ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್ (ಸ) ಮತ್ತು ಖಲೀಫ ಹಜ್ರತ್ ಅಬೂಬಕ್ಕರ್ ಸಿದ್ದೀಕ್ (ರ) ಗುಹೆಯಲ್ಲಿ ಮೂರು ದಿನ ಕಳೆದ ಘಟನೆ ಎಲ್ಲರು ಸಾಮಾನ್ಯವಾಗಿ ಕೇಳಿರುತ್ತೀರಿ.
ಗುಹೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಬಂದಾಗ ಹಜ್ರತ್ ಸಿದ್ದೀಕ್ ದಿಢೀರನೆ ಪ್ರವಾದಿವರ್ಯರನ್ನು ಕರೆದುಕೊಂಡು ಗುಹೆ ಒಳಗೆ ಪ್ರವೇಶಿಸಲಿಲ್ಲ. ಗುಹೆಯ ಒಳಗೆ ಏನಿದೆ ಗೊತ್ತಿರಲಿಲ್ಲ. ಏನೂ ಅನಾಹುತ ಸಂಭವಿಸಬಾರದು ಎಂದು ಭಾವಿಸಿ, ಗುಹೆ ಒಳಗೆ ತಾನೋಬ್ಬರೇ ಹೋಗಿ ವೀಕ್ಷಿಸಿದರು. ಗುಹೆಯಲ್ಲಿ ಕೆಲವು ಬಿಲಗಳಿದ್ದವು. ಅವುಗಳನ್ನು ತನ್ನ ಬಟ್ಟೆಯಿಂದ ಮುಚ್ಚಿದರು. ಇನ್ನೆರಡು ಬಿಲಗಳು ಹಾಗೆ ಉಳಿದಿದ್ದವು. ಪ್ರವಾದಿವರ್ಯರಿಗೆ ಒಳಗೆ ಬರ ಮಾಡಿಕೊಂಡರು. ಪ್ರವಾದಿವರ್ಯರು ತನ್ನ ಶಿರವನ್ನು ಹಜ್ರತ್ ಸಿದ್ದೀಕ್ ರವರ ತೊಡೆಯ ಮೇಲಿಟ್ಟು ವಿಶ್ರಾಂತಿ ಪಡೆಯುತ್ತಿದ್ದಾಗ, ತೆರೆದಿದ್ದ ಬಿಲಗಳಿಂದ ಏನೂ ಹೊರಗೆ ಬರಬಾರದು ಎಂದು ತನ್ನ ಕಾಲಿನ ಹೆಬ್ಬರಳಿನಿಂದ ಬಿಲದ ಮೇಲೆ ಒತ್ತಡ ಹೇರಿದ್ದರು. ಆದರೆ ಅವರ ಸಂಶಯ ನಿಜವಾಯಿತು. ಒಂದು ಹಾವು ಹೊರಗೆ ಬರಲು ದಾರಿ ಹುಡುಕುತ್ತಿತ್ತು. ಹಜ್ರತ್ ಸಿದ್ದೀಕ್ ರವರ ಹೆಬ್ಬರಳಿಗೆ ಕಚ್ಚತೊಡಗಿತು.
ನೋವು ತಾಳಲಾರದೆ ಕಣ್ಣೀರು ಬರತೊಡಗಿತು. ಪ್ರವಾದಿವರ್ಯರು ಎಚ್ಚರಗೊಂಡು ವಿಷಯ ತಿಳಿದನಂತರ, ಆ ಹಾವು ನನ್ನನ್ನು ಪ್ರೀತಿಸುತ್ತೆ, ನನ್ನನು ನೋಡುವ ಆಸೆ ಮಾತ್ರ ಹೊಂದಿದೆ, ಅಲ್ಲಿಂದ ಕಾಲು ಜರುಗಿಸಲು ಹೇಳಿ, ಗಾಯಕ್ಕೆ ತನ್ನ ಎಂಜಿಲನ್ನು ಹಚ್ಚಿದಾಗ ಹಾವಿನ ವಿಷ ಮಾಯವಾಗಿ ಹೋಯಿತು. ಹಾವು ಬಿಲದಿಂದ ಹೊರಬಂದು ಪ್ರವಾದಿವರ್ಯರ ದರ್ಶನ ಪಡೆದು ತನ್ನ ಇಚ್ಛೆಯನ್ನು ತೀರಿಸಿಕೊಂಡಿತು.
ಬಹಳ ತೀಕ್ಷ್ಣವಾಗಿ ಈ ಘಟನೆಯ ಬಗ್ಗೆ ದೃಷ್ಟಿ ಹಾಯಿಸಿದರೆ ನಮಗೆ ಬಹಳ ದೊಡ್ಡ ನೀತಿ ಪಾಠ ಸಿಗುತ್ತದೆ. ಮೊದಲೇ ನಾನು ಹೇಳಿದ ಹಾಗೆ ಗುಹೆಯ ವೀಕ್ಷಣೆ…!
ಪ್ರವಾದಿವರ್ಯರು ನನ್ನ ಜೊತೆಗಿದ್ದಾರೆ, ದೇವರ ಅನುಗ್ರಹ ನಮ್ಮ ಮೇಲಿದೆ, ನಮಗೆ ಯಾವುದೇ ಅನಾಹುತ ಸಂಭವಿಸುವಿದಿಲ್ಲ ಎಂಬ ದೃಢ ನಂಬಿಕೆ ಇದ್ದರೂ ಸಹ ಹಜ್ರತ್ ಅಬೂಬಕ್ಕರ್ ಸಿದ್ದೀಕ್ ಗುಹೆಯ ವೀಕ್ಷಣೆ ನಡೆಸಿದರು.
ನಾವು ನಮ್ಮ ಜೀವನದಲ್ಲಿ ದೇವರ ಮೇಲೆ ಇರುವ ನಂಬಿಕೆ ಆಧಾರದ ಮೇಲೆ ಎಷ್ಟೋ ವಿಷಯಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ದೇವರ ಮೇಲೆ ನಂಬಿಕೆ ಇರಬೇಕು ನಿಜ ಆದರೆ ಮೂಡ ನಂಬಿಕೆ ಇರಬಾರದು. ಉದಾಹರಣೆಗೆ ನಾನು ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾಗಬೇಕು. ಏನು ಮಾಡಬೇಕು? ಕೂಲಂಕುಷವಾಗಿ ಸಂಬಂಧಪಟ್ಟ ವಿಷಯವನ್ನು ವಿಶ್ಲೇಷಣೆ ಮಾಡಿ ಅರಿತುಕೊಂಡಿರಬೇಕು. ಆಗ ಸುಗಮವಾಗಿ ಪರೀಕ್ಷೆ ಬರೆಯಲು ಸಾಧ್ಯ. ನನ್ನ ಮೇಲೆ ದೇವರ ಕೃಪೆ ಇದೆ, ಗುರುಗಳ ಆಶೀರ್ವಾದ ಇದೆ, ಮಂತ್ರವಾದಿಯ ತಾಯತ ಇದೆ ಎಂದು ಏನೂ ತಯಾರಿ ಇಲ್ಲದೆಯೇ, ನಿಂಬೆಹಣ್ಣು ತಾಯತ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದರೆ ಅತ್ಯುತ್ತಮ ದರ್ಜೆ ಪಡೆಯಲು ಸಾಧ್ಯವೇ ? ಉತ್ತೀರ್ಣರಾಗುವುದೂ ಕಷ್ಟ. ಅಲ್ಲವೇ ? ದೇವರ ಮೇಲೆ ನಂಬಿಕೆಯಿಟ್ಟು ಚೆನ್ನಾಗಿ ಓದಿ. ಆಗ ನಿಮ್ಮ ಆತ್ಮಬಲ ದ್ವಿಗುಣಗೊಳ್ಳುತ್ತದೆ. ಬಯಸಿದ ಗುರಿ ಸಾಧಿಸಬಹುದು.
ಜೀವನದ ಯಾವುದೇ ವಿಷಯವಾಗಿರಬಹುದು ಹೆಜ್ಜೆ ಇಡುವ ಮುನ್ನ ಮುನ್ನೆಚ್ಚರಿಕೆವಹಿಸಿ ಮುಂದುವರೆಯಿರಿ. ಪ್ರಾಯೋಗಿಕವಾಗಿ ಯೋಚಿಸಲು ಪ್ರಾರಂಭಿಸಿ.
ತಾಯತ ಕಟ್ಟಿಕೊಂಡರೆ ಕರೋನ ವಾಸಿಯಾಗುತ್ತದೆಯೇ..! ಖಂಡಿತವಾಗಿಯೂ ಇಲ್ಲ. ಮೊದಲು ಮುನ್ನೆಚ್ಚರಿಕೆಯ ಕ್ರಮ, ನಂತರ ನಿಮಗಿಷ್ಟವಾದುದನ್ನು ಮಾಡಿ. ಕೆಲವು ವಿಷಯಗಳು ನಮ್ಮ ಹತೋಟಿಯಲ್ಲಿರುತ್ತವೆ, ಕೆಲವು ಇರುವುದಿಲ್ಲ. ಓ ಸೃಷ್ಟಿಕರ್ತನೇ ನಮ್ಮನ್ನು ಸಕಲ ರೋಗಗಳಿಂದ ಕಾಪಾಡು ಎಂದು ಬೇಡಿ. ಪ್ರಯತ್ನವಿಲ್ಲದ ನಂಬಿಕೆ, ನಮಗೆ ನಾವೇ ಮೋಸ ಮಾಡಿಕೊಂಡ ಹಾಗೆ. ನಮ್ಮ ಜೀವನದಲ್ಲಿ ಚಮತ್ಕಾರ ನಡೆದು ಬಿಡಬೇಕು. ಎಲ್ಲವೂ ಅದಾಗಿಯೇ ಸರಿಯಾಗಿ ಹೋಗಿಬಿಡಬೇಕು ಎಂಬ ನಂಬಿಕೆಯೇ ಮೂಢನಂಬಿಕೆ.
– ಜಬೀವುಲ್ಲಾ ಖಾನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.