ಚಿತ್ರಜಗತ್ತು(ವಿಶ್ವಕನ್ನಡಿಗ ನ್ಯೂಸ್): ರಿದ್ಧಿ ಸಿದ್ಧಿ ಬ್ಯಾನರ್ ಅಡಿಯಲ್ಲಿ, ರಾಜು ಶೇರಿಗಾರ್ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಸದಭಿರುಚಿಯ ಚಲನಚಿತ್ರ ಟಾಮ್ ಅಂಡ್ ಜೆರ್ರೀ.
ಕೋವಿಡ್, ಲಾಕ್ ಡೌನ್, ವರ್ಕ್ ಫ್ರಮ್ ಹೋಮ್ ನಿಂದ ಬೇಸತ್ತು ಹೋಗಿರುವ ಜನರಿಗೆ ಜಬರ್ ದಸ್ತ್ ಮನೋರಂಜನೆ ನೀಡಲು ಟಾಮ್ ಅಂಡ್ ಜೆರ್ರೀ ಸಿನಿಮಾ ತಂಡ ಭರ್ಜರಿ ತಯಾರಿ ನಡೆಸಿದೆ.
ಕೆ.ಜಿ.ಎಫ್ ನ ಮಾತಿನ ಮಾಂತ್ರಿಕ ರಾಘವ್ ವಿನಯ್ ಶಿವಗಂಗೆ ಅವರ ನಿರ್ದೇಶನದ ಕರಾಮತ್ತನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದ್ದೂ, ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನು ಜೀವಿಸಿ, ವಿಮರ್ಶಿಸಿ ಅತ್ಯಂತ ಕಾಳಜಿಯಿಂದ ಕಥೆ-ಚಿತ್ರ ಕಥೆ ರಚಿಸಿ , ಸಿನಿ ರಸಿಕರಿಗೆ ಟಾಮ್ ಅಂಡ್ ಜೆರ್ರೀ ಔತಣ ಕೂಟವನ್ನು ಏರ್ಪಡಿಸಲು ನಿರ್ದೇಶಕರು ಸಜ್ಜಾಗಿದ್ದರೇ, ಇತ್ತ ನಿರ್ಮಾಪಕರು ತಮ್ಮ ಚೊಚ್ಚಲ ಕೈಗೂಸಾದ ಟಾಮ್ ಅಂಡ್ ಜೆರ್ರೀ ಸಿನಿಮಾದ ತಂತ್ರಜ್ಞರಿಗೆ, ಕಲಾವಿದರಿಗೆ ಸಕಲ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಚಿತ್ರದ ಉತ್ಕೃಷ್ಟತೆಗೆ ನೇರ ಕಾರಣರಾಗಿದ್ದಾರೆ.
ಬಹು ನಿರೀಕ್ಷೆ ಮೂಡಿಸಿರುವ ಯುವ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಟಾಮ್ ಅಂಡ್ ಜೆರ್ರೀ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ” ಹಾಯಾಗಿದೆ ಎದೆಯೊಳಗೆ ” ಎಂಬ ಹಾಡನ್ನು ಪ್ರಖ್ಯಾತ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಹಾಡಿದ್ದೂ, ಈಗಂತೂ ಟಾಮ್ ಅಂಡ್ ಜೆರ್ರೀ ಸಿನಿಮಾ ಸೌತ್ ಇಂಡಿಯಾದಲ್ಲಿ ಎಲ್ಲೆಡೆ ಜನರ ಕೌತುಕ ಕೆರಳಿಸಿದೆ. ಕನ್ನಡದಲ್ಲಿ ತಾವು ಹಾಡುವ ಮೊದಲ ಹಾಡಿನ ಬಗ್ಗೆ ತುಂಬಾ ಚೂಸಿ (choosy) ಆಗಿದ್ದ ಗಾಯಕ ಸಿದ್ ಶ್ರೀರಾಮ್ ” ಟಾಮ್ ಅಂಡ್ ಜೆರ್ರೀ” ಸಿನಿಮಾ ಹಾಡನ್ನು ಕೇಳಿ, ಮೆಚ್ಚಿ ಈ ಹಾಡಿಗೆ ಧನಿಯಾಗಿದ್ದಾರೆ. ಇಷ್ಟೇ ಅಲ್ಲದೆ ಈ ಸಿನಿಮಾ ” ಬ್ಲಾಕ್ ಬಸ್ಟರ್” ಆಗಲಿದೆ, ಸಿನಿಮಾ ಹಾಡುಗಳು ಅಧ್ಬುತವಾಗಿ ಮೂಡಿ ಬಂದಿದ್ದು, ಕಂಪೋಸರ್ ಮ್ಯಾಥ್ಯೂಸ್ ಮನು ರವರನ್ನು “ಮೆಲೋಡಿ ಕಿಲ್ಲರ್ ” ಎಂದು ಪ್ರಶಂಸಿಸಿ, ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಇನ್ನೂ ಈ ಸಿನಿಮಾಗೆ ಛಾಯಾಗ್ರಾಹಕರಾಗಿ ಸಂಕೇತ್ ಕಾರ್ಯ ನಿರ್ವಹಿದ್ದರೇ, ಚಿತ್ರಕ್ಕೆ ಸೂರಜ್ ಅಂಕೋಲೆಕರ್ ಅವರ ಸಂಕಲನವಿದೆ. ಸಾಹಸ ನಿರ್ದೇಶಕರಾಗಿ ಅರ್ಜುನ್ ರಾಜ್ ಕಾರ್ಯ ನಿರ್ವಹಿಸಿದ್ದರೆ, ನೃತ್ಯ ಸಂಯೋಜಕರಾಗಿ ರಾಜ್ ಕಿಶೋರ್ ಕಾರ್ಯ ನಿರ್ವಹಿಸಿದ್ದಾರೆ.ಚಿತ್ರದಲ್ಲಿ ಹಿರಿಯ ಕಲಾವಿದರಾದ ಜೈ ಜಗದೀಶ್, ತಾರಾ ಅನುರಾಧ,ರಾಕ್ಲೈನ್ ಸುಧಾಕರ್,ಪದ್ಮಜಾ ರಾವ್ ಸೇರಿದಂತೆ ಕವಲು ದಾರಿ ಖ್ಯಾತಿಯ ಸಂಪತ್ ಮೈತ್ರೇಯ , ಕೆ. ಜಿ. ಎಫ್ ಖ್ಯಾತಿಯ ಶೇಖರ್ ಮತ್ತು ಮುಂತಾದ ಕಲಾವಿದರ ದಂಡೇ ಇದೇ. ನಿಶ್ಚಿತ್ ಕರೋಡಿ ಹಾಗು ಚೈತ್ರ ರಾವ್ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ.ಇನ್ನು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾದ ವಿನಯ್ ಚಂದ್ರ ಅವರ ಕೊಡುಗೆ ಅಪಾರ, ಚಿತ್ರದ ಪ್ರತಿ ಹಂತದಲ್ಲೂ ತಮ್ಮ ಅಧ್ಭುತ ಕಾರ್ಯ ನಿರ್ವಹಣೆಯ ಮೂಲಕ ಸಿನಿಮಾ ಅಮೋಘವಾಗಿ ಮೂಡಿ ಬರಲು ನೆರವಾಗಿದ್ದಾರೆ. ಇನ್ನು ಪ್ರಖ್ಯಾತ ಉದ್ಯಮಿಗಳಾದ ರಾಜು ಶೇರಿಗಾರ್ ರವರ ಕನ್ನಡ ಅಭಿಮಾನದಿಂದ ಕಲೆಯ ಮೇಲಿನ ವಿಶೇಷ ಒಲವು, ಕಾಳಜಿಯಿಂದ ನಿರ್ಮಿಸಿರುವ ಮೊದಲ ಚಿತ್ರ “ಟಾಮ್ ಅಂಡ್ ಜೆರ್ರೀ” ಇಂತಹ ಅನೇಕ ವಿಶೇಷತೆಗಳಿಂದ ಎಲ್ಲೆಡೆ ತನ್ನ ಛಾಪನ್ನು ಬೀರುತ್ತಿದೆ. “ಹಾಯಾಗಿದೆ ಎದೆಯೊಳಗೆ ” ಹಾಡಿಗೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ರವರೇ ಸಾಹಿತ್ಯ ರಚಿಸಿದ್ದೂ, ಸಿದ್ ಶ್ರೀರಾಮ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಕೇಳಲು ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.