ವಿಶ್ವ ಕನ್ನಡಿಗ ನ್ಯೂಸ್ (www.vknews.in): ಮುಸಲ್ಮಾನರು ಆಚರಿಸುವ ಎರಡು ಈದ್ ಗಳಲ್ಲಿ ಒಂದಾಗಿದೆ ಈದ್-ಉಲ್-ಅಲ್ಹಾ ಅಥವಾ ಬಕ್ರೀದ್ ಹಬ್ಬ. ಈ ಹಬ್ಬದಂದು ಮುಸಲ್ಮಾನರಿಗೆ ಭಕ್ಷ್ಯ ಯೋಗ್ಯವಾದ ಪ್ರಾಣಿಯೊಂದನ್ನು ಬಲಿ ಅರ್ಪಿಸಲು ಪ್ರಬಲ ಸುನ್ನತ್ತಿರುವುದರಿಂದಲೇ ಈ ಹಬ್ಬಕ್ಕೆ ಬಲಿ ಪೆರ್ನಾಲ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಬಕ್ರೀದ್ ಆಚರಣೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ.ಅ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹನು ಮುಂದಾಗುತ್ತಾನೆ. ಇಬ್ರಾಹಿಂ ನೆಬಿಯವರಿಗೆ ಕನಸಿನಲ್ಲಿ ಬರುವ ಅಲ್ಲಾಹನು ‘ಜಗತ್ತಿನಲ್ಲಿ ನಿಮಗೆ ಅತ್ಯಂತ ಪ್ರಿಯರು ಯಾರು’ ಎಂದು ಕೇಳಿದಾಗ, ‘ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿ’ ಎಂದು ಇಬ್ರಾಹಿಂ(ಸ) ಹೇಳುತ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಅಲ್ಲಾಹನ ಆಜ್ಞೆಯಾಗುತ್ತದೆ.
ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ಧಗೊಳ್ಳುತ್ತಾರೆ. ಆದರೆ ಇಬ್ರಾಹಿಂ(ಸ) ಅವರಿಗೆ ಮಗನನ್ನು ಬಲಿ ಕೊಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಪಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಕತ್ತಿ ಬೀಸಲು ಸಿದ್ಧರಾಗುತ್ತಾರೆ.ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರೀಲ್(ಅ.ಸ) ರವರು, ಇಸ್ಮಾಯಿಲ್ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಮಗನ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಕುರಿಯ ಕುತ್ತಿಗೆ ಕೊಯ್ಯುವಲ್ಲಿ ಸಫಲವಾಗುತ್ತದೆ. ಇದೇ ಕಾರಣದಿಂದಾಗಿ ಈ ಹಬ್ಬವನ್ನು ಬಲಿ ಪೆರ್ನಾಲ್ ಅಥವಾ ಬಕ್ರೀದ್ ಎಂದೂ ಕೂಡ ಕರೆಯಲಾಗುತ್ತದೆ.
ಈದ್ ಉಲ್. ಅಲ್ಹಾ ದ ನಮಾಝ್ ಬಳಿಕ ನಾಲ್ಕು ಕಾಲುಗಳುಳ್ಳ ಮುಸಲ್ಮಾನರಿಗೆ ಭಕ್ಷಯೋಗ್ಯ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದರೆ ಕುರ್ಬಾನಿಗೆ ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು ಅಥವಾ ಸಾವಿನ ಸ್ಥಿತಿಯಲ್ಲಿರಬಾರದು ಎಂಬಿತ್ಯಾದಿ ನಿಯಮಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ.ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ. ಇದಿಷ್ಟೂ ಬಕ್ರೀದ್ ದಿನದ ಬಲಿ ಅರ್ಪಣೆಗಾಗಿರುವ ಮಾನದಂಡವಾಗಿರುತ್ತದೆ.
ಮೇಲಿನ ಈ ಎಲ್ಲಾ ಸನ್ನಿವೇಶಗಳೂ ಕೂಡ ನೆಬಿ ಇಬ್ರಾಹಿಂ(ಅ.ಸ) ಹಾಗೂ ಮಗ ಇಸ್ಮಾಯಿಲ್(ಅ.ಸ)ರವರ ತ್ಯಾಗ ಬಲಿದಾನಗಳ ಸಂಕೇತವಾಗಿದೆ. ಈ ಹಬ್ಬದಂದು ಮುಸಲ್ಮಾನರು ಮಸೀದಿಗೆ ತೆರಳಿ ಈದ್ ನಮಾಝ್ ನಿರ್ವಹಿಸಿದ ನಂತರ ತಮ್ಮ ಕುಟುಂಬಸ್ಥರ ಮನೆಗೆ ತೆರಳಿ ಈದ್ ಶುಭಾಶಯ ಮಾಡಿಕೊಳ್ಳುವುದು ಹಾಗೂ ತಮ್ಮ ಮನೆಗಳಿಗೆ ಭೇಟಿ ನೀಡುವ ಅತಿಥಿಗಳನ್ನು ಗೌರವಯುತವಾಗಿ ಭರಮಾಡಿಕೊಂಡು ಅವರನ್ನು ಭೋಜನ ನೀಡಿ ಸತ್ಕರಿಸುವುದು ವಾಡಿಕೆಯಾಗಿದೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.