(www.vknews.com) : ಅಪ್ಪಾಜಿ…! ನೀವು ಚಪಾತಿ ತಿನ್ನುವ ಮುನ್ನ ಅದರ ನಾಲ್ಕು ಭಾಗಗಳನ್ನಾಗಿ ಏಕೆ ಮಾಡುತ್ತೀರಿ?
ಒಳ್ಳೆಯ ಪ್ರಶ್ನೆ ಮಗನೇ…!
ನಾವು ಒಟ್ಟಾಗಿ ಕುಳಿತು ಭೋಜನ ಮಾಡುವಾಗ ಯಾರ ಹೊಟ್ಟೆಯಲ್ಲಿ ಎಷ್ಟು ಹಸಿವಿದೆ ಎಂದು ನಮಗೆ ತಿಳಿಯದು. ಯಾರಿಗೆ ಹಸಿವು ಹೆಚ್ಚಾಗಿದೆ ಅವರು ಚಪಾತಿಯ ಹೋಳನ್ನು ತೆಗೆದುಕೊಳ್ಳಲಿ ಎಂದು ಗುರುವರ್ಯರು ಮಾಡಿರುವ ಪದ್ಧತಿ. ಮನೆಯಲ್ಲಿ ಅಮ್ಮನ ಹತ್ತಿರ ಕೇಳಿ ಚಪಾತಿ ಪಡೆದುಕೊಳ್ಳಬಹುದು. ಹೊರಗೆ ಸ್ನೇಹಿತರ ಜೊತೆ , ನೆಂಟರ ಜೊತೆ ಹಾಗೆ ಮಾಡಲು ಸಾಧ್ಯವೇ ? ನಾಚಿಕೆ ಆಗುತ್ತದೆ ಅಲ್ಲವೇ ಪುಟ್ಟಾ…! ಬೇರೆಯವರು ಸಂಕೋಚವೂ ಪಡಬಾರದು, ಹೊಟ್ಟೆ ತುಂಬ ತಿನ್ನಲಿ ಎಂಬ ರಹಸ್ಯ ಈ ಅಭ್ಯಾಸದ ಹಿಂದಿದೆ.
ಇನ್ನೊಂದು ವಿಷಯ ಏನೆಂದರೆ, ನಾನು ಕಡಿಮೆ ತಿಂದರೂ ಪರವಾಗಿಲ್ಲ, ಬೇರೆಯವರು ಸುಖವಾಗಿರಬೇಕು, ಅವರಿಗೆ ಯಾವ ರೀತಿಯ ಅನಾನುಕೂಲವೂ ಆಗಬಾರದು. ಎಲ್ಲವೂ ನನಗೆ ಬೇಕು ಎಂದು ಬಯಸಬಾರದು, ಬೇರೆಯವರ ಬಗ್ಗೆಯೂ ಚಿಂತಿಸಬೇಕು. ಈ ವಿಷಯ ಕೇವಲ ಚಪಾತಿಗೆ ಸೀಮತವಾಗಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಎಲ್ಲರ ಬಗ್ಗೆ ಕಾಳಜಿವಹಿಸಬೇಕು. ಉದಾಹರಣೆಗೆ ಆಸ್ತಿ ಹಂಚಿಕೆಯಲ್ಲಿ ಕೆಲವರು ಸ್ವಾರ್ಥಿಗಳಾಗಿ ಬಿಡುತ್ತಾರೆ. ಎಲ್ಲರಿಗು ಸಮನಾದ ಪಾಲು ಹಂಚುವುದಿಲ್ಲ. ಹೆಣ್ಣು ಮಕ್ಕಳಿಗಂತೂ ಕೊಡುವುದೇ ಇಲ್ಲ. ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಷ್ಠೆಯಿಂದ ಕರ್ಮಗಳನ್ನು ಪಾಲಿಸುತ್ತಿರುತ್ತಾರೆ. ಆದರೆ ಮನುಷ್ಯರಿಗೆ ಸಂಬಂಧಿಸಿದ ವಿಷ್ಯಗಳಲ್ಲಿ ನಿಯ್ಯತ್ತು ಬದಲಾಯಿಸಿ ಬಿಡುತ್ತಾರೆ. ಪೋಷಕರ ಖರ್ಚಿಗೆ ನಯಾ ಪೈಸೆ ಕೊಡಲ್ಲ. ಊರಿಗೆ ಅನ್ನದಾನ ಮಾಡುತ್ತಿರುತ್ತಾರೆ. ಮನೆಯಲ್ಲಿರುವವರ ಮದುವೆ ಮಾಡಿಸುವುದಿಲ್ಲ, ಪರರ ಸಾಮೂಹಿಕ ಮದುವೆಗಳಿಗೆ ಸಾರಥಿಯಾಗಿರುತ್ತಾರೆ. ಶ್ರೀಮಂತರನ್ನು ಕಂಡರೆ ಒಂದು ವ್ಯವಹಾರ ಮಾಡುತ್ತಾರೆ, ಬಡವರ ಜೊತೆ ನಡೆದುಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಅತಿಥಿಗಳ ಮುಂದೆ ನಡೆದುಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಅವರು ಹೊರಟ ನಂತರ ಮಾತನಾಡಿಕೊಳ್ಳುವ ಪರಿಯೇ ಬೇರೆ. ಮನುಷ್ಯ ತನ್ನ ಬಣ್ಣಗಳನ್ನು ಬದಲಾಯಿಸುತ್ತಿರುತ್ತಾನೆ. ನಮ್ಮ ದೃಷ್ಟಿಗೆ ಕಾಣುವ ಮನುಷ್ಯ, ನಿಜವಾದ ಮನುಷ್ಯನಲ್ಲ. ನಮ್ಮ ಅಂತರಂಗವೇ ನಿಜವಾದ ನಾವು.
ಜನ ಸಾಮಾನ್ಯರು, ರೈತರು, ಬಡಬಗ್ಗರು ದೇಶದಲ್ಲಿ ಪರದಾಡುತ್ತಿದ್ದಾರೆ. ನ್ಯಾಯವಾದಿಗಳು, ಮಂತ್ರವಾದಿಗಳು, ಪತ್ರಕರ್ತರು, ವೈದ್ಯರು, ಶಿಕ್ಷಕರು, ಮೀಡಿಯಾ ಚಾನಲ್ ಗಳು, ರಾಜಕೀಯ ವ್ಯಕ್ತಿಗಳು, ಸ್ವಾಮೀಜಿಗಳು, ಪೊಲೀಸರು – ಎಲ್ಲರು ತನ್ನ ನೈಜ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ.
ದುರಾಡಳಿತ ಅನ್ಯಾಯ ಗುಂಡಾಗಿರಿ ಹೆಡೆ ಎತ್ತಿವೆ
ದಕ್ಷತೆ ನ್ಯಾಯ ನೀತಿ ಬದುಕಿದ್ದು ಸತ್ತಿವೆ
ಮೋಸ ವಂಚನೆ ಕೊಲೆ ದರೋಡೆ ಭುಗಿಲೆದ್ದಿವೆ
ಮನುಷ್ಯತ್ವ ಮಾನವೀಯತೆ ಸಹನೆ ನೆಲ ಕಚ್ಚಿವೆ
ಇದಕೆಲ್ಲಾ ಮುಖ್ಯ ಕಾರಣ ಸ್ವಾರ್ಥ. ಗೊತ್ತಾಯಿತೇ …!
ತುಂಬಾ ಥ್ಯಾಂಕ್ಸ್ ಅಪ್ಪಾಜಿ…
ಒಂದು ಚಪಾತಿಯ ಸಮಾನಾಂತರ 4 ಭಾಗಗಳ್ಳನ್ನು ಏತಕ್ಕೆ ಮಾಡುತ್ತಾರೆ ಎಂದು ತಿಳಿದುಕೊಂಡೆ.
ನಾನು ನಿಸ್ವಾರ್ಥಿಯಾಗಿ ಬದುಕಲು ಇಚ್ಛಿಸುತ್ತೇನೆ. ಆಶೀರ್ವದಿಸಿ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.