ಹಾಸನ,(ವಿಶ್ವಕನ್ನಡಿಗ ನ್ಯೂಸ್): ಸಂವಿಧಾನತ್ಮಕವಾಗಿ ನೀಡಲಾಗಿರುವ ಹಕ್ಕುಗಳಿಂದ ಮನುಷ್ಯನು ಸಂತೋಷದಿಂದ ಇದ್ದು, ಇದರ ಜೊತೆಯಲ್ಲಿ ಕೆರೆ ಸಂರಕ್ಷಣೆ, ಅಭಿವೃದ್ಧಿ ಮತ್ತು ಸ್ವಚ್ಛತೆ ಮಾಡುವ ತಮ್ಮ ಕರ್ತವ್ಯವನ್ನು ಮರೆಯಬಾರದು ಎಂದು ಹಾಸನ ಉಪವಿಭಾಗಧಿಕಾರಿ ಬಿ.ಎ. ಜಗದೀಶ್ ಸಲಹೆ ನೀಡಿದರು.
ನಗರದ ಹುಣಸಿನಕೆರೆ ರಸ್ತೆ, ಅಬ್ದೂಲ್ ಕಲಾಂ ಪಾರ್ಕ್ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯಿಂದ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹುಣಸಿನಕೆರೆ ಹಬ್ಬದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೂಲಭೂತ ಕರ್ತವ್ಯದಲ್ಲಿ ೧೧ ಇದ್ದು, ಇದರಲ್ಲಿ ಏಳನೆಯದು ಪರಿಸರ ರಕ್ಷಣೆ ಮಾಡಬೇಕು ಮತ್ತು ಅಭಿವೃದ್ಧಿಗೊಳಿಸಬೇಕೆಂದಿದೆ. ಕೆರೆ, ಸರೋವರ, ನದಿ ಇವುಗಳ ಜೊತೆಗೆ ಪರಿಸರ ಸಂರಕ್ಷಣೆ ಮಾಡಬೇಕೆಂದು ಕರ್ತವ್ಯ ತಿಳಿಸುತ್ತದೆ ಎಂದರು.
ಎಲ್ಲರೂ ಕೂಡ ಹಕ್ಕುಗಳನ್ನು ಪಡೆದು ಸಂತೋಷಡುತ್ತಿದ್ದು, ಇದರ ಜೊತೆಗೆ ನಮ್ಮ ಕರ್ತವ್ಯವನ್ನು ಮರೆಯಬಾರದು ಎಂದು ಕರೆ ನೀಡಿದರು. ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ ಮಾತನಾಡಿ, ಹಿಂದಿನ ದಿನಗಳಲ್ಲಿ ಈ ಕೆರೆಗಳು ಸಂವೃದ್ದಿಯಾಗಿದ್ದವು. ಈಗ ಈ ಕೆರೆಗಳು ಕಣ್ಮರೆಯಾಗುತ್ತಿದೆ. ಹಾಸನ ನಗರದಲ್ಲಿರುವ ಬಹಳಷ್ಟು ಕೆರೆ ಜಾಗವನ್ನು ಒತ್ತುವರಿ ಮಾಡಲ್ಪಟ್ಟಿದೆ ಎಂದು ಬೇಸರವ್ಯಕ್ತಪಡಿಸಿದ ಅವರು, ಹೀಗೆ ಬಿಟ್ಟರೆ ಬೀರನಹಳ್ಳಿ ಕೆರೆ ಒತ್ತುವರಿ ಆದಂತೆ ಹುಣಸಿನಕೆರೆ ಜಾಗವು ಒತ್ತುವರಿ ಆಗುತ್ತದೆ. ಮುಂದಾದರೂ ಉಳಿಸುವ ಕೆಲಸ ಮಾಡಬೇಕಾಗಿದೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಥ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಹುಣಸಿನಕೆರೆಗೆ ವಿವಿಧ ಭಾಗಗಳಿಂದ ಪಕ್ಷಿಗಳು ಬಂದು ಹೋಗುವುದರಿಂದ ಕೆರೆ ಮತು ಸುತ್ತ ಮುತ್ತ ಪರಿಸರ ಸ್ವಚ್ಛವಾಗಿ ಇಡುವಲ್ಲಿ ಎಲ್ಲಾರೂ ಕೈಜೋಡಿಸಬೇಕು. ಜನವರಿ ೨೬ರ ರಂದು ಶುಚಿತ್ವವಾದ ಗಣರಾಜ್ಯೋತ್ಸವ ಆಚರಿಸೋಣ ಎಂದು ಕರೆ ಕೊಟ್ಟರು.
ಹಸಿರು ಭೂಮಿ ಪ್ರತಿಷ್ಠಾನದ ಅರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಕೆರೆ ಎಂದರೆ ಹಾಸನ ನಗರದ ಸಂಸ್ಕೃತಿಯ ಪ್ರತೀಕ. ಹುಣಸಿನಕೆರೆಯ ಪರಿಶುದ್ಧತೆ ಕಾಪಾಡಿಕೊಂಡು ಬರಬೇಕು. ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪ್ರತಿ ವಾರ್ಡಿನಲ್ಲಿ ಸಮಿತಿ ರಚಿಸಿಕೊಂಡು ಸ್ವಚ್ಛತೆ ಕೆಲಸ ಮಾಡಬೇಕು. ಪಾಳು ಬಿದ್ಧಂತಹ ಹುಣಸಿನಕೆರೆ ಇಂದು ಉತ್ತಮ ಹಂತಕ್ಕೆ ತಲುಪುತ್ತಿದೆ. ನಗರದಲ್ಲಿರುವ ಅನೇಕ ಕೆರೆಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.
ಹಾಸನ ಕೇಂದ್ರ ಎಂದರೆ ಪ್ರವಾಸಿ ಕೇಂದ್ರವಾಗಬೇಕು. ಹುಣಸಿನಕೆರೆ ಸೇರಿದಂತೆ ಇತರೆ ಎಲ್ಲಾ ಕೆರೆ ಮತ್ತು ಸ್ವಚ್ಛತೆಯು ಜನವರಿ ೨೬ರ ಒಳಗೆ ಹಾಸನ ನಗರ ಸ್ವಚ್ಛ ನಗರವಾಗಬೇಕು ಎಂದ ಅವರು, ಈ ಸ್ವಚ್ಚತೆ ನಿರಂತರವಾಗಿ ನಡೆದು ಇನ್ನೊಂದು ವರ್ಷದಲ್ಲಿ ಸಂಪೂರ್ಣ ಸ್ವಚ್ಛ ನಗರವಾಗಲು ಎಲ್ಲರ ಸಹಕಾರ ಅಗತ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು, ಹುಣಸಿನಕೆರೆ ನಿವಾಸಿಗಳು ಕೆರೆ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ನಮ್ಮ ಕೆರೆ ನಮ್ಮ ಆಸ್ತಿ-ಸಂರಕ್ಷಿಸೋಣ ಘೋಷಣೆಯೊಂದಿಗೆ ಹಾಸನ ನಗರದ ಎ.ಪಿ.ಜೆ. ಅಬ್ದೂಲ್ ಕಲಾಂ ರಸ್ತೆ ಬಳಿ ಇರುವ ಉದ್ಯಾನವನದ ಆವರಣದಿಂದ ಹೊರ ಜಾಥವು ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಚಲನ ಮೂಡಿಸಿತು.
ಇದೇ ವೇಳೆ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮ್ಜಾದ್ ಖಾನ್, ಗೌರವಾಧ್ಯಕ್ಷ ಮತ್ತು ನಿವೃತ್ತ ತಹಸೀಲ್ದಾರ್ ರಾಮಚಂದ್ರ, ನಗರಸಭೆ ಸದಸ್ಯ ಮಹೇಶ್, ಸಮಿತಿಯ ಕಾರ್ಯದರ್ಶಿ ದೇವಿಕಾಮಧು, ಸಮಿತಿಯ ಕಾರ್ಯಾಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ಸಯ್ಯಾದ್ ಖಾನ್, ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಗಿರೀಜಾಂಬಿಕ, ಸಂಗೀತ, ನಿರ್ದೇಶಕ ರಾಜೀವೆಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಹಗರೆ ಅಹಮದ್, ಎಸ್.ಎಸ್. ಪಾಷಾ, ಶಿವಶಂಕರಪ್ಪ, ಮುಂಜಾನೆ ಮಿತ್ರರು ತಂಡದ ವೆಂಕಟೇಗೌಡ, ರಾಮೇಗೌಡ, ಮಕ್ಕಳ ಸಾಹಿತ್ಯ ಪರಿಷತ್ತು ಸಮ್ಮೇಳನಾಧ್ಯಕ್ಷೆ ಕೊಕ್ಕನಘಟ್ಟ ಚಂದನಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೆ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.