ಧಾರವಾಡ (www.vknews.com) : ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿಯಲ್ಲಿ ಕಳೆದ ಸುಮಾರು ಎರಡು ಶತಮಾನಗಳಿಂದಲೂ ನಡೆಯುತ್ತಿರುವ ಮೋಹರಂ ಆಚರಣೆಗೆ ಚಾರಿತ್ರಿಕ ಹಿನ್ನೆಲೆ ಇದ್ದು, ಹಿಂದೂ-ಮುಸ್ಲೀA ಜನತೆಯ ನೇತೃತ್ವದಲ್ಲಿ ರವಿವಾರ ಸಂಭ್ರಮ ಮತ್ತು ಶೃದ್ಧಾ-ಭಕ್ತಿಗಳಿಂದ ಜರುಗಲಿದೆ.
ಗ್ರಾಮದ ಮಸೀದಿಯಲ್ಲಿ ಪ್ರತೀ ವರ್ಷ ಎರಡು ದೇವರುಗಳನ್ನು ಸ್ಥಾಪನೆ ಮಾಡುತ್ತಿದ್ದು, ಒಂದನ್ನು ಗುತ್ತೇಸಾಬ್ ಎಂದೂ, ಮತ್ತೊಂದನ್ನು ಕಾಸೀಂದುಲೈಃ ಎಂದು ಸಂಬೋಧಿಸಲಾಗುತ್ತಿದೆ. ಈ ಎರಡೂ ದೇವರುಗಳಿಗೂ ಭಕ್ತರು ಬೆಳ್ಳಿಯಿಂದಲೇ ಬಹುದೊಡ್ಡ ಪಂಜಾಗಳನ್ನು ಮಾಡಿಸಿಕೊಟ್ಟಿದ್ದಾರೆ. ಗುತ್ತೇಸಾಬ್ ದೇವರ ಮೂಲ ಪಂಜಾ ಹಾವೇರಿ ಸಮೀಪದ ಗುತ್ತಲದಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಗ್ರಾಮದ ಜೈನ್ ಧರ್ಮದ ಮುಖಂಡರಾಗಿದ್ದ ದಿವಂಗತ ರಾವಬಹದ್ದೂರ ಪಂಪಾಪತಿ ದೇಸಾಯಿ ಅವರು ಗುತ್ತೇಸಾಬ್ ಮೂಲ ಪಂಜಾವನ್ನೇ ಹೋಲುವಂತೆ ಬೆಳ್ಳಿಯಿಂದ ಹೊಸತು ಪಂಜಾ ಮಾಡಿಸಿಕೊಟ್ಟಿದ್ದಾರೆ. ಇದು ಭಾವೈಕ್ಯ ಧರ್ಮವನ್ನು ಎತ್ತಿತೋರಿಸುತ್ತದೆ.
ಗುದ್ದಲಿ ಪೂಜೆಯೊಂದಿಗೆ ಆರಂಭಗೊಳ್ಳುವ ಈ ಮೋಹರಂ ಆಚರಣೆ ರವಿವಾರ ಸಂಜೆ ಸಂಪನ್ನಗೊಳ್ಳಲಿದೆ. ಉಭಯ ಪಂಜಾಗಳನ್ನು ಹೊತ್ತುಕೊಂಡು ರವಿವಾರ ಪ್ರಾತಃಕಾಲದಲ್ಲಿ ಅಗ್ನಿಹಾಯುವ ಪ್ರಕ್ರಿಯೆ ಬಹಳ ಹಿಂದಿನಿAದಲೂ ಭಕ್ತರಿಂದ ನಡೆಯುತ್ತ ಬಂದಿದೆ. ನಂತರ ಡೋಲಿ ಸಮೇತ ಉಭಯ ಪಂಜಾಗಳು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸುತ್ತವೆ.
ಗುತ್ತೇಸಾಬ್ ಮತ್ತು ಕಾಸೀಂದುಲೈಃ ದೇವರುಗಳಲ್ಲಿ ಮಾಡಿಕೊಂಡ ಭಕ್ತರ ಅನೇಕ ಸಂಕಲ್ಪಗಳು ಈಡೇರಿದ್ದು, ಪ್ರತೀ ವರ್ಷ ಗ್ರಾಮದ ಸಮಸ್ತ ದೈವದರೆಲ್ಲರೂ ಸೇರಿಕೊಂಡು ಈ ಮೊಹರಂ ಆಚರಣೆಯನ್ನು ಅತ್ಯಂತ ಶಾಂತಿ ಮತ್ತು ಸಹೋದರತೆಯೊಂದಿಗೆ ಶೃದ್ಧಾ-ಭಕ್ತಿಗಳಿಂದ ಆಚರಣೆ ಮಾಡುತ್ತ ಬರಲಾಗಿದೆ ಎಂದು ಅಮ್ಮಿನಬಾವಿಯ ಮುಸ್ಲೀಂ ಸಮಾಜದ ಜಮಾತ ಅಧ್ಯಕ್ಷ ಜನಾಬ ಗೌಸ್ಖಾನ್ ಹುಬ್ಬಳ್ಳಿ, ಕಾರ್ಯದರ್ಶಿ ಜನಾಬ ಮೆಹಬೂಬಸಾಬ ತಂಬೋಲಿ, ಸದಸ್ಯರುಗಳಾದ ಅಬ್ದುಲ್ರಶೀದ್ ಕಿತ್ತೂರ, ಮಹಮ್ಮದಕಾಸೀಂ ಭಾಂಗಿ, ನಜೀರಸಾಬ ನದಾಫ್, ಅಬ್ದುಲ್ರಹೀಮ ಅಪ್ಪುನವರ, ಯಾಸೀನಸಾಬ ತಂಬೋಲಿ, ಅಲ್ಲಾಭಕ್ಷ ತಹಸೀಲದಾರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅಬ್ದುಲ್ಗಫಾರ ತಹಶೀಲದಾರ ಅಭಿಪ್ರಾಯಪಡುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.