿಗೂ ಸಂಬಂಧವಿಲ್ಲದಿದ್ದರೂ ಪೋಲೀಸ್ ದೌರ್ಜನ್ಯದ ವಿಚಾರ ಬಂದಾಗ ಪ್ರಸ್ತಾಪಿಸಬೇಕಾಯಿತು. ನಮ್ಮ ಭಾರತದಲ್ಲಿ ಪೋಲಿಸರಿಂದ ದೌರ್ಜನ್ಯಕ್ಕೊಳಗಾಗಿ ಸಾವನ್ನಪ್ಪಿದ ಹಲವಾರು ಘಟನೆಗಳು ನಡೆದಿದೆ. ಹೆಚ್ಚಿನವುಗಳು ಸುದ್ದಿಯಾಗದೆ ಮುಚ್ಚಿಕೊಂಡಿದೆ. ಜಯರಾಜ್ ಮತ್ತು ಬೆನಿಕ್ಸ್ ನ ಲಾಕಪ್ ಡೆತ್ ನಡೆದಿದ್ದು ಜೂನ್ 22 ರಂದು, ಆದರೆ ಅದು ಬೆಳಕಿಗೆ ಬರಲು ಸಮಯ ಹಿಡಿಯಿತು.
ಈ ಘಟನೆಯ ಚರ್ಚೆಯ ಸ್ವರೂಪದ ಮದ್ಯೆ ನಾವು ಕಾಣದೇ ಹೋದ ಎರಡು ಘಟನೆಗಳು ನಡೆದಿತ್ತು. ಇದೇ ತಮಿಳುನಾಡಿನಲ್ಲಿ ಅಟೋ ರಿಕ್ಷಾ ಡ್ರೈವರ್ ಆಗಿದ್ದಂತಹ 27 ವರ್ಷ ಪ್ರಾಯದ ಕುಮಾರಸನ್ ಎಂಬ ವ್ಯಕ್ತಿ ಭೂ ವಿವಾದದ ಕಾರಣವಾಗಿ ಬಂಧಿಸಲ್ಪಟ್ಟು ಸತತ 6 ದಿನಗಳ ಕಾಲ ಪೋಲೀಸರ ಕ್ರೂರ ನಡೆಗಳಿಗೆ ಒಗ್ಗಿಕೊಳ್ಳಲಾಗದೇ ಜೂನ್ 27 ರಂದು ಸಾವನ್ನಪ್ಪುತ್ತಾನೆ. ಆದರೆ ಇದು ಸುದ್ದಿಯಾಗಲೇ ಇಲ್ಲ. ಅದೇ ದಿನ ಸಾಗರ್ ಚಲವಡಿ ಎಂಬ 19 ವಯಸ್ಸಿನ ಬಾಲಕ SSLC ಪರೀಕ್ಷಾ ಕೇಂದ್ರದ ಹೊರಗಡೆ ಪೋಲೀಸರ ಲಾಠಿಯೇಟಿಗೆ ಮಣಿದು ಹೃದಯ ವೈಫಲ್ಯದಿಂದ ಮರಣ ಹೊಂದುತ್ತಾನೆ.
ಕ್ಷುಲ್ಲಕ ಕಾರಣಕ್ಕಾಗಿ ಪೋಲೀಸರು ಸಾಮಾನ್ಯ ಜನರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿ ಅವರನ್ನು ಸಾವಿನ ಕಡೆಗೆ ಕರೆದೊಯ್ಯುವ ಪ್ರಸಂಗಗಳು ದಿನೇ ದಿನೇ ನಡೆಯುತ್ತಿದೆ.
ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಾರದೇ ಮರೆಯಾಗುತ್ತದೆ. ಅದರ ಮದ್ಯೆ ಕೆಲವೊಂದು ಬಹಳ ಚರ್ಚೆಯಾಗುತ್ತದೆ. ಜಯರಾಜ್ ಮತ್ತು ಬೆನಿಕ್ಸ್ ನ ಸಾವಿನ ಕುರಿತಾಗಿ ಬಹಳಷ್ಟು ರೀತಿಯಲ್ಲಿ ಪ್ರತಿರೋಧಗಳು ಕೇಳಿಬರುತ್ತಿದೆ. ಆದರೆ ಈ ಶಬ್ದಗಳೆಲ್ಲ ಸೀಸನಲ್ ಸೌಂಡ್ ಮಾತ್ರವಾಗಿರುತ್ತದೆ ಎಂಬುದು ನಗ್ನಸತ್ಯ. ಪ್ರಕರಣದ ಬಿಸಿಯಾರಿದ ನಂತರ ಅಥವಾ ಇದಕ್ಕಿಂತಲೂ ಭಿನ್ನವಾದ ಇನ್ನೊಂದು ಘಟನೆಗಳು ಕಾಣಸಿಕ್ಕಾಗ ಇವು ಮರೆತು ಹೋಗುತ್ತದೆ. ಅನ್ಯಾಯದ ಮಡುವಿನಲ್ಲಿ ನ್ಯಾಯಕ್ಕಾಗಿ ಹಪಹಪಿಸುವ ಮನಸ್ಸುಗಳಷ್ಟೇ ಮತ್ತೆ ಮತ್ತೆ ಕಣ್ಣೀರಿಡುತ್ತಾರೆಯೇ ಹೊರತು ಇಂದು ಉದ್ಭವಿಸಿದ ಯಾವುದೇ ಧ್ವನಿಗಳು ಶಾಶ್ವತ ಪರಿಹಾರಕ್ಕೆ ಕಾರಣವಾಗುವುದಿಲ್ಲ.
ಮೊನ್ನೆ ಮೊನ್ನೆ ಅಮೆರಿಕಾದ ಜಾರ್ಜ್ ಫ್ಲಾಯ್ಡ್ ಪ್ರಕರಣ ಅಷ್ಟೊಂದು ಸುದ್ದಿಯಾದದ್ದೇಕೆ? ಪೋಲೀಸ್ ಅಧಿಕಾರಿಯೊಬ್ಬ ಕಪ್ಪು ವರ್ಣದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಕತ್ತಲ್ಲಿ ಕಾಲಿಟ್ಟು ಹಿಸುಕುವ ಆ ದೃಶ್ಯ ಕಂಡು ನಾವೆಲ್ಲಾ ಕಣ್ಣೀರಿಟ್ಟಿದ್ದೆವು. ಜಾರ್ಜ್ ಫ್ಲಾಯ್ಡ್ ಗಾಗಿ ನಾವೂ ಧ್ವಬಿಯಾದೆವು. ಆದರೆ, ಅಮೆರಿಕಾದಲ್ಲಿ ಅದೊಂದು ಕ್ರಾಂತಿಯಾಗಿತ್ತು. ಅಟ್ಟಹಾಸಗೈಯ್ಯುತ್ತಿರುವ ಕೊರೋನಾ, ಕಟ್ಟುನಿಟ್ಟಿನ ಲಾಕ್ಡೌನ್, ರೋಗದ ಭೀತಿ.. ಇದ್ಯಾವುದನ್ನೂ ಲೆಕ್ಕಿಸದೆ ಜನ ಬೀದಿಗಿಳಿದು ಬಂದಿದ್ದರು. ಪ್ರತಿಭಟನೆಗಳು ತೀರ್ವ ಸ್ವರೂಪ ಪಡೆದು ಪರಿಣಾಮಕಾರಿಯಾಗಿ ಬೆಳೆಯಿತು. ಅಮೆರಿಕ ಅಧ್ಯಕ್ಷ ಕೂಡ ಅಡಗಿ ಕುಳಿತುಕೊಳ್ಳುವ ಮಟ್ಟಕ್ಕೆ ಜನಾಕ್ರೋಶ ದಿಗಿಲುಗೊಂಡಿತ್ತು. ಇದರ ಪರಿಣಾಮವೇ ಇರಬಹದು, ತಪ್ಪಿತಸ್ಥ ಪೋಲಿಸರಿಗೆ ಶಿಕ್ಷೆಯಾಗಿದೆ ಅನ್ನುವ ಸುದ್ದಿ ಸಿಗುತ್ತಿದೆ. ತನ್ನ ಸಹೋದರನೊಬ್ಬ ಪೋಲೀಸರ ಅನೈತಿಕತೆಗೆ ಬಲಿಯಾದುದನ್ನು ಕಂಡು ಸುಮ್ಮನಿರಲು ಅವರ ಮನಸ್ಸು ಸಮ್ಮತಿಸಿರಲಿಲ್ಲ. ಇಂದು ಜಾರ್ಜ್ ಫ್ಲಾಯ್ಡ್, ನಾಳೆ ನಾವೂ ಆಗಿರಬಹುದು ಎಂಬ ಜಾಗೃತಿ ಅವರಲ್ಲಿತ್ತು. ಅದಕ್ಕಿರಬೇಕು ಅಷ್ಟೊಂದು ತೀವ್ರ ಮಟ್ಟದ ಕ್ರಾಂತಿ ಹುಟ್ಟಿಕೊಂಡಿದ್ದು.
ಆದರೆ, ನಮ್ಮ ಭಾರತದಲ್ಲಿ ಪದೇ ಪದೇ ಈ ರೀತಿಯ ದೌರ್ಜನ್ಯಗಳು, ಹಿಂಸೆಗಳು, ಲಾಠಿ ಪ್ರಹಾರಗಳು ಕಂಡುಬರುತ್ತಿದ್ದರೂ ನಾವು ಮೌನವಾಗಿದ್ದೇವೆ. ಪ್ರತಿರೋಧಿಸಲು ಹಿಂಜರಿಯುತ್ತಿದ್ದೇವೆ. ಇಂತಹ ಅಮಾನೀಯ ಘಟನೆಗಳಿಗೆಲ್ಲಾ ಮೌನದಿಂದ ಉತ್ತರ ನೀಡುವುದಾದರೆ, ಮುಂದೆ ಇದು ವೃದ್ಧಿಸಬಹುದೇ ಹೊರತು ನಿರ್ಮೂಲನೆ ಸಾಧ್ಯವಿಲ್ಲ. ಭಾರತದಲ್ಲಿ ಅನ್ಯಾಯ, ಅಕ್ರಮಗಳೇ ತಾಂಡವಾಡುತ್ತಿದೆ. ತಪ್ಪಿತಸ್ಥ ಆರಾಮವಾಗಿ ಸಮಾಜದಲ್ಲಿ ತಲೆಯೆತ್ತಿ ನಡೆಯುತ್ತಿದ್ದಾನೆ. ಅಮಾಯಕ ಜೀವಗಳು, ನಿರಪರಾಧಿಗಳು ಈ ರೀತಿಯ ದೌರ್ಜನ್ಯಕ್ಕೊಳಗಾಗಿ ಬದುಕು ಮುಗಿಸುತ್ತಿದ್ದಾರೆ. ಹಲ್ಲೆ, ಕೊಲೆ, ಅತ್ಯಾಚಾರ… ಹೀಗೆ ಕುಕೃತ್ಯಗಳನ್ನು ನಡೆಸುವವರೆಲ್ಲರೂ ಹಾಯಾಗಿದ್ದಾರೆ. ಹಣ ಮತ್ತು ಅಧಿಕಾರದ ಬಲದಿಂದ ಅವರು ಇನ್ನೂ ಬದುಕುತ್ತಿದ್ದಾರೆ. ಆದರೆ, ಇದ್ಯಾವುದೂ ಇಲ್ಲದ ಬಡಪಾಯಿ ಜನರು ಮಾತ್ರ ಸಣ್ಣಪುಟ್ಟ ಕಾರಣಕ್ಕೂ ಬೇಕಾಬಿಟ್ಟಿ ಒದೆ ತಿಂದು ಅಪೂರ್ಣ ಬದುಕಿಗೆ ಪೂರ್ಣವಿಡಬೇಕಾಗುತ್ತದೆ.
ಲಾಕ್ಡೌನ್ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಪೋಲೀಸರ ದೌರ್ಜನದ ಪರಿಯನ್ನು ನಾವು ನೋಡಿರಬಹುದು. ನಿಷ್ಕಾರುಣ್ಯದಿಂದ ಬಹಳ ಕ್ರೂರವಾಗಿ ನಡೆಸಿಕೊಂಡ ರೀತಿ, ನಿಯಮ ಉಲ್ಲಂಘನೆಗೆ ಕಾನೂನಾತ್ಮಕ ಶಿಕ್ಷೆ ವಿಧಿಸುವುದರ ಬದಲಾಗಿ ಪೋಲೀಸರೇ ಕಾನೂನು ಕೈಗೆತ್ತಿಕೊಂಡ ಸನ್ನಿವೇಶ, ನಮ್ಮಲ್ಲಿ ಅನೇಕ ಸಾವು-ನೋವುಗಳಿಗೆ ಕಾರಣವಾಗಿದೆ. ಇತ್ತೀಚೆಗೆ NRC ವಿರುದ್ಧ ಹೋರಾಟದ ಸಂದರ್ಭದ ದೆಹಲಿ ಗಲಭೆ, ಜಾಮಿಆ ಮಿಲಿಯಾ ವಿದ್ಯಾರ್ಥಿಗಳಿಗೆ ಪೋಲೀಸರು ಹಲ್ಲೆಗೈದಿರುವುದು, ಪ್ರತಿಭಟನಾಕಾರರ ಮೇಲೆ ಹಿಗ್ಗಾಮುಗ್ಗ ಲಾಠಿ ಬೀಸಿದ್ದು, ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ 2 ಅಮಾಯಕ ಜೀವಗಳನ್ನು ಬಲಿ ಪಡೆದಿದ್ದು, ಗರ್ಭಿಣಿ ಸಫೂರಾ ಸೇರಿದಂತೆ ಅನೇಕ ವಿದ್ಯಾರ್ಥಿಗಳನ್ನು ಬಂಧನದಲ್ಲಿರಿಸಿ ಹಿಂಸಿಸಿದ್ದು… ಹೀಗೆ ಪೋಲೀಸ್ ದೌರ್ಜನ್ಯದ ದೊಡ್ಡ ಪಟ್ಟಿಯೇ ಇದೆ. ಸಾಮಾನ್ಯ ಜನರ ಜೀವದ ಮೇಲೆ ಚೆಲ್ಲಾಟವಾಡಿ ವಿಕೃತ ಆನಂದ ಪಡುವ, ಅಧಿಕಾರಿ-ರಾಜಕಾರಣಿಗಳ ಮನ ತಣಿಸುವುದಕ್ಕಾಗಿ ನಡೆಸುವ ಇಂತ ಕ್ರೂರ ಕೃತ್ಯಗಳಿಗೆ ಸಾಕಷ್ಟು ವಿರಾಮವಿಡದಿದ್ದರೆ, ಇನ್ನೂ ಅದೆಷ್ಟೋ ಜಯರಾಜ್, ಬೆನಿಕ್ಸ್, ಫ್ಲಾಯ್ಡ್ ಗಳು ಪ್ರಾಣ ತೆರಬೇಕಾದೀತು.
ತಮಿಳುನಾಡಿನ ಈ ಘಟನೆಗೆ ಸಂಬಂಧಿಸಿ ಇದರಲ್ಲಿ ಶಾಮೀಲಾದ ಆರೋಪಿ ಪೋಲಿಸರನ್ನು ಅಮಾನತು ಮಾಡಿ ಹೆಚ್ಚಿನ ತನಿಖೆಗೆ ಈ ಕೇಸನ್ನು ಸಿಬಿಐ ಗೆ ವರ್ಗಾಯಿಸಲಾಗಿದ್ದರೂ ಸೂಕ್ತ ರೀತಿಯಲ್ಲಿ ಜಯರಾಜ್ ಕುಟುಂಬಕ್ಕೆ ನ್ಯಾಯ ಸಿಗುವುದು ಸಂದೇಹವೇ. ತಮಿಳುನಾಡಿನ ನಾಗರಿಕರು ಎಚ್ಚೆತ್ತುಕೊಂಡು ಪ್ರತಿಭಟಿಸುತ್ತಿದ್ದರೂ ಅದು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಸಣ್ಣಪುಟ್ಟ ಕಾರಣಕ್ಕಾಗಿ ಸಾಮಾನ್ಯ ಜನರ ಮೇಲೆ ಪೋಲಿಸರು ಕೆವರು ಎಸಗುವ ಈ ರೀತಿಯ ದೌರ್ಜನ್ಯಗಳಿಂದ ಇಡೀ ಪೋಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗುತ್ತದೆ. ಹಾಗಿದ್ದೂ, ಈ ವಿಚಾರವಾಗಿ ಉನ್ನತ ಮಟ್ಟದ ಅಧಿಕಾರಿಗಳಾಗಲಿ, ರಾಜಕೀಯ ನೇತಾರರಾಗಲಿ ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಕಡೆಗಣಿಸುತ್ತಿರುವುದು ದುರಂತ.
ಜಾರ್ಜ್ ಗಾಗಿ ಯಾವ ರೀತಿಯಲ್ಲಿ ಅಮೆರಿಕನ್ನರು ಮಿಡಿದರೋ, ಅಲ್ಲಿನ ಹೋರಾಟದ ತೀವ್ರತೆ ಹೇಗಿತ್ತೋ ಅದೇ ರೀತಿಯ ಸಮರ ಇಲ್ಲಿ ಆಗಬೇಕಿದೆ. ದಿನನಿತ್ಯ ಹೆಚ್ಚುತ್ತಿರುವ ಇಂತಹ ಘಟನೆಗಳಿಗೆ ಬಹುತೇಕ ಕಡಿವಾಣ ಹಾಕಲು ಎಲ್ಲರೂ ಧ್ವನಿಯೆತ್ತಬೇಕಿದೆ. ಈ ಧ್ವನಿ ಬರೀ ಜಯರಾಜ್ ಮತ್ತು ಬೆನಿಕ್ಸ್ ಗಾಗಿ ಮಾತ್ರವಾಗಿರದೇ ಇಲ್ಲಿ ಈ ಮೊದಲು ಪ್ರಾಣ ತ್ಯಜಿಸಿದ ಎಲ್ಲಾ ಅಮಾಯಕರಿಗೂ ನ್ಯಾಯದ ಕರೆಯಾಗಿರಬೇಕು. ಇದರ ಜೊತೆಯಲ್ಲಿ ನಾನು ಹಿಂದಿನ ಲೇಖನದಲ್ಲಿ ತಿಳಿಸಿದಂತೆಯೇ ಜಾತಿ-ಧರ್ಮ-ವರ್ಣ-ಲಿಂಗ ಎಂಬ ಭೇದಗಳಿಂದ ನಡೆಯುವ ಇದೇ ರೀತಿಯ ಕ್ರೂರ ಕೃತ್ಯಗಳ ವಿರುದ್ಧವೂ ಶಬ್ಧವಾಡಬೇಕು. ಇತ್ತೀಚೆಗೆ ಭಾರತದಲ್ಲಿ ವೃದ್ಧಿಸುತ್ತಿರುವ ಅಶಾಂತಿಯ ವಾತಾವರಣವನ್ನು ತಿಳಿಗೊಳಿಸಲು ದೊಡ್ಡ ರೀತಿಯ ಕ್ರಾಂತಿಯೇ ಆಗಬೇಕು..
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.