(www.vknews.com) : ಕೆಡುಕು ತುಂಬಿದ ಪರಿಸರದಲ್ಲಿ ಜೀವಿಸುವ ವಿದ್ಯಾರ್ಥಿಗಳಲ್ಲಿ ಪವಿತ್ರ ಇಸ್ಲಾಮಿನ ನೈಜ ಆದರ್ಶ- ತತ್ವಗಳನ್ನು ಉಣಬಡಿಸಲು ಶ್ರೇಷ್ಠ ಸಜ್ಜನ ವಿದ್ವಾಂಸರ ಸಾರಥ್ಯದಲ್ಲಿ ಚಾಲನಾ ರಂಗಕ್ಕೆ ಇಳಿದು ಬಂದ ಸಂಘಟನೆಯಾಗಿದೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್. 1973 ಏಪ್ರಿಲ್ 29ರಂದು ಕೇರಳದ ಪುಣ್ಯ ಮಣ್ಣಿನಲ್ಲಿ ಸ್ಥಾಪಿತಗೊಂಡ ಈ ಸಂಘಟನೆಯು ರಾಜ್ಯ, ದೇಶದ ಗಡಿಯನ್ನು ಮೀರಿ ವಿದೇಶಗಳಲ್ಲಿಯೂ ಕ್ರಾಂತಿಯನ್ನು ಸೃಷ್ಟಿಸಿದಾಗ ಸಮೀಪದ ಕನ್ನಡ ನಾಡಿನ ಸಾತ್ವಿಕ ವಿದ್ವಾಂಸರು ಇಲ್ಲಿನ ಮಣ್ಣಿನಲ್ಲೂ ಸ್ವತಂತ್ರವಾಗಿ ಕಾರ್ಯಾಚರಿಸುವ ಗುರಿಯೊಂದಿಗೆ ರಾಜ್ಯ ಸಮಿತಿಗೆ ರೂಪು ಕಲ್ಪನೆ ನೀಡಲು ಮುಂದೆ ಬಂದರು. ಅದರ ಪರಿಣಾಮ 1989 ಸೆಪ್ಟೆಂಬರ್ 19ರಂದು ಕನ್ನಡಾಂಬೆಯ ಅನುಗ್ರಹೀತ ಭೂಮಿಯಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಸ್ವತಂತ್ರವಾಗಿ ರಚನೆಗೊಂಡಿತು.
ಯೌವನಕ್ಕೆ ಸಿಕ್ಕಿದ ಬಹುಮಾನ
ಯೌವನ ಎಂಬುವುದು ಮನುಷ್ಯ ಬದುಕಿನ ಅತ್ಯಂತ ಪ್ರಮುಖ ಘಟ್ಟವಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಮನೆ ಸಮೀಪದ ಶಾಲೆಗಳಲ್ಲಿ ಮುಗಿಸುವ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸಿನಲ್ಲಿ ದೂರದ ಕ್ಯಾಂಪಸ್ ಗಳನ್ನು ಆಯ್ಕೆ ಮಾಡುವುದು ಸಹಜವಾಗಿದೆ. ವಿದ್ಯಾರ್ಥಿ ಬದುಕು ಅಂದರೆ ಕಂಡ ಕನಸುಗಳನ್ನು ನನಸಾಗಿಸುವ ಕಾಲವಾಗಿದೆ. ಹೈಸ್ಕೂಲ್ ಶಿಕ್ಷಣದ ಬಳಿಕ ವಿದ್ಯಾರ್ಥಿಗಳೆಲ್ಲರೂ ಸ್ವತಂತ್ರರಾಗುತ್ತಾರೆ. ಮಕ್ಕಳ ಚಲನವಲನಗಳನ್ನು ಹೆಚ್ಚೆಂದರೆ ಯವ್ವನದ ತನಕ ಮಾತ್ರ ರಕ್ಷಕರು ಗಮನಿಸುತ್ತಾರೆ. ಆ ಬಳಿಕದ ಕಾಲವನ್ನು ಮಜಾ ಮಾಡುವ ಸಮಯವಾಗಿ ಹೆಚ್ಚಿನ ವಿದ್ಯಾರ್ಥಿಗಳು ಉಪಯೋಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಸ್ತುತ ಕಾಲಾವಧಿಯಲ್ಲಿ ನೈತಿಕತೆಯ ಮೇರಿಯನ್ನು ಮೀರಿ ಬದುಕುವ ವಿದ್ಯಾರ್ಥಿಗಳ ಮುಂದಿನ ಬದುಕು ಕೂಡ ಅಪಾಯಕಾರಿ ಸನ್ನಿವೇಶದಲ್ಲಾಗುವುದನ್ನು ನಮ್ಮೆಡೆಯಲ್ಲಿ ಈಗಲೂ ಕಾಣಲು ಸಾಧ್ಯವಾಗುತ್ತಿದೆ. ಇದನ್ನು ಅರಿತು ಬಹುತೇಕ ಮಾತಾಪಿತರು ಮಕ್ಕಳ ಬದುಕನ್ನು ಧಾರ್ಮಿಕ ತಳಹದಿಯಲ್ಲಿ ನೆಲೆ ನಿಲ್ಲಿಸಲು ಹೆಣಗಾಡುತ್ತಿದ್ದಾರೆ. ಈ ಸಂದರ್ಭದಲ್ಲಾಗಿದೆ ಎಸ್ಸೆಸ್ಸೆಫ್ ಎಂಬ ಸಂಘಟನೆಯ ಅನಿವಾರ್ಯತೆಯು ಎಲ್ಲರಿಗೂ ಮನದಟ್ಟಾಗುವುದು.
ವಿದ್ಯಾರ್ಥಿಗಳ ಬದುಕು ಧಾರ್ಮಿಕ ಭದ್ರ ಬುನಾದಿಯಲ್ಲಿಯೇ ನಿಂತು ನೈತಿಕಯ ಎಲ್ಲೆಯನ್ನು ಮೀರದೆ ಅವರಿಗೆ ಒಳಿತಿನ ತಡೆಗೋಡೆಯಾಗಿ ಎಸ್ಸೆಸ್ಸೆಫ್ ನಿಲ್ಲುತ್ತದೆ. ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳಲ್ಲಿ ಅಧಾರ್ಮಿಕತೆಯ ಗಾಳಿ ಬೀಸದಂತೆ ನೋಡಿಕೊಳ್ಳುವಲ್ಲಿ ಸಂಘಟನೆಯು ಮುಖ್ಯ ಪಾತ್ರ ವಹಿಸುತ್ತದೆ. ತಮ್ಮ ದಿನಚರಿಯನ್ನು ಉತ್ತಮಗೊಳಿಸುತ್ತಾ ಪರಿಣಾಮಕಾರಿಯಾಗಿ ಮಾಡುವಲ್ಲಿ ಎಸ್ಸೆಸ್ಸೆಫಿನ ಸದಸ್ಯತ್ವ ಪಡೆದ ವಿದ್ಯಾರ್ಥಿಗಳು ವಿಜಯಿಗಳಾಗುತ್ತಾರೆ. ಕಾಲೇಜು ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ಕೂಡ ಪಡೆಯುವ ಇಂದಿನ ಹೆಚ್ಚಿನ ವಿದ್ಯಾರ್ಥಿಗಳು, ಸಮಯಕ್ಕೆ ಸರಿಯಾಗಿ ನಮಾಜು, ಸುನ್ನತ್ ಉಪವಾಸಗಳು, ಕುರ್ಆನ್ ಪಾರಾಯಣ, ಸ್ವಲಾತ್, ದಿಕ್ರ್ ಮೊದಲಾದ ಸತ್ಕರ್ಮಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವುದನ್ನು ಕಾಣಬಹುದಾಗಿದೆ. ಇದು ಎಸ್ಎಸ್ಎಫ್ ಅವರಲ್ಲಿ ಸೃಷ್ಟಿಸಿದ ಪರಿಣಾಮವಾಗಿದೆ.
ಎಸ್ಸೆಸ್ಸೆಫಿನ ಅನಿವಾರ್ಯತೆ ಅಧಿಕ
ವಿದ್ಯಾರ್ಥಿಗಳ ಉಜ್ವಲ ಬದುಕನ್ನು ಕನಸು ಕಾಣುತ್ತಾ ಇವತ್ತು ಸಮಾಜ ಸೇವೆಗೆ ಹಲವು ಸಂಘಟನೆಗಳು ಇಳಿದಿದೆ. ಯಾರು ಏನೇ ಹೇಳಿದರೂ ವಿದ್ಯಾರ್ಥಿಗಳಿಗೆ ನೈತಿಕತೆಯ ಬಾಗಿಲು ಮೊದಲು ತೋರಿಸಿದ ಹೆಗ್ಗಳಿಕೆ ಎಸ್ಸೆಸ್ಸೆಫಿಗೆ ಸಲ್ಲುತ್ತದೆ. 50 ವರ್ಷಗಳ ಹಿಂದೆ ಜನ್ಮ ದಾಳಿದ ಎಸ್ಎಸ್ಎಫ್, ದೇಶ-ವಿದೇಶಗಳಲ್ಲಾಗಿ ಹಲವು ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸಿದೆ. 31 ಸಂವತ್ಸರಗಳನ್ನು ದಾಟುವ ಕನ್ನಡನಾಡಿನ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ನಮ್ಮ ರಾಜ್ಯದಲ್ಲೂ ಸಾವಿರಾರು ಯೂನಿಟ್ ಸಮಿತಿಗಳೊಂದಿಗೆ ಕಾರ್ಯಾಚರಿಸುತ್ತಾ ಲಕ್ಷಾಂತರ ಕಾರ್ಯಕರ್ತರ ಬಾಳಿಗೆ ಬೆಳಕಾಗಿ ಪರಿಣಮಿಸಿದೆ. ನಮ್ಮ ಮಕ್ಕಳು ಎಸ್ಸೆಸ್ಸೆಫಿನ ಸದಸ್ಯತ್ವ ಪಡೆಯಬೇಕೆಂದು ಆಸೆಪಡುವ ಹಲವಾರು ರಕ್ಷಕರು ಇದ್ದಾರೆ. ಈ ಸಂಘಟನೆಯಲ್ಲಿ ಕಾರ್ಯಾಚರಿಸುವುದರಿಂದ ನಮಗೆ ನೆಮ್ಮದಿಯಿದೆ ಎಂದು ಹೆಮ್ಮೆಯಿಂದ ಹೇಳುವ ಪೋಷಕರೂ ಇದ್ದಾರೆ. ಹೌದು, ಈ ಸಮಾಜವು ಬಯಸಿದ ಹಲವಾರು ಕೊಡುಗೆಗಳನ್ನು ನೀಡಿದ ಹೆಮ್ಮೆಯು ಸಂಘಟನೆಗಿದೆ. ಆದರೂ ತನ್ನ ನಿಷ್ಕಳಂಕ ಸೇವೆಯನ್ನು ಯಾವತ್ತೂ ಕೈ ಬಿಟ್ಟಿಲ್ಲ. ಸಮಾಜದ ಅಗತ್ಯಗಳನ್ನು ನೀಡುತ್ತಾ ಶಿಕ್ಷಣ, ಆರೋಗ್ಯ, ಸೇವೆ, ಸಹಕಾರ ಮುಂತಾದುವುಗಳಲ್ಲಿ ಎಸ್ಎಸ್ಎಫ್ ಸಕ್ರಿಯವಾಗಿ ಮುನ್ನಡೆಯುತ್ತಿದೆ. ನಮ್ಮ ಮಕ್ಕಳು ಈ ನಾಡಿನ ನಾಳೆಯ ನಾಯಕರು. ಈ ಸಮಾಜವನ್ನು ಮುನ್ನಡೆಸಬೇಕಾದವರು. ಆದುದರಿಂದಲೇ ಅವರು ಒಳಿತಿನ ಪಥದಲ್ಲಿ ಸಾಗಿದರೆ ಮಾತ್ರ ಈ ಸಮಾಜವು ನೈತಿಕ ಪಥದಲ್ಲಿ ಸಂಚರಿಸಬಹುದು. ಅವರು ಕೆಟ್ಟರೆ ಸಮಾಜವು ಖಂಡಿತವಾಗಿಯೂ ತಪ್ಪು ದಾರಿಯಲ್ಲಿ ಹೋಗುವುದು. ಅದಕ್ಕಾಗಿ ಮಕ್ಕಳನ್ನು ಎಸ್ಸೆಸ್ಸೆಫಿನಲ್ಲಿ ಸೇರಿಸೋಣ.!!
ಸಾತ್ವಿಕ ಸಾರಥ್ಯ : ಇದರ ವಿಶೇಷತೆ
ಮಹಾತ್ಮರ ನಾಯಕತ್ವವೆನ್ನುವುದು ಎಸ್ಸೆಸ್ಸೆಫ್ ನ ವಿಶೇಷತೆಯಾಗಿದೆ. ನಮ್ಮಲ್ಲಿನ ಬೇರೆ ಯಾವುದೇ ಸಂಘಟನೆಗಳಿಗೂ ಸಿಗದಂತಹ ಸಾರಥ್ಯವು ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಗೆ ಲಭಿಸಿರುವುದು ಇದರ ಮಹತ್ವವನ್ನು ಉನ್ನತಿಗೇರಿಸಿದೆ. ಪವಿತ್ರ ಧರ್ಮದ ನೈಜ ಆಶ್ರಯದಲ್ಲಿ ಅಣುವಿನಷ್ಟು ಲೋಪ ತೋರಿಸದೆ ಇಸ್ಲಾಮಿನ ನಿಯಮಕ್ಕೆ ಸಂಪೂರ್ಣವಾಗಿ ಶರಣಾಗಿ ಬದುಕುತ್ತಾ, ಸ್ವಾರ್ಥವನ್ನು ತೋರ್ಪಡಿಸಿದೆ ನಿಸ್ವಾರ್ಥ, ನಿಷ್ಕಳಂಕ, ವಿನಯಾನ್ವಿತರಾಗಿ ಬದುಕುತ್ತಿರುವ ನಾಯಕರು ಇರುವುದರಿಂದ ಅದರ ಪರಿಣಾಮವು ಅನುಯಾಯಿಗಳಲ್ಲೂ ಕಾಣಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ನಾಯಕರಾದ ಮರ್ಹೂಂ ವಡಗರ ಮುಹಮ್ಮದ್ ಹಾಜಿ (ಖ.ಸಿ) ಯವರು ಅರ್ಶಿನ ನೆರಳು ಸಿಗುವ ವಿಭಾಗವೆಂದು ಬಣ್ಣಿಸಿರುವುದರ ಕಾರಣವು ಇದುವೆ ಆಗಿರುತ್ತದೆ ಎಂದು ಮನದಟ್ಟು ಮಾಡಲು ಯಾರಿಗೂ ಕಷ್ಟವಾಗಲಾರದು.
ಸ್ಥಾಪಕ ದಿನವಾದ ಇವತ್ತು ಧ್ವಜ ದಿನವಾಗಿ ರಾಜ್ಯದ ಎಲ್ಲಾ ನಾಡಿನಲ್ಲೂ ಆಚರಿಸುವಾಗ ಈ ಸಂಘಟನೆಗೆ ನಾಯಕತ್ವ ವಹಿಸಿ ನಮ್ಮಿಂದ ಅಗಲಿದ ಮಹಾತ್ಮರನ್ನು ಸ್ಮರಿಸೋಣ. ಅನಾರೋಗ್ಯದಿಂದ ಹಾಸಿಗೆ ಹಿಡಿದವರನ್ನು ಕೂಡಾ ಪ್ರಾರ್ಥನೆಯೊಂದಿಗೆ ನೆನಪಿಸೋಣ. ಎಲ್ಲರಿಗೂ ಆರೋಗ್ಯ ಪೂರ್ಣ ದೀರ್ಘಾಯುಷ್ಶಕ್ಕಾಗಿ ದುಆ ಮಾಡೋಣ.
✒️ ಕೊಡಂಗಾಯಿ ಕಾಮಿಲ್ ಸಖಾಫಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.