(www.vknews.com) : ಮನಷ್ಯ ತಾನು ಬೆಳೆದು ದೊಡ್ಡವನಾಗುತ್ತಾ ಬಂದಂತೆ ಗುಣ-ನಡತೆಯಲ್ಲಿ ಯಾಕೋ ಸಣ್ಣತನವನ್ನು ತೋರಿಸಿಕೊಡಲು ತೊಡಗಿದ್ದಾನೆ.
ಈ ಪ್ರಪಂಚಕ್ಕೆ ಕಾಲಿಡೋ ಮುನ್ನ ಅಮ್ಮನ ಗರ್ಭದಲ್ಲಿ ತನ್ನ ಸಹೋದರ, ಸಹೋದರಿಯಂದಿರು ಮಲಗಿದ್ದ ಅದೇ ಜಾಗದಲ್ಲಿಯೆ ತಾನೂ ಮಲಗಿದ್ದೆ ಅನ್ನುವ ಸತ್ಯವನ್ನೇ ಬದಿಗಿಟ್ಟು ದೊಡ್ಡವನಾಗಿ ಬೆಳೆಯುತ್ತಾ ಸಂಸಾರಸ್ಥನಾಗಿ ತನ್ನದೇ ಕುಟುಂಬವನ್ನು ಕಟ್ಟಿಕೊಂಡು ಮೆರೆಯ ತೊಡಗುತ್ತಾನೆ. ಇನ್ನು ಪತ್ನಿ-ಮಕ್ಕಳೇ ನನ್ನ ಪ್ರಪಂಚ, ನನಗಿವರುಗಳು ಮಾತ್ರಾ ಸಾಕೆಂಬ ಭಾವನೆ ಬೆಳೆಸಿಕೊಳ್ಳುವುದಲ್ಲದೇ, ನನ್ನ ಒಡಹುಟ್ಟಿದವರ ಅಗತ್ಯವೇ ಇನ್ಮುಂದೆ ನನಗಿಲ್ಲ ಎಂಬ ಮೂಢತನದ ಧೋರಣೆಯನ್ನೂ ತೋರತೊಡಗುತ್ತಾನೆ.
ಒಂದೇ ಬಳ್ಳಿಯ ಹೂವುಗಳು ನಾವು ಎನ್ನುವುದನ್ನೇ ಮರೆತು ಈ ರೀತಿ ಸೋದರ ವೈರತ್ವವನ್ನು ತಲೆಯಲ್ಲಿಡೀ ಮೆತ್ತಿಕೊಳ್ಳುತ್ತಿರುವುದು ಮಾತ್ರ ನಿಜಕ್ಕೂ ನೋವಿನ ಸಂಗತಿಯಾಗಿರುತ್ತದೆ.
ಇದು ಇಂದು ಬಹಳ ಕಡೆಯಲೆಲ್ಲಾ ಕಾಣಸಿಗುತ್ತಿರುವ ‘ಸೋದರ ದ್ವೇಷಿಗಳ’ ಸತ್ಯ ಕಥೆಗಳಾಗಿವೆ. ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ಉಂಡು ಬೆಳೆದು, ಒಂದೇ ಹಾಸಿಗೆಯಲ್ಲಿ ಒಂದೇ ತಲೆದಿಂಬು, ಹೊದಿಕೆಯನ್ನಂಚಿ ಕೊಂಡು ಮಲಗಿದ್ದ ತನ್ನ ಅದೇ ಒಡಹುಟ್ಟಿದವರೊಡನೆ ದೊಡ್ಡವರಾಗುತ್ತಲೇ ಒರಟಾಗಿ ನಡೆದು ಕೊಳ್ಳುತ್ತಿರುವುದು ಅತ್ಯಂತ ಅಸಹ್ಯಕರ ವಿಷಯವಾಗಿರುತ್ತದೆ. ಬಾಲ್ಯದಲ್ಲಿ ಆಟವಾಡುತ್ತಾ ಜಗಳಾಡಿದರೂನೂ ಕ್ಷಣದಲ್ಲೆ ಅದನ್ನು ಮರೆತು ಅಮ್ಮನ ಕರೆಗೆ ನಾಮುಂದು ತಾಮುಂದು ಎಂದು ಮುಗಿಬಿದ್ದು ಧಾವಿಸುತ್ತಿದ್ದವರಿಂದು ಅಮ್ಮ ವಯಸ್ಸಾಗಿ ಮೂಲೆ ಸೇರಿದ್ದಾಳೆಂದೋ.. ಅಥ್ವಾ ಅಮ್ಮ ಎದುರಿಗಿಲ್ಲ, ಅಮ್ಮನಿಗೆ ಕಾಣಿಸುತ್ತಿಲ್ಲವೆಂದೋ.. ತನ್ನದೇ ರಕ್ತ ಹಂಚಿಕೊಂಡವರೊಡನೆ ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕೆಲ್ಲಾ ಜಗಳವಾಡಿ, ಸಿಟ್ಟಾಗಿ ಕೊನೇಗೆ ಅವರ ಮುಖ ಕೂಡ ನೋಡಲಿಚ್ಚಿಸದೇ ದೂರಾವಾಗುವುದು ಬಲು ಖೇದಕರವೇ ಸರಿ.
ಅಂದು ಕಲ್ಲೆಸೆದು ಕೊಯ್ದ ಒಂದೇ ಮಾವಿನ ಮಿಡಿಯನ್ನು ಕಚ್ಚಿ ಹಂಚಿ ತಿನ್ನುತ್ತಿದ್ದ ಅದೇ ಇಬ್ಬರು ಸಹೋದರರು ಹಾಗೂ ಸಹೋದರ ಮಾಡಿದ ತಪ್ಪನ್ನು ಹೆತ್ತವರೋ ಗುರುಗಳೋ ಪ್ರಶ್ನಿಸುವಾಗ ಅದನ್ನು ತನ್ನ ಮೇಲೆಳೆದು ಕೊಂಡು ಅವನಿಗೆ ಏಟು ತಪ್ಪಿಸುತ್ತಿದ್ದ ಸಹೋದರಿಯರೂ ಕೂಡ, ಇಂದು ಅವರುಗಳನ್ನು ನಿಂತರೆ ತಪ್ಪು, ಕುಂತರೆ ತಪ್ಪು, ಮಾತನಾಡಿದರೆ ತಪ್ಪು, ಮೌನವಹಿಸಿದರೋ.. ಮಹಾತಪ್ಪು ಎಂದೆನ್ನುತ್ತಾ ಎಲ್ಲಾದರಲ್ಲೂ ಸದಾ ತನ್ನವರ ಹುಳುಕುಗಳನ್ನೇ ಹುಡುಕಿ ಎತ್ತಿ ತೋರುತ್ತಾ ತಪ್ಪುಗಳ ಪಟ್ಟಿಗಳನ್ನು ನೀಡುತ್ತಾ ಪರಸ್ಪರ ದ್ವೇಷದಿಂದಲೇ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಇವರುಗಳು ತನಗೇ ಅರಿವಿಲ್ಲದಂತೆ ತನ್ನ ನೆಮ್ಮದಿಯ ಜತೆಗೇ.. ತನ್ನ ಕುಟುಂಬಸ್ಥರೆಲ್ಲಾರ ನೆಮ್ಮದಿಯನ್ನು ಕೆಡಿಸುತ್ತಿರುತ್ತಿರುವುದಂತೂ ವರ್ತಮಾನದ ಜತೆಗೇ ಭವಿಷ್ಯಕ್ಕೂ ಮಾರಕವಾಗಿದೆ.
‘ಕುಟುಂಬ ಪ್ರೀತಿಯನ್ನು’ ಒಡೆಯುವವನಿಗೋ ತಿಳಿಯುವುದಿಲ್ಲ ‘ನಾವು ಇಂದು ಮುದ್ದಿಸಿ ಬೆಳೆಸುತ್ತಿರುವ ನಮ್ಮ ಮಕ್ಕಳೂ ಕೂಡ ನಮ್ಮಿಂದ ಇದೇ ಪಾಠವನ್ನು ಕಲಿಯುತ್ತಿದ್ದಾರೆಂದು’ ಅವರು ನಾಳೆ ನಮಗಿಂತಲೂ ಕೆಟ್ಟದಾಗಿ ಪರಸ್ಪರ ಜಗಳವಾಡಿ ದೂರ ದೂರವಾಗಿ ಶತ್ರುಗಳಾಗಿ ಬೆಳೆಯುತ್ತಾರೆಂದು.
ಎಲ್ಲಾಕ್ಕಿಂತ ಮಿಗಿಲಾಗಿ ಮಾನವನು ತನ್ನ ಈ ಗುಣದಿಂದಾಗಿಯೇ ಅಲ್ಲಾಹುವಿನ ಕೋಪಕ್ಕೂ ಗುರಿಯಾಗುತ್ತಾನೆ. “ಯಾರು ಕುಟುಂಬ ಪ್ರೀತಿಯನ್ನು ಒಡೆದು ಸಂಪರ್ಕ ಕಡಿದು ಕೊಳ್ಳುತ್ತಾನೋ… ಅವನು ಖಂಡಿತಕ್ಕೂ ಸ್ವರ್ಗ ಪ್ರವೇಶ ಮಾಡುವುದು ಬಿಡಿ, ಸ್ವರ್ಗದ ಸುವಾಸನೆಯನ್ನು ಕೂಡಾ ಆಘ್ರಾಣಿಸಲಾರನು.”
‘ಜೀವನ ಶಾಶ್ವತ’ ಎಂದು ಯಾವತ್ತೂ ಯಾರಿಗೂ ಆಣೆ ಮಾಡಿದ್ದಿಲ್ಲ, ನಾವೆಲ್ಲಾರೂ ಬದುಕಿರುವಷ್ಟು ಕಾಲವೂ ಪರಸ್ಪರ ಸಹಕಾರಿಗಳಾಗಿ ಚಂದದಿಂದ ಬಾಳಬೇಕು. ನಮ್ಮ ‘ಕೊನೆ ಘಳಿಗೆ’ಯಲ್ಲಿ “ನಾವುಗಳು ಸರಿಯಾಗಿ ಬದುಕಿದ್ದೆವು” ಅನ್ನುವ ನೆಮ್ಮದಿ, ಸಂತಸಕ್ಕಿಂತ ಮಿಗಿಲಾದ ಆಸ್ತಿ ಮನುಜನಿಗೆ ಬೇರೆ ಯಾವುದು ಇಲ್ಲ” ಸೋದರ ದ್ವೇಷ ಕಟ್ಟಿಕ್ಕೊಂಡು ನೀವೆಷ್ಟೇ.. ಪುಣ್ಯ ಕಾರ್ಯವೆಸಗಿದರೂ ಕೂಡ ಅದು ಏಕ ಇಲಾಹನಾದ ಅಲ್ಲಾಹನ ಬಳಿ ಹುಲ್ಲು ಕಡ್ಡಿಯಷ್ಟೂ ಸ್ವೀಕಾರಾರ್ಹವಲ್ಲಾ, ಇದು ಎಲ್ಲಾರಿಗೂ ನೆನಪಿರಲೇ ಬೇಕು.
ನಿಮಗೆ ಅಲ್ಲಾಹುವಿನ ಮೇಲೆ ಪ್ರೀತಿ, ಭರವಸೆ ಇದ್ದರೇ.. ಇದೋ ಇಲ್ಲಿ ಕೇಳಿ ನಿಮ್ಮಲ್ಲಿ ಯಾರಾದರು ನಿಮ್ಮ ಒಡ-ಹುಟ್ಟಿದವರಲ್ಲಿ ಬೇಸರದಿಂದಿದ್ದು ಸಿಟ್ಟಾಗಿದ್ದರೇ…. ಈ ಕ್ಷಣವೇ ಅವರ ಬಳಿಗೆ ಧಾವಿಸಿರಿ ಹಾಗೂ ಸಲಾಂ ಹೇಳಿ ಅವರನ್ನು ಆಲಂಗಿಸಿಕೊಳ್ಳಿ, ಹಾಗೆಯೇ ಮತ್ತೇ ಬಾಲ್ಯದ ಆ ಮುಗ್ಧ ಪರಿಶುದ್ಧ ಪ್ರೀತಿಯ ಬದುಕಿಗೆ ಮರಳಿರಿ.
“ನೀವು ಕ್ಷಮಾಗುಣವನ್ನು ಸದಾ.. ಮೈಗೂಡಿಸಿ ಕೊಳ್ಳಿ, ಯಾರು ಕ್ಷಮಾಗುಣ ಹೊಂದಿರುವನೋ ಅವನು ಅಲ್ಲಾಹನಿಗೆ ಅತ್ಯಂತ ಪ್ರೀತಿಪಾತ್ರನಾಗಿರುವನು.” ಖಂಡಿತಾ ಇಬ್ಲೀಸನು ನಿಮ್ಮನ್ನು ಕುಟುಂದವರೊಂದಿಗೆ ಬೆರೆತು ನಡೆಯುವುದನ್ನು, ನೀವುಗಳು ಒಂದಾಗುವುದನ್ನು ತಡೆಯಲು ಬಹಳ ಪ್ರಯತ್ನವ ಮಾಡುತ್ತಿರುವನು. ಆದರೇ ಈಮಾನಿರುವ ನೀವೇ ಯೋಚಿಸಿ ತೀರ್ಮಾನಿಸಿರಿ ನೀವು ಅಲ್ಲಾಹುವಿನ ಮಾರ್ಗದಲ್ಲಿ ನಡೆಯಲಿಚ್ಚಿಸುವಿರೋ ? ಅಥವಾ ಇಬ್ಲೀಸ್ ತೋರುವ ನರಕದ ಹಾದಿಯಲ್ಲೋ ? ತಕ್ಷಣ ನಿಮ್ಮನ್ನು ನೀವು ಇಬ್ಲೀಸನ ಮುಷ್ಠಿಯಿಂದ ಕಾಪಾಡಿ ಕೊಳ್ಳಲು ಬಯಸುವಿರಾದರೇ.. ನಿಮ್ಮ ಈಮಾನನ್ನು ಉಳಿಸಿಕೊಳ್ಳಲು ಬಯಸುವಿರಾದರೇ.. ಮೊದಲು ನಿಮ್ಮವರೊಡನಿರುವ ಕೋಪವನ್ನು ಬಿಟ್ಟು ಬಿಡಿ, ಇಷ್ಟು ದಿನಗಳಿಂದ ಬಲಿಷ್ಠವಾಗಿ ಕಟ್ಟಿಕೊಂಡಿರುವ ಸೋದರ ಶತ್ರುತ್ವದ ಭದ್ರಕೋಟೆಯನ್ನು ತಕ್ಷಣ ಒಡೆದು ಚೂರುಚೂರಾಗಿಸಿ ಹಾಗೂ ಪ್ರೀತಿಯಿಂದ ನೀವೆಲ್ಲಾರೂ ಮತ್ತೇ ಒಂದಾಗಿ ಬಿಡಿ. ಇನ್ನಿರುವ ಆಯಸ್ಸನ್ನಾದರೂ ಮನದಲ್ಲಿ ಪ್ರೀತಿ-ಕರುಣೆ ತುಂಬಿಕೊಂಡು ನೆಮ್ಮದಿಯಿಂದ ಉತ್ತಮ ಮಾನವವರಾಗಿ ಬದುಕಲು ಮುಡಿಪಾಗಿಡಿ !
ನಮಗೆ ಈ ಸುಂದರ ಬಾಳು ಅಲ್ಲಾಹುವಿನ ದಿವ್ಯ ಅನುಗ್ರಹವಾಗಿದೆ. ಇದಕ್ಕಾಗಿ ನಾವು ದೇವನಿಗೆ ಪ್ರತೀಕ್ಷಣ ಕೃತಜ್ಞತೆ ಅರ್ಪಿಸಲು ಮರೆಯದಿರೋಣ, ನಮ್ಮ ಕೃತಜ್ಞತೆಯನ್ನೂ ಕ್ಷಮಾಪಣೆಯನ್ನು ಇಬಾದತ್ತ್ ದುವಾಗಳನ್ನು ಅಲ್ಲಾಹನು ಸ್ವೀಕರಿಸ ಬೇಕಲ್ಲವೇ ? ಹಾಗಾದರೆ ಬನ್ನಿ ನಾವು ದ್ವೇಷವನ್ನೆಲ್ಲಾ ಮೆಟ್ಟಿನಿಂತು ಪ್ರೀತಿ ಬೆಳೆಸಿ ಮತ್ತೇ ಒಂದಾಗೋಣ.
ಮನುಷ್ಯರಾಗಿ ಹುಟ್ಟಿದ್ದು ಮನುಷತ್ವ, ಬುದ್ದಿವಂತಿಕೆ ಅನ್ನೋದು ಕಿಂಚಿತ್ತಾದರೂ ಇದ್ದಲ್ಲಿ, ನಿಮಗೀಗಲಾದರೂ ಅರ್ಥವಾದೀತು ನಾವು ಹೇಗೆ ಬದುಕಬೇಕೆಂದು. ಇಲ್ಲವೇ .. ಇಷ್ಟು ಮಾತ್ರಾ ಖಂಡಿತಾ ನೆನಪಿಡಿ; ನಿಮ್ಮ ಹೆಜ್ಜೆ ಗುರುತಿನ ಮೇಲೆಯೇ ನಿಮ್ಮ ಮಕ್ಕಳೂ ಹೆಜ್ಜೆ ಇಡಲಿದ್ದಾರೆ. ಹಾಗೂ ……. ನಿಮ್ಮದೇ ಸ್ವಂತ ಮಕ್ಕಳು ಬೆಳೆದು ನಾಳೆ ಪರಸ್ಪರ ಕಿತ್ತಾಡುತ್ತಾ ಬದ್ಧಶತ್ರುಗಳಾಗಲು ಕಲಿಸಿದ ಗುರುಗಳು ಇನ್ಯಾರೂ ಅಲ್ಲ , ಅದು ಸ್ವತಃ ನೀವೇ…ಆಗಿರುತ್ತೀರಿ
ಸಹೋದರ ಸಹೋದರಿಯರೇ, ಇಂದು ಮಾಡಿದ ತಪ್ಪಿಗೆ ನಾಳೆ ಪಶ್ಚಾತ್ತಾಪವೆಂಬ ಕಣ್ಣೀರು ಹರಿಯುತ್ತಾ ನಿಮ್ಮದೇ ಕೆನ್ನೆಯನ್ನು ತೋಯ್ಸುವ ಮುನ್ನವೇ ದಯವಿಟ್ಟು ಎಚ್ಚೆತ್ತುಕೊಳ್ಳಿ.
– ಹಫ್ಸಾ ಬಾನು ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.