(www.vknews.com) : ಕರ್ನಾಟಕದ ಏಕೀಕರಣದ ನಂತರ ಸರ್ಕಾರವು ರಾಜ್ಯದಲ್ಲೆಲ್ಲಾ ಅಸ್ತಿತ್ವದಲ್ಲಿರುವ ಕೃಷಿ ಸಂಬಂಧಿ ಕಾನೂನು ಹಾಗೂ ಪದ್ಧತಿಗಳಿಗೆ ಒಂದು ಸರಿಯಾದ ರೂಪಕೊಡುವ ಉದ್ದೇಶದಿಂದ ಮತ್ತು ೫೦ರ ದಶಕದ ಸಮಾಜವಾದಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ಹಲವಾರು ರೈತ ಚಳುವಳಿಗಳು ಅದರಲ್ಲೂ ಮುಖ್ಯವಾಗಿ ಕಾಗೋಡು ಸತ್ಯಾಗ್ರಹ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಸರ್ಕಾರವು ಇಂಥ ಸಾಮೂಹಿಕ ಒತ್ತಾಯಕ್ಕೆ ಮಣಿದು ಭೂ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರವು 03 ಉದ್ದೇಶಗಳನ್ನು ನಿಗದಿಪಡಿಸಿತ್ತು. ಅವುಗಳೆಂದರೆ ಮೊದಲನೆಯದಾಗಿ ಜಮಿನುದಾರಿ ಪದ್ಧತಿಯನ್ನು ರದ್ದುಗೊಳಿಸುವುದು, ಇನಾಂದರಿ ಹಾಗೂ ಅನುಪಸ್ಥಿತ ಭೂ ಮಾಲೀಕರು ಮುಂತಾದ ಮಧ್ಯವರ್ತಿಗಳನ್ನು ತೆಗೆದುಹಾಕುವುದು. ಎರಡನೇಯದಾಗಿ ಗೇಣಿದಾರಿ ಪದ್ಧತಿಯ ನಿಯಂತ್ರಣ ಮತ್ತು ಗೇಣಿ ಪದ್ಧತಿಯನ್ನು ನಿರ್ಮೂಲನೆಗೊಳಿಸುವುದು. ಮತ್ತು ಮೂರನೆಯದಾಗಿ ಕೃಷಿ ಕುಟುಂಬಗಳು ಹೊಂದಿರಬಹುದಾದ ಭೂಮಿಯ ಗರಿಷ್ಠಮಿತಿಯನ್ನು ನಿಗದಿಗೊಳಿಸುವ ಉದ್ದೇಶದಿಂದ ” ಮೈಸೂರು ಗೇಣಿ ಪದ್ಧತಿ ಹಾಗೂ ಕೃಷಿ ಭೂಮಿ ಕಾನೂನು ಸಮಿತಿ ಎಂಬ ಉನ್ನತ ಸಮಿತಿಯನ್ನು 1957 ರಲ್ಲಿ ಬಿ.ಡಿ.ಜತ್ತಿಯವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿತು.
ಈ ವರದಿಯನ್ನಾಧರಿಸಿ, 1958ರಲ್ಲಿ ಶಾಸನ ಸಭೆಯಲ್ಲಿ ಮಂಡಿಸಿ ಸಮ್ಮತಿ ಪಡೆಯಲಾಯಿತು. ಆದರೆ, 1962ರಲ್ಲಿ ಇದಕ್ಕೆ ರಾಷ್ಟ್ರಪತಿಯವರ ಸಮ್ಮತಿ ದೊರೆಯಿತಾದರೂ ಇದು 1965ರಲ್ಲಿ ಕಾರ್ಯರೂಪಕ್ಕೆ ಬಂದಿತು. ಅಂದರೆ ಭೂ ಸುಧಾರಣೆ ಸಮಿತಿ ರಚನೆಯಾದ ೮ ವರ್ಷಗಳ ನಂತರ ಕಾನೂನಾಗಿ ಜಾರಿಗೊಂಡಿದ್ದರಿಂದಾಗಿ ಈ ಅವಧಿ ಜಮೀನುದಾರರಿಗೆ ಒಂದು ವರದಾನವಾಯಿತು. ಏಕೆಂದರೆ ಈ ಅವಧಿಯಲ್ಲಿ ಜಮೀನುದಾರರಿಗೆ ಗೇಣಿದಾರರನ್ನು ಒಕ್ಕಲೆಬ್ಬಿಸುವ ಮೂಲಕ ತಮ್ಮ ಭೂಮಿಯನ್ನು ಹಿಂತಿರುಗಿ ಪಡೆಯುವಲ್ಲಿ ಸಫಲರಾದರು. ಈ ಕಾಯ್ದೆ ನಿಗಧಿಪಡಿಸಿದ ಗರಿಷ್ಠ ಮಿತಿ 432 ಎಕರೆಗಳಷ್ಟು ದೊಡ್ಡ ಪ್ರಮಾಣದ್ದಾಗಿದ್ದರಿಂದ ಈ ಕಾಯ್ದೆಯು ಗೇಣಿದಾರರಿಗೆ ಒಂದು ಪರಿಣಾಮಕಾರಿ ಕಾಯ್ದೆಯಾಗಿ ರೂಪುಗೊಳ್ಳುವಲ್ಲಿ ವಿಫಲವಾಯಿತು.
1962ರ ಭೂ ಸುಧಾರಣಾ ಕಾಯ್ದೆಯು ಒಂದು ದುರ್ಬಲ ಭೂ ಸುಧಾರಣಾ ಕಾನೂನಾಗಿದ್ದರಿಂದಾಗಿ ದೇವರಾಜು ಅರಸು ಅವರು 9962ರ ಕಾಯ್ದೆಗೆ ಸಮಗ್ರ ತಿದ್ದುಪಡಿ ತರುವ ಪ್ರಯತ್ನ ಕೈಗೊಂಡರು, 1972 ರಲ್ಲಿ 1961ರ ಕಾಯ್ದೆಯನ್ನು ಅಧ್ಯಯನ ಮಾಡಿ ಅದಕ್ಕೆ ಅಗತ್ಯವಿರುವ ತಿದ್ದುಪಡಿಗಳನ್ನು ಸೂಚಿಸಲು ಜಾಯಿಂಟ್ ಸೆಲೆಕ್ಟ್ ಕಮಿಟಿ (ಜಂಟಿ ಆಯ್ಕೆ ಸಮಿತಿ) ಯನ್ನು ನೇಮಿಸಿದರು. ಪ್ರಗತಿಪರ ನಾಯಕರುಗಳ ಸಹಕಾರದಿಂದ 1961ರ ಸುಧಾರಣಾ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರುವ ಮೂಲಕ 1974ರ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
ಈ ಕಾಯಿದೆಯಿಂದಾದ ಪರಿಣಾಮಗಳನ್ನು ನೋಡುವುದಾದರೆ ಕೃಷಿ ಗಣತಿಯ ಪ್ರಕಾರ 1971ರಲ್ಲಿ ಕರ್ನಾಟಕದ ಒಟ್ಟು 35,51230 ಕೃಷಿ ಗುತ್ತಿಗೆಗಳಲ್ಲಿ 4,85,446 ಗೇಣಿದಾರರು 1974 ರ ಭೂ ಸುಧಾರಣಾ ಕಾಯಿದೆಯ ಸಹಾಯದಿಂದ ಭೂಮಿಯ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು. ಹೆಚ್ಚುವರಿ ಭೂಮಿಯ ಹಂಚಿಕೆಯಿಂದ ಶೇ15ರಷ್ಟು ಗ್ರಾಮೀಣ ಜನತೆಗೆ ಈ ಕಾಯಿದೆಯಿಂದ ಲಾಭವಾಯಿತು. ಅನಾದಿ ಕಾಲದಿಂದಲೂ ಗೇಣಿದಾರ ಅಥವಾ ಭೂ ರಹಿತರಾಗಿದ್ದವರು ಮತ್ತು ಭೂಮಿಯಿಂದ ಸಾಕಷ್ಟು ದೂರವಿದ್ದ ಪರಿಶಿಷ್ಟ ಜಾತಿ, ಪಂಗಡದವರು ಈ ಶಾಸನದ ಪ್ರಯೋಜನ ಪಡೆದು ಅಲ್ಪಸ್ವಲ್ಪ ಭೂ ಒಡೆತನ ಪಡೆದುಕೊಂಡರು.
ದಿನಾಂಕ 11-06-2020 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಸೆಕ್ಷನ್ 79ಎ, ಬಿ,ಸಿ ಮತ್ತು 80ನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸುವುದು ಹಾಗೂ ಪ್ರಸ್ತುತ ಬಾಕಿ ಉಳಿದಿರುವ 79ಎ ಮತ್ತು 79ಬಿ ಪ್ರಕರಣಗಳನ್ನು ವಜಾ ಮಾಡುವುದು, ಸೆಕ್ಷನ್ 63 ರಡಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಜಮೀನಿನ ಗರಿಷ್ಠ ಮಿತಿ 10 ಯುನಿಟ್ ನಿಂದ 20 ಯುನಿಟ್ಗೆ ಹೆಚ್ಚಿಸಲು ಮತ್ತು 5ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಭೂಮಿಯ ಮಿತಿಯನ್ನು 20 ಯುನಿಟ್ ನಿಂದ 40 ಯುನಿಟ್ ಗೆ (ಯುನಿಟ್ ಎಂದರೆ ಖುಷ್ಕಿಯಾದರೆ 54 ಎಕರೆ, ತರಿಯಾದರೆ 25 ಎಕರೆ, ಬಾಗಾಯ್ತು ಆದರೆ 13 ಎಕರೆ) ಹೆಚ್ಚಿಸಲು ತೀರ್ಮಾನಿಸಿರುವುದರಿಂದ ಕೃಷಿ ಭೂಮಿ ಹಣವಂತರ ಪಾಲಾಗಬಹುದೇ ಎಂಬ ಆತಂಕವಿದೆ. ದೇಶದ ಬೇರೆ ರಾಜ್ಯಗಳಲ್ಲಿ ಕುಟುಂಬವು ಭೂಮಿ ಹೊಂದಬಹುದಾದ ಮಿತಿ
ರಾಜ್ಯಗಳು ಭೂಮಿಯು ಹೊಂದುವ ಮಿತಿ ಕೇರಳ 20 ಎಕರೆ ತಮಿಳುನಾಡು 30 ಎಕರೆ ಆಂಧ್ರಪ್ರದೇಶ 54 ಎಕರೆ ಬಿಹಾರ 45 ಎಕರೆ
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಹಣ ಇದ್ದವರು ಎಷ್ಟು ಬೇಕಾದರೂ ಭೂಮಿಯನ್ನು ಪಡೆಯಬಹುದು ಎನ್ನುವ ನಿಯಮ ಜಾರಿಗೆ ತರಲು ಹೊರಟಿದೆ. ಕೃಷಿ ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ವಲಯಕ್ಕೆ ಹಣ ಉಳ್ಳವರನ್ನು ಸೇರಿಸಿ ಅವರಿಂದ ರೈತರ ಭೂಮಿ ಕಸಿಯುವ ಮೂಲಕ ಅನ್ನದಾತರ ಆರ್ಥಿಕ ಚೈತನ್ಯವನ್ನು ಕಳೆದುಕೊಳ್ಳಬಹುದು, ಕಾರ್ಪೋರೇಟ್ ಕಂಪನಿಗಳು ಕೃಷಿ ಉತ್ಪಾದನೆಗೆ ಕೈ ಹಾಕಲು ಸಾಧ್ಯವಾಗಿರಲಿಲ್ಲ, ಈ ಕಾಯ್ದೆ ತಿದ್ದುಪಡಿಯಿಂದ ಕಾರ್ಪೋರೇಟ್ ಕಂಪನಿಗಳು ಕೃಷಿ ಭೂಮಿಗೆ ಲಗ್ಗೆ ಹಾಕುತ್ತವೆ. ಕೃಷಿ ಕ್ಷೇತ್ರ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತದೆ ಎಂಬ ಆತಂಕ ರೈತರಲ್ಲಿದೆ.
ಕರ್ನಾಟಕದಲ್ಲಿ ದೊಡ್ಡ ರೈತ ವರ್ಗದವರು ಬಲಿಷ್ಠ ಗುಂಪುಗಳಾಗಿರುವ ಲಿಂಗಾಯಿತ ಹಾಗೂ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದಾರೆ. 2015 -16 ರ ಕೃಷಿ ಗಣತಿ ಪ್ರಕಾರ ರಾಜ್ಯದಲ್ಲಿ 86.81 ಲಕ್ಷ ರೈತರು 2 ಕೋಟಿ 60 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕುಟುಂಬವೊಂದು ಸರಾಸರಿ 3 ಎಕರೆ ಭೂಮಿ ಹೊಂದಿದೆ. 2015-16 ರಲ್ಲಿ ಪರಿಶಿಷ್ಟ ಜಾತಿಯ 67,300 ಕುಟುಂಬಗಳು 243760 ಎಕರೆ ಭೂಮಿಯ ಒಡೆತನ ಹೊಂದಿದ್ದರೆ, ಪರಿಶಿಷ್ಟ ಪಂಗಡದ 52100 ಕುಟುಂಬಗಳು 160600 ಎಕರೆ ಭೂಮಿಯ ಓಡೆತನವನ್ನು ಹೊಂದಿವೆ. ಅಂದರೆ ಸುಮಾರು 4 ಕೋಟಿ ಜನ ಕೃಷಿ ಚಟುವಟಿಕೆಯಲ್ಲಿ ನೇರವಾಗಿ ತೊಡಗಿದ್ದಾರೆ. ಸಣ್ಣ ಪ್ರಮಾಣದ ಭೂಮಿಯ ಆಸರೆ ಇದ್ದರೂ ಕೂಡ ರೈತಾಪಿ ಕುಟುಂಬಗಳು ಜೀವನದ ಬಿಕ್ಕಟ್ಟನ್ನು ನಿಭಾಯಿಸುತ್ತವೆ. ಇಂದಿನ ಜೀವನದ ಬಿಕ್ಕಟ್ಟಿನಿಂದ ಇರುವ ಅಲ್ಪಸ್ವಲ್ಪ ಭೂಮಿಯನ್ನು ಮಾರಾಟ ಮಾಡಿಕೊಂಡು ನಗರ ವಲಸೆ ಉಲ್ಪಣ ಪ್ರಾರಂಭವಾಗುತ್ತದೆ.
ಇಂತಹ ತಿದ್ದುಪಡಿಗಳಿಂದ ಸಂವಿಧಾನ ನೀಡಿರುವ ಜೀವಿಸುವ ಹಕ್ಕು ಪರಿಣಾಮಕಾರಿಯಾಗಿ ಇಲ್ಲದಿರುವುದನ್ನು ಪುನರ್ ರೂಪಿಸುತ್ತದೆ. ಬಹುತೇಕ ಜನ ತಮ್ಮ ದಿನನಿತ್ಯದ ಬದುಕಿಗಾಗಿ ಹೋರಾಡುತ್ತಿದ್ದು, ಬದುಕಲು ಬೇಕಾದ ಸಂಪನ್ಮೂಲಗಳನ್ನು (ನೀರು, ಅರಣ್ಯ ಮತ್ತು ಭೂಮಿ) ಪಡೆದುಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ.
ಭೂಮಿಯ ಮೇಲಿನ ಒತ್ತಡವನ್ನು ಹೆಚ್ಚಿಸಲು ಇರುವ ಕಾರಣಗಳು ಯಾವುವು ಎಂಬುದನ್ನು ಗಮನಿಸುವುದಾದರೆ – ಗ್ರಾಮೀಣ ಪ್ರದೇಶಗಳಲ್ಲಿ ಕೆಲವೇ ಉದ್ಯೋಗಾವಕಾಶವಿರುವುದರಿಂದ ಕುಶಲತೆ ಹೊಂದಿರುವ ಕೆಲಸಗಾರರು ಕೃಷಿ ಕೂಲಿಗಾಗಿ (ಉದಾಹರಣಗೆ ಬಡಗಿಗಳು, ಕಮ್ಮಾರರು, ನೇಕಾರರು ಮತ್ತಿತರರು) ಭೂಮಿಯನ್ನೇ ಅವಲಂಬಿಸಿದ್ದಾರೆ. ತಮ್ಮ ಕೃಷಿ ಭೂಮಿಯನ್ನು ಇನ್ನಷ್ಟು ವಿಸ್ತರಿಸಲು ತಮಗೆ ಇನ್ನಷ್ಟು ಭೂಮಿ ಬೇಕು ಎಂದು ಭೂಮಾಲಿಕರು ಮುಂದಾಗಿರುವುದು. ಕೈಗಾರಿಕೆಗಳು ಮತ್ತು ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಇನ್ನಷ್ಟು ಹೆಚ್ಚು ಭೂಮಿ ಬೇಕೆಂದು ಆಗ್ರಹಿಸುವುದು. ಇತ್ತೀಚಿನ ದಿನಗಳಲ್ಲಿ ತಮ್ಮ ವಿರಾಮದ ವೇಳೆಯನ್ನು ಕಳೆಯಲು ಮತ್ತು ವಸತಿ ಪ್ರದೇಶದ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಹಣವಿರುವವರು ಭೂಮಿ ಮೇಲೆ ಬಂಡವಾಳ ಹೂಡುವುದು. ಈಗ ಭೂಮಿ, ರಿಯಲ್ ಎಸ್ಟೇಟ್ ಮಾರುಕಟ್ಟೆಯ ಭಾಗವಾಗಿರುವುದರಿಂದ ಹಾಗೂ ಕೃಷಿಯನ್ನು ಒಂದು ಮೌಲ್ಯದ ದೃಷ್ಟಿಯಿಂದ ನೋಡಲಾಗುತ್ತಿಲ್ಲ.
ಪ್ರಸ್ತುತ ಸರ್ಕಾರಗಳು ರಾಜ್ಯದ ವಿವಿಧ ಗುಂಪುಗಳಿಗೆ ಭೂ ಸುಧಾರಣೆಗೆ ಮಾಡಬೇಕಾದ ಮಾಡಬೇಕಾದ ಅಗತ್ಯ ಸೌಲಭ್ಯಗಳೆಂದರೆ – ಅನೇಕ ಜನ ಹಲವಾರು ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಭೂಮಿಯು ಯಾವುದೇ ರೀತಿಯ ವಿವಾದಕ್ಕೆ ಒಳಗಾಗದಿದ್ದರೆ ಅಂತಹವರ ಹೆಸರಿಗೆ ಭೂಮಿಯನ್ನು ನೊಂದಣಿ ಮಾಡಿಸಿ ಹಕ್ಕುಪತ್ರ ನೀಡಬೇಕು. ಅನೇಕ ಜನರು ತಮ್ಮ ಭೂಮಿ ಬಗ್ಗೆ ದಾಖಲೆ ಪತ್ರಗಳನ್ನು ಹೊಂದಿದ್ದರೂ ಅದನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಆಡಳಿತ ಹೊಣೆಗಾರಿಕೆ ಹೊರಬೇಕು. ಅನೇಕ ಜನ ತಮ್ಮ ಸಮುದಾಯದ ಬಲಾಡ್ಯರ ಸಂಚು ಮತ್ತು ದಬ್ಬಾಳಿಕೆಯಿಂದ ತಮ್ಮ ಜಮೀನನ್ನು ಕಳೆದುಕೊಂಡಿರುತ್ತಾರೆ. ಇದು ಕಾನೂನು ಪಾಲನೆಯ ವಿಷಯವಾಗಿದ್ದು, ಆಡಳಿತ ವ್ಯವಸ್ಥೆ ಕಾಲಮಿತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ ಮೂಲ ಜಮೀನುದಾರರಿಗೆ ಅದರ ಒಡೆತನವನ್ನು ಕೊಡಿಸಬೇಕು. ಬ್ಯಾಂಕುಗಳು ಹರಾಜು ಹಾಕಿದಾಗ ಬೇನಾಮಿ ವ್ಯವಹಾರದಿಂದ ಅನೇಕ ಜನ ತಮ್ಮ ಜಮೀನನ್ನು ಕಳೆದುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಆಡಳಿತ ಮೂಲ ಮಾಲಿಕರನ್ನು ಪತ್ತೆಹಚ್ಚಿ ಅವರಿಗೆ ಜಮೀನು ಪುನಃ ಸೇರುವಂತೆ ಕ್ರಮ ತೆಗೆದುಕೊಳ್ಳಬೇಕು. ಪ್ರಗತಿಪರ ಕಾಯಿದೆಯಾದ ಭೂಮಿತಿ ಗೇಣಿದಾರ ಗಳನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತಂದಿಲ್ಲ. ಈ ಕಾಯಿದೆಗಳನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತಂದರೆ ಲಕ್ಷಾಂತರ ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಬಹುದು.
ರಾಜ್ಯದಲ್ಲಿ ಬಡವರಿಗೆ ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಮೀಸಲಿಟ್ಟಿರುವ ಎಲ್ಲ ಭೂಮಿಯನ್ನು ತಕ್ಷಣ ಗುರುತಿಸಿ ಅರ್ಹ ಭೂಮಿಯನ್ನು ತಕ್ಷಣ ಗುರುತಿಸಿ ಅರ್ಹ ಭೂ ರಹಿತರಿಗೆ ವಿತರಿಸಬೇಕು. ವಶಪಡಿಸಿಕೊಂಡ ಭೂಮಿಯ ಬದಲಿಗೆ ಭೂಮಿಯನ್ನು ಕೊಡದೆ, ಭೂರಹಿತರಿಗೆ ಹಂಚಿದ್ದ ಭೂಮಿಯನ್ನು ಎಸ್ಇಝಡ್ ಅಥವಾ ಇನ್ನೀತರ ಮೂಲ ಸೌಲಭ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ ಜಮೀನು ಅವಲಂಬನೆಯಿಂದ ತಮ್ಮ ಜೀವನ ಮಟ್ಟವನ್ನು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದ ಜನರ ಮೇಲೆ ದೌರ್ಜನ್ಯ ನಡೆಸಿದಂತಾಗುತ್ತದೆ.
ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜನರ ಹಿತದೃಷ್ಟಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಇರುವ ವಿವಾದಗಳನ್ನು ತಕ್ಷಣ ಪರಿಹರಿಸಬೇಕು. ಭೂದಾನದ ಜಮೀನನ್ನು ಗುರುತಿಸುವುದು, ವಿತರಿಸುವುದು ಮತ್ತು ಇತ್ಯಾರ್ಥಪಡಿಸುವುದರ ಮೂಲಕ ಭೂದಾನ ಭೂಮಿಯ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರತಿಯೊಂದು ಗ್ರಾಮದ ಭೂ ದಾಖಲೆಗಳನ್ನು ಪಾರದರ್ಶಕಗೊಳಿಸಬೇಕು. ಭೂಮಿತಿ ಕಾಯಿದೆಯನ್ನು ಜಾರಿಗೊಳಿಸುವಾಗ ಸಂಭವಿಸಬಹುದಾದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮ ಜಾರಿಯಾಗುವಾಗ ಅನುಸರಿಸುವ ಸಾಮಾಜಿಕ ಆಡಿಟ್ ನಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಎಲ್ಲಿ ಜಮೀನಿಗೆ ನೀರಾವರಿ ಸೌಲಭ್ಯವಿರುತ್ತದೆಯೋ ಅಲ್ಲಿ ಭೂಮಿತಿ ಕಾಯಿದೆಯನ್ನು ಜಾರಿಗೊಳಿಸಿದ ನಂತರ ಉಳಿಯುವ ಭೂಮಿಯನ್ನು ಮರು ವಿತರಣೆ ಮಾಡಬೇಕು. ಎಲ್ಲಾ ಪ್ಲಾಂಟೇಷನ್ ಕಂಪನಿಗಳಲ್ಲಿರುವ ಹೆಚ್ಚುವರಿ ಜಮೀನನ್ನು ಪಡೆದುಕೊಂಡು ಪುನರ್ ವಿಂಗಡಣೆ ಮಾಡಬೇಕು.
ಕಂಪನಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಉಪಯೋಗಿಸದ ಭೂಮಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕು. ಭೂಮಿಯನ್ನು ಪಾಳುಬಿಡುವುದನ್ನು ನಿಷೇಧಿಸಬೇಕು ಮತ್ತು ಭೂಮಿಯನ್ನು ಭೂ ರಹಿತರಿಗೆ ಗುತ್ತಿಗೆ ಆಧಾರದಲ್ಲಿ ಕೊಡುವುದನ್ನು ಪ್ರೋತ್ಸಾಹಿಸಬೇಕು. ಭೂ ಮಿತಿ ಕಾಯಿದೆಯನ್ನು ಉಲ್ಲಂಘಿಸಿ ಕೆಲವು ವ್ಯಕ್ತಿಗಳು ಅಥವಾ ಕುಟುಂಬಗಳು ದೇಶದ ವಿವಿಧ ಪ್ರದೇಶಗಳಲ್ಲಿ ಬೇರೆಯವರ ಹೆಸರಿನಲ್ಲಿ ಜಮೀನನ್ನು ಒಟ್ಟು ಮಾಡಿಕೊಂಡು ಇಟ್ಟುಕೊಳ್ಳುವುದನ್ನು ನಿಷೇಧಿಸಲು ರಾಷ್ಟ್ರೀಯ ದಾಖಲೆ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎಲ್ಲ ರೀತಿಯ ಗೈರು ಭೂ ಮಾಲಿಕತ್ವವನ್ನು ನಿಷೇಧಿಸಬೇಕು. ಫಾರಂ ಹೌಸ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಬಾರದು ಮತ್ತು ಇದರಿಂದ ದೊರೆಯುವ ಜಮೀನನ್ನು ಆದ್ಯತೆ ಮೇಲೆ ಆಹಾರಧಾನ್ಯ ಬೆಳೆಯಲು ಭೂ ರಹಿತರಿಗೆ ದೊರೆಯುವಂತೆ ಮಾಡಬೇಕು. ಭೂ ರಹಿತರಿಗೆ ಸಾಕಷ್ಟು ಭೂಮಿಯನ್ನು ವಿತರಿಸಲು ಅನುಕೂಲವಾಗುವಂತೆ ಈಗಿನ ಭೂ ಮಿತಿ ಕಾಯಿದೆಯನ್ನು ಪುನರ್ ವಿಮರ್ಶಿಸಬೇಕು. ಏಕೆಂದರೆ ಕೃಷಿಯಲ್ಲಿ ಮುಂದುವರೆದ ತಾಂತ್ರಿಕತೆಯಿಂದ ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿರುವುದರಿಂದ ಭೂ ಮಿತಿಯ ಪ್ರಮಾಣವನ್ನು ಕಡಿಮೆ ಮಾಡಿ ಹೆಚ್ಚುವರಿಯಾದ ಭೂಮಿಯನ್ನು ಮರುಹಂಚಿಕೆ ಮಾಡಬಹುದು.
ಪ್ರಸ್ತುತ ಹಲವು ಭೂ ನೀತಿಗಳು ಸೋಲುವುದಕ್ಕೆ ಆದರ್ಶ ಮತ್ತು ವಾಸ್ತವತೆಯ ಎರಡರ ನಡುವೆ ಹೊಂದಾಣಿಕೆ ಇಲ್ಲದಿರುವುದು. ಭೂಮಿಯ ಸಮಾನಾದ ಹಂಚಿಕೆಯು ನ್ಯಾಯದ ದೃಷ್ಟಿಯಿಂದ ಅಗತ್ಯವಾದದ್ದು. ಸಿರಿವಂತರಿಂದ ದಾನ ಸ್ವೀಕರಿಸಿ ಸಾವಿರಾರು ಬಡಬಗ್ಗರಿಗಾಗಿ ಹಸ್ತಾಂತರಿಸಿದ ಆಚಾರ್ಯ ವಿನೋಬಾ ರವರು ಆದರ್ಶವಾಗಬೇಕು. ರೈತರು ಹಾಗೂ ಕೃಷಿ ಕೂಲಿಕಾರರನ್ನು ಆಧರಿಸಿದ ವ್ಯವಸಾಯ ನಮ್ಮದಾಗಬೇಕು.
“ಜೈ ಕಿಶಾನ್”
ಲೇಖಕರು-ಡಾ ರಾಜೇಂದ್ರಪ್ರಸಾದ್ ಪಿ , ಎಂಎಸ್ಡಬ್ಲೂ, ಪಿಹೆಚ್ಡಿ ಹಿರಿಯ ಸಂಶೋಧಕರು -ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ಮೆಂಟ್, ಮೈಸೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.