ಮುಲ್ಕಿ(ವಿಶ್ವಕನ್ನಡಿಗ ನ್ಯೂಸ್): ಆಧುನಿಕ ಜಗತ್ತಿನಲ್ಲಿ ವಿದ್ಯೆ ಎಂಬುದು ಯಾವುದೇ ಒಂದು ಜನಾಂಗ ಅಥವಾ ರಾಷ್ಟ್ರದ ಖಾಸಗಿ ಸೊತ್ತಾಗಿರದೆ ಎಲ್ಲಾ ವರ್ಗದ ಜನರಿಗೂ ಪಡೆಯಲು ಅವಕಾಶ ಇರುವ ಒಂದು ನಿಧಿಯಾಗಿದೆ. ಜ್ಞಾನದ ಒಡೆಯರಾಗುವುದೇ ಜಗತ್ತಿನ ಅಧಿಪತಿಗಳಾಗಲು ಇರುವ ಏಕೈಕ ಮಾನದಂಡ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಹಝ್ರತ್ ಸುಲೇಮಾನ್ ನೆಬಿಯವರಿಗೆ ಅಧಿಕಾರ,ಸೊತ್ತು ಮತ್ತು ಜ್ಞಾನ ಈ ಮೂರರ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಅವರು ವಿದ್ಯೆಯನ್ನು ಆಯ್ಕೆ ಮಾಡಿದ್ದರು.ತರುವಾಯ ಅಧಿಕಾರ ಮತ್ತು ಐಶ್ವರ್ಯವನ್ನೂ ಅವರಿಗೆ ನೀಡಲಾಯಿತು ಎಂಬ ಹದೀಸನ್ನು ಉಲ್ಲೇಖಿಸಿದ ಖತೀಬರು ಇದರಲ್ಲಿ ವಿವೇಕವಂತರಿಗೆ ಬಹಳಷ್ಟು ಅರ್ಥಪೂರ್ಣ ಸಂದೇಶ ಅಡಕಗೊಂಡಿದೆ ಎಂದು ನುಡಿದರು.
ನಮಗೆ ಕಿವಿ ಮತ್ತು ಕಣ್ಣು ತಲಾ ಎರಡು ನೀಡಿದ ದೇವನು ನಾಲಗೆಯನ್ನು ಒಂದು ಮಾತ್ರ ನೀಡಿದ್ದಾನೆ.ಇದರ ಅರ್ಥ ನಾವು ಮಾತಾಡುವುದಕ್ಕಿಂತ ಆಲಿಸಲು ಮತ್ತು ಸುತ್ತಮುತ್ತ ದೃಷ್ಟಿ ಹಾಯಿಸಲು ಹೆಚ್ಚಾಗಿ ಶ್ರಮ ಪಡಬೇಕಾಗಿದೆ ಎಂಬುದಾಗಿದೆ.
ವಿದ್ಯೆ ಎಂಬುದು ವಿಶ್ವಾಸಿಯ ಕಳೆದು ಹೋದ ಸೊತ್ತಾಗಿದ್ದು ಅದು ಎಲ್ಲಿ ಪತ್ತೆಯಾದರೂ ಅದರ ಹಕ್ಕುದಾರ ಸತ್ಯ ವಿಶ್ವಾಸಿ ಆಗಿರುತ್ತಾನೆ ಎಂಬ ಪ್ರವಾದಿ ವಚನ ಕೂಡಾ ಬೇರೆ ಇದೆ ಎಂದು ಹೇಳಿದ ಖತೀಬರು ನಮ್ಮ ಬಳಿ ಇರುವ ಶಕ್ತಿಯ ಬಗ್ಗೆ ನಾವು ಅಜ್ಞಾನರಾಗಿದ್ದೇವೆಂದರೆ ನಮಗೆ ಯಾವತ್ತೂ ಅಭಿವೃದ್ದಿ ಹೊಂದಲು ಸಾದ್ಯವಾಗದೆ ಬಿಕ್ಷೆ ಎತ್ತುತ್ತಲೇ ಇರ ಬೇಕಾಗುತ್ತದೆ ಎಂದು ನೊಂದು ನುಡಿದರು. ಶ್ರೀಮಂತನ ಬಳಿ ಒಬ್ಬ ಬಿಕ್ಷುಕ ಬರುತ್ತಾನೆ. ಆತ ಬಿಕ್ಷೆಗೆ ಬಳಸುವ ಪಾತ್ರೆಯನ್ನು ನೋಡಿದ ಶ್ರೀಮಂತ ಅದನ್ನು ಅವನಿಂದ ಪಡೆದು ಪರೀಕ್ಷಿಸಿ ನೋಡುತ್ತಾನೆ.ನಿನಗೆ ಇದೆಲ್ಲಿಂದ ಸಿಕ್ಕಿತು ಎಂದು ಪ್ರಶ್ನಿಸುತ್ತಾನೆ.ಅದು ನನ್ನ ತಾತನಿಗೆ ಯಾರೋ ನಿಮ್ಮಂತಹ ಒಬ್ಬ ಶ್ರೀಮಂತ ನೀಡಿದ್ದು ಎನ್ನುತ್ತಾನೆ ಬಿಕ್ಷುಕ.
ಆಗ ಶ್ರೀಮಂತ ಆ ಪಾತ್ರೆಯಲ್ಲಿ ನಮೂದಿಸಲಾದ ತನ್ನ ತಾತನ ಹೆಸರನ್ನು ತೋರಿಸಿ ಇದು ನಿನ್ನ ತಾತನಿಗೆ ಬದುಕು ಕಟ್ಟಿಕೊಳ್ಳಲು ನನ್ನ ತಾತ ನೀಡಿದ ಚಿನ್ನದ ಪಾತ್ರೆಯಾಗಿದೆ ಎನ್ನುತ್ತಾನೆ. ಈ ಉದಾಹರಣೆಯನ್ನು ವಿವರಿಸಿದ ಖತೀಬರು ನಮ್ಮ ಬಳಿ ಅಲ್ಲಾಹನು ನೀಡಿದ ಅಪಾರ ಆರೋಗ್ಯ,ಬುದ್ದಿ,ಸಂಪತ್ತು ಎಂಬ ಅಕ್ಷಯ ಪಾತ್ರೆ ಇದ್ದರೂ ಅದು ಈ ಬಿಕ್ಷುಕನ ಪಾತ್ರೆಯಂತೆಯಾಗಿದ್ದು ಅದರ ಮೌಲ್ಯವನ್ನು ಗುರುತಿಸಿ ಕೊಳ್ಳಲಾಗದೇ ನಾವು ಜಾಗತಿಕವಾಗಿ ಹಿಂದೆ ಬಿದ್ದಿದ್ದೇವೆ ಎನ್ನುತ್ತಾ
ಅರಬಿಗಳ ಭೂಮಿಯಲ್ಲಿ ಸಿಗುವ ಇಂದನವನ್ನು ಶುದ್ದೀಕರಿಸಲು ಅಮೇರಿಕದವನ ಜ್ಞಾನದ ಮೊರೆಹೋಗ ಬೇಕಾದ ಪರಿಸ್ಥಿತಿ ನಮ್ಮದಾಗಿದೆ.ಇದರಿಂದಾಗಿ ಅಷ್ಟೂ ರಾಷ್ಟ್ರಗಳಿದ್ದೂ,ಜನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದೂ ಯಾವುದೇ ಪ್ರಯೋಜನ ಇಲ್ಲದಾಗಿದೆ ಎಂದರು. ಮಾನವನ ಹುಟ್ಟಿನ ಬಗ್ಗೆ ಪವಿತ್ರ ಕುರಾನಿನಲ್ಲಿ ಪ್ರತಿಪಾದಿಸಿದ ಕಡೆ
ಆದಿ ಮಾನವ ದೇವದೂತರಿಗೆ ಜ್ಞಾನ ಕಲಿಸಿದ್ದಕ್ಕಾಗಿ ಅವರು ಮಾನವನ ಮುಂದೆ ಶರಣಾದ ಘಟನೆ ಪ್ರಸ್ತಾಪ ಮಾಡಲಾಗಿದೆ.ಅದು ಮಾತ್ರವಲ್ಲದೇ
ಹಿರಾ ಗುಹೆಯಲ್ಲಿ ಪ್ರಥಮವಾಗಿ ಪ್ರವಾದಿ ಅ ಸ ರಿಗೆ ಅವತರಿಸಿದ ಕುರಾನಿನ ಸೂಕ್ತದಲ್ಲಿ ಓದು ಮತ್ತು ಬರಹವನ್ನು ಪರಿಚಯಿಸಲಾಗಿದೆ.ಆದಾಗ್ಯೂ ಕುರಾನಿನ ಜನ ಓದು ಬರಹದಲ್ಲಿ ಹಿಂದುಳಿದದ್ದು ವಿರೋಧಬಾಸವಾಗಿದೆ
ಎನ್ನುತ್ತಾ ಮುಂದಿನ ಪೀಳಿಗೆಯಾದರೂ ಲೌಕಿಕ ಮತ್ತು ನೈತಿಕ ಜ್ಞಾನ ಪಡೆದು ಸಮಾಜದ ಏಳಿಗೆಗಾಗಿ ಶ್ರಮ ಪಡುವಂತೆ ವ್ಯವಸ್ಥೆ ರೂಪಿಸಲು ಇಂದಿನವರು ಮುಂದೆ ಬರಬೇಕಾಗಿದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.