ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೈಗಾರೀಕರಣದಿಂದಾಗಿ ಹೊಸ ಹೊಸ ರೋಗಗಳು ಹುಟ್ಟುತ್ತಿದ್ದು, ಮನುಷ್ಯ ‘ಪರಿಸರ ಸ್ನೇಹಿ’ ಜೀವನಶೈಲಿ ಮತ್ತು ಆಹಾರ ಪದ್ಧತಿ ಬಳಸದಿದ್ದಲ್ಲಿ ಪರಿಸರದ ಸಮತೋಲನ ಕಳೆದು ಹೋಗಿ ಈ ಭೂಮಂಡಲ ಬರಿದಾಗ ಬದುಕಲು ಯೋಗ್ಯವಲ್ಲದ ಬರಡು ಭೂಮಿಯಾಗುವ ಅಪಾಯ ಇದೆ ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸದಮಾದೇಷ್ಟ ಮತ್ತು ಜಿಲ್ಲಾ ಪೌರರಕ್ಷಣಾ ದಳದ ಮುಖ್ಯ ವಾರ್ಡನ್ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ಮೂಡಬಿದಿರೆ ಸಮೀಪದ ಬೆಳುವಾಯಿ ತಾಲೂಕಿನ ಧರೆಗುಡ್ಡೆ ಎಂಬ ಅರಣ್ಯದಲ್ಲಿ ಜಿಲ್ಲಾ ಗೃಹರಕ್ಷಕದಳ ಪೌರರಕ್ಷಣಾ ದಳ ಮೂಡಬಿದಿರೆ ಅರಣ್ಯ ಇಲಾಖೆ ಮತ್ತು ಪೇಮ್ ಅಡ್ವೆಂಚರ್ ಅಕಾಡೆಮಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಡಾ|| ಚೂಂತಾರು ಅವರು ಮಾತನಾಡಿದರು. ಸುಮಾರು ನೂರಕ್ಕೂ ಹೆಚ್ಚು ಹಲಸು, ಮಾವು, ಪುನರ್ಪುಳಿ, ಹೆಬ್ಬಲಸು, ನೇರಳೆ ಮುಂತಾದ ಹಣ್ಣು ಬಿಡುವ ಗಿಡಗಳನ್ನು ಕಾಡಿನ ಮದ್ಯೆ ನೆಡಲಾಯಿತು. ಸ್ಥಳೀಯ ನ್ಯಾಯವಾದಿಗಳಾದ ಶ್ರೀ ಭರತ್ರಾಜ್ ಅವರು ಮಾತನಾಡಿ ಕಾಡಿನಲ್ಲಿ ಹಣ್ಣುಹಂಪಲು ಸಿಗದಾಗ ಕಾಡು ಪ್ರಾಣಿಗಳು ಊರಿಂದ ನಾಡಿಗೆ ಬಂದು ಬೆಳೆಗಳನ್ನು ಹಾಳು ಮಾಡುತ್ತದೆ. ಕಾಡು, ಪ್ರಾಣಿಗಳಿಗಾಗಿ ಈ ಹಣ್ಣುಬಿಡುವ ಗಿಡ ನೆಡಲಾಗುತ್ತಿದೆ. ಅವುಗಳಿಗೆ ಸೂಕ್ತ ಆಹಾರ ಸಿಕ್ಕಲ್ಲಿ ಬೆಳೆ ನಾಶವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀ ಬಸವರಾಜ್ ಮತ್ತು ಶ್ರೀ ರಮೇಶ್ ಅವರು ಪ್ರತಿ ವರ್ಷದಂತೆಯೂ ಈ ವರ್ಷವೂ ಸಾವಿರಾರು ಗಿಡ ನೆಟ್ಟು ಪರಿಸರ ಸಮತೋಲನ ಕಾಪಾಡಲು ಅರಣ್ಯ ಇಲಾಖೆ ಬದ್ದವಾಗಿದೆ ಎಂದು ನುಡಿದರು.
ಮೂಡಬಿದಿರೆ ಅರಣ್ಯ ಇಲಾಖೆಯ ಅಧಿಕಾರಿ ಶ್ರೀ ಮಂಜುನಾಥ ಇವರು ಪರಿಸರ ಸಂರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡಿದರು. ಪೇಮ್ ಅಡ್ವೆಂಚರ್ ಅಕಾಡೆಮಿಯ ಸಂತೋಚ್ ಪೀಟರ್ ಡಿ’ಸೋಜ ಅವರು ಧನ್ಯವಾದ ಅರ್ಪಿಸಿದರು. ಅಕಾಡೆಮಿಯ ನಿತಿನ್, ಅಜಯ ಕುಮಾರ್, ದ.ಕ. ಜಿಲ್ಲಾ ಗೃಹರಕ್ಷಕರಾದ ಸುನಿಲ್, ದಿವಾಕರ್, ಮಹೇಶ್, ಚೇತನ್, ಸುನಿಲ್ ಕುಮಾರ್ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಪೌರರಕ್ಷಣಾ ತಂಡದ 30 ಮಂದಿ ಕಾರ್ಯಕರ್ತರು ಗಿಡ ನೆಡಲು ಸಹಕಾರ ನೀಡಿದರು. ಸುಮಾರು 100 ಗಿಡಗಳನ್ನು ಕಾಡಿನ ಮಧ್ಯೆ ನೆಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.