ಕೊಡಗು(ವಿಶ್ವಕನ್ನಡಿಗ ನ್ಯೂಸ್): SKSSF ಕೊಡಗು ಜಿಲ್ಲಾ ಸಮಿತಿಯ ವತಿಯಿಂದ “ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ 13 ವರ್ಷಗಳಿಂದ ಗಣರಾಜ್ಯೋತ್ಸವದ ಅಂಗವಾಗಿ ಮಾನವ ಸರಪಳಿ ಹಾಗೂ ಸೌಹಾರ್ದ ಸಂಗಮ ಆಯೋಜಿಸುತ್ತಾ ಬಂದಿದೆ. ಈ ಬಾರಿ ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆಯಲ್ಲಿ ಜನವರಿ 26 ನೇ ತಾರೀಕು ಸಂಜೆ 4 ಗಂಟೆಗೆ ನಡೆಯುವ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ SKSSF ಜಿಸಿಸಿ ಕೊಡಗು ಸಮಿತಿ ಕರೆ ನೀಡಿದೆ.
ವಿವಿಧತೆಯಲ್ಲಿ ಏಕತೆ ಎಂಬ ತತ್ವದಡಿ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಭಾರತ. ಹಲವು ಜಾತಿ, ಧರ್ಮ, ಜನಾಂಗ, ಭಾಷೆ, ಆಚಾರ -ವಿಚಾರ ಮತ್ತು ಸಂಸ್ಕೃತಿಯನ್ನು ಒಳಗೊಂಡ ಪ್ರಜಾಸತ್ತಾತ್ಮಕ ದೇಶ ಭಾರತ. ಸೌಹಾರ್ದತೆ, ಸಾಮರಸ್ಯಕ್ಕೆ ಮಾದರಿಯಾದ ದೇಶದಲ್ಲಿ; ಇತ್ತೀಚಿಗೆ ಕೆಲ ಸಮಾಜಘಾತುಕ ಶಕ್ತಿಗಳಿಂದ ಶಾಂತಿ-ಸಾಮರಸ್ಯಕ್ಕೆ ದಕ್ಕೆ ಆಗುತ್ತಿದೆ. ರಾಜಕೀಯ ಲಾಭಕ್ಕಾಗಿ, ಅಧಿಕಾರದ ಮುನ್ನಡೆಗಾಗಿ ಶಾಶ್ವತ ಮೌಲ್ಯಗಳು ಹಾಳಾಗುತ್ತಿದೆ. ಸಂವಿಧಾನ ಬದ್ಧವಾದ ಹಕ್ಕುಗಳನ್ನು ತಡೆಹಿಡಿಯಲಾಗುತ್ತಿದೆ.
ಸ್ವತಂತ್ರ ಭಾರತವು ಏಳು ದಶಕಗಳನ್ನು ದಾಟಿದರೂ, ತಾರತಮ್ಯವಿಲ್ಲದ, ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕೆಂಬ ಕನಿಷ್ಠ ಜ್ಞಾನ ಎಲ್ಲರಿಗೂ, ಅದರಲ್ಲಿ ಅಧಿಕಾರಕ್ಕಾಗಿ ಕಚ್ಚಾಡುವ ರಾಜಕೀಯ ಪಕ್ಷಗಳಿಗೆ ಇಲ್ಲವೆಂಬುದೇ ವಿಪರ್ಯಾಸ. ಸಂವಿಧಾನವು ಎಲ್ಲರನ್ನೂ, ಎಲ್ಲವನ್ನೂ ಗೌರವಿಸುತ್ತದೆ. ಅದು ಸಾಕಾರಗೊಂಡಾಗ ಮಾತ್ರ ನ್ಯಾಯದ ಸಾಕ್ಷಾತ್ಕಾರವಾಗುತ್ತದೆ.
ಬನ್ನಿ ಸೌಹಾರ್ದತೆಯ, ಸಹಬಾಳ್ವೆಯ ದೇಶ ಕಟ್ಟೋಣ. ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಮುಖಂಡರುಗಳು ಭಾಗವಹಿಸುವ ಮಾನವ ಸರಪಳಿ ಹಾಗೂ ಸೌಹಾರ್ದ ಸಂಗಮದೊಂದಿಗೆ ಕೈಜೋಡಿಸಿ ಯಶಸ್ವಿಗೊಳಿಸಬೇಕಾಗಿ SKSSF ಜಿಸಿಸಿ ಕೊಡಗು ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.