ಲೇಖನ (www.vknews.com) : ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿಯಲ್ಲಿ ತನ್ನ ಪುಟ್ಟ ಪುಟ್ಟ ಕಾಲುಗಳಿಂದ ರಂಗದ ಮೇಲೆ ಕುಣಿದು ಕುಪ್ಪಳಿಸಿದನು ಎಳೆಯ ಬಾಲೆ ನಮ್ಮ ನಂದನೇಶ ಹೆಬ್ಬಾರ್. ತನ್ನ ತೊದಲು ನುಡಿಗಳಿಂದ ಹಾಗು ಪುಟ್ಟ ಪುಟ್ಟ ಮಾತುಗಳಿಂದ ಎಳವೆಯಲ್ಲೇ ಆತ ಆಡುವ ಮಕ್ಕಳು. ತನ್ನ ಪ್ರತಿಭೆಯನ್ನು ಸಾಧಿಸ ಹೊರಟಿರುವ ನಂದನೇಶ ಹೆಬ್ಬಾರ್, ಅನುಭವ ವೃತ್ತಿ ಮೇಳದ ಕಲಾವಿದರ ಜೊತೆಗೆ ಕುಣಿದು ಎಲ್ಲರಂತೆ ತನಗೂ ದಣಿವಿಲ್ಲ ಎಂದು ರಂಗದಲ್ಲಿ ಕುಣಿದು ತೋರಿಸಿ ಕೊಟ್ಟಿದ್ದಾನೆ.
ತಮ್ಮ ಮಕ್ಕಳು ಏನಾದರೂ ಕೀರ್ತಿ ತರುವ ಕೆಲಸ ಮಾಡಿದರೆ ಹೆತ್ತವರಿಗೆ ಆನಂದದ ಪರಿವೆ ಇರಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಯಾರೇ ಕಲಾವಿದರು ಮೈಮರತು ರಂಗದಲ್ಲಿ ಕುಣಿಯುವಾಗ ಪ್ರೇಕ್ಷಕರಿಂದ ಬರುವ ಚಪ್ಪಾಳೆಯೇ ಅವರಿಗೆ ಬಹುಮಾನ ಇದನ್ನು ಕೇಳಿದ ಹೆತ್ತವರಿಗೆ ಆನಂದ. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಶ್ರೀಯುತ ಕೆ. ಸೂರ್ಯನಾರಾಯಣ ಹೆಬ್ಬಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಹೆಬ್ಬಾರ್ ಯವರ ಗರ್ಭಸಂಜಾತನಾಗಿ 25-12-2004ರಲ್ಲಿ ಜನಿಸಿದನು. ನಂದನೇಶ ತನ್ನ ಬಾಲ್ಯದಲ್ಲೇ ಯಕ್ಷಗಾನ ವೇಷಗಳನ್ನು ಮಾಡಿದ್ದಾನೆ. ಇವನು ಈ ದಂಪತಿಗಳಿಗೆ ಒಬ್ಬನೆ ಮಗನಾದರೂ ಬಾಲ್ಯದಲ್ಲೇ ಯಕ್ಷಗಾನ ಕಲಿಕೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದನು. ಹೀಗೆ ಕಲೆಯಲ್ಲಿ ಆಸಕ್ತಿ ಬೆಳಸಿ ಯಕ್ಷಗುರು ಹಿರಿಯರು ಆದ ಗುರು ಮೈರ್ಪಾಡಿ ಶಂಕರ ನಾರಾಯಣ ಹಾಗೂ ಶರತಚಂದ್ರ ಇವರಿಂದ ಪ್ರಾಥಮಿಕ ತೆಂಕುತಿಟ್ಟಿನ ಹೆಜ್ಜೆಯನ್ನು ಪಣಂಬೂರು ವೆಂಕಟ್ರಾಯ ಐತಾಳ್ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಕಲಿತನು. ತನಗೆ 5 ವರುಷ ಇರುವಾಗ ಗುರುಗಳ ಮಾರ್ಗದರ್ಶನದಿಂದ ದೇವೇಂದ್ರನ ಬಲ ಅಗ್ನಿಯಾಗಿ ನಂದನೇಶ ರಂಗ ಪ್ರವೇಶ ಮಾಡಿದನು. ಆ ಸಮಯದಲ್ಲಿ ಯಕ್ಷತಾರೆ ಶ್ರೀಮತಿ ಸುಷ್ಮಾ ಮಾರ್ಪಾಡಿಯವರು ಸಹ ಇವನಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಇಂದು ಶುದ್ಧ ಸುಸಂಕೃತ ಕನ್ನಡ ಉಳಿದದ್ದು ಯಕ್ಷಗಾನ ಮಾತ್ರ ಎಂದು ಬಲ್ಲವರು ಹೇಳಿದ್ದಾರೆ. ಹಾಗೆಯೇ ಇತರ ಭಾಷೆಯಲ್ಲೂ ಸಹ ಯಕ್ಷಗಾನ ಇತ್ತೀಚಿನ ದಿನಗಳಲ್ಲಿ ಪ್ರದರ್ಶನಗೊಂಡಿವೆ. ಈ ನಮ್ಮ ನಂದನೇಶ್ ಹೆಬ್ಬಾರ್ ಸಹ ಇಂಗ್ಲಿಷ್, ತುಳು ಭಾಷೆಯಲ್ಲೂ ಸಹ ಯಕ್ಷಗಾನದ ಪಾತ್ರಗಳನ್ನೂ ಮಾಡಿದ್ದಾನೆ. ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಹಾಗು ಕಳವಾರು ದೇವಸ್ಥಾನದಲ್ಲಿ ಮತ್ತು ಲಕ್ಷ್ಮೀವೆಂಕಟರಮಣ ದೇವಸ್ಥಾನ ಚೇಳ್ವಾರು ಕೊಲ್ಯ ಗ್ರಾಮದಲ್ಲಿ ನಡೆದ ಕುಶ-ಲವ ಕಾಳಗದಲ್ಲಿ “ನೋಡಿರೈ ಬಾಲಕರೆ ನೀವು” ಎಂಬ ಲವನಾಗಿ, ಕಾಸರಗೋಡಿನಲ್ಲಿ ಶ್ರೀ ಮಹಿಷಮರ್ದಿನಿ ಪ್ರಸಂಗದಲ್ಲಿ “ಹರಿಹರ ಬ್ರಹ್ಮರೆಂದಿರಿಸಿರೆ ನಾಮವ” ಶ್ರೀದೇವಿಯಾಗಿ, ಹಾಗೂ ಮಾನಿಷಾದ ಪ್ರಸಂಗದಲ್ಲಿ “ಗಂಡು ಕ್ರೌಂಚ ಹೆಣ್ಣು ಕ್ರೌಂಚ ವನ್ನು ಬಳಿಗೆ ಕರೆಯಿತು” ಎಂದು ಪಿಂಗಳಾಕ್ಷನಾಗಿ ಪಣಂಬೂರು ದೇವಸ್ಥಾನದಲ್ಲಿ ನಂದನೇಶ ಹೆಬ್ಬಾರ್ ಮಾಡಿದ್ದಾರೆ. ಅಲ್ಲದೇ ಮಂಗಳೂರು ಪುರಭವನದಲ್ಲಿ ನಡೆದ ಇಂಗ್ಲೀಷ್ ಯಕ್ಷಗಾನದಲ್ಲಿ ಷಣ್ಮುಖ, ಮಡಿಪುವಿನಲ್ಲಿ ಕೀಚಕ ವಧೆಯ ಪ್ರಸಂಗದಲ್ಲಿ ಶೈರೇಂದ್ರಿಯ ಸಖಿ, ದೇವೇಂದ್ರನ ಬಲ ವಾಯುವಾಗಿ ಸಂಘನಿಕೇತನದಲ್ಲಿ ನಂದನೇಶ ವೇಷ ಮಾಡಿದ್ದಾನೆ.
ತೆಂಕಿನ ಪ್ರಸಿದ್ಧ ಮೇಳವಾದ ಬೆಂಕಿನಾಥೇಶ್ವರ ಮೇಳದಲ್ಲಿ ತುಳು ಪ್ರಸಂಗದಲ್ಲಿ ಕಮಲ ಕುಮಾರನ ಪಾತ್ರದಲ್ಲಿ ಹಿರಿಯ ಕಲಾವಿದರೊಂದಿಗೆ ರಂಗದಲ್ಲಿ ಕುಣಿದ್ದಾನೆ. ಮುರಾಸುರ ವಧೆ ಪ್ರಸಂಗದಲ್ಲಿ ಗರುಢನಾಗಿ ರಂಗವೇರಿದರೆ, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧಕ್ಷಾಧ್ವರ ಹಾಗು ಅತಿಕಾಯ ಮೋಕ್ಷದ ಅಂಗಧನಾಗಿ, ನಂದನೇಶ ಅಭಿನಯಿಸಿ ಶ್ರೀ ಮಠದ ಸ್ವಾಮಿಯವರ ಆಶೀರ್ವಾದ ಪಡೆದಿದ್ದಾನೆ. ಹಾಗೆ ಶೃಂಗೇರಿ ಶಾರದಾಂಬ ಶಾರದಾ ಪೀಠದಲ್ಲೂ ಸಹ ಧಕ್ಷ ಯಜ್ಞ ಪ್ರಸಂಗದಲ್ಲಿ ರಂಗವೇರಿದ್ದಾನೆ. ಹೀಗೆ ಪಣಂಬೂರಿನ ದೇವಸ್ಥಾನದಲ್ಲಿ ತುಳಸಿ ಜಲಂಧರ ಪ್ರಸಂಗದಲ್ಲಿ ಗಣಪತಿಯಾಗಿ ಪಾತ್ರಕ್ಕೆ ಜೀವತುಂಬಿದ್ದಾನೆ. ಬೆಂಗಳೂರು ಶಂಕರ ಮಠದಲ್ಲಿ ಮಹಿಷಮರ್ಧಿನಿ ಪ್ರಸಂಗದಲ್ಲಿ ದೇವಿಯಾಗಿ, ಬೆಂಗಳೂರಿನ ಕ್ರಿಸ್ತ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಯಕ್ಷಗಾನದ್ದಲ್ಲೂ ತನ್ನ ಪ್ರತಿಭೆಯನ್ನು ತೋರಿಸಿದ್ದಾನೆ. ಅಲ್ಲದೆ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದಲ್ಲಿ ದೇವಿ ಮಹಾತ್ಮೆಯ “ಅರರೆ ಏನಾ ಆಶ್ಚರ್ಯವೀಪರಿ ತರುಣಿಯೋರ್ವಳು ಮರೆಸಿ ನಿಜವನು” ಸುಪಾರ್ಶ್ವಕ ಮುನಿಯಾಗಿ, ಉಡುಪಿ ಕೃಷ್ಣ ಮಠ ರಾಜಾಂಗಣದಲ್ಲಿ ಬಲರಾಮನಾಗಿ, ಅಲ್ಲದೆ ಹೊರ ರಾಜ್ಯದ ಕೇರಳದ ಕೊಲ್ಲಂಗಾನದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗೆಯಾಗಿ ಬಾಲಕ ನಂದಾನೇಶ ಹೆಬ್ಬಾರ್ ಮನ ದಣಿಯದಂತೆ ಪ್ರೇಕ್ಷಕರ ಮುಂದೆ ಕುಣಿದ್ದಿದ್ದಾನೆ.
ಪ್ರಸ್ತುತ ವಿಧ್ಯಾಭ್ಯಾಸದಲ್ಲೂ ಸಹ ನಂದನೇಶ ತರಗತಿಯಲ್ಲಿ ಪ್ರಥಮ ದ್ವಿತೀಯ ಶ್ರೇಣಿಯಲ್ಲಿ ಹಾಗು ಇತರ ಚಟುವಟಿಯಲ್ಲೂ ಸಹ ಹಲವಾರು ಬಹುಮಾನವನ್ನು ಪಡೆದಿದ್ದಾನೆ. ಈಗ ಸುರತ್ಕಲ್ ಏನ್ಐಟಿಕೆ ಆಂಗ್ಲ ಮಾಧ್ಯಮ ಶ್ರೀನಿವಾಸ ನಗರ ಸುರತ್ಕಲ್ ಶಾಲೆಯಲ್ಲಿ ಒಂಬತ್ತನೆಯ ತರಗತಿಯ ವಿದ್ಯಾರ್ಥಿಯಾಗಿ ಓದುತ್ತಿದ್ದಾನೆ. ಅಲ್ಲದೆ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ “ಯಕ್ಷ ಕಿಶೋರ-2017″ನೇ ಸಾಲಿನ ಪ್ರಶಸ್ತಿಯನ್ನು, ಹಾಗು 2018ನೇ ಸಾಲಿನ ಪಣಂಬೂರಿನಲ್ಲಿ ನಡೆದ “ಸಂಕ್ರಾಂತಿ ಉತ್ಸವ”ದಲ್ಲಿ 2ನೇ ಬಹುಮಾನ ಈ ಬಾಲ ಪ್ರತಿಭೆ ನನ್ನದಾಗಿಸಿಕೊಂಡಿದ್ದಾನೆ. ಹೀಗೆ ಹಲವಾರು ಹಿರಿಯ ಕಲಾವಿದರಾದ ಶಂಕರನಾರಾಯಣ ಮಾರ್ಪಾಡಿ, ಸುಷ್ಮ ಮಾರ್ಪಾಡಿ, ಡಾ. ಸತ್ಯಮೂರ್ತಿ ಐತಾಳ್, ಸಂತೋಷ ಐತಾಳ್, ರವಿ ಅಲೆಯೂರು, ಶ್ರೀ ಈಶ್ವರ ಭಟ್, ಶರತ ಚಂದ್ರ, ಅಭಿನವಿ ಹೊಳ್ಳ ಮುಂತಾದ ಹಿರಿಯ ಕಿರಿಯ ಕಲಾವಿದರರೊಂದಿಗೆ ನಮ್ಮ ನಂದನೇಶ ಹೆಬ್ಬಾರ್ ದಣಿವಿಲ್ಲದೆ ರಂಗದಲ್ಲಿ ಕುಣಿದಿದ್ದಾನೆ. ಹೀಗೆ ಗುರು ಹಿರಿಯರ ಪ್ರೋತ್ಸಾಹ ಈ ಬಾಲ ಚೇತನನಿಗೆ ಸಿಗಲಿ ನನ್ನ ಆರಾಧ್ಯದೇವಿಯಾದ ಜಗನ್ಮಾತೆ ಚಾರ ಮಹಿಷಮರ್ದಿನಿಯಮ್ಮ ಹಾಗೂ ಕಾಲ ದೇವಿ ಸರಸ್ವತಿ ಕೃಪೆ ಇವನಿಗೆ ಇರಲಿ ಮುಂದೆ ಇವನ ಕೀರ್ತಿ ಗಗನದೆತ್ತರಕ್ಕೆ ಏರಲಿ ಎಂದು ಅಶಿಸೋಣ.
– ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.