(Www.vknews.in) ಜುಲೈ 29 ರಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟವು ಅಂಗೀಕರಿಸಿರುವುದನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸ್ವಾಗತಿಸುತ್ತದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿಯು 3ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ನಾವು ಮಾಧ್ಯಮಗಳಲ್ಲಿ ಓದಿ-ಕೇಳಿ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇವೆ. ಆದರೆ, ಈ ನೀತಿಯ ಅಂತಿಮ ಪುಸ್ತಕ ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ದೊರೆಯದ ಕಾರಣ ನಾವು ಅದರಲ್ಲಿ ಏನಿದೆ ಎಂದು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ.
ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಮಾತನಾಡುತ್ತಿದ್ದು, ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ಬಗ್ಗೆ ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ ಪ್ರಕರಣ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ನಾವು ನಮ್ಮ ಭಾಷೆಯಲ್ಲಿ ಓದಿ ಅರ್ಥೈಸಿಕೊಳ್ಳುವುದು, ನಂತರ ಜಾರಿಗೊಳಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ.
ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ. ಅದಲ್ಲದೆ ಪೋಷಕರನ್ನು ಕತ್ತಲೆಯಲ್ಲಿಟ್ಟು ಕೊಂಡು ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಕೂಡ ಸಮಂಜಸವಾದ ನಡೆ ಆಗಿರುವುದಿಲ್ಲ.
ಆದ್ದರಿಂದ , ಅದನ್ನು ಕನ್ನಡದಲ್ಲಿ ತಂದು ವ್ಯಾಪಕವಾಗಿ ಚರ್ಚಿಸುವವರೆಗೆ ಆತುರ-ಆತುರವಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.
ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಕನ್ನಡದಲ್ಲಿ ಹೊರತಂದು ಶಾಲಾ ,ಪಂಚಾಯತಿ,ತಾಲ್ಲೂಕು, ಜಿಲ್ಲೆ ಹಾಗು ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ ಕರ್ನಾಟಕ ಶಿಕ್ಷಣ ನೀತಿ”(ಕ,ಶಿ,ನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.
ನಂತರ ಕರ್ನಾಟಕ ಶಿಕ್ಷಣ ನೀತಿಯನ್ನು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ , ಅಂಗೀಕರಿಸಿ ಜಾರಿಗೊಳಿಸಬೇಕೇಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದು ಸನ್ಮಾನ್ಯ ಶಿಕ್ಷಣ ಸಚಿವರಿಗೆ ಪುತ್ತೂರು ಎಸಿ ಯವರ ಮುಖಾಂತರ ಮನವಿಯನ್ನು ಕೊಡಲಾಯಿತು,
ನಿಯೋಗದಲ್ಲಿ ಎಸ್ ಡಿ ಎಂ ಸಿ ರಾಜ್ಯಾಧ್ಯಕ್ಷ ರಾದ ಮೊಯಿದಿನ್ ಕುಟ್ಟಿ, ದ.ಕ. ಜಿಲ್ಲಾಧ್ಯಕ್ಷ ರಾದ ಇಸ್ಮಾಯಿಲ್ ನೆಲ್ಯಾಡಿ, ಪುತ್ತೂರು ತಾಲೂಕು ಪದಾಧಿಕಾರಿಗಳಾದ ಉಸ್ಮಾನ್ ನೆಕ್ಕಿಲು,ಚೆನ್ನಪ್ಪ ಸಂಟಿಯಾರ್,ಗೀತಾ ಚೆನ್ನಪ್ಪ ಎಂ. ಆರ್ಯಾಪು ಪಂಚಾಯತ್ ಮಾಜಿ ಅಧ್ಯಕ್ಷರು .ಜಬ್ಬಾರ್ ಕುರಿಯ,ಶರೀಫ್ ಕೆಮ್ಮಾರ ,ಬಾಬು ಸಂಪ್ಯ ಸಂಟಿಯಾರ್ ಮೊದಲಾದವರು ಇದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.