ಬಂಟ್ವಾಳ, ಸೆ. 21, 2020 (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಎರಡು ಮನೆಗಳ ನಡುವಿನ ಬರೆ ಜರಿದು ಬಿದ್ದಿದೆ. ಇಲ್ಲಿಗೆ ತುರ್ತಾಗಿ ತಡೆಗೋಡೆ ನಿರ್ಮಾಣ ಆಗದೆ ಇದ್ದಲ್ಲಿ ಇಲ್ಲಿನ ನಿವಾಸಿ ಪ್ರದೀಪ್ ಬಿನ್ ದೇಜಪ್ಪ ಎಂಬವರ ಮನೆ ಕುಸಿತಗೊಳ್ಳುವ ಭೀತಿ ಎದುರಾಗಿದೆ. ಕಾವಳಪಡೂರು ಗ್ರಾಮದ ಮದ್ವ ನಿವಾಸಿ ಗಿರಿಜಾ ಕೋಂ ಬಾಬು ಎಂಬವರ ಮನೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಎಂಬುವರ ವಾಸ್ತವ್ಯದ ಪಕ್ಕಾ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಇದನ್ನು ಸದ್ಯ ಟಾರ್ಪಲ್ ಹಾಸಿ ದುರಸ್ತಿ ಪಡಿಸಲಾಗಿದೆ. ವಿಟ್ಲ ಪಡ್ನೂರು ಗ್ರಾಮದ ಬನಾರಿ ಬಾಬಟ್ಟ ಎಂಬಲ್ಲಿ ಅಬ್ದುಲ್ ಯಾನೆ ಅಬ್ದುಲ್ ರಜಾಕ್ ಎಂಬುವರ ಮನೆಗೆ ಗುಡ್ಡದ ಬರೆ ಜರಿದು ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿರುತ್ತದೆ. ಮನೆಯಲ್ಲಿ ಮಕ್ಕಳು ಸೇರಿ 6 ಜನರಿದ್ದು, ಈ ಪೈಕಿ ಗಂಭೀರ ಗಾಯಗೊಂಡ ಇಬ್ಬರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪಸ್ವಲ್ಪ ಗಾಯಗಳಾದ ಉಳಿದ ನಾಲ್ವರನ್ನು ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸದ್ರಿ ಮನೆ ಪಕ್ಕದಲ್ಲಿ ವೆಂಕಪ್ಪ ಸಪಲ್ಯ ಅವರ ಮನೆ ಇದ್ದು ಸದ್ರಿಯವರನ್ನು ಮನೆ ಖಾಲಿ ಮಾಡಿಸಿ ಗುಜರಿ ಹಮೀದ್ ಅವರ ಮನೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಸಜಿಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಆಮಿನಾ ಕೋಂ ಅಶ್ರಫ್ ಅವರ ಮನೆಯ ಒಂದು ಪಾಶ್ರ್ವದ ಗೋಡೆ ಕುಸಿದು ಬಿದ್ದಿದೆ. ಮನೆಯ ಹಂಚಿನ ಛಾವಣಿಗೆ ಹಾನಿಯಾಗಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಮನೆ ಮಂದಿಯನ್ನು ಮತ್ತೊಂದು ಮನೆಗೆ ವರ್ಗಾಯಿಸಲಾಗಿದೆ ಎಂದು ಬಂಟ್ವಾಳ ತಾಲೂಕು ಕಛೇರಿ ಮಳೆ ಹಾನಿ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.