ಅಜೆಕಾರು(ವಿಶ್ವಕನ್ನಡಿಗ ನ್ಯೂಸ್): ಮಕ್ಕಳ ಪ್ರತಿಭೆಗೆ ತಕ್ಕ, ಸಕಾಲಿಕ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು. ಹಾಗಾದಾಗ ಮಾತ್ರ ಮಕ್ಕಳು ಇನ್ನಷ್ಟು ಪ್ರತಿಭಾನ್ವಿತರಾಗುವುದು ಸಾಧ್ಯ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು, ಮರ್ಣೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಪೈ ಹೇಳಿದರು.
ಅವರು ಅಜೆಕಾರು ಕುರ್ಪಾಡಿ ಬೊಬ್ಬರ್ಯಸ್ಥಾನದ ಬಳಿ ಗ್ರಾಮೋತ್ಸವ ಕಾನನ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಆಯೋಜಿಸಿದ್ದ ಕಾನನ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಮತಮತನಾಡುತ್ತಿದ್ದರು. ಮಕ್ಕಳಿಗೆ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಇರುವ ಎಲ್ಲಾ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಹಿಂದೆ ಬೀಳ ಬಾರದು. ನಾಳಿನ ಪ್ರಜೆಗಳನ್ನು ಉತ್ತಮರನ್ನಾಗಿ ರೂಪಿಸುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಕೊಡುವುದು ಸಮಾಜದ ಕರ್ತವ್ಯವಾಗಿದೆ ಎಂದು ಅತಿಥಿಗಳಾಗಿದ್ದ ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಸಂಗೀತ ಮತ್ತು ನಿರೂಪಣೆ, ನೃತ್ಯ ಕ್ಷೇತ್ರದ ಪುಟಾಣಿಗಳಾದ ತನಿಶಾ ಕಾರ್ಕಳ ಮತ್ತು ಆದ್ಯ ಕಾರ್ಕಳ ವಿಶೇಷ ಆಹ್ವಾನಿತರಾಗಿದ್ದರು. ಅವರು ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮಕ್ಕಳು ಮತ್ತು ಹಿರಿಯರ ನಡುವೆ ಪ್ರೀತಿಯ- ಬಾಂಧವ್ಯದ ಬೆಸುಗೆಯನ್ನು ಬೆಸೆಯೋಣ ಎಂದು ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಹೇಳಿದರು.
ಗಿರಿಜಾ ಆಚಾರ್ಯ, ಸಂಪಾ ಶೆಟ್ಟಿ ಉಬುಲ್ದೊಟ್ಟು, ಸಮಿತಿಯ ಸದಸ್ಯರಾದ ಸಂತೋಷ್ ಜೈನ್ ಎಣ್ಣೆಹೊಳೆ, ಮಕ್ಕಳ ವಿಭಾಗದ ಸುನಿಧಿ ಅಜೆಕಾರು, ಸುನಿಜ ಅಜೆಕಾರು, ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಕಲಾವಿದೆ ದೀಕ್ಷಾ ಮುಟ್ಲುಪಾಡಿ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದ ಉದಯ ಪಿ. ದಾಸಗದ್ದೆ ವಂದಿಸಿದರು.
ಸಂಗೀತ ಸಂಭ್ರಮದಲ್ಲಿ ಭಾಗವಹಿಸಿ ಅತ್ತುತ್ತುತ್ತಮ ಪ್ರದರ್ಶನ ನೀಡಿದ ಹಶ್ಮಿತಾ ಮುನಿಯಾಲು ಪ್ರಥಮ, ಶ್ರೀರಕ್ಷಾ ಅಂಡಾರು ದ್ವಿತೀಯ ಸ್ಥಾನದ ಗೌರವ ಪಡೆದರು. ಪ್ರೋತ್ಸಾಹಕ ಬಹುಮಾನದ ರಕ್ಷಿತಾ ಹೆರ್ಮುಂಡೆ, ರಕ್ಷಿತಾ ಅಂಡಾರು, ಶ್ರೇಯಾ ಅಂಡಾರು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಉತ್ತಮ ಸಾಧನೆ ನೀಡಿದ ಕುವೆಂಪು ಮತ್ತು ಬೇಂದ್ರೆ ತಂಡದ ಪುಟಾಣಿಗಳಿಗೆ ಬಹುಮಾನ ಪತ್ರ ನೀಡಲಾಯಿತು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.