(www.vknews.in). ಪಿ ಯು ಸಿ ಪರೀಕ್ಷಾ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಆಶ್ವಾಸ ದ ರೀತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಮಕ್ಕಳು ರಾಜ್ಯದಲ್ಲೇ ಪ್ರಥಮವಾಗಿ ಉತ್ತೀರ್ಣರಾಗಿದ್ದಾರೆ.
ಖಾಸಗಿ ಶಾಲೆಗಳು ತಮ್ಮ ತಮ್ಮ ಕಾಲೇಜಿನ ಫಲಿತಾಂಶವನ್ನು ಪತ್ರಿಕೆಗಳಲ್ಲಿ ,ಟೆಲಿವಿಷನ್ ಗಳಲ್ಲಿ ಜನರಿಗೆ ತಿಳಿಸಿ ಮುಂದಿನ ವರ್ಷದ ಕೊಯ್ಲು ಗೆ ಬೇಕಾದ ಮಾರ್ಕೆಟಿಂಗ್ ಕೆಲಸ ಶುರು ಮಾಡಿದ್ದಾರೆ.
ಎಲ್ಲಾ ಶಾಲೆಗಳ ಪ್ರಾಧ್ಯಾಪಕ ವೃಂದ ಇಂತಹ ಒಳ್ಳೆಯ ಫಲಿತಾಂಶಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ಕೊಡುತ್ತಿದ್ದಾರೆ.
ಹೆಚ್ಚಿನ ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲೇ ಶಾಲೆಯ 100% ಗೆ ಖೋತಾ ಆಗದ ರೀತಿಯಲ್ಲಿ ಮಕ್ಕಳ 10 ನೇ ತರಗತಿಯ ಫಲಿತಾಂಶವನ್ನು ನೋಡಿಕೊಂಡು ಆಯ್ಕೆ ಮಾಡುತ್ತದೆ. ಅದಲ್ಲದೆ ಮಕ್ಕಳಿಗೆ ಟ್ಯೂಷನ್ ಕೊಡಿಸಲು ಸಾಮರ್ಥ್ಯ ಇರುವ ಬಗ್ಗೆ ಕೂಡ ಖಾತ್ರಿ ಪಡಿಸುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಲ್ಲೂ ವಿಜ್ಞಾನ ವಿಭಾಗಕ್ಕೆ ಖಾಸಗಿ ಕಾಲೇಜುಗಳು ಕನಿಷ್ಟ 75% ಅಂಕ ಇಲ್ಲದಿದ್ದರೆ ಮಕ್ಕಳನ್ನು ದಾಖಲಾತಿ ಮಾಡುವುದೇ ಅಪರೂಪ ವಾಗಿರುತ್ತದೆ.
ಆದರೆ ಇದಕ್ಕೆಲ್ಲಾ ಅಪವಾದವಾಗಿ ನಮ್ಮ ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜು ಬಡ ಮಕ್ಕಳಿಗೆ ಪೂರಕವಾಗಿ, ಯಾವುದೇ ರೀತಿಯ ಒತ್ತಡವನ್ನು ಪೋಷಕರಿಗೆ ಕೊಡದೆ, ಹತ್ತಿರದ ಸರಕಾರಿ ಪ್ರೌಡ ಶಾಲೆಯಿಂದ ಬರುವ ಎಲ್ಲಾ ಮಕ್ಕಳಿಗೂ ದಾಖಲಾತಿಯ ಅವಕಾಶ ಕೊಟ್ಟು ಮತ್ತು ಅಂಕಗಳ ಬಗ್ಗೆ ಯಾವುದೇ ನಿಬಂಧನೆ ಯನ್ನು ಇಡದೆ ಕನಿಷ್ಟ ಅಂಕ ಪಡೆದ ವಿದ್ಯಾರ್ಥಿಗೂ ಕೂಡ ವಿಜ್ಞಾನ ವಿಭಾಗಕ್ಕೆ ದಾಖಲು ಮಾಡಿ ಆ ಮಕ್ಕಳನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿಸುತ್ತಿರುವುದು ಅಲ್ಲಿಯ ಪ್ರಾಧ್ಯಾಪಕರ ಇಚ್ಛಾಶಕ್ತಿ ಗೆ ಒಂದು ಸಾಕ್ಷಿ.
ಸತತವಾಗಿ ಕಳೆದ 10 ವರ್ಷದಿಂದ 90% ಕ್ಕಿಂತಲೂ ಹೆಚ್ಚು ಮಕ್ಕಳು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣ ರಾಗುತ್ತಿದ್ದು, 2015 ರಲ್ಲಿ 100% ಮಕ್ಕಳು ಉತ್ತೀರ್ಣರಾಗಿ ರುತ್ತಾರೆ. ಅದಲ್ಲದೆ ಈ ಶೈಕ್ಷಣಿಕ ವರ್ಷ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 46 ಮಕ್ಕಳಲ್ಲಿ ಒಂದು ಮಗುವನ್ನು ಬಿಟ್ಟು ಎಲ್ಲರೂ ಉತ್ತೀರ್ಣ ರಾಗಿದ್ದು 97.87% ಶೇಖಡ ಫಲಿತಾಂಶವನ್ನು ದಾಖಲಿಸಿದೆ.ಇದರಲ್ಲಿ 5 ಮಕ್ಕಳು ವಿಶಿಷ್ಟ ಶ್ರೇಣಿ ಹಾಗೂ 29 ಮಕ್ಕಳು ಪ್ರಥಮ ಶ್ರೇಣಿ ಯನ್ನು ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.ಅಲ್ಲಿಯ ಮಕ್ಕಳ ಸ್ನೇಹಿ ಶಿಕ್ಷಕರು ಸಿಬ್ಬಂದಿಗಳ ಪರಿಶ್ರಮವನ್ನು ನಾವು ಎಷ್ಟು ಶ್ಲಾಘಿಸಿದರು ಕಡಿಮೆಯಾಗ ಬಹುದು.
ಸರಕಾರಿ ಶಾಲೆ,ಕಾಲೇಜುಗಳು ಸತತವಾಗಿ ಹೆಚ್ಚಿನ ಫಲಿತಾಂಶವನ್ನು ನೀಡುತ್ತಿದ್ದರೂ ಪೋಷಕರು ಇನ್ನೂ ಹೆಚ್ಚಿನ ಶುಲ್ಕವನ್ನು ಕೊಟ್ಟು ಖಾಸಗಿ ಶಾಲೆಗಳ ಬಾಗಿಲು ಗಳಲ್ಲಿ ತಮ್ಮ ಮಕ್ಕಳಿಗಾಗಿ ಕಾಯುತ್ತಿರುವುದು ದುರಾದೃಷ್ಟ ವಾಗಿದೆ. ಸರಕಾರ ಒಳ್ಳೆಯ ಪ್ರಾಧ್ಯಾಪಕರನ್ನು ಕೊಟ್ಟು ಸುಲಭವಾಗಿ ಶಿಕ್ಷಣ ಮಕ್ಕಳಿಗೆ ದೊರಕುವಂತೆ ಸರಕಾರಿ ಶಾಲೆ ಕಾಲೇಜುಗಳನ್ನು ಸ್ಥಾಪನೆ ಮಾಡಿದರೂ ಕೂಡ ಪೋಷಕರು ಖಾಸಗಿ ಶಿಕ್ಷಣಕ್ಕಾಗಿ ಹಾತೊರೆ ಯುತ್ತಿರುವುದರ ಹಿಂದಿನ ಮರ್ಮ ಇನ್ನೂ ಅರ್ಥ ವಾಗುತ್ತಿಲ್ಲ.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಬೇಕು ಎನ್ನುವುದು ಪೋಷಕರ ಅಭಿಲಾಷೆ ,ಆದರೆ ಅದು ಖಾಸಗಿ ಶಾಲೆಯಿಂದ ಮಾತ್ರ ಎನ್ನುವುದರಲ್ಲಿ ಖಂಡಿತವಾಗಿಯೂ ಹುರುಳಿಲ್ಲ . ಇನ್ನಾದರೂ ಪೋಷಕರು ಸರಕಾರಿ ಶಾಲಾ ಕಾಲೇಜುಗಳ ಮೇಲಿನ ಅಸಡ್ಡೆಯನ್ನು ದೂರಿಕರಿಸಿ ತಮ್ಮ ಮಕ್ಕಳನ್ನು ಸರಕಾರಿ ಶಾಲಾ ಕಾಲೇಜುಗಳಿಗೆ ಸೇರಿಸಿ ಎನ್ನುವ ಬಿನ್ನಹದೊಂದಿಗೆ……
ಮೊಯ್ದಿನ್ ಕುಟ್ಟಿ.
Sdmc ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.