ಬೆಂಗಳೂರು (www.vknews.com) : ಮಹಾಮಾರಿ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಮಾರ್ಚ್ ರಿಂದ ಜೂನ್ 18ರ ವರೆಗೆ ಒಟ್ಟು 290,98,14,057 ಕೋಟಿ ರೂ.ಗಳನ್ನು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿದ್ದು, ಆ ಮೊತ್ತದಲ್ಲಿ ಒಂದು ರೂಪಾಯಿಯನ್ನು ಕೂಡಾ ಈವರೆಗೆ ಸೋಂಕು ತಡೆಗಟ್ಟಲು ಖರ್ಚು ಮಾಡಿಲ್ಲ ಎಂಬ ಅಂಶ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷರು ತಾಹೀರ್ ಹುಸೇನ್ ಆರೋಪಿಸಿದ್ದಾರೆ.
ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ಈವರೆಗೆ ಖರ್ಚಾಗಿರುವ ಹಣವೆಷ್ಟು, ಅದರಲ್ಲಿ ರಾಜ್ಯ ಸರ್ಕಾರ ಎಷ್ಟು ಖರ್ಚು ಮಾಡಿದೆ. ಕೇಂದ ಸರ್ಕಾರದಿಂದ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಬೇಕೆಂದು ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಕುರಿತು ಮಾಹಿತಿ ಕೋರಿ ಆರ್.ಟಿ.ಐ ಅಡಿ ಮಾಹಿತಿ ಕೋರಿ ಖುದ್ದು ತಾಹಿರ್ ಹುಸೇನ್ ಸಲ್ಲಿಸಿದ್ದ ಅರ್ಜಿಗೆ ಮುಖ್ಯಮಂತ್ರಿ ಸಚಿವಾಲಯದಿಂದ ವಿವರ ನೀಡಿದ್ದು, ‘ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಚಿಕಿತ್ಸೆ/ ರೋಗ ಹರಡುವುದನ್ನು ತಪ್ಪಿಸಲು ವೆಚ್ಚ ಭರಿಸುತ್ತಿದ್ದು, ಸಿಎಂ ಪರಿಹಾರ ನಿಧಿ ಖಾತೆಯಲ್ಲಿರುವ ಹಣವನ್ನು ಅವಶ್ಯಕ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ’ ಎಂದು ಸ್ಪಷನೆ ನೀಡಲಾಗಿದೆ.
ಮುಖ್ಯಮಂತ್ರಿ ಸಚಿವಾಲಯದ ಈ ಮಾಹಿತಿ ನಿಜಕ್ಕೂ ದಂಗು ಬಡಿಸಿದೆ. “ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತುರ್ತು ಅಗತ್ಯಗಳಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಸರಕಾರ ಆ ಮೊತ್ತದಲ್ಲಿ ಒಂದು ನಯಾಪೈಸೆಯನ್ನು ಘೋಷಿತ ಉದ್ದೇಶಕ್ಕೆ ವೆಚ್ಚ ಮಾಡದೆ ‘ಆಪತ್ ನಿಧಿಯಾಗಿ’ ಕಾಯ್ದಿರಿಸಲಾಗಿದೆ ಎಂದು ಹೇಳಿರುವುದು ಜನಸಾಮಾನ್ಯರಿಗೆ ವಂಚನೆ ಮಾಡಿದಂತಾಗಿದೆ” ಎಂದು ತಾಹಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹರಡುತ್ತಿದೆ. ಸೋಂಕಿನಿಂದ ಇನ್ನೂ ಅನೇಕ ಜನರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಹಳ ಮುಖ್ಯವಾಗಿ ವಲಸೆ ಕಾರ್ಮಿಕರು ಸೇರಿದಂತೆ ಬಡ ಕೂಲಿಗಳ ಗೋಳಿನ ಕತೆಗಳು ಒಂದೆರಡಲ್ಲ. ಹೀಗಿರುವಾಗ ಜನರ ಸಂಕಷ್ಟಕ್ಕೆ ಹಣ ಸಂಗ್ರಹಿಸಿ ಖಾತೆಯಲ್ಲಿ ಉಳಿಸಿಕೊಂಡರೆ ಏನು ಪ್ರಯೋಜನ. ಈ ಹಣವನ್ನು ಯಾವಾಗ ಬಳಕೆ ಮಾಡುವುದು’ ಎಂದು ಅವರು ಪ್ರಶ್ನಿಸಿದ್ದಾರೆ.
ಸೋಂಕು ತಡೆಗಟ್ಟಲು ತುರ್ತು ಅಗತ್ಯಕ್ಕೆ ಸಿಎಂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ನೆರವು ಕೋರಿದ್ದು, ಸರಕಾರ ತುರ್ತು ಅವಶ್ಯಕತೆಗೆ ಮೊತ್ತವನ್ನು ಬಳಕೆ ಮಾಡದೆ, ಈ ಸಂದರ್ಭ ಮುಗಿದ ಬಳಿಕ ಆ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅರ್ಥಹೀನ. ಸಂಗ್ರಹಿಸಿರುವ ಅನುದಾನವನ್ನು ಸಮಯಕ್ಕೆ ಸರಿಯಾಗಿ, ಸಮಪರ್ಕ ರೀತಿಯಲ್ಲಿ ಬಳಕೆ ಮಾಡದಿದ್ದರೆ ಕೋರ್ಟ್ ಮೆಟ್ಟಿಲೇರುವ ಮೂಲಕ ಮತ್ತೊಂದು ಹಂತದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದು ತಾಹೀರ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.