ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್): ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬ ನಮ್ಮ ಕರ್ನಾಟಕದ ಹೆಮ್ಮೆಯ ನಾಡಹಬ್ಬ. ಈ ಹಬ್ಬದಲ್ಲಿ ನಡೆಯುವ ಕ್ರೀಡೋತ್ಸವ ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ. ಈ ಕ್ರೀಡೋತ್ಸವ ನಮ್ಮ ಯುಏಇಯಲ್ಲೂ ಕೂಡ ಅಷ್ಟೇ ಸಂಭ್ರಮದಿಂದ ನಡೆಸಬೇಕೆಂಬ ಆಶಯದೊಂದಿಗೆ ದುಬೈ ಯುವರಾಜ ಶೇಕ್ ಹಂದಾನ್ ಎಲ್ಲಾ ವರ್ಷ ಕರೆ ನೀಡುವ ದುಬೈ ಫಿಟ್ನೆಸ್ ಚಾಲೆಂಜ್ ಮತ್ತು ಮೈಸೂರು ದಸರಾ ಪ್ರಯುಕ್ತ ದುಬೈ ಹೆಮ್ಮೆಯ ಯುಏಇ ಕನ್ನಡಿಗರು ತಂಡದವರು ಯುಏಇಯಲ್ಲಿ ನೆಲಸಿರುವ ಸಮಸ್ತ ಕನ್ನಡಿಗರಿಗಾಗಿ ಕಳೆದ ಮೂರು ವರ್ಷದಿಂದ ಪ್ರಾರಂಭಿಸಿದ ಕಾರ್ಯಕ್ರಮವೇ “ದುಬೈ ದಸರಾ ಕ್ರೀಡಾಕೂಟ”.
ಈ ಬಾರಿಯ ದುಬೈ ದಸರಾ ಕ್ರೀಡೋತ್ಸವ – 2020ರನ್ನು ದಿನಾಂಕ 30/10/2020 ಶುಕ್ರವಾರದಂದು ಸಂಜೆ 4ರಿಂದ , ಕೋವಿಡ್ ಮಹಾ ಮಾರಿಯ ಕಾರಣ ವರ್ಚುಯಲಾಗಿ ನಡೆಸಲಾಗುತ್ತಿದೆ, ಅಂತರಾಷ್ಟ್ರೀಯ ವಿಕಲಚೇತನ ಒಲಂಪಿಕ್ ಕ್ರೀಡಾತಾರೆ, ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ನಮ್ಮ ಹೆಮ್ಮೆಯ ಕನ್ನಡತಿ ಡಾ. ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ಈ ಕ್ರೀಡೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ,
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕದ ಹೆಸರನ್ನು ಎತ್ತರಕ್ಕೆ ಬೆಳಸಿದ ಕ್ರೀಡಾಪಟುಗಳನ್ನು ಗುರುತಿಸಿ ಎಲ್ಲಾ ವರ್ಷ ನೀಡಿ ಬರುತ್ತಿರುವ ಪ್ರತಿಷ್ಠಿತ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಈ ಬಾರಿ ಪ್ಯಾರಾ ಒಲಿಂಪಿಕ್ ಸೇರಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿ ಪದಕಗಳಿಸಿಕೊಟ್ಟು ಭಾರತದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿಸಿದ ಹೆಮ್ಮೆಯ ಕನ್ನಡತಿ ವಿಕಲತೆಯಲ್ಲೂ ಇದ್ದು ಬಾನೆತ್ತರದ ಸಾಧನೆ ಮಾಡಿ ದೇಶಕ್ಕೆ ರಾಜ್ಯಕ್ಕೆ ಅಭಿಮಾನವಾಗಿರುವ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ಕನ್ನಡತಿ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ಸನ್ಮಾನಿಸಲಿದ್ದೇವೆ, ಮಾಲತಿ ಕನ್ನಡತಿಯಂತ ವಿಶಿಷ್ಟ ಪ್ರತಿಭೆಗೆ ಸನ್ಮಾನ ಮಾಡಲು ಸಿಕ್ಕ ಅವಕಾಶ ನಿಜವಾಗಲೂ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಸಂಘಟಕರು ತಿಳಿಸಿದರು.
ಹಾಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಭಾರತೀಯ ವಾಲಿಬಾಲ್ ಪಟುಶ್ರೀಯುತ ಇಮ್ತಿಯಾಜ್ ಅಹಮದ್ ಮತ್ತು ಮಾಜಿ ಭಾರತೀಯ ಈಜುಗಾರ ಶ್ರೀಯುತ ಶ್ರೀಹರಿ ನಟರಾಜ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಿದೆ. ಅತಿಥಿಗಳಾಗಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲಿಕರಾದ ಕನ್ನಡ ಸಂಘಟನೆಗಳ ಮಹಾ ಪೋಷಕರು ಕೊಡುಗೈ ದಾನಿಗಳು ಆದ ಹೆಮ್ಮೆಯ ಕನ್ನಡಿಗ ಮೊಹಮ್ಮದ್ ಮುಸ್ತಫಾ ಅವರು ಹಾಗೆ ಅತಿಥಿಯಾಗಿ ಕಸ್ತೂರಿ, ಸುವರ್ಣ, ಝೀ ಕನ್ನಡ ವಾಹಿನಿಗಳಲ್ಲಿ ಸೇವೆ ಸಲ್ಲಿಸಿರುವ, ಖ್ಯಾತ ನಿರೂಪಕಿ ಹಾಗು ಹಿನ್ನೆಲೆ ಕಂಠ ದಾನ ಕಲಾವಿದೆ ಶೃತಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಡಾ .ಗುರುಮಾಧವ ರಾವ್, ಡಾ ರಶ್ಮಿ ನಂದಕಿಶೋರ್ ಬೆಂಗಳೂರು ಮಾನ್ಯ ಶೇಖರ್ ರೆಡ್ಡಿ, ಮಾನ್ಯ ಮೋಹನ್ ಉಪ್ಪಿನ್, ಮಾನ್ಯ : ಪ್ರವೀಣ್ ಶೆಟ್ಟಿ, ಶ್ರೀಮತಿ ಉಮಾ ವಿಧ್ಯಾದರ್, ಮಾನ್ಯ : ಸರ್ವೋತ್ತಮ ಶೆಟ್ಟಿ, ಮಾನ್ಯ : ಆನಂದ್ ಬೈಲೂರು, ಡಾ.ಅಶೋಕ್ ಕುಮಾರ್ ಮತ್ತು ಮಾನ್ಯ ಸತ್ಯ, ಮಾನ್ಯ : ವಿಮಲ್ ಕುಮಾರ್, ಮಾನ್ಯ : ಸತೀಶ್ ಹಿಂದರ್, ಮಾನ್ಯ : ಶಶಿಧರ್ ನಾಗರಾಜಪ್ಪ, ಮಾನ್ಯ ಕರುಣಾಕರ್ ರಾವ್, ಮಾನ್ಯ : ನಾಗೇಶ್ ರಾವ್, ಮಾನ್ಯ : ಪ್ರದೀಪ್ ಶೆಟ್ಟಿ, ಮಾನ್ಯ : ರಾಜೇಶ್ ವಿಠ್ಠಲ್, ಮಾನ್ಯ : ಮನಫ್ ಮೀರು, ಮಾನ್ಯ : ನಯ್ಯರ್ ಭಟ್ಕಳ, ಡಾ . ಯೂಸುಫ್, ಇಸ್ಮಾಯಿಲ್ ಮೂಳೂರು, ಹಿದಾಯತ್ ಅಡ್ಡೂರು, ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬಂದು ಇಲ್ಲಿನ ವಿವಿಧ ಎಮಿರೇಟುಗಳಲ್ಲಿ ನೆಲಸಿರುವ ಸಾವಿರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವದು ವಿಶೇಷ, ಕಳೆದ ಹಲವು ದಿನಗಳಿಂದ ಆನ್ಲೈನ್ ಮುಖಾಂತರ ಹಲವು ಆಟ ಮತ್ತು ಕಾರ್ಯಕ್ರಮ ನಡೆಯುತ್ತಿದ್ದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಮೆಡಲ್ ಮತ್ತು ಸನ್ಮಾನ ಪತ್ರ ನೀಡಲಿದೆ, ಹಾಗೆ ಯುಎಇ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ, ದಸರಾ ಕುರಿತು ಕನ್ನಡ ಮಕ್ಕಳ ಭಾಷಣ ಸ್ಪರ್ಧೆ ಮತ್ತು ಅವರಿಗೆ ಬಹುಮಾನ ವಿತರಣೆ, ಕವಿಗೋಷ್ಠಿ, ಕನ್ನಡ ರಸಪ್ರಶ್ನೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ, ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಅಂತಾಕ್ಷರಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಕೋವಿಡ್ ಸಮಯದಲ್ಲಿ ಮುಖ್ಯ ವಾಹಿನಿಯಲ್ಲಿ ಸೇವೆ ನೀಡಿದ ಅರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೋವಿಡ್ ಯೋಧರಿಗೆ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ.
ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಉಪಾಧ್ಯಕ್ಷರಾದ ಮಮತಾ ಮೈಸೂರು, ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ರಫೀಕಲಿ ಕೊಡಗು, ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದು ಸಮಸ್ತ ಕನ್ನಡಿಗರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಎಲ್ಲರೂ ಈ ಕ್ರೀಡೋತ್ಸವ ಸಮಾರಂಭಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕಾಗಿ ಮನವಿ ಮಾಡಿಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.