(www.vknews.com) : ಹಬ್ಬದ ಶುಭಾಶಯ ಹೇಳುವಷ್ಟು ಸುಲಭವಲ್ಲ, ಈ ಹಬ್ಬದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋದು. ಮನುಷ್ಯ ಮನಸುಗಳು ತ್ಯಾಗ ಮತ್ತು ಸತ್ಯಪರ ನಿಲುವು ಹೊಂದದೇ ಯಾಂತ್ರಿಕವಾಗಿ ಹಬ್ಬ ಆಚರಿಸೋದನ್ನು ದೇವನು ಬಯಸುವುದೇ ಇಲ್ಲ. ಅಲ್ಲಾಹನಿಗಾಗಿ ಜೀವನವನ್ನು ಸಮರ್ಪಿಸುವುದು ಎಂದರೆ ಸತ್ಯ, ನ್ಯಾಯ, ನೈತಿಕ ಮೌಲ್ಯಗಳಿಗೆ ತನ್ನನ್ನು ಸಮರ್ಪಿಸೋದು ಎಂದರ್ಥ. ಎಲ್ಲರೂ ಹಾಗೆ ಆದಾಗ ಈ ಲೋಕವು ನಾಗರೀಕ ಆಗುತ್ತದೆ. ಜನರ ಬದುಕು ಸಹ್ಯ ಆಗುತ್ತದೆ. ಅದೇ ಧರ್ಮದ ಉದ್ದೇಶ. ಅದೇ ಅಲ್ಲಾಹನ ಇಚ್ಛೆ. ಹೀಗೆ ನಾಗರಿಕ ಆಗಲು ಸ್ವಂತ ಸುಖ, ಈಗೋ, ಭಾವನೆಗಳನ್ನು ತ್ಯಾಗ ಮಾಡಲೇಬೇಕಾಗುತ್ತದೆ. ತ್ಯಾಗಗುಣ ಇಲ್ಲದವರಿಂದ ಧಾರ್ಮಿಕತೆ ಎನ್ನುವ ಒಳ್ಳೆಯ ಮನಸು ಸಾಧ್ಯವಿಲ್ಲ. ಈ ತ್ಯಾಗದ ಪರಮೋನ್ನತ ಉದಾಹರಣೆಯೇ ಇಬ್ರಾಹೀಂ ಅ. ರವರಿಂದ ಅಂದು ನಡೆದ ಬಲಿದಾನ. ಅದರ ಸ್ಮರಣೆಯೇ ಬಕ್ರೀದ್ ಹಬ್ಬ.
ಪ್ರವಾದಿ ಇಬ್ಬಾಹೀಂ ಅ. ರವರು ನಮ್ರೂದ್ ಎಂಬ ಅಹಂಕಾರಿ, ದುಷ್ಟ ರಾಜನಿಗೆ ಎದುರಾಗಿ ನಿಂತದ್ದು ಸತ್ಯಕ್ಕಾಗಿ. ಅದರಿಂದ ಅವರು ಸಹಿಸಿದ ಹಲವು ಕಷ್ಟನಷ್ಟಗಳಲ್ಲಿ ಅಗ್ನಿ ಕುಂಡಕ್ಕೆ ಎಸೆಯಲ್ಪಡುವ ಶಿಕ್ಷೆಯೂ ಒಂದು. ಈ ಲೋಕದ ಲಾಭಕ್ಕಾಗಿ, ಸೇಫ್ ಝೋನ್ ಗಾಗಿ, ಒತ್ತಡಗಳಿಗಾಗಿ, ಶಿಕ್ಷೆಗೆ ಹೆದರಿ ಸತ್ಯದ ವಿರುದ್ಧವಾಗಿ ನಿಲ್ಲಬಾರದು ಎಂಬುದನ್ನು ಇಬ್ರಾಹೀಂ ಅ.ರವರಿಂದ ಕಲಿಯಬೇಕೆಂಬುದು ಹಬ್ಬದ ಒಂದು ಸಂದೇಶ.
ಇನ್ನೊಂದು ಸಂದೇಶ ತ್ಯಾಗ. ಸ್ವಂತ ಸುಖಕ್ಕಾಗಿ ಯಾವ ನೈತಿಕ ಮೌಲ್ಯಗಳಿಗೂ ಕವಡೆಕಾಸಿನ ಬೆಲೆ ಕೊಡದವರಿಗೆ ಇಬ್ರಾಹೀಂ ಅ.ರವರ ತ್ಯಾಗದಲ್ಲಿ ಪಾಠವಿದೆ. ತನ್ನ ಈಗೋ ತೃಪ್ತಿಗಾಗಿ ಸಂಬಂಧಗಳನ್ನು ಕಳೆದುಕೊಳ್ಳುವವರಿಗೆ, ಕಳೆದುಕೊಂಡ ಸಂಬಂಧವನ್ನು ಮತ್ತೆ ಜೋಡಿಸಲಿರುವ ಅವಕಾಶವನ್ನು ಬಳಸದೇ ಇರುವವರಿಗೆ ಪಾಠ ಇರೋದು. ಈ ಹಬ್ಬ ಎಂದರೆ ಮೊದಲು ಪನ ಪಟಲದಲ್ಲಿ ಬರುವುದು ಇಬ್ರಾಹೀಂ ಅ.ರವರ ತ್ಯಾಗವಾಗಿದೆ. ಜಗತ್ತು ಕಂಡ ಆ ದೊಡ್ಡ ತ್ಯಾಗದ ಸ್ಮರಣೆಯಾಗಿದೆ ಈ ಹಬ್ಬ.
ಇಬ್ರಾಹೀಂ- ಅವ್ವ ದಂಪತಿಯ ವರ್ಷಗಳ ಕೊರಗನ್ನು ನೀಗಿಸಿ ಅಲ್ಲಾಹನು ಕೊಟ್ಟ ಮಗು ಇಸ್ಮಾಯೀಲ್ ಅ. ಆ ಮಗು ಅವರ ಹೃದಯವನ್ನು ಇನ್ನಿಲ್ಲದಂತೆ ವ್ಯಾಪಿಸುತ್ತಾ ಬೆಳೆಯುತ್ತಿರುತ್ತದೆ. ಆ ಮಗುವನ್ನೇ ತನಗಾಗಿ ತ್ಯಾಗ ಮಾಡಲು ಕನಸಲ್ಲಿ ಅಲ್ಲಾಹನು ಬೇಡಿಕೆ ಇಡುತ್ತಾನೆ. ಅಲ್ಲಾಹನ ಮಾರ್ಗದಲ್ಲಿ ಜೀವಿಸುವವರು ಅವನಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ ಇರುತ್ತಾರೆ ನಿಜ. ಹಾಗಂತ ತನ್ನ ಕರುಳ ಕುಡಿಯನ್ನೂ ತ್ಯಜಿಸಲು ಸಿದ್ಧರಾಗುತ್ತಾರಾ? ಆಗೇ ಆಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಇಬ್ರಾಹೀಂ ಅಲೈಸಲಾಂ. ಅಳುತ್ತಾ, ಹಿಂಡಿದಂತಾಗುವ ಹೃದಯದ ನೋವನ್ನು ಸಹಿಸುತ್ತಾ ಅಲ್ಲಾಹನಿಗಾಗಿ ಮಗನ ಕುತ್ತಿಗೆಗೆ ಕತ್ತಿಯುಡುವ ಇಬ್ರಾಹೀಂ ಅ.ರವರ ಆ ಘಟನೆಯು ಮನುಕುಲಕ್ಕೆ ಕೊಡುವ ಸಂದೇಶವು ಮುಖ್ಯವಾಗದೇ ಕೇವಲ ಯಾಂತ್ರಿಕ ಆಚರಣೆಯು ಅಲ್ಲಾಹನು ಬಯಸುವುದಿಲ್ಲ ಎಂಬುದನ್ನು ಪಂಡಿತರು ಸಾರಿ ಸಾರಿ ಹೇಳಿದ್ದಾರೆ.
ಅಲ್ಲಾಹನು ಮನುಷ್ಯಬಲಿಯನ್ನು ಬಯಸೋದಿಲ್ಲವೆಂದೂ, ಅದೊಂದು ಪರೀಕ್ಷೆ ಮಾತ್ರ ಆಗಿತ್ತೆಂದೂ, ಇಬ್ರಾಹೀಂ ಅ.ರವರು ಹಾಗೆ ಮಗನ ಕೊರಳಿಗೆ ಕತ್ತಿ ಇಟ್ಟಾಗ ಅಲ್ಲಿ ಪವಾಡ ನಡೆಯುತ್ತದೆಂದೂ, ಇಸ್ಮಾಯೀಲ್ ಅ.ರವರ ಜಾಗದಲ್ಲಿ ಒಂದು ಆಡನ್ನಿಟ್ಟ ಅಲ್ಲಾಹನು ಇಬ್ರಾಹೀಂ ಅ.ರವರ ಕತ್ತಿಯಿಂದ ಆ ಆಡು ದ್ಸಬಹ್ ಆಗುವಂತೆ ಮಾಡಿದನೆಂದೂ ಎಲ್ಲರಿಗೂ ಗೊತ್ತಿರುವ ಸಂಗತಿಗಳೇ. ಆದರೆ ಎಲ್ಲರಿಗೆ ಗೊತ್ತಿಲ್ಲದೆ ಕೆಲವರಿಗಷ್ಟೇ ಗೊತ್ತಿರುವ ಸಂಗತಿ ಎಂದರೆ ಯಾಂತ್ರಿಕವಾಗಿ ಹಬ್ಬಾಚರಣೆ ಮಾಡಿದರೆ, ನಿರ್ದಿಷ್ಟ ಪ್ರಾಣಿಗಳ ಮಾಂಸ ದಾನ ಮಾಡಿದರಷ್ಟೇ ಸಾಲದು ಎಂಬುದಾಗಿದೆ.
ತಾನೇ ಕರುವಿನ ಹಂತದಿಂದ ಸಾಕಿ ಬೆಳೆಸಿದ ಆಡು, ಎತ್ತುಗಳಲ್ಲಿ ಮನುಷ್ಯನ ಮನಸ್ಸು ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತದೆ. ಅವುಗಳಿಗೆ ಗಾಯವಾದಾಗ, ನರಳುವಾಗ ಮನೆಮಕ್ಕಳಿಗೆ ಮರುಗುವಷ್ಟೇ ಸಂಕಟ ಆಗುತ್ತದೆ. ಅದನ್ನು ತಾನೇ ಕತ್ತಿಯಟ್ಟು ಅಲ್ಲಾಹನಿಗಾಗಿ (ಬಡವರಿಗೆ ಮಾಂಸ ಹಂಚಲು) ದ್ಸಬಹ್ ಮಾಡಲು ಮನಸ್ಸು ತುಂಬಾ ಕಷ್ಟ ಪಡುತ್ತದೆ. ಆ ಸಂಕಟ, ಆ ತ್ಯಾಗಗಳು ಅಲ್ಲಾಹನಿಗಾಗಿ ಮಾಡಬೇಕಾದ ತ್ಯಾಗ ಎಂಬ ಸಂದೇಶ ಬಕ್ರೀದ್ ಹಬ್ಬದ್ದಾಗಿದೆ. ಹಾಗೆಯೇ ಸಾಕಿ ಮಾಂಸ ದಾನ ಮಾಡಬೇಕು ಎಂದು ಹಲವು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸತ್ಯ, ನ್ಯಾಯ, ನೈತಿಕತೆ, ಪರೋಪಕಾರ(ಪರರ ನೋವನ್ನು ತನ್ನದೆಂದು ತಿಳಿದು ಸಹಾಯ ಮಾಡೋದು), ಅನ್ಯಾಯವನ್ನು ತಡೆಯುವಿಕೆ, ಜನರೊಡನೆ ಸ್ನೇಹಬಂಧ ಮುಂತಾದ್ದೆಲ್ಲ ಅಲ್ಲಾಹನ ಧರ್ಮ ಪಾಲನೆ ಮಾಡುವ ಮನಸ್ಸುಗಳಲ್ಲಿ ಇರುವ ಮೌಲ್ಯಗಳು. ಅವುಗಳನ್ನು ಉಳಿಸಲು ಯಾವ ತ್ಯಾಗಕ್ಕೂ ಸಿದ್ಧರಾಗಬೇಕು, ಸತ್ಯವನ್ನು ಧೈರ್ಯವಾಗಿ ಹೇಳಬೇಕು ಎಂಬುದು ಹಝ್ರತ್ ಇಬ್ರಾಹೀಂ ಅ.ರವರ ಸ್ಮರಣೆಯಿಂದ ಪಡೆಯಬೇಕಾದ ಸಂದೇಶ. ಈ ಸಂದೇಶ ನಮ್ಮೆಲ್ಲರ ಮನಸುಗಳಿಗೆ ತಲುಪಲಿ.
ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು
– ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.