ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬಕ್ರೀದ್ ಹಬ್ಬದ ಆಚರಣೆಗೆ ತೊಡಕುಂಟು ಮಾಡಲು ಸರಕಾರ ಹುನ್ನಾರ ನಡೆಸಿರುವುದು ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷರು ಶ್ರೀಕಾಂತ್ ಸಾಲಿಯಾನ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿಎನ್ ಶಿವಮೂರ್ತಿ ಅವರು, ರಾಜ್ಯದಲ್ಲಿ ಹಬ್ಬದ ದಿನಗಳನ್ನು ಒಳಗೊಂಡಂತೆ ಅನಧಿಕೃತ ಗೋವು, ಒಂಟೆಗಳ ಸಾಗಾಣಿಕೆಗಳನ್ನು ಮತ್ತು ಸಾಮೂಹಿಕ ಹತ್ಯೆಯನ್ನು ತಡೆಗಟ್ಟಲು ಸರಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು ಅನಧಿಕೃತ ಪ್ರಾಣಿಹತ್ಯೆ ಸಾಗಾಣಿಕೆ ಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು ಎಂದು ನಿರ್ದೇಶಿಸಿದ್ದಾರೆ.
ಅದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರಾಣಿಗಳ ವಧೆಯನ್ನು ತಡೆಯುವ ನಿಟ್ಟಿನಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್.ಟಿ.ಓ ಇಲಾಖೆ, ಪಶುಪಾಲನಾ ಇಲಾಖೆ, ಬಿಬಿಎಂಪಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಎನ್.ಜಿ.ಓ ಗಳನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿರುವುದು ಸಂಘ ಪರಿವಾರ ಪ್ರಾಯೋಜಿತ ಸ್ವಯಂ ಘೋಷಿತ ಗೋ ರಕ್ಷಕ ಸಂಘಟನೆಗಳಿಗೆ ಗೋ ರಕ್ಷಣೆಯ ಹುಸಿ ನೆಪದಲ್ಲಿ ದಾಳಿಗಳನ್ನು ನಡೆಸಲು ಮುಕ್ತ ಅವಕಾಶ ಕೊಟ್ಟಂತಾಗುತ್ತದೆ.
ಬಕ್ರೀದ್ ಹಬ್ಬದ ಆಚರಣೆಗೆ ತೊಡಕು ಉಂಟು ಮಾಡುವ ಹುನ್ನಾರ ಇದಾಗಿದ್ದು, ಕೂಡಲೇ ಸರಕಾರ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು. ಜಾತ್ಯಾತೀತ ನಾಡಿನಲ್ಲಿ ಕೋಮುವಾದಿ ತನಕ್ಕೆ ಪ್ರಚೋದನೆ ನೀಡುವ ಕೃತ್ಯಗಳು ನಿಲ್ಲಬೇಕು. ಸರಕಾರದ ಆದೇಶದಿಂದ ಒಂದು ಕೋಮಿನ ಭಾವನೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯ-ದೇಶ ಹಾಗೂ ಜಗತ್ತಿನಾದ್ಯಂತ ಮುಸಲ್ಮಾನ ಬಾಂಧವರು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
ಸದ್ಯದ ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಹಬ್ಬವನ್ನು ಆಚರಿಸಲು ಸರಕಾರ ಅನುಮತಿಸಬೇಕೇ ಹೊರತು, ಇಂತಹ ಗೊಂದಲದ ಆದೇಶಗಳನ್ನು ನೀಡುವ ಮೂಲಕ ಮತೀಯ ಭಾವನೆ ಕೆರಳಿಸುವುದು ಖಂಡನೀಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಶಾಂತಿಯುತವಾಗಿ, ಸರಳ ರೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬ ಆಚರಣೆ ಮಾಡಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶ್ರೀಕಾಂತ್ ಸಾಲಿಯಾನ್ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.