ಧಾರವಾಡ (www.vknews.com) : ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಹಿರಿಯ ಶಿಕ್ಷಕರ ಧುರೀಣ ಗುರು ತಿಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ತನಕ ರಾಜ್ಯಾಧ್ಯಕ್ಷರಾಗಿದ್ದ ಜಿ.ಜೆ.ಪೋಳ ಅವರು ಜುಲೈ 31 ರಂದು ಸೇವಾ ನಿವೃತ್ತಿ ಹೊಂದಿದದ್ದರಿಂದ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಹುದ್ದೆ ತೆರವಾಗಿತ್ತು. ಶುಕ್ರವಾರ ಜರುಗಿದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಶಿಕ್ಷಕರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿದ್ದ ಗುರು ತಿಗಡಿ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಯಾದರು.
ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಸರಕಾರಿ ಪಾಠಶಾಲೆಯ ಮುಖ್ಯಾಧ್ಯಾಪಕರಾಗಿರುವ ಗುರು ತಿಗಡಿ, ಕರ್ನಾಟಕ ರಾಜ್ಯ ಸರಕಾರಿ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ, ಧಾರವಾಡ ತಾಲೂಕಾ ಗ್ರಾಮೀಣ ಪ್ರಾ.ಶಾ. ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಗುರುಬಳಗ ಸೇವಾ ಟ್ರಸ್ಟ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಜಿ.ಜೆ.ಪೋಳ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರು ತಿಗಡಿ ಅವರ ಹೆಸರನ್ನು ಸೂಚಿಸಿದರು. ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಘಟ್ಟಿ ಅನುಮೋದಿಸಿದರು. ಪದಾಧಿಕಾರಿಗಳಾದ ನಾರಾಯಣ ಭಜಂತ್ರಿ, ಸಿ.ಎಂ. ಕಿತ್ತೂರ, ಮಾರುತಿ ಭಂಡಿವಡ್ಡರ,ಎಸ್. ಬಿ. ಶಿವಸಿಂಪಿ, ರಾಜು ಮಾಳವಾಡ, ಆರ್. ಬಿ. ಮಂಗೋಡಿ, ಕಾಶಪ್ಪ ದೊಡವಾಡ, ಶಕುಂತಲಾ ಅರಮನಿ, ಆರ್.ಎನ್. ಬಸ್ತವಾಡಕರ, ವ್ಹಿ.ಟಿ. ಭಜಂತ್ರಿ, ಆರ್.ಎಸ್. ಹಿರೇಗೌಡರ, ಎಸ್.ಎಸ್. ಧನಿಗೊಂಡ, ಜಯಶ್ರೀ ಪಾಟೀಲ, ಮಹಾದೇವಿ ದೊಡಮನಿ, ಜಿ.ಐ. ರಾಮಾಪೂರ, ಎ.ಎನ್. ನಾಗರಳ್ಳಿ, ಎ.ಎ. ಮುಲ್ಲಾ ಶಿಕ್ಷಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಗುರು ತಿಗಡಿಯವರ ಆಯ್ಕೆಯನ್ನು ಬೆಂಬಲಿಸಿದರು.
ಕವಿವ ಸಂಘದಲ್ಲಿ : ಈ ಹಿಂದೆ ಡಾ. ಪಾಟೀಲ ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿಣಿ ಸಮಿತಿಗೆ ಚುನಾಯಿತಗೊಂಡಿದ್ದ ಗುರು ತಿಗಡಿ ಅವರು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ, ತಾಲೂಕು ಶಿಕ್ಷಕ ಭವನ ಸಮಿತಿ ಹಾಗೂ ಜಿಲ್ಲಾ ವಿದ್ಯಾ ಭವನ ಸಮಿತಿಯ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದಾರೆ. ಕಳೆದ 20 ವರ್ಷಗಳಿಂದ ಶಿಕ್ಷಕರ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಗೈದಿರುವ ಗುರು ತಿಗಡಿ ಅವರು, ನಗರದ ಕೊಪ್ಪದಕೆರೆ ಭಾಗದಲ್ಲಿ ಸುಮಾರು 50 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರಾ.ಶಾ. ಶಿಕ್ಷಕರ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡ ಮತ್ತು ಸಭಾಭವನ ನಿರ್ಮಾಣ ಮಾಡುವಲ್ಲಿ ಮುಂಚೂನಿಯಲ್ಲಿ ಶ್ರಮಿಸಿದ್ದಾರೆ. ಜೊತೆಗೆ ಕಳೆ ಎರಡು ದಶಕಗಳಿಂದ ಶಿಕ್ಷಣ, ಸಾಹಿತ್ಯ, ಸಹಕಾರ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.