(www.vknews.com) : ಪವಿತ್ರ ಖುರ್ಆನಿನಲ್ಲಿ ಈ ಹಣ್ಣಿನ ಬಗ್ಗೆ ಪ್ರಸ್ತಾಪಿಸಲಾಗಿದೆ. “ಶಾಶ್ವತ ಭವನವಾದ ಸ್ವರ್ಗದಲ್ಲಿ ಈ ಹಣ್ಣು ಲಭಿಸುವುದು” ಎಂಬ ಅಲ್ಲಾಹನ ಉಲ್ಲೇಖ ಇದರ ಮಹತ್ವನ್ನು ಎತ್ತಿ ತೋರಿಸುತ್ತದೆ. ಯಾವಾಗಲೂ ಉಷ್ಣತೆ ಜಾಸ್ತಿಯಿರುವ ಊರಲ್ಲಿ ಉಂಟಾಗುವ ಒಂದು ಹಣ್ಣಾಗಿದೆ ದಾಳಿಂಬೆ.
▪ ಪ್ರಖ್ಯಾತ ಸ್ವಹಾಬಿ ಹಝ್ರತ್ ಇಬ್ನು ಅಬ್ಬಾಸ್ (ರ) ರವರಿಂದ ಉಲ್ಲೇಖಿಸಲ್ಪಟ್ಟ ಒಂದು ಹದೀಸಿನಲ್ಲಿ “ಯಾವುದೇ ದಾಳಿಂಬೆ ಮರವು ಬೀಜ ಒಡೆದು ನೆಲದಿಂದ ಚಿಗುರಿ ಬರುವಾಗ ಅದಕ್ಕೆ ಸ್ವರ್ಗದ ಒಂದು ಹನಿ ನೀರು ಬೀಳದೆ ಇರಲಾರದು.” ಎಂದು ವರದಿಯಾಗಿದೆ.
▪ “ನೀವು ದಾಳಿಂಬೆ ಹಣ್ಣು ತಿನ್ನುವಾಗ ಅದರ ಒಳಗಿರುವ ಹಳದಿ ಬಣ್ಣದ ತಿರುಳನ್ನೂ ತಿನ್ನಿರಿ. ಅದರಲ್ಲಿ ಅದರ ಮೂಲ ಸತ್ತು ಅಡಕವಾಗಿರುವುದು. ಅದು ಅನ್ನಾಶಯವನ್ನು ಬಲಿಷ್ಠಗೊಳಿಸುತ್ತದೆ. ಒಬ್ಬನು ಎಷ್ಟು ದಾಳಿಂಬೆ ಬೀಜವನ್ನು ತಿನ್ನುತ್ತಾನೋ, ಅದಕ್ಕನುಸಾರವಾಗಿ ಅವನ ಹೃದಯ ಪ್ರಕಾಶಿಸುತ್ತದೆ. ಅವನನ್ನು ವಸ್ವಾಸ್ ಮಾಡಲು ಬರುವ ಶೈತಾನನು ನಲುವತ್ತು ದಿನಗಳ ತನಕ ಅವನಿಂದ ದೂರವಾಗುವನು ” ಎಂದು ಇಮಾಮ್ ಅಲಿ (ರ) ಹೇಳಿರುತ್ತಾರೆ. ಮಾತ್ರವಲ್ಲ ದಾಳಿಂಬೆ ಇರುವ ಮನೆಗೆ ಶೈತಾನನು ಇಣುಕಿ ಕೂಡ ನೋಡಲಾರ. ಆ ಹಣ್ಣಿನಲ್ಲಿ ಅವನಿಗೆ ಅಷ್ಟಕ್ಕೂ ವೈರಾಗ್ಯ.
▪ ರುಮ್ಮಾನ್ ಗಿಡವು ಬೆಳೆದು ಬರುವ ಪ್ರಾರಂಭದಲ್ಲಿ ಅದರ ಬುಡಕ್ಕೆ ಜೇನುತುಪ್ಪ ಸುರಿದರೆ, ಅದರಲ್ಲಿ ಉಂಟಾಗುವ ಫಲವು ಸಿಹಿಯಾಗಿರುವುದು. ಬೇಕಾದಷ್ಟು ಸುರ್ಕ ಸುರಿದರೆ, ಹುಳಿಯಾಗುವುದು. ಅದರ ಗಿಡದ ಬುಡದಲ್ಲಿ ಬಂಗಾರದ ಒಂದು ತುಂಡು ಹುಗಿದಿಟ್ಟರೆ, ನಂತರ ಮರದಿಂದ ಸರಿಯಾಗಿ ಹಣ್ಣಾಗುವ ಮೊದಲು ಅದು ಉದುರಿ ಬೀಳುವುದಿಲ್ಲ.
▪ ದಾಳಿಂಬೆಯನ್ನು ಅದಕ್ಕೆ ಗಾಯವಾಗದಂತೆ ಬಹಳ ಜಾಗ್ರತೆಯಿಂದ ಕಿತ್ತು ನಂತರ ಅದನ್ನು ಉಗುರುಬಿಸಿ ಆಲಿವ್ (ಝೈತ್) ಎಣ್ಣೆಯಲ್ಲಿ ಮುಳುಗಿಸಿ ತೆಗೆದು ಬಿಸಿ ಮುಟ್ಟದ ಒಂದು ಜಾಗದಲ್ಲಿಟ್ಟರೆ, ಅದು ಎಷ್ಟೋ ತಿಂಗಳುಗಳ ತನಕ ಹಾಳಾಗದು. ಅಂತೆಯೇ ಇದು ಮರದಲ್ಲಿರುವಾಗ ಬಿಸಿಲು ಮುಟ್ಟದಂತೆ ಗೋಣಿ ಚೀಲದಂತಹಾ ವಸ್ತುಗಳಿಂದ ಕವಚ ಮಾಡಿದರೆ ಆ ಹಣ್ಣು ಕೊಯ್ದ ನಂತರ ತುಂಬಾ ಸಮಯ ಹಾಳಾಗದೆ ಇರುತ್ತದೆ.
▪ ದಾಳಿಂಬೆ ಮರದ ಸಮೀಪದಲ್ಲಿ ತುಳಸಿ (Myrtle) ಗಿಡವನ್ನು ನೆಟ್ಟರೆ ಅದರಲ್ಲಿ ಧಾರಾಳವಾಗಿ ಹಣ್ಣು ಉಂಟಾಗುವುದು.
▪ ಈ ಮರದ ಬುಡದಲ್ಲಿ ಉಪ್ಪು ಮತ್ತು ಖರ್ಜೂರದ ಬೀಜವನ್ನು ಹುಗಿದರೆ ಆ ಮರ ಸಾಯುತ್ತದೆ. ಇನ್ನು ಸಾಯದೆ ಅದರಲ್ಲಿ ಹಣ್ಣಾದರೂ ಅದೆಲ್ಲವೂ ಹಾಳಾಗಿ ಹೋಗುತ್ತದೆ. ಅಂತೆಯೇ ಇದರ ಬುಡಕ್ಕೆ ಪಾರಿವಾಳದ ಸೆಗಣಿ ಅಥವಾ ಅದರ ಬೂದಿಗೊಬ್ಬರವನ್ನು ಹಾಕಿದರೆ ಆ ಮರದಲ್ಲಿ ಉಂಟಾಗುವ ದಾಳಿಂಬೆಯು ಬಹಳ ಕೆಂಪಾಗಿರುತ್ತದೆ.
▪ ದಾಳಿಂಬೆ ಮರದಿಂದ ಸಾಮಾನ್ಯ ಆರಂಭದಲ್ಲಿ ಹಣ್ಣಾದ ಒಂದು ದಾಳಿಂಬೆಯನ್ನು ಕಿತ್ತು ಅದರ ಒಳಗಿರುವ ಎಲ್ಲಾ ಬೀಜಗಳನ್ನು ಎಣಿಸಿ ನೋಡಿದರೆ ಆ ಮರದಲ್ಲಿ ಆ ಬಾರಿ ಉಂಟಾದ ದಾಳಿಂಬೆ ಹಣ್ಣಿನ ಸಂಖ್ಯೆಯು ಅಷ್ಟೇ ಆಗಿರುತ್ತದೆ. ಅಂತೆಯೇ ಅದರ ತುದಿಯಲ್ಲಿರುವ ಜುಟ್ಟಿನ ಎಸಳನ್ನು ಎಣಿಸಿ, ಅದು ಸರಿ ಸಂಖ್ಯೆ ಆಗಿದ್ದರೆ ಒಳಗಿರುವ ಬೀಜಗಳು ಸರಿ ಸಂಖ್ಯೆಯಲ್ಲಿರುವುದು.ಅದು ಬೆಸ ಸಂಖ್ಯೆಯಾಗಿದ್ದರೆ, ಬೀಜ ಕೂಡ ಬೆಸವಾಗಿರುವುದು. ಸುಬ್ಹಾನಲ್ಲಾಹ್.. ಇದೆಂತಹಾ ವಿಸ್ಮಯಗಳು..? ಇದು ಯಾವ ಮ್ಯಾಜಿಕ್..?
▪ ದಾಳಿಂಬೆಯ ಒಳಗೆ ನಾವು ತಿನ್ನುವ ಕಾಳುವಿನ ಒಳಗೆ ಅದರ ಮೂಲ ಬಿತ್ತನೆಯ ಬೀಜವಿರುತ್ತದೆ. ಬೀಜ ರಹಿತವಾಗಿ ಬರೀ ಕಾಳು ಮಾತ್ರವಿರುವ ರುಮ್ಮಾನ್ ಫಸಲಾಗಿ ಬರಬೇಕೆಂದಿದ್ದರೆ, ಇದರ ದೊಡ್ಡ ಮರದ ಒಂದು ರೆಂಬೆಯನ್ನು ಅದರ ಬುಡದಿಂದ ತುಂಡುಮಾಡಿ ರೆಂಬೆಯ ಬುಡವನ್ನು ಎರಡು ಸೀಳುಮಾಡಿ ಅದರ ಒಳಗಿರುವ ತಿರುಳನ್ನು ತೆಗೆದು ನಂತರ ಒಣಹುಲ್ಲು ಕಟ್ಟಿ ಕಸಿಮಾಡುವ ರೂಪದಲ್ಲಿ ಅದನ್ನು ಪರಸ್ಪರ ಜೋಡಿಸಬೇಕು. ಬಳಿಕ ಅದನ್ನು ನೆಟ್ಟರೆ ಆ ಮರ ಬೆಳೆದು ಮರವಾಗುವಾಗ ಅದರಲ್ಲಿ ಉಂಟಾಗುವ ರುಮ್ಮಾನಿನ ಒಳಗಿನ ಕಾಳಿನಲ್ಲಿ ಬೀಜವಿರುವುದಿಲ್ಲ.!
▪ ಹುಳಿ ದಾಳಿಂಬೆ ಆಗುವ ಮರದ ಬುಡದ ಮಣ್ಣನ್ನು ಬಿಡಿಸಿ, ಅದರ ಬೇರುಗಳಿಗೆ ತಗಲುವಂತೆ ಮನುಷ್ಯನ ಮೂತ್ರ ಮತ್ತು ಹಂದಿಯ ಸೆಗಣಿಯನ್ನು ಮಿಶ್ರಣ ಮಾಡಿ ಹಾಕಿ ಮಣ್ಣು ಮುಚ್ಚಿದರೆ, ನಂತರ ಆ ಮರದಲ್ಲಿ ಉಂಟಾಗುವ ದಾಳಿಂಬೆಯು ಸಿಹಿಯಾಗಿರುವುದು.
▪ ಇದರ ಮರದ ಕಟ್ಟಿಗೆಯನ್ನು ಒಂದು ಕಡೆ ಸುಟ್ಟು ಹೊಗೆ ಹಾಕಿದರೆ ಆ ವಲಯಕ್ಕೆ ಯಾವುದೇ ಹಾವು, ಸರ್ಪ, ಚೇಳುಗಳು ಬರಲಾರವು. ಮಾತ್ರವಲ್ಲ ಇದರ ಮರ ಇರುವ ಜಾಗಕ್ಕೂ ವಿಷ ಜಂತುಗಳು ಬರುವುದಿಲ್ಲ. ಎಷ್ಟರಮಟ್ಟಿಗೆ ಎಂದರೆ, ಇದರ ತಿಂದು ಎಸೆದ ಸಿಪ್ಪೆ ಇರುವಲ್ಲಿಗೂ ವಿಷ ಜಂತುಗಳು ಬರುವುದಿಲ್ಲ. ಆ ಕಾರಣದಿಂದ ಕೆಲವು ಬುದ್ದಿವಂತ ಪಕ್ಷಿಗಳು ತಮ್ಮ ಗೂಡುಗಳಿಗೆ ವಿಷ ಜಂತುಗಳು ಬಾರದಿರಲು ಗೂಡು ಮಾಡುವಾಗ ಇದರ ಒಣ ಕಡ್ಡಿ ಕೋಲುಗಳಿಂದ ಗೂಡು ಮಾಡುತ್ತದೆ. ಕೆಲವು ಪಕ್ಷಿಗಳು ಗೂಡಿನೊಳಗೆ ಇದರ ಎಲೆ ಅಥವಾ ಸಣ್ಣ ಕೋಲುಗಳನ್ನು ಇಡುತ್ತದೆ.
▪ ಒಬ್ಬನಿಗೆ ದಾಳಿಂಬೆ ಮರದ ಬೆತ್ತದಿಂದ ಹೊಡೆದು ಗಾಯವಾದರೆ ಆ ಗಾಯ ಗುಣವಾಗುವುದಿಲ್ಲ. ಗುಣವಾಗಬೇಕಾದರೆ, ಬೂದಿ ಬಣ್ಣದ ಕುದುರೆಯ ಮಾಂಸವನ್ನು ಆ ಜಾಗಕ್ಕೆ ಇಡಬೇಕು.
▪ ದಾಳಿಂಬೆ ಕೆಲವು ಸಿಹಿ ಮತ್ತೆ ಕೆಲವು ಹುಳಿ ಅಥವಾ ಕಹಿಯಾಗಿರುತ್ತದೆ. ಸಿಹಿಯಾದ ಹಣ್ಣಿಗೆ ತೇವಾಂಶವಿದ್ದು ಉಷ್ಣವಾಗಿದ್ದರೆ, ಕಹಿಯಾದದ್ದು ತೇವಾಂಶವಿಲ್ಲದೆ ಶೀತವಾಗಿರುವುದು.
▪ ದಾಳಿಂಬೆ ತಿನ್ನುವುದರಿಂದ ಅನ್ನಾಶಯ ಮತ್ತು ಜಠರ ಬಲಿಷ್ಠವಾಗುತ್ತದೆ, ಸಡಿಲವಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಮಲಬದ್ಧತೆಯ ತೊಂದರೆ ನಿವಾರಣೆಯಾಗುತ್ತದೆ. ಹೊಟ್ಟೆ ಉರಿಯುವುದು, ಗಂಟಲು ನೋವು, ಎದೆ ಉರಿತ, ಶ್ವಾಸಕೋಶದ ತೊಂದರೆ, ಕೆಮ್ಮು ಮುಂತಾದವುಗಳು ನಿವಾರಣೆಯಾಗುತ್ತವೆ. ಶರೀರಕ್ಕೆ ಪುಷ್ಟಿ ಕೊಡುತ್ತದೆ. ವೀರ್ಯ ವರ್ಧನೆಯಾಗುತ್ತದೆ. ಮೂತ್ರ ಜಾಸ್ತಿಯಾಗಿ ಮೂತ್ರಕೋಶಕ್ಕೆ ಶಕ್ತಿ ಮತ್ತು ಬಲ ಕೊಡುತ್ತದೆ. ಪಿತ್ತಕೋಶದ ತೊಂದರೆ ನಿವಾರಣೆಯಾಗುತ್ತದೆ. ಅತಿಬೇಧಿ ಮತ್ತು ವಾಂತಿಯನ್ನು ನಿಲ್ಲಿಸುತ್ತದೆ. ಪಿತ್ತಜನಕಾಂಗದ ಉರಿಯನ್ನು ಕಡಿಮೆ ಮಾಡುತ್ತದೆ. ಸ್ನಾಯು ಮತ್ತು ಶರೀರದ ಅಂಗಾಂಗಗಳಿಗೆ ಶಕ್ತಿ ಕೊಡುತ್ತದೆ. ಹೃದಯ ಸಂಬಂಧವಾದ ತೊಂದರೆಗಳು ನಿವಾರಣೆಯಾಗುತ್ತದೆ. ಶರೀರದ ಬಣ್ಣಕ್ಕೆ ಕಾಂತಿ ಕೊಡುತ್ತದೆ. ಶರೀರದಲ್ಲಿರುವ ನಂಜಿಯನ್ನು ತೊಡೆದು ಹಾಕುತ್ತದೆ.
▪ ದಾಳಿಂಬೆಯನ್ನು ರೊಟ್ಟಿಯೊಂದಿಗೆ ತಿಂದರೆ ಹಲವಾರು ಗುಣಗಳಿವೆಯೆಂದು ವೈದ್ಯಶಾಸ್ತ್ರ ಪಂಡಿತರು ಹೇಳಿದ್ದಾರೆ. ಹುಳಿಯಾದ ದಾಳಿಂಬೆಯನ್ನು ಅದರ ಒಳಗಿನ ತಿರುಳು ಸಮೇತ ಜ್ಯೂಸ್ ಮಾಡಿ ನಂತರ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ತಾಮ್ರದ ಪಾತ್ರೆಯಲ್ಲಿ ಹಾಕಿ ಒಲೆಯಲ್ಲಿಟ್ಟು ಸ್ವಲ್ಪ ಬಿಸಿಮಾಡಿ ನಂತರ ಆ ದ್ರಾವಣವನ್ನು ಕಣ್ಣಿಗೆ ಹನಿಗುಟ್ಟಿದರೆ ಕಣ್ಣಿಗೆ ಕಾಂತಿ ಬರುತ್ತದೆ. ದೃಷ್ಟಿ ಶಕ್ತಿ ಜಾಸ್ತಿಯಾಗುತ್ತದೆ. ಕಣ್ಣಿನ ಹಳದಿ ಬಣ್ಣ ಹೋಗಿ ತಿಳಿಯಾಗುತ್ತದೆ. ಅಂತೆಯೇ ಆ ದ್ರಾವಣವನ್ನು ತುಟಿಗೆ ಮತ್ತು ದವಡೆಗೆ ಹಚ್ಚಿದರೆ ಬಿಸಿ ಆಹಾರವನ್ನು ತಿನ್ನುವಾಗ ಉಂಟಾಗುವ ಗುಳ್ಳೆಗಳು ವಾಸಿಯಾಗುತ್ತದೆ. ಅಂತೆಯೇ ದಾಳಿಂಬೆಯ ಸಿಪ್ಪೆಯನ್ನು ಪುಡಿಮಾಡಿ ನೀರಿಗೆ ಹಾಕಿ ಆ ನೀರಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳ ತೊಂದರೆ ನಿವಾರಣೆಯಾಗುತ್ತದೆ. ತುಟಿ ಬಲವಾಗುತ್ತದೆ. ಮಾತ್ರವಲ್ಲ ಅದರ ಸಿಪ್ಪೆಯ ಹುಡಿಗೆ ಜೇನುತುಪ್ಪ ಮಿಶ್ರಣ ಮಾಡಿ ಸಿಡುಬು, ವಸೂರಿಯ ಕಲೆಗಳಿಗೆ ಸವರಿದರೆ ಅದು ಮಾಯವಾಗುತ್ತದೆ.
▪ ಅನಾರೋಗ್ಯ ಕಾರಣ ಮಹಿಳೆಯ ಗರ್ಭಾಶಯದಿಂದ ರಕ್ತಸ್ರಾವ ಆಗುವುದಾದರೆ, ದಾಳಿಂಬೆಯ ಸಿಪ್ಪೆಯನ್ನು ಬೇಯಿಸಿದ ನೀರಿನಲ್ಲಿ ಕುಳಿತು ಕೊಳ್ಳುವ ಅಭ್ಯಾಸ ಮಾಡಿದರೆ ಅದು ನಿಲ್ಲುತ್ತದೆ. ಅಂತೆಯೇ ಹೊಟ್ಟೆಯಲ್ಲಿ ಹುಳದ ತೊಂದರೆ ಇರುವವರು ಇದರ ಸಿಪ್ಪೆಯನ್ನು ಹುಡಿಮಾಡಿ ತಿಂದು ಸ್ವಲ್ಪ ಕಳೆದು ಬಿಸಿನೀರು ಕುಡಿದರೆ ಹುಳು ಸಾಯುತ್ತದೆ.
▪ ಇದರ ಬೀಜವನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಜಜ್ಜಿ ಹುಣ್ಣು, ವೃಣ, ಉಗುರುಸುತ್ತುಗಳಿಗೆ ಹಚ್ಚಿದರೆ ಅವು ಒಣಗಿ ಹೋಗುತ್ತವೆ.
▪ ಒಬ್ಬನು ಒಂದು ವರ್ಷದಲ್ಲಿ ಬಿಟ್ಟು ಬಿಟ್ಟು ಮೂರು ಸಲ ಇದರ ಹೂವನ್ನು ತಿಂದರೆ ಕೆಂಗಣ್ಣು ರೋಗ ಊರಿನಲ್ಲಿ ಹರಡಿದರೂ ಆ ವರ್ಷ ಅವನಿಗೆ ಬಾರದು. ಬೆಳಿಗ್ಗೆ ಹಸಿ ಹೊಟ್ಟೆಗೆ ಇದನ್ನು ತಿನ್ನುವುದು ಬಹಳ ಉತ್ತಮ. ಆದರೆ ಜ್ವರವಿರುವವರು ರುಮ್ಮಾನನ್ನು ತಿನ್ನುವುದು ಒಳ್ಳೆಯದಲ್ಲ ಎಂದು ವೈದ್ಯಶಾಸ್ತ್ರ ಪಂಡಿತರು ಹೇಳಿರುತ್ತಾರೆ.
▪ ತುಟಿ ಸೀಳಿ ರಕ್ತ ಬರುವುದು, ಹಲ್ಲಿನ ದವಡೆ ಒಡೆದು ರಕ್ತ ಬರುವುದು, ಅಂತೆಯೇ ಹಲ್ಲು ಸಂಬಂಧವಾದ ಖಾಯಿಲೆಗಳಿಗೂ ದಾಳಿಂಬೆ ತಿನ್ನುವುದರಿಂದ ಫಲ ಕಾಣುತ್ತದೆ. ಅದರ ಹೂವನ್ನು ಜಗಿಯುವುದರಿಂದ ಹಲ್ಲು ಸಂಬಂಧವಾದ ತೊಂದರೆಗಳು ನಿವಾರಣೆಯಾಗುತ್ತದೆ. ಮುಖದಲ್ಲಿ ಕಪ್ಪು, ಕೆಂಪು ಕಲೆ ಮಚ್ಚೆಗಳಿದ್ದರೆ ದಿನಾಲೂ ಒಂದೊಂದು ರುಮ್ಮಾನ್ ಹಣ್ಣನ್ನು ತಿನ್ನುವುದಾದರೆ ಅದು ಕ್ರಮೇಣವಾಗಿ ಮಾಯವಾಗುತ್ತವೆ.
▪ ಇದರ ಬೀಜವನ್ನು ಶುದ್ಧ ಮಳೆ ನೀರಿನಲ್ಲಿ ಒಂದೆರಡು ದಿನ ನೆನೆಹಾಕಿ ಆ ನೀರನ್ನು ಕುಡಿದರೆ ಮಹಿಳೆಯರಿಗೆ ಅನಗತ್ಯ ರಕ್ತಸ್ರಾವ ಆಗುವುದು ನಿಲ್ಲುತ್ತದೆ.
▪ ಒಬ್ಬನಿಗೆ ದಾಳಿಂಬೆ ವ್ಯಾಪಾರ ಮಾಡಿದ ಕನಸು ಕಂಡರೆ ಅವನು ಧರ್ಮವನ್ನು ಹಣಕ್ಕೆ ಮಾರುವುದರ ನಿಶಾನೆಯಾಗಿದೆ. (ಅಲ್ಲಾಹನು ಕಾಪಾಡಲಿ)
▪ ಅದರ ಸಿಪ್ಪೆಯನ್ನು ತಿಂದ ಕನಸು ಕಂಡರೆ ರೋಗಿಯಾಗಿದ್ದರೆ ರೋಗಮುಕ್ತನಾಗುವ ಲಕ್ಷಣವಾಗಿದೆ. ಅದರ ಮರದ ಕನಸು ಬಿದ್ದರೆ, ವ್ಯಾಪಾರಿಯಾಗಿದ್ದರೆ ವ್ಯಾಪಾರದಲ್ಲಿ ಬಹಳ ಲಾಭ ಬರುವುದರ ಸಂಕೇತವಾಗಿದೆ. ಅಧಿಕಾರಿಯಾಗಿದ್ದರೆ ಪದವಿಯಲ್ಲಿ ಮೇಲೆ ಹೋಗುವುದರ ಸಂಕೇತವಾಗಿರುತ್ತದೆ
ಸಂಗ್ರಹ : ಖಝ್ವೀನಿಯ ಅಜಾಯಿಬುಲ್ ಮಖ್ಲೂಖಾತ್, ಇಮಾಮ್ ಇಬ್ನು ಅಲ್ ಖಯ್ಯಿಮ್ ಅಲ್ ಜವ್ಝಿಯ್ಯ ರವರ ಅತ್ತಿಬ್ಬುನ್ನಬವೀ, ಇಮಾಮ್ ನಾಬುಲ್ಸಿಯ ತಅ್ಬೀರುಲ್ ಅನಾಮ್, ಇಮಾಮ್ ಶಿಹಾಬುದ್ದೀನ್ ಅಹ್ಮದ್ ಅಲ್ ಉಮರಿಯ ಮಸಾಲಿಕುಲ್ ಅಬ್ಸ್ವಾರ್ ಮತ್ತು ಇಮಾಮ್ ಬಿನ್ ಸೀರೀನ್ ರವರ ತಫ್ಸೀರುಲ್ ಅಹ್ಲಾಮ್ ಎಂಬ ಗ್ರಂಥಗಳು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.