ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ದ ಕ ಜಿಲ್ಲೆಯ ಬೆರಳೆಣಿಕೆಯ ಅಗ್ರಗಣ್ಯ ಸುನ್ನಿ ಪಂಡಿತರ ಸಾಲಿನಲ್ಲಿ ಉತ್ತಮ ಹೆಸರು ಪಡೆದವರು ಬೇಕಲ ಉಸ್ತಾದರು.
ಖಾಝಿಯಾಗಿ,ಭಾಷಣಗಾರರಾಗಿ,ಜ್ಞಾನಿಯಾಗಿ,ಸಂಘಟಕರಾಗಿ, ಉತ್ತಮ ಗುಣ ಸ್ವಭಾವದ ಧಾರ್ಮಿಕ ವಿದ್ವಾಂಸರಾಗಿ ಸಾವಿರಾರು ಶಿಷ್ಯರ ಗುರುಗಳಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುವ ವಿಶೇಷ ಶಕ್ತಿಯನ್ನು ತನ್ನದಾಗಿಸಿ ಕೊಂಡ ಬೇಕಲ ಉಸ್ತಾದರು ಕೊನೆಗೂ ಐಹಿಕ ಜಗತ್ತಿನಿಂದ ಶಾಸ್ವತವಾಗಿ ವಿದಾಯ ಕೋರಿದ್ದಾರೆ. ಹುಟ್ಟಿದವ ಜಗ ಬಿಟ್ಟು ಹೋಗಲೇ ಬೇಕೆಂಬ ಅಲಿಖಿತ ನಿಯಮದ ಮುಂದೆ ಅವಧಿ ಪೂರ್ತಿಗೊಳಿಸಿ ಮರಳಿ ಬಾರದ ಜಗಕ್ಕೆ ಪ್ರಯಾಣ ಬೆಳೆಸಿದ ಬೇಕಲ ಉಸ್ತಾದರ ಬರ್ಝಖೀ ಜೀವನ ಅಲ್ಲಾಹು ಸ್ವರ್ಗೀಯ ತಾಣವಾಗಿಸಲಿ. (ಆಮೀನ್) ನಾನು ಕುಂಬಳೆ ದರ್ಸಿನಲ್ಲಿ ಖಾಸಿಂ ಉಸ್ತಾದರ ಬಳಿ ಮುತಹಲ್ಲಿಮಾಗಿ ಕಲಿಯತ್ತಿರುವಾಗಲೇ ಬೇಕಲ ಉಸ್ತಾದರ ಪರಿಚಯವಾಗಿತ್ತು. ಖಾಸಿಂ ಉಸ್ತಾದ್ ಮತ್ತು ಬೇಕಲರವರು ಆಪ್ತ ಸ್ನೇಹಿತರಾಗಿದ್ದರು. ಸಂಘಟನಾ ಕ್ಷೇತ್ರ ಬಿನ್ನವಾಗಿದ್ದರೂ ಅವರಿಬ್ಬರ ಸ್ನೇಹಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಉಭಯತ್ರರು ಘಂಟೆಗಟ್ಟಲೆ ದೀನೀ ವಿಷಯದಲ್ಲಿ ಮತ್ತು ಲೋಕಾಭಿರಾಮವಾಗಿ ಚರ್ಚೆ ನಡೆಸುತ್ತಿದ್ದುದುನಾನು ಕಣ್ಣಾರೆ ನೋಡಿದ್ದೇನೆ.
ಆ ನಂತರ ಹಲವು ಸಂಧರ್ಭದಲ್ಲಿ ಅವರ ಜೊತೆ ಮಾತಾಡಲು ಕುಶಲಾನ್ವೇಷಣೆ ನಡೆಸಲು ಹಲವು ಸಂಧರ್ಭ ಸಿಕ್ಕಿದೆ. ಎಲ್ಲಿ ಕಂಡರೂ ಅವರು ಪ್ರತ್ಯೇಕವಾಗಿ ನನ್ನನ್ನು ವಿಶೇಷವಾಗಿ ಗಮನಿಸಿ ಮಾತಿಗೆಳೆಯುತ್ತಿದ್ದರು. ಅದಕ್ಕೆ ಕಾರಣವೂ ಇತ್ತು.
ತೊಂಬತ್ತೈದರ ದಶಕದಲ್ಲಿ ನಮ್ಮ ಜಿಲ್ಲೆಯಲ್ಲಿ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ ಸಂಧರ್ಭದಲ್ಲಿ ಇದಕ್ಕೊಂದು ಪರಿಹಾರ ಉಂಟಾಗ ಬೇಕೆಂದು ಹಂಬಲಿಸಿದ ಸಾವಿರಾರು ಮಂದಿಗಳ ಪೈಕಿ ನಾನೂ ಒಬ್ಬನಾಗಿದ್ದೆ.
ಹೀಗಿರುವಾಗ ಬೇಕಲ ಉಸ್ತಾದರನ್ನು ಉಪ್ಪಿನಂಗಡಿ ಸಮೀಪದ ಹಿರೇ ಬಂಡಾಡಿಯಲ್ಲಿ ಮದ್ರಸ ಉದ್ಘಾಟನೆಗೆ ಆಹ್ವಾನಿಸುವಂತೆ ಮುತುವರ್ಜಿಸಿ ವಹಿಸಿ ಅವರನ್ನು ಭಾಗವಹಿಸುವಂತೆ ಮಾಡಿದ್ದೆ.* ಅಲ್ಲಿ ನಾನು ಅವರಲ್ಲಿ ಕೆಲವೊಂದು ಐಕ್ಯತೆಯ ವಿಷಯಗಳ ಬಗ್ಗೆ ಚರ್ಚೆ ಮಾಡಿದಾಗ ಅವರು ಕೂಡಾ ಸಕಾರತ್ಮಕವಾಗಿ ಸ್ಪಂದಿಸಿದ್ದರು. ನಿಜವಾಗಿಯೂ ಅವರು ಇದಕ್ಕೆ ಅಷ್ಟು ಸ್ಪಂದಿಸುವರು ಎಂದು ಗ್ರಹಿಸಿರಲಿಲ್ಲ. ಕಾರಣ ಅದು ಅವರು ಪ್ರತಿನಿಧೀಕರಿಸುವ ಸಂಘಟನೆ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲವಾಗಿತ್ತು. ಕುಂದಾಪುರದಲ್ಲಿ ಬಹಳ ವಿಜ್ರಂಬಣೆಯಿಂದ ಬೃಹತ್ ಸಮಾವೇಶ ನಡೆಸಿ ಶಕ್ತಿ ತೋರಿಸಿ ಕೊಟ್ಟ ತಿಂಗಳ ನಂತರ ನಾನು ಬೇಕಲ ಉಸ್ತಾದರಲ್ಲಿ ಐಕ್ಯತೆಯ ಪ್ರಸ್ತಾಪ ಮುಂದಿಟ್ಟಿದ್ದೆ. ಬಹು ಬೇಕಲ ಉಸ್ತಾದರು ಇದನ್ನು ತುಂಬಾ ಸೀರಿಯಸ್ಸಾಗೇ ತೆಗೆದುಕೊಂಡಿದ್ದರು.
ಒಂದು ವಾರದ ಬಳಿಕ ಎಸ್ ಪಿ ಹಂಝ ಸಖಾಪಿ ಮತ್ತು ಪಿ ಪಿ ಅಹ್ಮದ್ ಸಖಾಪಿಯವರನ್ನು ಬೇಕಲ ಉಸ್ತಾದ್ ನನ್ನ ಬಳಿಗೆ ಮಾತುಕತೆಗೆ ಕಳುಹಿಸಿದ್ದರು. ಅದರ ಫಲಶೃತಿ ಎಂಬಂತೆ ಜಿಲ್ಲೆಯ ಉಭಯ ಬಣದ ಹತ್ತಾರು ಉಲಮಾಗಳು ಬಿಸಿ ರೋಡಿನಲ್ಲಿ ಒಟ್ಟು ಸೇರಿ ಮಜ್ಲಿಸುಲ್ ಇತ್ತಿಹಾದ್ ಎಂಬ ಸಂಘಟನೆ ಆಸ್ತಿತ್ವಕ್ಕೆ ತಂದು ಒಗ್ಗಟ್ಟಿಗಾಗಿ ಪಣ ತೊಟ್ಟಿದ್ದೆವು.
ಆದರೆ ಆ ನಂತರ ನಡೆದ ಕೆಲವೊಂದು ಬೆಳವಣಿಗೆಯಿಂದಾಗಿ ಆ ಪರಿಶ್ರಮ ಅಲ್ಲಿಗೇ ನಿಂತು ಹೋಗಿತ್ತು. ಮತ್ತೆ ವರ್ಷಗಳೇ ಉರುಳಿತು. ಆದರೆ ನಮ್ಮಿಬ್ಬರ ಮದ್ಯೆ ಸ್ನೇಹ ಭಾಂದವ್ಯ ಹಾಗೇ ಮುಂದುವರಿದಿತ್ತು. ಹಲವು ಕಾರ್ಯಕ್ರಮಗಳಲ್ಲಿ ನಾವು ಒಟ್ಟಾಗಿದ್ದೆವು. ಹೀಗಿರುವಾಗ ಉಪ್ಪಿನಂಗಡಿಯಲ್ಲಿ ಅಂದು ವಿಜ್ರಂಭಣೆಯಿಂದ ನಡೆಯುತ್ತಿದ್ದ ರಮಝಾನ್ ಪ್ರಭಾಷಣದಲ್ಲಿ ಸುನ್ನಿ ಐಕ್ಯತೆಯ ಪ್ರತೀಕವಾಗಿ ಮರ್ಹೂಂ ಯೂಸುಪ್ ಹಾಜಿ ಕರಾಯ ಇವರ ಅಭಿಲಾಷೆಯಂತೆ ಬೇಕಲ ಉಸ್ತಾದರ ಒಂದು ದಿನದ ಪ್ರಭಾಷಣ ನಡೆಸುವುದೆಂದು ತೀರ್ಮಾನಿಸಿ ಅದರಂತೆ ಬೇಕಲ ಉಸ್ತಾದರನ್ನು ಆಹ್ವಾನಿಸಲಾಗಿತ್ತು.
ಅಂದು ನಾನು ಅಲ್ಲಿ ಮಾಡಿದ ಭಾಷಣ ಮತ್ತು ಬೇಕಲ ಉಸ್ತಾದರನ್ನು ಕರೆಸಿದ್ದು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.* ಉಭಯ ಉಲಮಾಗಳ ಒಪ್ಪಿಗೆ ಪಡೆದು ಕರ್ನಾಟಕದಲ್ಲಿ ಸ್ವತಂತ್ರ ವಿದ್ಯಾಬ್ಯಾಸ ಬೋರ್ಡ್ ಮಾಡಲು ತಾವುಗಳು ಪ್ರಯತ್ನಿಸ ಬೇಕೆಂದು ಬೇಕಲ ಉಸ್ತಾದರ ಸನ್ನಿಧಿಯಲ್ಲಿ ಕರೆ ನೀಡಿದ್ದು ಮತ್ತು ಈ ಅಭಿಪ್ರಾಯವನ್ನು ಜಾರಿಗೆ ತಂದರೆ ಬಹಳ ಉತ್ತಮ ಎಂದು ಭಾಷಣದಲ್ಲಿ ಬೇಕಲ ಉಸ್ತಾದರು ಪ್ರತಿಕ್ರಿಯಿಸಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿ ಮೂಲತಃ ಅದೇ ಕಾರಣದಿಂದಾಗಿ ಉಪ್ಪಿನಂಗಡಿಯಿಂದ ನಿರ್ಗಮಿಸ ಬೇಕಾಗಿ ಬಂದಿತ್ತು. ಒಟ್ಟಿನಲ್ಲಿ ಬೇಕಲ ಉಸ್ತಾದರು ಗ್ರೂಪಿನ ಅಮಲನ್ನು ತಲೆಗೇರಿಸಿ ಕೊಳ್ಳದೇ ಸಮಾಜಕ್ಕೆ,ಧರ್ಮಕ್ಕೆ ಒಳಿತಾಗುವ ವಿಷಯದಲ್ಲಿ ಗ್ರೂಪ್ ನೋಡದೇ ಪ್ರತಿಕ್ರಿಯಿಸುತ್ತಿದ್ದರು.
ಉಲಮಾಗಳೆಂದ ಮೇಲೆ ಮಡಿವಂತಿಕೆಯೇ ಅವರಿಗೆ ಗೌರವ ತಂದು ಕೊಡುವ ಅಂಶ ಎಂಬ ಗೊಡ್ಡುತನಕ್ಕೆ ಜೋತು ಬೀಳದ ಬೇಕಲ ಉಸ್ತಾದರು ಕನ್ನಡದಲ್ಲಿ ಕೂಡಾ ಭಾಷಣ ಮಾಡಿ ಶಹಬ್ಬಾಸ್ ಗಿರಿ ಗಿಟ್ಟಿಸಿ ಕೊಂಡಿದ್ದರು.
ಧರ್ಮದ ಸೋಗಿನಲ್ಲಿ ಅನಗತ್ಯ ಆಚಾರ ವಿಚಾರಗಳನ್ನು ಕೂಡಾ ಅವರು ವಿರೋಧಿಸುತ್ತಿದ್ದರಲ್ಲದೆ ಗ್ರೂಪಿನ ಲೇಬಲಿನಲ್ಲಿ ಮಾಡುವ ಎಲ್ಲಾ ಕೃತ್ಯಗಳನ್ನು ಒಪ್ಪಿಕೊಳ್ಳಲಾಗದು ಎಂದು ಅವರು ಖಡಕ್ ಆಗಿ ಹೇಳಿ ಬಿಡುತ್ತಿದ್ದರು.
ವರ್ಣ ರಂಜಿತ ಮತ್ತು ಮಾದರಿಯುಕ್ತ ಬದುಕನ್ನು ಸವೆಸಿದ ಬೇಕಲ ಇಬ್ರಾಹಿಂ ಉಸ್ತಾದ್ ಕರ್ನಾಟಕದ ಇಸ್ಲಾಮಿಕ್ ಧಾರ್ಮಿಕ ಕ್ಷೇತ್ರದಲ್ಲಿ ಅಚ್ವಳಿಯದ ಸ್ಮರಣೆಯನ್ನು ಉಳಿಸಿ ಹೋಗಿದ್ದಾರೆ ಎಂಬುದು ದಿಟ. ಅಲ್ಲಾಹು ಅವರೊಂದಿಗೆ ಎಲ್ಲಾರನ್ನು ಅವನ ಸ್ವರ್ಗದಲ್ಲಿ ಒಟ್ಟುಗೂಡಿಸಲಿ.(ಆಮೀನ್)
✍️ಎಸ್ ಬಿ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.