ಬೆಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರಕಾರ ಹೇರಿರುವ 2021 ರ ಹೊಸ ಬಜೆಟ್ ತಳಸ್ತರದ ಜನಗಳ ಆರ್ಥಿಕ ಸಂಕಷ್ಟದ ಗಾಯದ ಮೇಲೆ ಉಪ್ಪು ಇಟ್ಟಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ವಿನೂತನ ಬಜೆಟ್ ಕೃಷಿ ಮತ್ತು ಕೃಷಿಯೇತರ ಕಾರ್ಮಿಕ ವರ್ಗದ ಬಡವರನ್ನಲ್ಲದೆ ಒಟ್ಟು ರೈತಾಪಿ ಜನಗಳನ್ನು ಹಂತ ಹಂತವಾಗಿ ಮುಗಿಸುವ “ಸ್ಲೋ ಪಾಯಿಸನ್” ಬಜೆಟ್ ಆಗಿದೆಯೆಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ಇದರ ಕರ್ನಾಟಕ ರಾಜ್ಯಾದ್ಯಕ್ಷರಾದ ಶ್ರೀಮಾನ್ ಸುಲೈಮಾನ್ ಕಲ್ಲರ್ಪೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕೇಂದ್ರ ಸರಕಾರವು ಈ ಬಜೆಟ್ ನಲ್ಲಿ ಭಾರತದ ಆಹಾರ ನಿಗಮ ಸಂಸ್ಥೆ FCI ಗೆ ಬಜೆಟ್ ಕಡಿತ ಮಾಡಲಾಗಿದೆ. ಇದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಕೊಡುವುದನ್ನು ತಪ್ಪಿಸುವ ಮತ್ತು ಶೇಕಡಾ 82ರಷ್ಟಿರುವ ಬಡವರ್ಗದ ಜನರಿಗೆ ಆಹಾರ ನೀಡುವುದನ್ನು ಸುಲಭವಾಗಿ ಮುಗಿಸುವ ತಂತ್ರ ಅಡಕವಾಗಿದೆ. ಇವರ ಹೊಸ ಕೃಷಿ ಮಸೂದೆಗೆ ವಿರುದ್ಧವಾಗಿ ಬೀದಿಗಿಳಿದ ಅಸಹಾಯಕ ರೈತ ವರ್ಗಕ್ಕೆ ಸಾಂತ್ವನದ ಬಜೆಟ್ ನೀಡುವ ಬದಲು ಇದು ಒಂದು ರೀತಿಯಲ್ಲಿ ಹಗೆತನ ತೀರಿಸುವ ‘ರೈತವಿರೋಧಿ ಬಜೆಟ್’ ಆಗಿದೆಯೆಂದಲ್ಲದೆ, ವಿತ್ತ ಸಚಿವೆಯರು ಈ ಹಿಂದೆ, ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಮಾತ್ರವಲ್ಲದೆ ಇದೊಂದು ಬಗೆಯ “ಆತ್ಮ ಬರ್ಬಾದ್” ವಿನಾಶಕಾರಿ ಬಜೆಟ್ ಕೂಡಾ ಆಗಿದ್ದು ಇದರ ವಿರುದ್ಧವೂ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಜನವಿರೋಧಿ ನೀತಿಗಳಿಗೆದುರಾಗಿ, ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಜನಾಂದೋಲನ ರೂಪಿಸಲಿದ್ದೇವೆಯೆಂದು ಈ ಸಂಧರ್ಭದಲ್ಲಿ ಅವರು ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.