(www.vknews.com) : ವಿದ್ಯಾರ್ಥಿಗಳ ಜೀವನದ ಗುರಿ, ಧ್ಯೇಯ ಮತ್ತು ಉದ್ದೇಶಗಳನ್ನು ಸಾಧಿಸಲು ಸಾಧ್ಯವಿರುವ ಸರ್ವ ವಿಧ ಸಕಾರಾತ್ಮಕ ಚಿಂತನೆಯ ಮಾರ್ಗಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿಸಿ ಬಳಿಕ ಅವುಗಳನ್ನು ನೀರೆರೆದು ಪೋಷಿಸಿ ಪಕ್ವವಾಗಿ ಬೆಳೆಯಲು ಅಗತ್ಯವಿರುವ ವಿವಿಧ ತತ್ವಾದರ್ಶಗಳನ್ನು ವಿದ್ಯಾರ್ಥಿಗಳ ಮಸ್ತಿಷ್ಕದಲ್ಲಿ ಪ್ರತಿಬಿಂಬಿಸಿ ಕಾರ್ಯೋನ್ಮುಖರಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ಜೀವನದ ಕನಸುಗಳನ್ನು ನನಸಾಗಿಸಲು ಸುವ್ಯಕ್ತವಾದ ಮಾರ್ಗಗಳನ್ನು ಅನುಸರಿಸದೆ ದಾರಿತಪ್ಪುವ ವಿದ್ಯಾರ್ಥಿಗಳ ವಕ್ರ ನಡೆ ನುಡಿಗಳನ್ನು ಮತ್ತು ಕೆಟ್ಟ ಯೋಚನೆಗಳನ್ನು ಸರಿಪಡಿಸಿ ಸರಿಯಾದ ದಾರಿಯಲ್ಲಿ ಅವರನ್ನು ಮುನ್ನಡೆಸಿ ಬಲಿಷ್ಠ ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸುವವರೇ ಶಿಕ್ಷಕರು.
ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿರುವ ಸರ್ ಯಾಕೂಬ್ ಕೊಯ್ಯೂರು ರವರ ವಿಶಿಷ್ಟ ವ್ಯಕ್ತಿತ್ವ ಅಂತಹುದು. ಹಿತ-ಮಿತ ಮಾತು, ಶಿಸ್ತು, ಸಮಯಪಾಲನೆ, ನೇರ ನಡೆನುಡಿ, ಇಚ್ಚಾಶಕ್ತಿ ಮತ್ತು ಕಾರ್ಯತತ್ಪರತೆ ಎಂಬಿತ್ಯಾದಿ ಸ್ವಭಾವ ಸದ್ಗುಣಗಳನ್ನು ತನ್ನದಾಗಿಸಿಕೊಂಡು ಸದಾ ಸಮಯ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿಯೇ ತನ್ನನ್ನು ತೊಡಗಿಸಿಕೊಂಡು ಮಾದರಿ ಶಿಕ್ಷಕರೆನಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಕಲಿಕಾ ಸಾಮಾಗ್ರಿಗಳ ಸೌಲಭ್ಯಗಳಿಂದ ವಂಚಿತರಾಗಿ ಕೀಳರಿಮೆಯ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬುವುದನ್ನು ತನ್ನ ದೂರದ್ರಷ್ಟಿ ಮತ್ತು ಅಪಾರ ಅನುಭವ ಸಂಪನ್ನತೆಯ ಮೂಲಕ ಅರಿತು ತನ್ನ ವಿದ್ಯಾರ್ಥಿಗಳ ಮಧ್ಯೆ ಜಾತಿ-ಮತ-ವರ್ಗ-ವರ್ಣಗಳ ಅಂತರವನ್ನು ಇಲ್ಲವಾಗಿಸಿ ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳೆಂಬ ಉದಾತ್ತವಾದ ಮಾನವೀಯ ಸಂದೇಶವನ್ನು ಉಳಿಸಿ ಬೆಳೆಸಲು ತಾವು ಕ್ರಮಿಸಿದ ಕಠಿಣ ಪರಿಶ್ರಮವನ್ನೆಂದೂ ಈ ನಾಡಿನ ಜನತೆ ಮರೆಯಲಾರರು.
2018 ರಲ್ಲಿ ಆರ್ಥಿಕ ಅಡಚಣೆಯ ಹೊರತಾಗಿಯೂ ತನ್ನ ಹಳೆಯ ವಿದ್ಯಾರ್ಥಿಗಳೊಂದಿಗೆ ತನ್ನ ದೀರ್ಘಕಾಲದ ಕನಸನ್ನು ಮುಂದಿಟ್ಟು ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಆರಂಭಿಸಿದ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಗಣಿತ ಪ್ರಯೋಗಾಲಯ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಮೂಕವಿಸ್ಮಿತರನ್ನಾಗಿಸಿತ್ತಲ್ಲದೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಶಿಕ್ಷಣ ಪ್ರೇಮಿಗಳ ನೆನಪಿನಂಗಳದಲ್ಲಿ ಎಂದೆಂದಿಗೂ ಶಾಶ್ವತವಾಗಿಯೇ ಉಳಿಯುವಂತಹ ಅಂಶವಾಗಿದ್ದು ತಮ್ಮ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೆ ಪಸರಿಸಿವೆ ಎನ್ನಲು ಬಹಳ ಸಂತೋಷವೆನಿಸುತ್ತದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ತಾವು ತೋರಿದ ಕಾರ್ಯಕ್ಷಮತೆ ಮತ್ತು ವೃತ್ತಿಪರತೆ ತಮಗೆ ಹಲವಾರು ಪ್ರಶಸ್ತಿಗಳನ್ನು ಮತ್ತು ಜನರೆಡೆಯಲ್ಲಿ ಅಪಾರ ಖ್ಯಾತಿಯನ್ನು ತಂದುಕೊಟ್ಟಿರುವುದಲ್ಲದೆ ಇದೀಗ ತಮ್ಮ ಸಾಧನೆಗೆ ಸಿಕ್ಕ ಅರ್ಹ ಗೌರವವೆಂಬಂತೆ 2020 ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಸರಕಾರಿ ಶಾಲೆಯೊಂದನ್ನು ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾಗಿ ಪ್ರತಿಬಿಂಬಿಸಿದ ತಮ್ಮ ಶೈಕ್ಷಣಿಕ ಕ್ರಾಂತಿ ಜನಮಾನಸದ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟ ಸ್ಪಷ್ಟ ಸಂದೇಶಗಳಾಗಿದ್ದು ತಾವು ಇನ್ನಷ್ಟೂ ಸಾಧನೆಯ ಶಿಖರವನ್ನೇರುವಂತಾಗಲಿ ಎಂದು ಸರ್ವಶಕ್ತನಾದ ಅಲ್ಲಾಹನಲ್ಲಿ ಹೃದಯಾಂತರಾಳದಿಂದ ಪ್ರಾರ್ಥಿಸುತ್ತೇವೆ. yakoob Sir, Big Salute
– ಮುಹಮ್ಮದ್ ಕುತುಬುದ್ದೀನ್ ಫಯಾಝ್ ರಕ್ಷಾ ಹೆಲ್ಪ್ ಲೈನ್ ಸರ್ವಿಸಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.