ಬೈಂದೂರು ,(ವಿಶ್ವಕನ್ನಡಿಗ ನ್ಯೂಸ್ ): ಅತೀಯಾದ ಮಳೆಯಿಂದ ನೆರೆ ಹಾವಳಿಗೆ ಒಳಗಾಗಿರುವ ತಾಲೂಕಿನ ಬಡಕೆರೆ, ಕೋಣ್ಕಿ, ಚಿಕ್ಕಳ್ಳಿ, ನಾವುಂದ ಭಾಗಕ್ಕೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿಯವರು ಭೇಟಿ ನೀಡಿದರು.ಕರಾವಳಿ ಭಾಗದಲ್ಲಿ ಪ್ರತಿ ವರ್ಷ ಅತೀಯಾದ ನೆರೆಯಿಂದ ಬೈಂದೂರು ಕ್ಷೇತ್ರದ ಹಲವೆಡೆ ಕೃಷಿ ಭೂಮಿ, ಮನೆಗಳು ಜಲವ್ರತಗೊಳ್ಳುತ್ತಿದ್ದು ಈ ಬಗ್ಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಕಳೆದೆರಡು ವರ್ಷಗಳ ಮಳೆಯಿಂದ ಹಾನಿಯಾದ ಸಂಪೂರ್ಣ ವಿವರ ಒದಗಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ನಾಡ, ನಾವುಂದ ಗ್ರಾಮಗಳಿಗೆ ನೆರವಾಗುವ ಸ್ಥಳದಲ್ಲಿ ವಿಶ್ರಾಂತಿ ಕೊಠಡಿಯನ್ನು ಮತ್ತು ಜಾನುವಾರು ಕೊಟ್ಟಿಗೆ ಮಾಡಿ ನೆರೆಯಿಂದ ತೊಂದರೆ ಅನುಭವಿಸುವವರನ್ನು ಅಲ್ಲಿಗೆ ಸ್ಥಳಾಂತರಗೊಳಿಸಿ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಾವುಂದ ಗ್ರಾಮದ ಸಾಲ್ಬುಡದಲ್ಲಿ ನೆರೆಯಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ದೋಣಿಯ ಅವಶ್ಯಕತೆಯಿದ್ದು ಅದನ್ನು ಕೂಡಲೇ ವ್ಯವಸ್ಥೆ ಮಾಡುವಂತೆ ಸ್ಥಳೀಯ ತಹಶೀಲ್ದಾರ್ ಅವರಿಗೆ ಸೂಚಿಸಿದರು. ತುರ್ತು ಅಗತ್ಯಕ್ಕೆ ದೋಣಿಯನ್ನು ಬೇರೆ ಕಡೆಯಿಂದ ವ್ಯವಸ್ಥೆ ಮಾಡಲು ತಿಳಿಸುತ್ತೇನೆ ಎಂದು ಹೇಳಿದರು. ಕಳೆದ ಬಾರಿ ದೋಣಿ ನಾವಿಕರಿಗೆ ಸಂಭಾವನೆ ನೀಡಿಲ್ಲ ಎನ್ನುವ ಸ್ಥಳೀಯರ ದೂರಿಗೆ ಈ ಬಾರಿ ಅದನ್ನು ಕೂಡಲೇ ವ್ಯವಸ್ಥೆ ಮಾಡಬೇಕು. ಅಲ್ಲದೇ ಸ್ಥಳೀಯರ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ಇಲ್ಲಿಯ ಪಂಚಾಯತ್ ಅಧಿಕಾರಿಗಳು ಗಮನಕ್ಕೆ ತರಬೇಕು, ತಂದಲ್ಲಿ ಸರಕಾರದ ಗಮನ ಸೆಳೆದು ಪರಿಹರಿಸಲಾಗುವುದು, ಇಂತಹ ಕಠಿಣ ಸಂದರ್ಭದಲ್ಲಿ ದೋಣಿಯನ್ನು ನಡೆಸುವವರಿಗೆ ಅಗತ್ಯ ದುಡಿಮೆಯ ಫಲ ನೀಡಬೇಕು. ದುಡಿಮೆಯ ಹಣವನ್ನು ಪಡೆಯಲು ಅವರು ಅಂಗಲಾಚುವಂತೆ ಮಾಡಬಾರದು, ಕೂಡಲೇ ಅಗತ್ಯ ಸಂಬಳ ನೀಡುವಂತೆ ತಿಳಿಸಿದರು.ಪ್ರತಿ ಬಾರಿ ಮಳೆಗೂ ತೊಂದರೆ ಅನುಭವಿಸುವ ಸ್ಥಳದ ಪಟ್ಟಿ ಮಾಡಿ, ಪ್ರತಿ ಬಾರಿ ನಾವು ಭೇಟಿ ಮಾಡುವ ಬದಲು ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸೂಕ್ತ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.ಕೃಷಿ ಭೂಮಿ ನಾಶ ಆಗಿರುವುದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಕೃಷಿಕರಿಗೆ ಸೂಕ್ತ ಪರಿಹಾರವನ್ನು ಅವಧಿಯೊಳಗೆ ನೀಡುವಂತೆ ತಾಕೀತು ಮಾಡಿದರು. ಬೈಂದೂರು ತಹಸೀಲ್ದಾರ್ ಬಸಪ್ಪ ಪಿ ಪೂಜಾರ್, ಕಂದಾಯ ನಿರೀಕ್ಷಕ ಈ ಕುಮಾರ್, ಗಂಗೊಳ್ಳಿ ಠಾಣಾಧಿಕಾರಿ ಭಿಮಾಶಂಕರ್, ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.