(www.vknews.com) : ಓರ್ವ ವಿದ್ವಾಂಸ ಹಜ್ರತ್ ನಿಜಾಮುದ್ದೀನ್ ಔಲಿಯಾ ಬಳಿ ದೀಕ್ಷೆ ಪಡೆಯಲು ಬಂದರು. ಇಡೀ ದಿನ ಗುರುಗಳ ಆಚಾರ ವಿಚಾರಗಳನ್ನು ಗಮನಿಸಿದರು. ಗುರುಗಳು ಅವರನ್ನು ಕರೆದು ಆಶ್ರಮಕ್ಕೆ ಬಂದ ವಿಷಯ ಕೇಳಿದರು. ನಾನು ನಿಮ್ಮಿಂದ ದೀಕ್ಷೆ ಪಡೆಯಲು ಬಂದೆ. ಆದರೆ ನೀವು ಜನರ ಮಧ್ಯೆಯೇ ಅವರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿಯೇ ಕಾಲ ಕಳೆದು ಬಿಟ್ಟಿರಿ. ದೇವರ ಧ್ಯಾನದಲ್ಲಿ ಸಮಯ ಕಳೆಯಲಿಲ್ಲ. ಆದುದರಿಂದ ನಿಮ್ಮ ಬಳಿ ದೀಕ್ಷೆ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿ ಹೋರಾಡಲು ಸಿದ್ಧನಾಗಿದ್ದೇನೆ ಎಂದರು. ಆಗ ಗುರುಗಳು ನೀವು ನನ್ನ ದಿನಚರಿ ಗಮನಿಸಿದ್ದೀರಿ ಹಾಗೆಯೇ ನನ್ನ ರಾತ್ರಿಯೂ ಗಮನಿಸಿ ಹೋಗಿ ಎಂದರು. ಆ ವಿದ್ವಾಂಸರು ರಾತ್ರಿ ಗುರುಗಳ ಬಳಿಯೇ ಉಳಿಯಲು ನಿರ್ಧರಿಸಿದರು.
ರಾತ್ರಿ ನಮಾಜ್ ಮುಗಿಸಿ ಗುರುಗಳು ಮಲಗಿಕೊಂಡರು. ಆದರೆ ವಿದ್ವಾಂಸರು ರಾತ್ರಿಯಲ್ಲ ಪ್ರಾರ್ಥನೆಯಲ್ಲಿ ಕಳೆಯುತ್ತಾ, ಗುರುಗಳ ಆಗುಹೋಗುಗಳ ಮೇಲೆ ನಿಗಾ ವಹಿಸಿದ್ದರು. ಗುರುಗಳು ಅರ್ಧ ರಾತ್ರಿಯ ನಂತರ ಎದ್ದು ಪ್ರಾರ್ಥನೆ ಸಲ್ಲಿಸಿ ಬೆಳಗಿನ ನಮಾಜ್ ಮಾಡಿ ತನ್ನ ದಿನಚರಿಯಲ್ಲಿ ನಿರತರಾದರು. ವಿದ್ವಾಂಸರಿಗೆ ನಿದ್ದೆ ಬಂತು, ಮಲಗಿಕೊಂಡರು. ಕನಸಿನಲ್ಲಿ ಎರಡು ಪ್ರಕಾಶಗಳನ್ನು ಕಂಡರು. ಒಂದು ಇವರ ತಲೆಯ ಮೇಲಿತ್ತು, ಮತ್ತೊಂದು ಗುರುಗಳ ತಲೆಯ ಮೇಲಿತ್ತು. ಇವರ ತಲೆಯ ಮೇಲಿದ್ದ ಪ್ರಕಾಶ ಒಂದು ಸಣ್ಣ ದೀಪದಂತೆ ಕಾಣುತ್ತಿತ್ತು. ಆದರೆ ಗುರುಗಳ ತಲೆಯ ಮೇಲಿದ್ದ ಪ್ರಕಾಶ ಊಹೆಗೂ ನಿಲುಕಲಾರದಷ್ಟಿತ್ತು. ವಿದ್ವಾಂಸರು ನಿದ್ದೆಯಿಂದ ಎದ್ದರು. ಬಹುಷಃ ಅವರಿಗೆ ಕನಸು ಅರ್ಥವಾಗಿ ಹೋಯಿತು. ತನ್ನ ವಿದ್ವಾಂಸದ ಬಗ್ಗೆ ಇದ್ದ ಅಹಂ ಮಾಯವಾಗಿ ಹೋಯಿತು.
ಗುರುಗಳಲ್ಲಿ ಕ್ಷಮೆಯಾಚಿಸಿದರು. ಆಗ ಗುರುಗಳು ಅವರಿಗೆ ಹೇಳಿದರು. ನೀವು ಬಹಿರಂಗ ನಡುವಳಿಕೆಗಳಿಗೆ ಮತ್ತು ಪ್ರಾರ್ಥನೆಗಳಿಗೆ ಮಾತ್ರ ಪ್ರಾರ್ಥನೆ ಎಂದು ನಂಬಿದ್ದೀರಿ. ಆದರೆ ಸಮಾಜ ಸೇವೆಯನ್ನು ಮಾಡುತ್ತಾ ಅದರ ಜೊತೆಗೆ ಅಂತರಂಗ ಶುದ್ಧಿಯನ್ನು ಕಾಪಾಡಿಕೊಳ್ಳುತ್ತಾ ಸಾಗುವುದೇ ಆಧ್ಯಾತ್ಮ. ನೀವು ಇಡೀ ರಾತ್ರಿ ಅಲೌಕಿಕವಾಗಿ ನಾನು ಎಷ್ಟು ಪ್ರಬಲ ನೀವು ಎಷ್ಟು ಪ್ರಬಲ ಎಂಬ ಯೋಚನೆಯಲ್ಲಿ ಕಳೆದಿರಿ. ಪ್ರಪಂಚ ಪ್ರಪಂಚವೇ. ಸ್ವರ್ಗದ ಹಂಗಿನಲ್ಲಿ ಪ್ರಾರ್ಥನೆ ಮಾಡುವುದುಂಟು. ಕೇವಲ ಸ್ವರ್ಗಕ್ಕಾಗಿಯೇ ಮಾಡುವುದು ದುರಾಸೆಯೆ ಅಲ್ಲವೆ. ಮಾನವನ ಮನದಲ್ಲಿ ದೈವ ಮನೆ ಮಾಡಿದರೆ ಅಲ್ಲಿ ಬೇರಾವ ಆಸೆಯೂ ದುರಾಸೆಯೂ ಉಳಿಯಲಾರದು. ವಿದ್ವಾಂಸರು ಗುರುಗಳಿಂದ ದೀಕ್ಷೆ ಪಡೆದು ಹಿಂತಿರುಗಿದರು.
ಗುರುಗಳು ಹಗಲು ರಾತ್ರಿ ಜನರ ಸೇವೆಯನ್ನು ಮಾಡುತ್ತಿದ್ದರು. ಸಾವಿರಾರು ಜನ ಪ್ರತಿದಿನ ಅವರ ಆಶ್ರಮದಲ್ಲಿ ಊಟ ಮಾಡುತ್ತಿದ್ದರು. ತಂಗಲು ಸಹ ಯಾವ ನಿಬಂಧನೆಗಳು ಇರಲಿಲ್ಲ. ಇಂದು ನಾವು ಯಾವ ಹಂತದಲ್ಲಿದ್ದೇವೆ? ಪರರಿಗೆ ಸಹಾಯ ಮಾಡಲು ಮುಂದಾಗುವುದಿಲ್ಲ. ನಾನು ಮತ್ತು ನನ್ನ ಸಂಸಾರ ಎಂಬ ಚಕ್ರವ್ಯೂಹದಲ್ಲಿ ಸಿಲಿಕಿದ್ದೇವೆ.
ಗುರುಗಳ ಜೀವನ ನಮಗೆಲ್ಲರಿಗೂ ಪ್ರೇರಣೆಯಾಗಲಿ
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.